ಬೆಂಗಳೂರು : ಶ್ರೀ ಚಕ್ರ ಫಿಲಂಸ್ ಲಾಂಛನದಲ್ಲಿ ತಯಾರಾಗುತ್ತಿರುವ “ಬಿ ಜಿ ಎಮ್” ನೂತನ ಕನ್ನಡ ಚಲನಚಿತ್ರದ ಮುಹೂರ್ತ ಸಮಾರಂಭವು ಬೆಂಗಳೂರಿನ ಶ್ರೀ ಬಂಡೆ ಮಹಾಂಕಾಳಿ ದೇವಸ್ಥಾನದಲ್ಲಿ ನೆರವೇರಿತು.
ಹೊಸ ಕಲಾವಿದರಾದ ದಿನಿ, ಪೂಜಾ, ಮಲ್ಲಿಕಾರ್ಜುನ ಅವರು ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದು, ಇನ್ನುಳಿದಂತೆ ವಿಜಯ್ ಚಂಡೂರ್, ರಘು ರಾಮನಕೊಪ್ಪ, ಶಶಿ ಹಾಸನ್, ಪಿಳ್ಳಪ್ಪ, ವೇದಾ ಹಾಸನ್, ಲಕ್ಷಿತಾ ಗಂಗಾವತಿ, ತೇಜಸ್ ಚಿತ್ರದ ಪ್ರಮುಖ ಪಾತ್ರದಲ್ಲಿದ್ದಾರಲ್ಲದೆ ಹೊಸ ಕಲಾವಿದರ ಜೊತೆ ಹಿರಿಯ ಕಲಾವಿದರೂ ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

“ಬಿ ಜಿ ಎಮ್” ಚಿತ್ರವು ತ್ರಿಕೋನ ಪ್ರೇಮ ಕಥೆಯಾಗಿದ್ದು, ರಾಮಾಯಣದ ರಾಮ, ಸೀತೆ, ರಾವಣನ ಮನಸ್ಥಿತಿಗಳನ್ನ ಇಟ್ಟುಕೊಂಡು ಮದುವೆಯ ಪ್ರಾಮುಖ್ಯತೆ ಏನು ಅನ್ನುವುದರ ಕುರಿತು ವಿಭಿನ್ನವಾದ ಕಥೆ ಹೆಣೆದು ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ ಬಳ್ಳಾರಿ ಮೂಲದ ರಮೇಶ್ ಭೀಮರಾಯಪ್ಪ ಅವರು. ಇವರಿಗೆ ಉತ್ತಮ ತಾಂತ್ರಿಕ ವರ್ಗ ದೊರಕಿದ್ದು, ಚಿತ್ರ ಸಾಹಿತಿ ಕಿನ್ನಾಳ್ ರಾಜ್ ಅವರು ಚಿತ್ರಕಥೆ-ಸಂಭಾಷಣೆ-ಸಾಹಿತ್ಯ ಬರೆದಿದ್ದಾರೆ.
ಸಂಗೀತ ನಿರ್ದೇಶನ ಆಕಾಶ್ ಪರ್ವ, ಛಾಯಾಗ್ರಹಣ ಸುವೀಶ್, ಸಂಕಲನ ವೆಂಕಿ, ಯುಡಿವಿ.ಡಿಐ ಕಿಶೋರ್ ಅಕ್ಕನ್ನ, ಸಿಜಿ ಗುರು ಬೆಳ್ತಂಗಡಿ, ವಿಎಫ್ ಎಕ್ಸ್ ನಂದು ಜೆ, ಪತ್ರಿಕಾ ಸಂಪರ್ಕ ಆರ್.ಚಂದ್ರಶೇಖರ್, ಡಾ.ಪ್ರಭು ಗಂಜಿಹಾಳ, ಡಾ.ವಿರೇಶ್ ಹಂಡಿಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಚಿತ್ರದ ಚಿತ್ರೀಕರಣವು ಏಪ್ರಿಲ್ ಮೊದಲ ವಾರದಿಂದ ಕಲ್ಯಾಣ ಕರ್ನಾಟಕದ ಹಲವೆಡೆ , ಬಳ್ಳಾರಿ ಸುತ್ತಮುತ್ತ ಹಾಗೂ ಬೆಂಗಳೂರಿನಲ್ಲಿ ನಡೆಯಲಿದೆ.









