LatestNews

ಸಂಚಾರಿ ಸುವ್ಯವಸ್ಥೆಯೊಂದಿಗೆ ಸುರಕ್ಷತೆಗೆ ಕ್ರಮ ವಹಿಸುವುದು ಅಗತ್ಯ: ಶಾಸಕ ಮಂತರ್ ಗೌಡ

ಸಂಚಾರಿ ಪೊಲೀಸ್ ಠಾಣೆಯ ನೂತನ ಕಟ್ಟಡದ ಶಂಕುಸ್ಥಾಪನೆ

ಕುಶಾಲನಗರ (ರಘುಹೆಬ್ಬಾಲೆ) : ತಾಲ್ಲೂಕು ಕೇಂದ್ರ ಕುಶಾಲನಗರ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸಂಚಾರಿ ಸುವ್ಯವಸ್ಥೆಯೊಂದಿಗೆ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಡಾ.ಮಂತರ್ ಗೌಡ ಸಲಹೆ ನೀಡಿದರು.

ಇಲ್ಲಿನ ಹಳೆ‌ ಮಾರುಕಟ್ಟೆ ರಸ್ತೆಯ ಚಿಕ್ಕಣ್ಣ ಬಡಾವಣೆಯಲ್ಲಿ  ರೂ.2.04 ರೂ ಕೋಟಿ‌ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸಂಚಾರಿ ಪೊಲೀಸ್ ಠಾಣೆ ನೂತನ ಕಟ್ಟಡ ಶನಿವಾರ  ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿ,  ಸಂಚಾರಿ ಪೊಲೀಸ್ ಠಾಣೆಗಳು ಮುಟ್ಟುಗೋಲು ಹಾಕಿಕೊಂಡ ವಾಹನಗಳನ್ನು ಠಾಣೆಯ ಆವರಣದಲ್ಲಿ ನಿಲ್ಲಿಸುವ ಮೂಲಕ ಗುಜರಿ ವಾತಾವರಣ ಸೃಷ್ಠಿಸದಂತೆ ನಿರ್ವಹಣೆ ಮಾಡಬೇಕು. ಸಂಚಾರಿ ಸುವ್ಯವಸ್ಥೆ, ಸುರಕ್ಷತೆ‌ ನಿಟ್ಟಿನಲ್ಲಿ ಪ್ರತಿ‌ದಿನ ಕೂಡ ಕಟ್ಟುನಿಟ್ಟು ಮಾಡುವ ಅಗತ್ಯವಿದೆ ಎಂದರು. ಬಡಾವಣೆಯವರಿಗೆ ಅನನುಕೂಲ‌ ಉಂಟಾಗದಂತೆ ಎಚ್ಚರ ವಹಿಸಬೇಕಿದೆ. ನಾಗರಿಕರು ಕೂಡ ಕಾನೂನು ಪಾಲನೆ‌ ಮಾಡಲು ಸಹಕಾರ ನೀಡಬೇಕು ಎಂದರು.

ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಅರುಣ್ ಮಾಚಯ್ಯ ಮಾತನಾಡಿ, ನೂತನ ಎಸ್ಪಿ ಅವರು ಅಧಿಕಾರ ವಹಿಸಿಕೊಂಡ‌ ಬಳಿಕ‌ ಜಿಲ್ಲೆಯಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಕಾರ್ಯಗತಗೊಳಿಸುತ್ತಿರುವುದು ಶ್ಲಾಘನೀಯ ವಿಚಾರ ಎಂದರು.

ತಾಲ್ಲೂಕು ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ಕುಶಾಲನಗರ ತಾಲ್ಲೂಕು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ‌. ಅದಕ್ಕೆ ಪೂರಕವಾಗಿ ಹೊಸ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಶಾಸಕರ ಕಾಳಜಿ ಹೆಚ್ಚಿನದ್ದಾಗಿದೆ. ಸರ್ಕಾರಿ ಯೋಜನೆ, ವಿವಿಧ ಇಲಾಖೆ ಕಚೇರಿಗಳಿಗೆ ನಾಗರೀಕ ಸೌಲಭ್ಯ ನಿವೇಶನ ಸಾಕಾಗುತ್ತಿಲ್ಲ. ಈ ನಿಟ್ಟಿನಲ್ಲಿ ಈ ಭಾಗದಲ್ಲಿ ಪರಭಾರೆಯಾಗಿರುವ ಸರ್ಕಾರಿ ಜಾಗದ ಸಂರಕ್ಷಣೆ ಅಗತ್ಯವಿದೆ ಎಂದರು.

ಯೋಜನಾ ಪ್ರಾಧಿಕಾರ ಅಧ್ಯಕ್ಷ ಪ್ರಮೋದ್ ಮುತ್ತಪ್ಪ ಮಾತನಾಡಿ, ಇಂದಿನ ಜನಸ್ನೇಹಿ ಪೊಲೀಸರಿಂದ ಸ್ಥಳೀಯರಿಗೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ, ಬದಲಾಗಿ‌ ಹೆಚ್ಚಿನ ಸುರಕ್ಷತೆ ದೊರಕಲಿದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಮಾತನಾಡಿ, ರೂ.2 ಕೋಟಿ ಅನುದಾನದಲ್ಲಿ ನೂತನ ಸಂಚಾರಿ ಠಾಣೆ ನಿರ್ಮಾಣವಾಗಲಿದ್ದು, ಇದರಿಂದ ಸಂಚಾರಿ ಪೊಲೀಸ್ ಠಾಣೆ ಪ್ರತ್ಯೇಕ ಕಟ್ಟಡದಲ್ಲಿ ಕಾರ್ಯನಿರ್ವಹಿಸಲು ಅನುಕೂಲವಾಗಲಿದೆ. ಈ ಕಟ್ಟಡ ಕಾಮಗಾರಿ ಬೇಗ ಪೂರ್ಣಗೊಂಡು ಸಾರ್ವಜನಿಕ ಸೇವೆಗೆ ಲೋಕಾರ್ಪಣೆಗೊಳ್ಳಲಿ ಎಂದು ಆಶಿಸಿದರು.

ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಆರ್.ಕೆ.ನಾಗೇಂದ್ರ ಬಾಬು ಮಾತನಾಡಿ, ಕುಶಾಲನಗರ ತಾಲ್ಲೂಕಿಗೆ ಸುಸಜ್ಜಿತ ಒಳಾಂಗಣ, ಹೊರಾಂಗಣ ಕ್ರೀಡಾಂಗಣದ ಅಗತ್ಯವಿದ್ದು, ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರಾದ ಅರುಣ್ ಮಾಚಯ್ಯ ಅವರು ಈ ಬೇಡಿಕೆಗಳನ್ನು ಈಡೇರಿಸಿ ಕೊಡಬೇಕು ಎಂದು ವಿನಂತಿಸಿಕೊಂಡರು. ಪೊಲೀಸ್ ಇಲಾಖೆಗೆ ಸಂಬಂಧಿಸಿದಂತೆ ವಿವಿಧ ಯೋಜನೆಗಳು, ಬೇಡಿಕೆಗಳ ಈಡೇರಿಕೆಗೆ ಮನವಿ ಮಾಡಿದರು.

ಈ ಸಂದರ್ಭ ಜಿಲ್ಲಾಧಿಕಾರಿ ಸೋಮಶೇಖರ್, ಕೊಡಗು ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಭಿಷೇಕ್, ತಹಸೀಲ್ದಾರ್ ಕಿರಣ್ ಜಿ ಗೌರಯ್ಯ,ಡಿವೈಎಸ್ಪಿ ಚಂದ್ರಶೇಖರ್, ವೃತ್ತ ನಿರೀಕ್ಷಕ ದಿನೇಶ್ ಕುಮಾರ್, ಪ್ರದೀಪ್ ಕುಮಾರ್,ಕೆಪಿಸಿಸಿ ಕಾರ್ಯದರ್ಶಿ ಕೆ.ಪಿ.ಚಂದ್ರಕಲಾ, ಸದಸ್ಯ ಮಂಜುನಾಥ್ ಗುಂಡುರಾವ್, ನಗರ ಕಾಂಗ್ರೆಸ್ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್ ,ಪೊಲೀಸ್ ಠಾಣಾಧಿಕಾರಿಗಳು, ಸಿಬ್ಬಂದಿಗಳು, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.

admin
the authoradmin

Leave a Reply

Translate to any language you want