LatestMysore

ಹೊಸಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಂಘದ ಅಧ್ಯಕ್ಷರಾಗಿ ವಿಜಯಕುಮಾರ್, ಉಪಾಧ್ಯಕ್ಷರಾಗಿ ರಾಜನಾಯಕ

ಕೆ.ಆರ್.ನಗರ(ಜಿಟೆಕ್ ಶಂಕರ್): ತಾಲೂಕಿನ‌ ಹೊಸಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಹೊಸಹಳ್ಳಿ ಗ್ರಾಮದ‌ ವಿಜಯಕುಮಾರ್ ಮತ್ತು ಉಪಾಧ್ಯಕ್ಷರಾಗಿ ದೊಡ್ಡೇಕೊಪ್ಪಲಿನ ರಾಜನಾಯಕ ಅವಿರೋಧವಾಗಿ ಆಯ್ಕೆಯಾದರು.

ಸಂಘದ ಆಡಳಿತ ಕಚೇರಿಯಲ್ಲಿ ಶುಕ್ರವಾರ ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಚುನಾವಣೆಗೆ ಇವರಿಬ್ಬರನ್ನು ಹೊರತು ಪಡಿಸಿ ಇತರರು ನಾಮಪತ್ರ ಸಲ್ಲಿಸದ ಹಿನ್ನಲೆಯಲ್ಲಿ ಚುನಾವಣಾಧಿಕಾರಿಯಾಗಿದ್ದ ಸಹಕಾರ ಅಭಿವೃದ್ಧಿ ಅಧಿಕಾರಿ ಎಸ್.ರವಿ ಆಯ್ಕೆ ಪ್ರಕಟಿಸಿದರು.

ಚುನಾವಣಾ ಸಭೆಯಲ್ಲಿ ನಿರ್ದೇಶಕರಾದ ವೆಂಕಟೇಗೌಡ, ಮೂಡಲಕೊಪ್ಪಲುರಮೇಶ್, ತೀರ್ಥೇಶ್, ಎಲ್.ಎಸ್.ಮಹೇಶ್, ಹೇಮಲತಾಚಂದ್ರು, ಸುರೇಶ್, ಲಕ್ಷ್ಮಣ, ಎ.ಎಂ.ಜಯಣ್ಣ, ಹೊಸಹಳ್ಳಿರಮೇಶ್, ಮಂಜುಳ, ಸಂಘದ ಸಿಇಒ ಎಂ.ಜಿ.ಸಂತೋಷ್, ಸಹಾಯಕ ಮಲ್ಲಿಕಾರ್ಜುನ ಹಾಜರಿದ್ದರು.

ಈವರೆಗೆ ಜೆಡಿಎಸ್ ತಕ್ಕೆಯಲ್ಲಿದ್ದ ಸಂಘದ ಆಡಳಿತವನ್ನು ಬಹುಮತದ ಮೂಲಕ ಕಾಂಗ್ರೆಸ್ ಬೆಂಬಲಿತರು ತಮ್ಮ ವಶಕ್ಕೆ ಪಡೆದ ಹಿನ್ನಲೆಯಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ವಿತರಿಸಿ ಶಾಸಕ ಡಿ.ರವಿಶಂಕರ್ ಮತ್ತು ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ದೊಡ್ಡಸ್ವಾಮೇಗೌಡ ಅವರಿಗೆ ಜಯಕಾರ ಮೊಳಗಿಸಿದರು.

ಗೊಂದಲ ಪರಿಹರಿಸಿದ ಕೆಪಿಸಿಸಿ ಸದಸ್ಯ : ಹೊಸಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಹೊಸಹಳ್ಳಿ ವಿಜಯಕುಮಾರ್ ಅವರನ್ನು ಆಯ್ಕೆ ಮಾಡಿದ ಪಕ್ಷದ ಹೈಕಮಾಂಡ್ ಸೂಚನೆ ನೀಡಿದರು ಸಹ ಇದಕ್ಕೆ ಕೆಲವು ನಿರ್ದೇಶಕರು ತಗಾದೆ ತೆಗೆದು ಚುನಾವಣಾ ಸಭೆಗೆ ಹಾಜರಾಗದಿರಲು ನಿರ್ಧರಿಸಿ ಪಕ್ಷದ ವರಿಷ್ಠರ ವಿರುದ್ದವೇ‌ ಅಸಮಾಧಾನ ವ್ಯಕ್ತಪಡಿಸುತ್ತ ನಿಂತಿದ್ದರು.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಕೆಪಿಸಿಸಿ ಸದಸ್ಯ‌ ಸಿ.ಪಿ.ರಮೇಶ್ ಕುಮಾರ್ ಸಂಘದ ಆವರಣದಲ್ಲಿದ್ದ ಕಾಂಗ್ರೆಸ್ ಬೆಂಬಲಿತ ಅಸಮಾಧಾನಿತ  ನಿರ್ದೇಶಕರ ಜತೆ ಮಾತನಾಡಿ ಹೈಕಮಾಂಡ್ ನಿರ್ಧಾರಕ್ಕೆ ಎಲ್ಲರೂ ಬದ್ದರಾಗಬೇಕಿದ್ದು ಎರಡನೇ ಬಾರಿಗೆ ಮಾರಿಗುಡಿಕೊಪ್ಪಲಿನ ವೆಂಕಟೇಗೌಡರನ್ನು ಅಧ್ಯಕ್ಷರನ್ನಾಗಿ ಮಾಡಲು ಪಕ್ಷ ತೀರ್ಮಾನಿಸಿದೆ ಎಂದು ಹೇಳಿದರಲ್ಲದೆ ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ದೊಡ್ಡಸ್ವಾಮೇಗೌಡರ ಜತೆ ದೂರವಾಣಿಯಲ್ಲಿ ಮಾತನಾಡಿ ವೆಂಕಟೇಗೌಡರಿಗೆ ಮುಂದೆ ಅವಕಾಶ ಕೊಡುವುದಾಗಿ ಹೇಳಿಸಿದ‌ ನಂತರ‌ ನಿರ್ದೇಶಕರು ಚುನಾವಣಾ ಸಭೆಗೆ ತೆರಳಿದರು.

ಸಂಘದ ನೂತನ ಅಧ್ಯಕ್ಷ ವಿಜಯಕುಮಾರ್ ಮತ್ತು ಉಪಾಧ್ಯಕ್ಷ ರಾಜನಾಯಕ ಅವರುಗಳನ್ನು  ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಮಹದೇವ್, ವಕ್ತಾರ ಸೈಯದ್ ಜಾಬೀರ್,  ಜಿ.ಪಂ.ಮಾಜಿ ಸದಸ್ಯ ಮಾರ್ಚಹಳ್ಳಿಶಿವರಾಮು, ಎಪಿಎಂಸಿ ಮಾಜಿ ನಿರ್ದೇಶಕ ಎಲ್.ಪಿ.ರವಿಕುಮಾರ್, ಕಾಂಗ್ರೆಸ್ ಮುಖಂಡರಾದ ಗಣಪ್ಪ, ಉಮೇಶ್, ಮೋಹನ್, ಮಾಟೇಗೌಡ, ಅಣ್ಣೇಗೌಡ, ವಸಂತೇಗೌಡ, ಗಿರೀಶ್, ಕರೀಗೌಡ, ಲೋಕೇಶ್ ಮತ್ತಿತರರು ಅಭಿನಂದಿಸಿದರು.

admin
the authoradmin

Leave a Reply

Translate to any language you want