ಮೈಸೂರು: ತರಬೇತಿ-ಅನುಭವ ಹೊಂದಿರುವ ಭಾರತೀಯ ಬಾಣಸಿಗರಿಗೆ ಇಂದು ವಿಶ್ವಾದ್ಯಂತ ಅಪಾರ ಉದ್ಯೋಗ ಅವಕಾಶಗಳು ಲಭ್ಯವಾಗುತ್ತಿದ್ದು, ಯುವ ಜನತೆ ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮೈಸೂರು ವಿಶ್ವವಿದ್ಯಾನಿಲಯದಿಂದ ಮಾನ್ಯತೆ ಪಡೆದಿರುವ ಮೈಸೂರು ಇನ್ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್ & ಕಲಿನರಿ (ಎಂಐಎಚ್ಎಂಸಿ) ಬಾಣಸಿಗ ಸತೀಶ್ ನಾಗರಾಜ್ ತಿಳಿಸಿದ್ದಾರೆ.
ನಗರದ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು (ಸ್ವಾಯತ್ತ) ವಿದ್ಯಾರ್ಥಿನಿಯರಿಗೆ ಎಂಐಎಚ್ಎಂಸಿನಲ್ಲಿ ಆಹಾರ- ಆತಿಥ್ಯೋದ್ಯಮ ಕ್ಷೇತ್ರದಲ್ಲಿ ಲಭ್ಯವಿರುವ ವೃತ್ತಿಪರ ಕೋರ್ಸ್ ಗಳು ಹಾಗೂ ಜಾಗತಿಕ ಅವಕಾಶಗಳ ಕುರಿತ ಒಂದು ದಿನದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಭಾರತೀಯ ಬಾಣಸಿಗರಿಗೆ ಇಂದು ವಿಶ್ವ ಮಟ್ಟದಲ್ಲಿ ಅವರ ಕೌಶಲ್ಯದ ಕಾರಣಕ್ಕೆ ಬಹಳ ಬೇಡಿಕೆ ಇದೆ. ಕೃತಕ ಬುದ್ದಿಮತ್ತೆ ಈ ಕ್ಷೇತ್ರಕ್ಕೆ ತಟ್ಟುವುದಿಲ್ಲ. ಆಹಾರ ವಿಜ್ಞಾನ ವಿದ್ಯಾರ್ಥಿಗಳು ಈ ಕೋರ್ಸ್ ಮೂಲಕ ಅವಕಾಶಗಳನ್ನು ಇನ್ನಷ್ಟು ವಿಸ್ತರಿಸಿಕೊಳ್ಳಬಹುದು ಎಂದು ಅವರು ತಿಳಿಸಿದರು.
ಇಂದು ಪ್ರತಿಯೊಬ್ಬರೂ ಕೂಡಾ ತಾವು ಸೇವಿಸುವ ಆಹಾರ, ಡಯಟ್, ಪೌಷ್ಟಿಕಾಂಶಗಳ ಬಗ್ಗೆ ಹೆಚ್ಚು ಹೆಚ್ಚು ಜಾಗೃತರಾಗುತ್ತಿದ್ದರೆ. ಇದು, ಈ ಕ್ಷೇತ್ರದಲ್ಲಿನ ಉದ್ಯೋಗಾವಕಾಶವನ್ನು ಇನ್ನಷ್ಟು ಹೆಚ್ಚಿಸಿದೆ. ಮೆನು ಪ್ಲಾನರ್ ನಿಂದ ಆರಂಭಗೊಳ್ಳುವ ಉದ್ಯೋಗಾವಕಾಶಕ್ಕೆ ಅವಾಕಾಶಗಳು ಉಜ್ವಲವಾಗಿವೆ. ಕಾರ್ಪೊರೇಟ್ ಕಿಚನ್, ಡಯಟ್ ಚೆಫ್ ಗಳು, ಹೀಗೆ ಈ ಕ್ಷೇತ್ರ ವಿಸ್ತೃತಗೊಳ್ಳುತ್ತಿದೆ ಎಂದು ಅವರು ತಿಳಿಸಿದರು.

ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು (ಸ್ವಾಯತ್ತ) ಇದರ ಆಹಾರ ವಿಜ್ಞಾನ ಹಾಗು ಪೌಷ್ಟಿಕತೆ ವಿಭಾಗದ ಪ್ರಾಧ್ಯಾಪಕಿ ಡಾ. ರಾಜೇಶ್ವರಿ ಜೆ ಮಾತನಾಡಿ, ಆಹಾರ-ಪೌಷ್ಟಿಕಾಂಶ ಕ್ಷೇತ್ರ ಅನೇಕ ಹೊಸ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದ್ದು, ವಿದ್ಯಾರ್ಥಿನಿಯರು ತಮ್ಮ ಕೌಶಲ್ಯ ವೃದ್ಧಿಸಿಕೊಂಡರೆ ಅವರಿಗೆ ಅಪಾರ ಉದ್ಯೋಗವಾಕಾಶ ದೊರೆಯುತ್ತದೆ ಎಂದರು.
ನೀವು ಕೌಶಲ್ಯ ಬೆಳೆಸಿಕೊಂಡರೆ ನಿಮ್ಮ ಕನಸುಗಳನ್ನು ನನಸಾಗಿಸುವುದು ಕಷ್ಟವಲ್ಲ ಎಂದು ಅವರು ತಿಳಿಸಿದರು. ಎಂಐಎಚ್ಎಂಸಿ ಆಡಳಿತ ಮಂಡಳಿಯ ಶ್ರೀಮತಿ ಅರ್ಪಿತ ಧರ್ಮವೀರ್ ಈ ಸಂದರ್ಭದಲ್ಲಿ ಮಾತನಾಡಿ, ಆಹಾರ ವಿಜ್ಞಾನ ಕ್ಷೇತ್ರ ಮಹಿಳೆಯರಿಗೆ ಹೆಚ್ಚು ಸೂಕ್ತ. ಅವರಿಗೆ ಈ ಕ್ಷೇತ್ರದ ಕೌಶಲ್ಯಗಳನ್ನು ಕಲಿಯುವುದು ಸುಲಭ ಏಕೆಂದರೆ ಅದು ರಕ್ತಗತವಾಗಿ ಬಂದಿರುತ್ತದೆ ಎಂದರು.
ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು (ಸ್ವಾಯತ್ತ) ಇದರ ಆಹಾರ ವಿಜ್ಞಾನ ಹಾಗು ಪೌಷ್ಟಿಕತೆ ವಿಭಾಗದ ಸಹ ಪ್ರಾಧ್ಯಾಪಕಿ ಡಾ. ನಮ್ರತಾ ಎಂ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಎಂಐಎಚ್ಎಂಸಿ ಪ್ರಾಂಶುಪಾಲರಾದ ಶ್ರೀ ವಿಕ್ಟರ್ ಹೇಮಂತ್ ಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.








