ಚಾಮರಾಜನಗರ: ಈ ಹಿಂದೆ ಪಾರ್ಟಿಗಳಲ್ಲಿ ಮದ್ಯ ಮಾತ್ರ ಬಳಕೆಯಾಗುತ್ತಿತ್ತು.. ಆದರೀಗ ಮಾದಕ ವಸ್ತುಗಳು ಎಂಟ್ರಿ ಕೊಟ್ಟಿರುವ ವಿಚಾರ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಮಧುವನಹಳ್ಳಿ ಸಮೀಪದಿಂದ ಬೆಳಕಿಗೆ ಬಂದಿದ್ದು, ಜನ ಮಾತ್ರವಲ್ಲದೆ, ಪೊಲೀಸರೇ ಬೆಚ್ಚಿ ಬೀಳುವಂತೆ ಮಾಡಿದೆ.
ಇದು ರೌಡಿಶೀಟರ್ ವೊಬ್ಬ ಆಯೋಜಿಸಿದ್ದ ಪಾರ್ಟಿಯಾಗಿತ್ತಲ್ಲದೆ, ಈ ಪಾರ್ಟಿಯಲ್ಲಿ ಮಾದಕ ವಸ್ತು ಸೇವನೆ ಮಾಡಿದ್ದರು ಎನ್ನಲಾದ 15ಮಂದಿಯನ್ನು ಬಂಧಿಸಲಾಗಿದ್ದು, ಈ ಸಂಬಂಧ ತನಿಖೆಯೂ ಮುಂದುವರೆದಿದೆ.. ಪಾರ್ಟಿಯಲ್ಲಿ ಪುರುಷರೊಂದಿಗೆ ಮಹಿಳೆಯರಿದ್ದು, ಅವರನ್ನು ವಿಚಾರಣೆ ನಡೆಸಲಾಗಿದೆ.
ಇಷ್ಟಕ್ಕೂ ಆಗಿದ್ದೇನು ಎಂಬುದನ್ನು ನೋಡಿದ್ದೇ ಆದರೆ ಬೆಂಗಳೂರು ಮೂಲದ ರೌಡಿ ಶೀಟರ್ ಜಹೀರ್ ಎಂಬಾತ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಹೊರವಲಯದ ಮಧುವನಹಳ್ಳಿ ಸಮೀಪದ ಹಾರವನಪುರ (ಲಕ್ಷ್ಮಿಪುರ) ಬಳಿಯ ಫಯಾಜ್ ಖಾನ್ ಎಂಬುವರಿಗೆ ಸೇರಿದ ಜಮೀನಿನ ತೋಟದ ಮನೆಯ ಫಂಕ್ಷನ್ ಹಾಲ್ ನಲ್ಲಿ ಪಾರ್ಟಿ ಏರ್ಪಡಿಸಿದ್ದನು ಈ ಪಾರ್ಟಿಯಲ್ಲಿ ಡ್ರಗ್ಸ್ ಸರಬರಾಜು ನಡೆದಿತ್ತು ಎನ್ನಲಾಗಿದೆ.
ಈ ಪೈಕಿ ಕೆಲವರು ಅಂದರೆ 50ಕ್ಕೂ ಹೆಚ್ಚು ಜನ ಡ್ರಗ್ಸ್ ಮತ್ತಿನಲ್ಲಿ ತೇಲುತ್ತಿದ್ದರಿಂದ ಪೊಲೀಸರಿಗೆ ಮಾಹಿತಿ ಹೋಗಿತ್ತು. ಹೀಗಾಗಿ ಪೊಲೀಸರು ದಾಳಿ ಮಾಡಿದ್ದರು. ಈ ಸಂದರ್ಭ ಜಹೀರ್ ಆಲಿಯಾಸ್ ಖಾಲು ರವರ ಹುಟ್ಟು ಹಬ್ಬದ ಅಂಗವಾಗಿ ಮಾದಕ ವಸ್ತುಗಳೊಂದಿಗೆ ಹಲವರು ಮಂದಿ ಪಾರ್ಟಿಯಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿತ್ತು.

ಪೊಲೀಸರ ದಾಳಿ ವೇಳೆ ಗಾಂಜಾ ಹಾಗೂ ಚರಸ್ ಸೇವಿಸಿ ಮೋಜುಮಸ್ತಿಯಲ್ಲಿ ತೊಡಗಿದ್ದದ್ದು, ಕಂಡು ಬಂದಿದ್ದು, ಅವರನ್ನು ವಶಕ್ಕೆ ಪಡೆದ ಬಳಿಕ ಪೊಲೀಸರು ವಿಚಾರಣೆ ನಡೆಸಿದ್ದರು. ವೈದ್ಯಕೀಯ ತಪಾಸಣೆಯಲ್ಲಿ 15 ಮಂದಿ ಡ್ರಗ್ಸ್ ಸೇವಿಸಿರುವುದು ದೃಢಪಟ್ಟಿದೆ. ಈ ಪಾರ್ಟಿ ವಿಚಾರ ಚರ್ಚೆಗೆ ಗ್ರಾಸವಾಗಿದೆ. ಫಯಾಜ್ ಖಾನ್ ಪ್ರಭಾವಿ ರಾಜಕೀಯ ಸಂಪರ್ಕ ಹೊಂದಿರುವ ವ್ಯಕ್ತಿಯಾಗಿದ್ದು, ಕಾಂಗ್ರೆಸ್ ನಾಯಕರೊಬ್ಬರ ಆಪ್ತನೆಂದು ತಿಳಿದು ಬಂದಿದೆ.
ಪೊಲೀಸರಿಗೆ ಪಾರ್ಟಿಯಲ್ಲಿದ್ದ ಜಹೀರ್ ಆಲಿಯಾಸ್ ಖಾಲು, ಉಮೇರ್ ಖಾನ್ (ಕೊಳ್ಳೇಗಾಲ) ಶೇರ್ ಮೆಹಬೂಬ್ (ಬೆಂಗಳೂರು) ನಿಸಾರ್ ಖಾನ್ (ಚನ್ನಪಟ್ಟಣ), ಸೈಯದ್ದ ಯೂನಸ್ (ಬೆಂಗಳೂರು), ಸದ್ರುಲ್ಲಾ ಬೇಗ್ (ಬೆಂಗಳೂರು), ಇಲಿಯಾಸ್ ಖಾನ್ (ಬೆಂಗಳೂರು), ಶಬಾಚ್ (ಬೆಂಗಳೂರು) ಶಪರ್ರುದ್ದೀನ್ (ಚನ್ನಪ್ಪಟ್ಟಣ), ಪವನ್ (ಬೆಂಗಳೂರು), ಸಾದಿಕ್ ಪಾಷಾ (ಬೆಂಗಳೂರು), ಅಜ್ಮಲ್ ಬೇಗ್ (ಬೆಂಗಳೂರು), ಮೊಹಮ್ಮದ್ ಷಕೀಲ್ (ಬೆಂಗಳೂರು) , ಕುಮಾರಸ್ವಾಮಿ ( ಮಧುವನಹಳ್ಳಿ) ನವೀನ್ ರಾಜ್ (ಕೊಳ್ಳೇಗಾಲ ಪಟ್ಟಣ) ವರುಗಳು ಭಾಗಿಯಾಗಿದ್ದರು ಎಂದು ಪೊಲೀಸರ ದಾಖಲಿಸಿರುವ ಎಫ್ ಐ ಆರ್ ನಲ್ಲಿ ತಿಳಿಸಲಾಗಿದೆ.
ಡ್ರಗ್ಸ್ ಸೇವೆನ ಪಾರ್ಟಿಯಲ್ಲಿ ಭಾಗಿಯಾಗಿದ್ದ ಮಹಿಳೆಯರನ್ನು ಪ್ರತ್ಯೇಕವಾಗಿ ಮಹಿಳಾ ಪೇದೆಗಳೊಂದ ವಿಚಾರಣೆ ನಡೆಸಲಾಗಿದ್ದು, ಸದ್ಯ ಎಲ್ಲಾ ಆರೋಪಿಗಳನ್ನು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಿದ ಬಳಿಕ ಎಲ್ಲಾ ಆರೋಪಿಗಳ ಮೇಲೆ ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ 176ರಡಿ ಪ್ರಕರಣವನ್ನು ದಾಖಲಿಸಿ, ನ್ಯಾಯಾಲಯಕ್ಕೆ ಆರೋಪಿಗಳನ್ನು ಹಾಜರು ಪಡಿಸಲಾಗಿದೆ.
ಬಂಧಿತ ಆರೋಪಿಗಳಿಂದ 95.70 ಗ್ರಾಂ ನಷ್ಟು ಹೂ ಗೊಂಡೆ ಮಿಶ್ರಿತ ಗಾಂಜಾವನ್ನು ಜಪ್ತಿ ಪಡಿಸಿಕೊಳ್ಳಲಾಗಿದೆ. ಪ್ರಕರಣವನ್ನು ಖಚಿತ ಮಾಹಿತಿಯೊಂದಿಗೆ ಗ್ರಾಮಾಂತರ ಪೊಲೀಸ್ ಇನ್ಸ್ಪಕ್ಟರ್ ಶಿವಮಾದಯ್ಯ ರವರು ದಾಳಿಯ ನೇತೃತ್ವ ವಹಿಸಿದ್ದರು.
ಕೊಳ್ಳೇಗಾಲ ಗ್ರಾಮಾಂತರ ಸಬ್ ಇನ್ಸ್ ಪೆಕ್ಟರ್ ಸುಪ್ರೀತ್, ಯಳಂದೂರು ಸರ್ಕಲ್ ಇನ್ಸ್ಪೆಕ್ಟರ್ ಸುಬ್ರಮಣ್ಯ, ಹನೂರು ಪೊಲೀಸ್ ಇನ್ಸ್ಪೆಕ್ಟರ್ ಆನಂದಮೂರ್ತಿ, ರಾಮಾಪುರ ಪೊಲೀಸ್ ಇನ್ಸ್ಪೆಕ್ಟರ್ ಚಿಕ್ಕರಾಚಶೆಟ್ಟಿ, ಮಾಂಬಳ್ಳಿ ಠಾಣೆಯ ಸಬ್ ಇನ್ಸ್ಪೆಕ್ಟರ್ ಕರಿಬಸವಯ್ಯ, ಕೊಳ್ಳೇಗಾಲ ಪಟ್ಟಣ ಠಾಣೆ ಸಬ್ ಇನ್ಸ್ಪೆಕ್ಟರ್ ವರ್ಷಾ, ಚಾಮರಾಜನಗರ ಸೋಕೋ ತಂಡ ಹಾಗೂ ಇನ್ನಿತರ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಗಿದ್ದರು.








