ಮೈಸೂರು: ಮಕ್ಕಳ ಮನಸ್ಸು ಹೂವಿದ್ದ ಹಾಗೆ ಹೂವನ್ನ ಬಹಳ ಜೋಪಾನವಾಗಿ ಬೆಳೆಸಬೇಕಾಗುತ್ತದೆ ಹಾಗೆಯೇ ಅವರ ಜೀವನದಲ್ಲಿ ಮೌಲ್ಯಗಳು ಸಹ ಅಷ್ಟೇ ಅವಶ್ಯಕ. ಆದ್ದರಿಂದ ಮಕ್ಕಳು ಪರಿಸರ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕೆಂದು ಗುತ್ತಿಗೆದಾರರಾದ ಗೋವಿಂದೇಗೌಡರು ಕರೆ ನೀಡಿದರು.
ಇತ್ತೀಚೆಗೆ ಅಂತರಾಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆ ಪ್ರಜಾಪಿತ ಬ್ರಹ್ಮಾ ಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಜಯ ಲಕ್ಷ್ಮಿಪುರಂ ಸೇವಾ ಕೇಂದ್ರದಲ್ಲಿ ನಡೆದ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಬಹುಮಾನವನ್ನು ವಿತರಿಸಿ ಮಾತನಾಡುತ್ತಿದ್ದರು.
ಸಂಗದಂತೆ ಬಣ್ಣ ಎನ್ನುವ ಹಾಗೆ ಇಂದಿನ ಮಕ್ಕಳಿಗೆ ಸತ್ಸಂಗಗಳ ಅವಶ್ಯಕತೆ ಇದೆ. ಗಾಂಧೀಜಿಯವರು ಸಹ ಕುಸಂಗ ಮಾಡಿ ತಪ್ಪು ಮಾಡುತ್ತಾರೆ. ನಂತರ ತಾವು ತಪ್ಪು ಮಾಡಿದ್ದನ್ನು ಅರಿತು ತಂದೆಗೆ ಪತ್ರ ಬರೆದು ಕೊಂಡು ಪಶ್ಚಾತಾಪ ಪಡುತ್ತಾರೆ. ಮುಂದೆ ಅದೇ ಕರಮ ಚಂದ ಗಾಂಧಿ ಮಹಾತ್ಮ ಗಾಂಧಿ ಆಗುತ್ತಾರೆ ಎಂದರು.
ರಾಜಯೋಗಿನಿ ಬ್ರಹ್ಮಾಕುಮಾರಿ ಸಂಧ್ಯಾಜೀ ಮಾತನಾಡಿ ಬೆಳೆಯುವ ಮರ ಸಿರಿಮೊಳಕೆಯಲ್ಲಿಯೇ ಎನ್ನುವ ಹಾಗೆ ಇಂದಿನ ಮಕ್ಕಳು, ಮಹಾತ್ಮರು ದೇಶಕ್ಕಾಗಿ ಮಾಡಿ ಹೋಗಿರುವ ತತ್ವ ಆದರ್ಶಗಳನ್ನು ತಮ್ಮದಾಗಿ ಮಾಡಿಕೊಂಡು ಉನ್ನತ ವ್ಯಕ್ತಿಗಳಾಗಿ ರೂಪುಗೊಳ್ಳುವುದು ಬಹಳ ಅವಶ್ಯಕ. ಅದಕ್ಕಾಗಿ ಇಂತಹ ಬೇಸಿಗೆ ಶಿಬಿರಗಳು ಮಕ್ಕಳಿಗೆ ಪ್ರೇರಣೆ ಕೊಡುತ್ತವೆ ಎಂದರು.
ಕಾರ್ಯಕ್ರಮದ ಆಯೋಜಕರಾದ ಕೆಶಿಯಾಜಿ ಮಾತನಾಡಿ ಏಕಲವ್ಯ ಹೇಗೆ ಗುರುಗಳ ಪ್ರತಿಮೆಯನ್ನು ಇಟ್ಟುಕೊಂಡು ಶಬ್ದವೇದಿ ಬಾಣ ಪ್ರಯೋಗ ಅಭ್ಯಾಸ ಮಾಡಲು ಏಕಾಗ್ರತೆಯ ಶಕ್ತಿಯನ್ನು ಹೆಚ್ಚಿಸಿಕೊಂಡನೋ ಹಾಗೆ ಇಂದಿನ ಮಕ್ಕಳು ಏಕಾಗ್ರತೆಯ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಧ್ಯಾನದ ಅಭ್ಯಾಸ ಬಹಳ ಅವಶ್ಯಕ ಎಂದರು.
ಇದೇ ವೇಳೆ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಶಿಬಿರಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು. ಮನೆಗೊಂದು ಮರ ಊರಿಗೊಂದು ವನ ಎನ್ನುವ ಪರಿಸರ ಪ್ರಜ್ಞೆಯನ್ನು ಮೂಡಿಸಲು ಭಾಗವಹಿಸಿದ್ದ ಎಲ್ಲಾ ಶಿಬಿರಾರ್ಥಿಗಳಿಗೆ ಒಂದೊಂದು ಗಿಡವನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ದುಬೈನಿಂದ ಆಗಮಿಸಿದ್ದ ರಾಜಯೋಗಿನಿ ಬ್ರಹ್ಮಾಕುಮಾರಿ ಸ್ಮಿತ ಸಾಮೂಹಿಕ ಧ್ಯಾನ ಮಾಡಿಸಿದರು. ಅನೇಕ ಮಕ್ಕಳು ಶಿಬಿರದ ಅನುಭವವನ್ನು ತಿಳಿಸುತ್ತಾ ನಮಗಿದರಿಂದ ಬಹಳ ಉಪಯುಕ್ತವಾಗಿದೆ. ನಮ್ಮ ಜೀವನ ಪದ್ಧತಿಯು ಪರಿವರ್ತನೆಯಾಗಿದೆ. ಬೇಗ ಏಳುವುದು, ಬೇಗ ಮಲಗುವುದು, ಅಂದಿನ ಪಾಠಗಳನ್ನು ಅಂದೆ ಓದುವುದು, ಸಣ್ಣಪುಟ್ಟ ತಪ್ಪುಗಳು, ಕದಿಯುವುದು, ಸುಳ್ಳು ಹೇಳುವುದು, ಇದನ್ನು ನಾವು ಬಿಡುತ್ತೇವೆ ಎಂದು ಪ್ರತಿಜ್ಞೆ ಮಾಡಿದರು.
ಗುರು ಹಿರಿಯರಿಗೆ ಗೌರವಿಸುತ್ತೇವೆ. ಮನೆಯಲ್ಲಿ ತಂದೆ ತಾಯಿಗಳಿಗೆ ಸಣ್ಣಪುಟ್ಟ ಕಾರ್ಯಗಳಿಗೆ ಸಹಕಾರ ನೀಡುತ್ತವೆ, ಎಂದು ಅನುಭವ ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಮಹೇಶ, ಪಾಲಾಕ್ಷ, ಚಂದ್ರಕಲಾ, ವೇದಾವತಿ, ಸುಜಾತ, ಹಾಗೂ ಪೋಷಕರು ಹಾಜರಿದ್ದರು.








