CinemaLatest

ಹಾಸ್ಯದ ಸೀತಾಪತಿ ನಟ ಉಮೇಶ್ ಇನ್ನೇನಿದ್ದರೂ ನೆನಪಷ್ಟೇ.. ಅವರ ಸಿನಿಮಾ ಬದುಕು ಹೇಗಿತ್ತು?

ಕಣ್ಣು ಮೂಗು ಬಾಯಿ ಒಟ್ಪಿಗೇ ಅಗಲಿಸಿ ಎರಡೂ ತುಟಿಗಳಿಂದ ಗುರ್…ರ್…ರ್… ಶಬ್ದತರಂಗ ಎಬ್ಬಿಸುತ್ತ ಥೇಟ್ ಮಂಗನಂತೆ ಎದುರಿಗಿದ್ದ ಕೋತಿಯೂ ಸೇರಿದಂತೆ ಹರಳೆಣ್ಣೆ ಮೂತಿಯವರನ್ನೂ ನಗಿಸುತ್ತಿದ್ದ ಹಾಸ್ಯ ಜಲಪಾತ ಎಂ.ಎಸ್.ಉಮೇಶ್ ದೈಹಿಕವಾಗಿ ಇಹಲೋಕ ತೊರೆದು ಪರಲೋಕ ಸೇರಿದರೂ ಸಹ ಆಚಂದ್ರಾರ್ಕ ಅಜರಾಮರ. ಇವರ ಸಿನಿಮಾ ಬದುಕಿನ ಬಗ್ಗೆ ಇಲ್ಲಿ  ಬರಹಗಾರ ಕುಮಾರಕವಿ ನಟರಾಜ್ ಅವರು ಹೇಳುತ್ತಾ ಹೋಗಿದ್ದಾರೆ.

ಕರ್ನಾಟಕದ ಸಾಂಸ್ಕೃತಿಕ ರಾಜಧಾನಿಯ ವಿಪ್ರ ಕುಟುಂಬದ ಶ್ರೀಮತಿ ನಂಜಮ್ಮ ಮತ್ತು ಶ್ರೀ ಎ.ಎಲ್.ಶ್ರೀಕಂಠಯ್ಯ ದಂಪತಿಯ ಪುತ್ರನಾಗಿ 22.4.1945ರಂದು ಮೈಸೂರಿನಲ್ಲಿ ಜನಿಸಿದ ಉಮೇಶ್ ಬಾಲ್ಯದಿಂದಲೇ ಬಲು ಚೂಟಿ. ಪ್ರಾಥಮಿಕ ಶಾಲೆಯಲ್ಲಿ ಕಲಿಯುವಾಗಲೇ ಸಂಗೀತ ಮತ್ತು ಅಭಿನಯ ಕಲೆಯನ್ನ ಕರಗತ ಮಾಡಿಕೊಂಡಿದ್ದ ಕಿಲಾಡಿಕಿಟ್ಟು. ಈತನ ಸೋದರ ಎಂ.ಎಸ್. ಸತ್ಯ ಕೂಡ ಹಾಸ್ಯನಟನಾಗಿ ನಾಟಕ ಸಿನಿಮ ರಂಗದಲ್ಲಿ ಸೇವೆಮಾಡಿ ಅಕಾಲಮೃತ್ಯುಗೆ ಬಲಿಯಾದರು. ಈ ಜೋಡಿ ಹಾಸ್ಯನಟರು ಹತ್ತಾರು ವರ್ಷ ಚಂದನವನದಲ್ಲಿ ಸಂಚಲನ ಉಂಟುಮಾಡಿದ್ದು ಇತಿಹಾಸ.

1960ರಲ್ಲಿ ಬಿ.ಆರ್.ಪಂತುಲು ನಿರ್ದೇಶಿಸಿ ನಿರ್ಮಿಸಿದ ಮಕ್ಕಳರಾಜ್ಯ ಸಿನಿಮಾ ಮೂಲಕ ಬಾಲಕ ನಟನಾಗಿ ಪಾದಾರ್ಪಣೆ ಮಾಡಿದರು. ಅಂದಿನಿಂದ ಮೊದಲ್ಗೊಂಡು 2025ನೇ ಇಸವಿ ತನಕ ಬಣ್ಣಹಚ್ಚಿಕೊಂಡು ಬೆಳ್ಳಿತೆರೆಯ ಕಲಾ ಸರಸ್ವತಿ ಸೇವೆಗೈದರು. ಸುಮಾರು 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಮತ್ತು 25ಕ್ಕೂ ಹೆಚ್ಚಿನ ಕಿರುತೆರೆ ಧಾರಾವಾಹಿಗಳಲ್ಲಿ ತಮ್ಮ ಜೀವ ಜೀವನದ ಅಂತಿಮ ಕ್ಷಣದವರೆಗೂ ದುಡಿದು ಮಡಿದರು! ಇವರು ನಟಿಸಿದ ಕಟ್ಟಕಡೆಯ ಚಿತ್ರ “ಐಯಾಮ್ ಗಾಡ್” ಇವರ ಅಭಿನಯದ ಅಂತಿಮ ಧಾರಾವಾಹಿ “ರಥಸಪ್ತಮಿ”

“ಪ್ರತಿದಿನವೂ ಕಲಿಯಲು ಶಾಲೆಗೆ ಹೋಗುವ ವಿದ್ಯಾರ್ಥಿಯಂತೆ ನಾನೂ ವಿಧೇಯನಾಗಿ ನಿರ್ದೇಶಕರು ಹೇಳಿಕೊಟ್ಟಂತೆ ಚಾಚೂತಪ್ಪದೆ ಯಾವುದೇ ಪಾತ್ರವಿರಲಿ ಅಚ್ಚುಕಟ್ಟಾಗಿ ಮನಃಪೂರ್ವಕವಾಗಿ ಪ್ರಾಮಾಣಿಕತೆಯಿಂದ ನಿರ್ವಹಿಸಬೇಕಾದ್ದು ನನ್ನಕರ್ತವ್ಯ. ಆತ್ಮಸಾಕ್ಷಿ ಒಪ್ಪುವಂತೆ ಜೀವನ ನಡೆಸಬೇಕೆಂಬುದೇ ನನ್ನ ಗುರಿ” ಎಂದು ನುಡಿದಂತೆ ನಡೆದ ಈ ಜೋಕರ್ ಕೇವಲ ನಟನೆಯಲ್ಲಿಮಾತ್ರ ಪ್ರವೀಣ ಆಗಿರಲಿಲ್ಲ ಹಾರ್ಮೋನಿಯಂ ಮುಂತಾದ ವಾದ್ಯಸಂಗೀತ ನುಡಿಸುವುದರಲ್ಲೂ, ಹಿನ್ನಲೆಗಾಯನದಲ್ಲೂ, ಪರಿಣಿತರಾಗಿದ್ದರು. ಗುಬ್ಬಿವೀರಣ್ಣ, ಸುಬ್ಬಯ್ಯನಾಯ್ಡು, ಮಾಸ್ಟರ್ ಹಿರಣ್ಣಯ್ಯ ಮುಂತಾದವರ ಕಂಪನಿ ನಾಟಕದ ವಿವಿಧ ಪಾತ್ರಗಳನ್ನ ಭರ್ಜರಿಯಾಗಿ ನಿರ್ವಹಿಸಿ ಭೇಷ್ ಎನಿಸಿಕೊಂಡಿದ್ದರು.

ಇಂತಹ ಪ್ರತಿಭಾವಂತ ಪುಣ್ಯಪುರುಷನಿಗೆ ಕೆಲವು ವರ್ಷಗಳಿಂದ ಕಷ್ಟಕಾರ್ಪಣ್ಯ ಸಾಲು ಸಾಲಾಗಿ ಒದಗಿಬಂದವು. ಆಶ್ರಯದಾತನಾಗಿ ಇಡೀಕುಟುಂಬ ಕಾಪಾಡಲು ಸಿದ್ಧವಿದ್ದ ಮಗನ ಅಕಾಲಿಕ ಮರಣದಿಂದ ಬರಸಿಡಿಲು ಬಡಿದಂತಾಗಿ ಪುತ್ರಶೋಕದ ಜತೆಗೆ ಇತರೆ ಕೌಟುಂಬಿಕ ಕಷ್ಟನಷ್ಟ ಕಾಡಿತು. ತಮ್ಮೊಳಗೇ ನೋವು ಅನುಭವಿಸುತ್ತಿದ್ದರೂ ಹೊರಗಿನ ಪ್ರಪಂಚಕ್ಕೆ ರ್ತೋರ್ಪಡಿಸದೆ ಎಲ್ಲರನ್ನು ನಗಿಸುತ್ತಿದ್ದ ನಿಸ್ವಾರ್ಥ ತ್ಯಾಗಮಯಿ.

ಬಣ್ಣ ಹಚ್ಚೋದು ಕಲಿತೆ, ಬದುಕೋದು ಕಲಿಯಲಿಲ್ಲ… ಇದು ಕಣ್ಮರೆಯಾದ ನಟ ಉಮೇಶ್ ರವರ ಸ್ವಗತ..

ನಾಟಕ ಸಿನಿಮ ಧಾರಾವಾಹಿ ಎಲ್ಲಾರಂಗದಲ್ಲು ಉಮೇಶ್ ಮುಖ ಕಂಡೊಡನೆ ಇಂಗುತಿಂದ ಮಂಗನೂ ಕಿಸಕ್ಕನೆ ಬಾಯ್ತೆರೆದು ಮನಸಾರೆ ನಗುತ್ತಿತ್ತು “ಅಯ್ಯೋ ಇವ್ರೂ ನನ್ನನ್ನ ಅಪಾರ್ಥ ಮಾಡ್ಕಂಬಿಟ್ರಲ್ಲ..”ಇನ್ನೂಮುಂತಾದ ಡೈಲಾಗ್ ಡೆಲಿವರಿ ಕೇಳಿದೊಡನೆ ಅಹ್ಹಹ್ಹಹಾ….ಎಂದು ದವ್ಡೆನೋವು ಬರುವಂಥೆ ನಕ್ಕುನಕ್ಕು ಸುಸ್ತಾಗಿ ಹೋಗುತ್ತಿದ್ದರು. ಡಾ.ರಾಜ್ ಬಾಯಿಂದ ಹಾಸ್ಯಚಿಲುಮೆ ಎಂದು ಹೊಗಳಿಸಿಕೊಂಡಿದ್ದ ಡಾ.ವಿಷ್ಣುರಿಂದ ನಗುವಿಗೇ ಸೈ ಉಮೇಶ್ ಎನಿಸಿಕೊಂಡಿದ್ದ ಕನ್ನಡದ ಚಾರ್ಲಿಚಾಪ್ಲಿನ್ ಚಿತ್ರಾಭಿಮಾನಿಗಳ ಪಾಲಿಗೆ ನಗೆಸಮುದ್ರ ಆಗಿದ್ದರು. ಒಂದೇಒಂದುಸಲ ರಾಜ್ಯ ಪ್ರಶಸ್ತಿ ಗಳಿಸಿದ್ದ ಅಪ್ರತಿಮ ಹಾಸ್ಯನಟ.

ಉಮೇಶ್ ನಟಿಸಿದ ಕೆಲವು ಪ್ರಮುಖ ಸಿನಿಮಾಗಳು : ಭಾಗ್ಯವಂತರು, ಕಿಲಾಡಿಜೋಡಿ, ಅಂತ, ಕಥಾಸಂಗಮ, ನಾಗರಹೊಳೆ, ಗುರುಶಿಷ್ಯರು, ಹಾವಿನಹೆಡೆ, ಪುಟಾಣಿಏಜೆಂಟ್123, ಹಾಲುಜೇನು, ನನ್ನದೇವರು, ಕಾಮನಬಿಲ್ಲು, ಸಿಂಹಘರ್ಜನೆ, ಭಕ್ತಪ್ರಹ್ಲಾದ, ಇಬ್ಬನಿಕರಗಿತು, ಗಂಡುಭೇರುಂಡ, ಬೆಂಕಿಬಿರುಗಾಳಿ, ಮಲಯ ಮಾರುತ, ಶ್ರಾವಣಬಂತು, ಹಾಲುಸಕ್ಕರೆ, ಗಜಪತಿಗರ್ವಭಂಗ, ಅನುಪಮ, ಶೃತಿಸೇರಿದಾಗ  ಗೋಲ್‍ಮಾಲ್ ರಾಧಾಕೃಷ್ಣ, ಮುಂತಾದವು  ಚಿರಸ್ಮರಣೀಯ ಎಂದೆಂದೂ ಅಜರಾಮರ.

ಇತ್ತೀಚೆಗೆ ಸ್ನಾನದ ಮನೇಲಿ ಜಾರಿಬಿದ್ದ ಕಾರಣ  ಆಸ್ಪತ್ರೆ ಸೇರಿ ಪರೀಕ್ಷೆಗೊಳಗಾದ ಇವರಿಗೆ 4ನೇ ಹಂತ ತಲುಪಿದ್ದ ಲಿವರ್ ಕ್ಯಾನ್ಸರ್ ಇತ್ತೆಂದು ಪತ್ತೆಯಾಯ್ತು. ಮಾನಸಿಕವಾಗಿ ದೈಹಿಕವಾಗಿ ಜರ್ಝರಿತ ಸ್ಥಿತಿ ತಲುಪಿದ್ದ ಪ್ರಯುಕ್ತ ಚಿಕಿತ್ಸೆ ಫಲಕಾರಿಯಾಗದೆ ಮಡದಿ ಮತ್ತು ಪುತ್ರಿಯನ್ನ ತೊರೆದು ಎಂ.ಎಸ್.ಉಮೇಶ್ 30 ನವೆಂಬರ್ 2025 ಭಾನುವಾರ ದೈವಾಧೀನರಾದರು. ಬದುಕಿನುದ್ದಕ್ಕು ತಾನು ಮಾತ್ರ ಅಳುತ್ತ ಬದುಕಿದ್ದಷ್ಟು ಕಾಲ ಎಲ್ಲರನ್ನು ನಗಿಸುತ್ತ ಹೊರಟೇ ಬಿಟ್ಟರು. ಇಂಥ ಓರ್ವ ಅದ್ಭುತ ಹಾಸ್ಯನಟನಿಗೆ ಭಾವಪೂರ್ಣ ಶ್ರದ್ಧಾಂಜಲಿ!

 

admin
the authoradmin

14 ಪ್ರತಿಕ್ರಿಯೆಗಳು

  • ಕನ್ನಡ ಚಲನಚಿತ್ರ ರಂಗದ ಶ್ರೇಷ್ಠ ಹಾಸ್ಯನಟ ಹಾಗೂ ಪೋಷಕನಟ ದಿವಂಗತ ಎಂ.ಎಸ್.ಉಮೇಶ್ ರವರ ಬಗ್ಗೆ ಕುಮಾರಕವಿ ನಟರಾಜರವರ ಬರಹವು ವಿಶಿಷ್ಟ. ಕನ್ನಡ ಪದಗಳನ್ನು ಕಲ್ಲುಸಕ್ಕರೆ ಸವಿಯುವ ಹಾಗೆ ಅಪ್ರತಿಮ ರೀತಿ ಜೋಡಿಸುವ ಕಲೆ ನಟರಾಜರಿಗೆ ಕರಗತವಾದಷ್ಟು ಅಚ್ಚುಕಟ್ಟಾಗಿ ಮತ್ತು ಅನುರೂಪವಾಗಿ, ಸಂದರ್ಭೋಚಿತವಾಗಿ, ವಾಕ್ಯಗಳನ್ನು ಪೋಣಿಸುವ ಶೈಲಿ ಮತ್ತು ಸರಳ ಭಾಷೆಯಲ್ಲಿ ಅದು ಗದ್ಯವಿರಲಿ ಪದ್ಯವಿರಲಿ ಪ್ರಾಸಬದ್ಧವಾಗಿ ವಿದ್ವತ್ ಪೂರ್ಣವಾಗಿ ಇವರು ಬರೆಯುವ ರೀತಿಯ ಲೇಖನಗಳನ್ನು (ನಾನೊಬ್ಬ ವಿಮರ್ಶಕನಾಗಿ) ಈಚಿನ ವರ್ಷಗಳಲ್ಲಿ ನಾನು ಓದಿದ ಸಾವಿರಾರು ಲೇಖನಗಳಲ್ಲಿ ಕಾಣಿಸಲಿಲ್ಲ. ಇವರಂಥ ಪ್ರತಿಭಾವಂತ ಕವಿಗಳು ಬಲು ಅಪರೂಪ. ಏಕೆಂದರೆ ನಟರಾಜ ಕವಿ ಉಪಯೋಗಿಸುವ ಪದಪುಂಜಗಳ ಪದಬಂಧಗಳ ವಿದ್ವತ್ ಆ ಕಾಲದ /ಈ ಕಾಲದ ಬಹುತೇಕ ಲೇಖಕರಲ್ಲಿ ಕಾಣಲೇಇಲ್ಲ. ನಾನೂ ಒಬ್ಬ ಲೇಖಕನಾಗಿ professional/habitual literary jealousy ಮರೆತು ಕುಮಾರಕವಿಯವರಿಗೆ ಮನಸಾರೆ ವಂದನೆ ಅಭಿನಂದನೆ ಸಲ್ಲಿಸುತ್ತೇನೆ.ಇವರಿಗೆ ಸರಿಸಾಟಿಯಾದ ಲೇಖಕರು ಇತ್ತೀಚಿನ ದಿನಗಳಲ್ಲಿ ತೀರ ವಿರಳ ಎಂದಷ್ಟೇ ಧೈರ್ಯವಾಗಿ ಹೇಳುವ ದೊಡ್ಡ ಮನಸ್ಸು ಮಾಡಿದ್ದೇನೆ. ಜನಮನ ಪತ್ರಿಕಾ ಬಳಗಕ್ಕೂ ನನ್ನ ಮನಃಪೂರ್ವಕ ಧನ್ಯವಾದ.
    ರಾ.ರಾಮಕೃಷ್ಣ, ಕನ್ನಡ ಲೇಖಕ, ದಾವಣಗೆರೆ

  • ಕನ್ನಡ ಚಲನಚಿತ್ರ ರಂಗದ ಶ್ರೇಷ್ಠ ಹಾಸ್ಯನಟ ಹಾಗೂ ಪೋಷಕನಟ ದಿವಂಗತ ಎಂ.ಎಸ್.ಉಮೇಶ್ ರವರ ಬಗ್ಗೆ ಕುಮಾರಕವಿ ನಟರಾಜರವರ ಬರಹವು ವಿಶಿಷ್ಟ. ಕನ್ನಡ ಪದಗಳನ್ನು ಕಲ್ಲುಸಕ್ಕರೆ ಸವಿಯುವ ಹಾಗೆ ಅಪ್ರತಿಮ ರೀತಿ ಜೋಡಿಸುವ ಕಲೆ ನಟರಾಜರಿಗೆ ಕರಗತವಾದಷ್ಟು ಅಚ್ಚುಕಟ್ಟಾಗಿ ಮತ್ತು ಅನುರೂಪವಾಗಿ, ಸಂದರ್ಭೋಚಿತವಾಗಿ, ವಾಕ್ಯಗಳನ್ನು ಪೋಣಿಸುವ ಶೈಲಿ ಮತ್ತು ಸರಳ ಭಾಷೆಯಲ್ಲಿ ಅದು ಗದ್ಯವಿರಲಿ ಪದ್ಯವಿರಲಿ ಪ್ರಾಸಬದ್ಧವಾಗಿ ವಿದ್ವತ್ ಪೂರ್ಣವಾಗಿ ಇವರು ಬರೆಯುವ ರೀತಿಯ ಲೇಖನಗಳನ್ನು (ನಾನೊಬ್ಬ ವಿಮರ್ಶಕನಾಗಿ) ಈಚಿನ ವರ್ಷಗಳಲ್ಲಿ ನಾನು ಓದಿದ ಸಾವಿರಾರು ಲೇಖನಗಳಲ್ಲಿ ಕಾಣಿಸಲಿಲ್ಲ. ಇವರಂಥ ಪ್ರತಿಭಾವಂತ ಕವಿಗಳು ಬಲು ಅಪರೂಪ. ಏಕೆಂದರೆ ನಟರಾಜ ಕವಿ ಉಪಯೋಗಿಸುವ ಪದಪುಂಜಗಳ ಪದಬಂಧಗಳ ವಿದ್ವತ್ ಆ ಕಾಲದ /ಈ ಕಾಲದ ಬಹುತೇಕ ಲೇಖಕರಲ್ಲಿ ಕಾಣಲೇಇಲ್ಲ. ನಾನೂ ಒಬ್ಬ ಲೇಖಕನಾಗಿ professional/habitual literary jealousy ಮರೆತು ಕುಮಾರಕವಿಯವರಿಗೆ ಮನಸಾರೆ ವಂದನೆ ಅಭಿನಂದನೆ ಸಲ್ಲಿಸುತ್ತೇನೆ.ಇವರಿಗೆ ಸರಿಸಾಟಿಯಾದ ಲೇಖಕರು ಇತ್ತೀಚಿನ ದಿನಗಳಲ್ಲಿ ತೀರ ವಿರಳ ಎಂದಷ್ಟೇ ಧೈರ್ಯವಾಗಿ ಹೇಳುವ ದೊಡ್ಡ ಮನಸ್ಸು ಮಾಡಿದ್ದೇನೆ. ಜನಮನ ಪತ್ರಿಕಾ ಬಳಗಕ್ಕೂ ನನ್ನ ಮನಃಪೂರ್ವಕ ಧನ್ಯವಾದ.
    ರಾ.ರಾಮಕೃಷ್ಣ, ಕನ್ನಡ ಲೇಖಕ, ವಿಮರ್ಶಕ, ದಾವಣಗೆರೆ

  • ಕಷ್ಟಜೀವಿ ನಮ್ಮನ್ನು ನಗಿಸಿ ತಾವು ಅಳುತ್ತಾ ಹೋದ ಹಿರೀಕ ಹಾಸ್ಯನಟ
    ಉಮೇಶ ರವರ ಲೇಖನ ತುಂಬ ಚೆನ್ನಾಗಿದೆ. ಬಲುದೊಡ್ಡ ಜವಾಬ್ದಾರಿಯ ಮತ್ತು ಸಾಯುವವರೆಗೂ ದುಡಿದಂಥ ಶ್ರಮಜೀವಿ ನಟರ ಬಗ್ಗೆ ಮನ ಮಿಡಿವಂತೆ ಕಥೆಯ ರೂಪಕೊಟ್ಟು ಎಲ್ಲರಿಗೂ ಅರ್ಥವಾಗುವರೀತಿ ಮತ್ತು ಇಷ್ಟವಾಗುವಂತೆ ಬರೆದ ಕುಮಾರಕವಿಯವರ ಬಗ್ಗೆ ಎಷ್ಟು ಹೊಗಳಿದರೂ ಸಾಲುವುದಿಲ್ಲ. ಇದನ್ನು ಅಂದವಾಗಿ ಮುದ್ರಿಸಿ ನಮಗೆಲ್ಲಾ ತಲುಪುವಂತೆ ಮಾಡಿದ ಜನಮನ ಪತ್ರಿಕೆಗೂ ನನ್ನ ನೂರಾರು ನಮಸ್ಕಾರ ಧನ್ಯವಾದ

  • ಬೆಳ್ಳಿತೆರೆ ಮತ್ತು ಕಿರುತೆರೆಯ ಹಿರಿಯ ಹಾಸ್ಯನಟ ಮತ್ತು ರಂಗಭೂಮಿ ಕಲಾವಿದ ಎಂ.ಎಸ್. ಉಮೇಶ್ ರವರ ಲೇಖನ ಕಣ್ಣೀರು ಬರಿಸುವಂತೆ ಬರೆದಿರುವ ನಟರಾಜ ಸರ್ ನಿಜವಾಗಿಯೂ ಶ್ಲಾಘನೀಯರು. ಎಲ್ಲರಿಗೂ ಧನ್ಯವಾದ ಸರ್.
    ಶಾಂತಕುಮಾರ್, ಆಧುನಿಕ ರೈತ, ಮಂಡಕಳ್ಳಿ, ಮೈಸೂರು

  • ದಿ ಗ್ರೇಟ್ ಕಮಿಡಿಯನ್ ಉಮೇಶ್ ರವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸುತ್ತ ತಿಳಿಸುವುದೇನೆಂದರೆ. ಇಂಥ ಕಲಾವಿದರ ಬಗ್ಗೆ ಒಂದು ರೀತಿಯ ಮನ ಕಲಕ್ಕುವ ಮನೋಜ್ಞ ಲೇಖನ ಪ್ರಕಟಿಸಿದ ಜನಮನ ಕನ್ನಡ ಪತ್ರಿಕೆ ಸಂಪಾದಕ ಬಳಗಕ್ಕೆ ಮತ್ತು ಅಮೋಘವಾಗಿ ಬರೆದ ಲೇಖಕರಿಗೆ ಧನ್ಯವಾದಗಳು

  • ಉಮೇಶ್ ಬಗ್ಗೆ ಮಾತ್ರ ಅರಿವಿತ್ತು ಆದರೆ ಇವರ ಸಹೋದರ ಸತ್ಯ ರವರ ಬಗ್ಗೆ ಗೊತ್ತಿರಲಿಲ್ಲ. ಇವರಿಬ್ಬರ ಬಗ್ಗೆ ಬರೆದ ಮಾಹಿತಿಪೂರ್ಣ ಲೇಖನ ಪ್ರಕಟಿಸಿ ಕನ್ನಡ ಚಲನಚಿತ್ರ ಅಭಿಮಾನಿಗಳಿಗೆ ತುಂಬ ವಿಷಯ ತಿಳಿಸಿದ ತಮಗೆಲ್ಲ ನಮಸ್ಕಾರ ಮತ್ತು ಧನ್ಯವಾದ.
    ಉಮೇಶ್ ರವರಿಗೂ ಈ ಮೂಲಕ ನಮ್ಮೆಲ್ಲರ ಭಾವಪೂರ್ಣ ಶ್ರದ್ಧಾಂಜಲಿ RIP

  • ಹಾಸ್ಯರತ್ನ ನಾಟಕ ಕಲಾವಿದ ಮತ್ತು ಹಿರಿಯ ನಟ ಎಮ್.ಎಸ್. ಉಮೇಶ ರವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸುತ್ತ ಇವರ ಬಗ್ಗೆ ಲೇಖನ ಬರೆದು ಸಾರ್ಥಕತೆ ಮೆರೆದ ಸಾಧಕ ಕವಿ ನಟರಾಜ ಅವರಿಗೂ, ಈ ಉತ್ತಮ ಮತ್ತು ಸಂದರ್ಭೋಚೀತ ಲೇಖನ ಪ್ರಕಟಿಸಿದ ಜನಮನ ಪತ್ರಿಕೆಯವರಿಗೂ ಅನಂತ ಧನ್ಯವಾದಗಳು

ನಿಮ್ಮದೊಂದು ಉತ್ತರ

Translate to any language you want