ಕೆ.ಆರ್.ನಗರ(ಜಿಟೆಕ್ ಶಂಕರ್): ಅನುದಾನ ಶಾಲಾ ಶಿಕ್ಷಕರು ಮತ್ತು ಸಿಬ್ಬಂದಿಗಳ ಗಳಿಕೆ ರಜೆ ನಗಧೀಕರಣಕ್ಕಾಗಿ ಅನುದಾನ ಬಿಡುಗಡೆ ಮಾಡಿಸಿಕೊಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘದ ಸಾಲಿಗ್ರಾಮ ಮತ್ತು ಕೆ.ಆರ್.ನಗರ ತಾಲೂಕು ಪದಾಧಿಕಾರಿಗಳು ಶಾಸಕ ಡಿ.ರವಿಶಂಕರ್ ಅವರಿಗೆ ಮನವಿ ಸಲ್ಲಿಸಿದರು.
ಮನವಿ ಪತ್ರ ಸಲ್ಲಿಸಿ ಮಾತನಾಡಿದ ಸಂಘದ ತಾಲೂಕು ಅಧ್ಯಕ್ಷ ಜ್ಯೋತಿಕುಮಾರ್ 2023-24ನೇ ಸಾಲಿನಿಂದ ಈವರೆಗೆ ತಾಲೂಕಿನಲ್ಲಿ ಅನುದಾನಿತ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿರುವ 13 ಮಂದಿ ಶಿಕ್ಷಕರು ಮತ್ತು ಸಿಬ್ಬಂದಿಗಳಿಗೆ ಒಟ್ಟು 68 ಲಕ್ಷ ರೂಗಳು ಬಿಡುಗಡೆಯಾಗಬೇಕಿದ್ದು ಕೂಡಲೇ ಇದನ್ನು ಬಿಡುಗಡೆಗೊಳಿಸಿಕೊಡಬೇಕು ಎಂದು ಕೋರಿದರು.
ನಿವೃತ್ತಿಗೊಂಡಿರುವವರಿಗೆ ಯಾವುದೇ ನಿವೃತ್ತಿ ವೇತನ ಮತ್ತು ಇತರೆ ಸವಲತ್ತುಗಳು ದೊರೆಯುವುದಿಲ್ಲವಾದರಿಂದ ಅವರ ನಿವೃತ್ತಿ ಜೀವನ ನಡೆಸಲು ಕಷ್ಟಕರವಾಗುತ್ತಿದ್ದೆ ಆದ್ದರಿಂದ ತಾವುಗಳು ಸಂಬಂಧಪಟ್ಟ ಇಲಾಖೆಯ ಸಚಿವರ ಗಮನಕ್ಕೆ ತಂದು ಹಣ ಬಿಡುಗಡೆಗೆ ಕ್ರಮವಹಿಸಬೇಕೆಂದರು.

ಇದಕ್ಕೆ ಸ್ಪಂದಿಸಿದ ಶಾಸಕ ಡಿ.ರವಿಶಂಕರ್ ದೂರವಾಣಿಯ ಮೂಲಕ ಉಪನಿರ್ದೇಶಕರಿಗೆ ತಕ್ಷಣವೇ ಗಳಿಕೆ ರಜೆಯ ನಿವೃತ್ತಿ ವೇತನ ಬಿಡುಗಡೆಗೊಳಿಸಿ ಇವರ ಆರ್ಥಿಕ ಸಂಕಷ್ಟಕ್ಕೆ ನೆರವಾಗುವಂತೆ ಸೂಚಿಸಿದ ಹಿನ್ನಲೆಯಲ್ಲಿ ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿ ಅನುದಾನ ಬಿಡುಗಡೆಗೆ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.
ಜಿಲ್ಲಾ ಪರಿಷತ್ ಸದಸ್ಯ ಎಂ.ಎಸ್.ಲೋಕೇಶ್, ಗೌರವಾಧ್ಯಕ್ಷ ಬಿ.ಟಿ.ಗೋವಿಂದರಾಜು, ಕಾರ್ಯದರ್ಶಿ ರೇವಣ್ಣ, ಪದಾಧಿಕಾರಿಗಳಾದ ಹೆಬ್ಬಾಳುಸತೀಶ್, ಶಶಿಕುಮಾರ್, ಟಿ.ಎಂ.ಮನೋಹರ, ಟಿ.ಕೆ.ಮಹದೇವ್, ದೊಡ್ಡಬೋರನಾಯಕ ಸೇರಿದಂತೆ ಇತರರು ಹಾಜರಿದ್ದರು.








