LatestMysore

ಮನುಷ್ಯ ಹೇಗೆ ಅಮರತ್ವ ಸಾಧಿಸಬಹುದು ಎನ್ನುವುದಕ್ಕೆ ಸಿದ್ದಗಂಗಾಶ್ರೀಗಳ ಜೀವನ ಸಾಕ್ಷಿ: ಕಲ್ಮಳ್ಳಿ ನಟರಾಜು

ಮೈಸೂರು: ಹುಟ್ಟು ಆಕಸ್ಮಿಕ,  ಸಾವು ನಿಶ್ಚಿತವಾಗಿದ್ದು, ಹುಟ್ಟು ಸಾವಿನ ನಡುವೆ ಮನುಷ್ಯ ಹೇಗೆ ಅಮರತ್ವ ಸಾಧಿಸಬಹುದು ಎನ್ನುವುದಕ್ಕೆ ಸಿದ್ದಗಂಗೆಯ ಪೂಜ್ಯ ಡಾ. ಶಿವಕುಮಾರ ಮಹಾಸ್ವಾಮಿ ಅವರ ಜೀವನವೆ ಪ್ರತ್ಯಕ್ಷ ಜೀವಂತ ಸಾಕ್ಷಿಯಾಗಿದ್ದು, ಅವರು ಬೆಳಕಿನೊಳಗಣ ಮಹಾಬೆಳಕು ಎಂದು ಅಖಿಲ ಭಾರತ ವೀರಶೈವ ಮೈಸೂರು ಜಿಲ್ಲಾ ಘಟಕದ ನಿರ್ದೇಶಕರಾದ ಕಲ್ಮಳ್ಳಿ ನಟರಾಜು ಬಣ್ಣಿಸಿದ್ದಾರೆ.

ನಂಜನಗೂಡಿನ ವಿದ್ಯಾ ನಗರದ ಸಿದ್ದಗಂಗಾ ಭಕ್ತ ಬಳಗದ ವತಿಯಿಂದ ವಿಶ್ವ ಗುರು ಬಸವೇಶ್ವರ ವೃತ್ತದಲ್ಲಿ ಹಮ್ಮಿ ಕೊಳ್ಳಲಾಗಿದ್ದ ಸಿದ್ದಗಂಗೆಯ ಪೂಜ್ಯ ಡಾ.ಶಿವಕುಮಾರ ಮಹಾಸ್ವಾಮಿಗಳವರ 119 ನೆಯ ಜನ್ಮ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಪೂಜ್ಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು, ವೀರಾಪುರದ ಶಿವಣ್ಣ ಮುಂದೊಂದು ದಿನ ಜಾತಿ ಧರ್ಮ ಲಿಂಗ ಭೇದವೆಣಿಸದೆ ತನ್ನೊಡಲಿಗೆ ಬಂದ ಲಕ್ಷಾಂತರ ಜನರಿಗೆ ತಾಯಿ ಮಡಿಲಾಗಿ ಅನ್ನ, ಆಶ್ರಯ, ಅರಿವು ನೀಡಿ ಶರಣ ವಾಣಿಯಂತೆ ಎಲ್ಲ ನನ್ನವರೆನ್ನುವ ತಾಯಿ ಮಮತೆ, ಪ್ರೀತಿ, ಕರುಣೆ ತೋರಿ ಅನಾಥೋ ದೈವ ರಕ್ಷಕ ಎನ್ನುವ ಭಾರತೀಯ ಸಂಸ್ಕೃತಿ ಯ ಶ್ರೇಷ್ಠ ಮೌಲ್ಯ ವನ್ನು ಜಗತ್ತಿಗೆ ಸಾರಿದ ಒಬ್ಬ ಭವ್ಯ, ದಿವ್ಯ, ಶ್ರೇಷ್ಠ ಸಂತನಾಗಿದ್ದಾರೆ.

ಕ್ರೈಸ್ತ ಧರ್ಮದ ಸುಪ್ರಸಿದ್ದ ನುಡಿ ಅರಿವಿನ ದಾರಿ ಕಾಣದೆ ಜನ ಸಾಮಾನ್ಯರು ಬಳಲುತ್ತಿರುವಾಗ ಅರಿತು ಜನ್ಮ ತೋರುವ ಮಹಾತ್ಮರು ಜನಿಸುತ್ತಾರೆ ಎನ್ನುವುದು ಮಾನವ ಇತಿಹಾಸ ವನ್ನು ಓದಿದಾಗ ಒಬ್ಬ ಬುದ್ಧ, ಒಬ್ಬ ಎಸುಕ್ರಿಸ್ತ, ಒಬ್ಬ ಮಹಮದ್ ಪೈಗಂಬರ್ ಕನ್ಫ್ಯೂಷಿಯಸ್ ಸಾಕ್ರೆಟಿಸ್ ಪ್ಲೇಟೊ ಅರಿಸ್ಟಾಟಲ್  ಸರ್ವಜ್ಞ ಕನಕದಾಸ  ಬಸವಣ್ಣ ಅಂಬೇಡ್ಕರ್ ಮಹಾತ್ಮ ಗಾಂಧೀ ಕಬೀರ್ ಸಂತ ತುಕಾರಾಂ ಇವರೆಲ್ಲರ ಬದುಕು ಅವರ ಆದರ್ಶಗಳು ಬದುಕಿದ್ದ ಅವಧಿ ಕ್ಷಣಿಕ ಆದರೂ ಮನುಕುಲದ ಇತಿಹಾಸದಲ್ಲಿ ಎಂದೆoದಿಗೂ ಜೀವಂತ ಬದುಕಿನ ಪ್ರತಿ ಕ್ಷಣವೂ ಇನ್ನೊಬ್ಬರ ಬದುಕಿನ ಉದ್ದಾರಕ್ಕೆ ಮುಡಿಪು ಎಂದರು.

ಶರಣರ ಕಾಯಕ ದಾಸೋಹ ತತ್ವಗಳು ಕೇವಲ ನುಡಿ ಯಾಗದೆ ನಡೆಯಲ್ಲಿ ಅವುಗಳಿಗೆ ಪ್ರತಿ ದಿನ ಪ್ರತಿ ಕ್ಷಣ ತನ್ನನ್ನು ತಾನು ಒಡ್ಡಿ ಕೊಂಡ ಪ್ರಯೋಗಶೀಲ ಸಂತ ಜಗದ ಬೆಳಕಿನೊಳಗಣ ಮಹಾ ಬೆಳಕು ಎಂದರು. ದೇಶ ಕಂಡ  ಮುತ್ಸದ್ದಿ ಕವಿ ಹೃದಯದ ಪ್ರಧಾನ ಮಂತ್ರಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ತಾವು ಶ್ರೀ ಗಳವರ ಸೇವಾ ಸಾಧನೆ ನೋಡಿ ಉತ್ತರದಲ್ಲಿ ಗಂಗೆ ಹೇಗೆ ಪವಿತ್ರಾಳೋ ಹಾಗೆಯೇ ದಕ್ಷಿಣದಲ್ಲಿ ಸಿದ್ದ ಗಂಗೆ ಎನ್ನುವ ಮಾತು ಸ್ಥಳದ ಮತ್ತು ಪೂಜ್ಯರ ಪಾವಿತ್ರತೆಯನ್ನು ತೋರಿಸುತ್ತದೆ ತಮ್ಮ ಇಳಿವಯಸ್ಸಿನಲ್ಲೂ ಮೈಗೂಡಿಸಿಕೊಂಡ ಯಾವುದೇ ಕಾರ್ಯವನ್ನು ಬಿಡದೆ ಕೊನೆ ಉಸಿರಿನ ತನಕ ಪಾಲಿಸಿ ಶ್ರೀ ಸಾಮಾನ್ಯ ರ ಬಾಯಲ್ಲಿ ದೇವರು ಎನ್ನಿಸಿಕೊಂಡ ಮಹಾ ಚೈತನ್ಯ.

ಕಣ್ಣಿಗೆ ಕಂಡ ನಿಜದ ಶರಣ ಆತ್ಮ ಸ್ವರೂಪಿ ದಿನ ದಲಿತ ಅಸಾಯಕರ ನಿರ್ಗತಿಕರ ಸೇವೆಯಲ್ಲೇ ತನ್ನ ಬದುಕನ್ನು ಕಂಡ ಜಗದ ಪುರುಷ ಯುಗದ ಪುರುಷ ಮನು ಕುಲದ ಶ್ರೇಷ್ಠ ಸಂತ ಅವರ ಜನ್ಮ ಸಂಭ್ರಮ ಕೇವಲ ಒಂದು ಸಮುದಾಯಕ್ಕಲ್ಲ ಅಲ್ಲಿ ಬದುಕು ಕಟ್ಟಿ ಕೊಂಡ ಎಲ್ಲ ಧರ್ಮದ ಭಕ್ತರು ಅವರನ್ನು ಪೂಜಿಸಿ ಆರಾಧಿಸುತ್ತಿವೆ ಎಂದರು.

ಎಲ್ಲರ ಮನೆ ಮನಸ್ಸುಗಳು ಇಂದು ಸ್ಮರಿಸಿ ವಿನಿತ ಭಾವದಿಂದ ದಾಸೋಹ ಸೇವೆ ಸಲ್ಲಿಸುತ್ತಿರುವುದನ್ನು ನೋಡಿದರೆ ಧರ್ಮಗಳು ಕೇವಲ ಜಾತಿಗೆ ಸೀಮಿತವಾಗದೆ ಮನುಕುಲಕ್ಕೆ ಒಳಿತು ಮಾಡುವುದೇ ಮಾನವ ಧರ್ಮ ಸತ್ತ ನಂತರದ ಸ್ವರ್ಗದ ಕಲ್ಪನೆಗಿಂತ ಬದುಕಿದ್ದಾಗ ಸನ್ಮಾರ್ಗದ ಹಾದಿಯಲ್ಲಿ ನಡೆದಾಗ ತಾವಿರುವಲ್ಲಿಯೇ ಸ್ವರ್ಗ ಕಾಣಬಹುದು ಎನ್ನುವುದಕ್ಕೆ ಜಗತ್ತಿನ ಮೂಲೆ ಮೂಲೆಗಳಿಂದ ನಿತ್ಯವು ಜಾತಿ ಮತ ಪಂಥಗಳಿಲ್ಲದ್ದದೆ ಪ್ರತಿ ನಿತ್ಯ ಕ್ಷೇತ್ರ ಮತ್ತು ಪೂಜ್ಯರ ಗದ್ದುಗೆ ದರ್ಶನಕ್ಕೆ ಬರುತ್ತಿರುವುದೆ ಸಾಕ್ಷಿ. ನಾವು ಇರುವಲ್ಲಿಯೇ ನೊಂದವರಿಗೆ ಅಸಾಯಕರಿಗೆ ದೀನರಿಗೆ ಕಿಂಚಿತ್ ಆರ್ಥಿಕ ಸಾಮಾಜಿಕ ಶೈಕ್ಷಣಿಕ ಸೇವೆ ಸಲ್ಲಿಸಿದರೆ ನಮ್ಮ ಜೀವನ ಸಾರ್ಥಕ ಪೂಜ್ಯರಿಗೆ ನಾವು ಸಲ್ಲಿಸುವ ನಿಜವಾದ ಪೂಜೆ ಎಂದರು

ಕಾರ್ಯಕ್ರಮದ ನಂತರ ಸಾವಿರಾರು ಜನರಿಗೆ ಪ್ರಸಾದ ವಿತರಿಸಲಾಯಿತು. ಕಾರ್ಯಕ್ರಮ ದಲ್ಲಿ ಸಂಚಾಲರಾದ ಉದ್ಯಮಿ ಶ್ರೀ ಸುರೇಶ್ ಕುರುಬರ ಹುಂಡಿ ಮುಳ್ಳೂರು ಪ್ರಕಾಶ್  ನಾಗರಾಜು ಶಿವ ಲಿಂಗಸ್ವಾಮಿ ತಾಲೂಕು ಪ್ರತಿ ಧ್ವನಿ ವೇದಿಕೆ ಅಧ್ಯಕ್ಷರಾದ ಕೀರ್ತಿ ಚಂದ್ರವಾಡಿ, ಶಿಕ್ಷಕರಾದ ಮನೀಶ್ ಹೊರೆಯಾಲ, ಈಶ್ವರ್  ಹೊರೆಯಾಲ, ಮಹೇಶ್ ಬೀಳುಗಲಿ, ಶಿವಕುಮಾರ್ ಬದನವಾಳು  ಪುಟ್ಟ ಬುದ್ದಿ ಬಸವ ಯೋಗೀಶ್ ಚೆನ್ನಪ್ಪ ಪ್ರಭುಸ್ವಾಮಿ ರಾಜೇಂದ್ರ ರಾಜ ಶೇಖರ್ ವೈರಾಗ್ಯ ನಿಧಿ ಅಕ್ಕಮಹಾದೇವಿ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಸುಮಾವತಿ, ಮೈಸೂರು ಜಿಲ್ಲಾ ಜಗನ್ಮಾತೆ ಅಕ್ಕಾ ಮಹಾದೇವಿ ಮಹಿಳಾ ಸಹಕಾರ ಸಂಘದ ನಿರ್ದೇಶಕಿ ಶ್ರೀಮತಿ ಗೀತಾ ಕಲ್ಮಳ್ಳಿ ನಟರಾಜು, ಕುಮಾರ್ ಯಾಕನೂರ್ ಮೊಬ್ಬಳ್ಳಿ ಗುರು ಸಿದ್ದಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.

admin
the authoradmin

Leave a Reply

Translate to any language you want