ಸಾಲಿಗ್ರಾಮ(ಸಂಘಟನೆ ಮಂಜುನಾಥ್): ಕಣ್ಣು ಪ್ರತಿಯೊಬ್ಬರಿಗೂ ಪ್ರಮುಖವಾದ ಅಂಗವಾಗಿದ್ದು ಅತಿ ಹೆಚ್ಚಿನ ಜಾಗ್ರತೆ ವಹಿಸುವುದು ಅಗತ್ಯ ಎಂದು ಸಮುದಾಯ ಆರೋಗ್ಯ ಕೇಂದ್ರದ ವೈದ್ಯ ಡಾ.ಕೀರ್ತಿ ಹೇಳಿದರು.
ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕರುನಾಡ ದೀಪ ಸೇವಾ ಟ್ರಸ್ಟ್, ಗ್ರಾಮೀಣ ನಿಧಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ, ಬೆಂಗಳೂರಿನ ಶಂಕರ ಕಣ್ಣಿನ ಆಸ್ಪತ್ರೆ, ಜಿಲ್ಲಾ ಅಂಧತ್ವ ನಿಯಂತ್ರಣ ವಿಭಾಗ, ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಇವರುಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಉಚಿತ ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದರು.
ಗ್ರಾಮೀಣ ಪ್ರದೇಶದಲ್ಲಿನ ಜನರು ತಮ್ಮ ಬದುಕಿನ ದಿನನಿತ್ಯದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಾಗ ಕಣ್ಣಿನ ಬಗ್ಗೆ ಅತಿಹೆಚ್ಚಿನ ಜಾಗ್ರತೆ ವಹಿಸಬೇಕಾದ ಅಗತ್ಯತೆ ಪ್ರಮುಖವಾಗಿದೆ. ಮಕ್ಕಳು ಆಟವಾಡುವ ಸಮಯದಲ್ಲಿ ಅವರುಗಳ ಮೇಲೆ ಪೋಷಕರುಗಳು ಸದಾ ಎಚ್ಚರಿಕೆ ವಹಿಸಬೇಕು. ಇಲ್ಲದಿದ್ದರೆ ಅವಘಡಗಳು ಸಂಭವಿಸುವ ಸಾಧ್ಯತೆ ಇರುತ್ತದೆ. ಆರೋಗ್ಯಕ್ಕೆ ಸಂಬಂಧಿಸಿದಂತೆ ಯಾವುದೇ ವಿಷಯಕ್ಕೂ ಯಾರೂ ಕೂಡ ಎಂತಹ ಸಂದರ್ಭದಲ್ಲಿಯೂ ತಾತ್ಸಾರ ತೋರದೆ ಕೂಡಲೇ ವೈದ್ಯರ ಭೇಟಿ ಮಾಡಿ ಅವರಿಂದ ಸಲಹೆಯನ್ನು ಪಡೆದು ಆರೋಗ್ಯದ ಕಡೆಗೆ ಹೆಚ್ಚಿನ ಗಮನವನ್ನು ಹರಿಸಬೇಕು ಎಂದರು.

ಸಂಘ ಸಂಸ್ಥೆಗಳು ಆರೋಗ್ಯಕ್ಕೆ ಸಂಬಂಧಿಸಿದಂತಹ ವಿವಿಧ ಉಚಿತ ಶಿಬಿರಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಮಟ್ಟದಲ್ಲಿ ಮಾಡುವ ಮೂಲಕ ಗ್ರಾಮಾಂತರ ಪ್ರದೇಶದ ಜನರಿಗೆ ಉತ್ತಮ ಆರೋಗ್ಯ ಸೇವೆಯು ಸಿಗುವಂತೆ ಮಾಡಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಕರುನಾಡ ದೀಪ ಸೇವಾ ಟ್ರಸ್ಟ್ ಅಧ್ಯಕ್ಷ ಕೆ.ಟಿ.ಮೋಹನ್ ಕುಮಾರ್, ಗ್ರಾಮೀಣ ನಿಧಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಕೆ.ಆರ್.ಶ್ಯಾಮಸುಂದರ್, ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಚಿಕ್ಕನಾಯಕನಹಳ್ಳಿ ವಾಸು, ವೀರಶೈವ ಲಿಂಗಾಯತ ಮಹಾಸಭಾದ ದಡದಹಳ್ಳಿನಟರಾಜ್, ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಲಕ್ಕಿಕುಪ್ಪೆ ಮಂಜೇಗೌಡ, ದಿನೇಶ್, ಮುಖಂಡ ಕರ್ತಾಳು ಧರ್ಮೇಶ್, ಗ್ರಾಮೀಣ ನಿಧಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯ ನಿರ್ದೇಶಕರಾದ ಎಂ.ಎಸ್.ನರಸಿಂಹ, ಮಂಜುನಾಥ, ಕುಮಾರ್, ಸಿಇಒ ಸಿಂಧೂ ಮಂಜುನಾಥ್, ಮಮತ, ಶಂಕರ ಕಣ್ಣಿನ ಆಸ್ಪತ್ರೆಯ ಶ್ರೀಕಂಠಮೂರ್ತಿ, ತೇಜ, ಫರಿದಾ, ಹರೀಶ್, ಮೋಹನ್, ಶಿವು, ನೇತ್ರಾಧಿಕಾರಿ ಕೆ.ಎಸ್.ಶೇಖರ್, ಆಸ್ಪತ್ರೆಯ ನೌಕರರು ಹಾಗೂ ಸಿಬ್ಬಂದಿ ಇದ್ದರು.








