ಹುಣಸೂರು(ಹಿರಿಕ್ಯಾತನಹಳ್ಳಿ ಸ್ವಾಮಿಗೌಡ): ತಾಲ್ಲೂಕಿನಾದ್ಯಂತ ರಸಗೊಬ್ಬರ ಮತ್ತು ಕೃಷಿ ಪರಿಕರ ಮಾರಾಟಗಾರರು ಹಲವು ಬೇಡಿಕೆ ಪರಿಹರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿದರು.
ರಸಗೊಬ್ಬರ ಮಾರಾಟ ಪ್ರತಿನಿಧಿಗಳು ರಾಷ್ಟ್ರದಾದ್ಯಂತ ರೈತರ ಹಿತ ಕಾಯುವ ದೃಷ್ಟಿಯಿಂದ ರಸಗೊಬ್ಬರ ಮಾರಾಟ ವಹಿವಾಟು ಬಂದ್ ಮಾಡಿದ್ದು, ಇತ್ತೀಚೆಗೆ ಕೇಂದ್ರ ಸರ್ಕಾರ ಜಾರಿಗೆ ತಂದ ಕೆಲವೊಂದು ನಿಯಮಗಳು ಅವೈಜ್ಞಾನಿಕವಾಗಿದೆ. ಅದರಿಂದ ಅನುಕೂಲವಾಗುವ ಬದಲಿಗೆ ಅನಾನು ಕೂಲವೇ ಹೆಚ್ಚಾಗಿದೆ ಎಂದು ದೂರಿದರು.
‘ಹುಣಸೂರು ತಾಲ್ಲೂಕು ರಸಗೊಬ್ಬರ, ಕೀಟನಾಶಕ ಮತ್ತು ಬಿತ್ತನೆ ಬೀಜ ಮಾರಾಟ ಪ್ರತಿನಿಧಿಗಳ ಸಂಘದ 40 ಅಂಗಡಿಗಳ ಮಾಲೀಕರು ರಾಷ್ಟ್ರ ಕೃಷಿ ಪರಿಕರ ಮಾರಾಟಗಾರರ ಸಂಘ ಕರೆ ನೀಡಿರುವ ಬಂದ್ ಗೆ ಬೆಂಬಲ ವ್ಯಕ್ತಪಡಿಸಿ ಬಂದ್ ಮಾಡಿದ್ದೇವೆ’ ಎಂದು ನಗರದ ರಸಗೊಬ್ಬರ ಮಾರಾಟಗಾರ ಪ್ರತಿನಿಧಿ ಗಿರೀಶ್ ಹೇಳಿದರು.
ತಾಲ್ಲೂಕು ರಸಗೊಬ್ಬರ ಕೀಟನಾಶಕ ಮತ್ತು ಬಿತ್ತನೆ ಬೀಜ ಮಾರಾಟಗಾರರ ಸಂಘದ ಮಾಜಿ ಅಧ್ಯಕ್ಷ ರಾಜಶೇಖರ್ ಮಾತನಾಡಿ, ‘ಕೃಷಿ ಪರಿಕರ ಮತ ರಸಗೊಬ್ಬರ ಮಾರಾಟ ಪ್ರತಿನಿಧಿಗಳು ಇಂದಿನ ಬಂದ್ಗೆ ಕೈ ಜೋಡಿಸಿ ಹಲವು ಬೇಡಿಕೆಯನ್ನು ಕೇಂದ್ರ ಸರ್ಕಾರದ ಮುಂದೆ ಇಡಲಾಗಿದೆ. ಈ ಬೇಡಿಕೆಯಲ್ಲಿ ಪ್ರಮುಖ ಅಂಶಗಳಾದ ಡಿಎಪಿ ಮತ್ತು ಯೂರಿಯಾದ ಜೊತೆಗೆ ಒತ್ತಾಯವಾಗಿ ಲಿಂಕ್ ಬೇರೇ ಉತ್ಪಾದನೆಗಳನ್ನು ಮಾಡುವುದನ್ನು ನಿಲ್ಲಿಸಬೇಕು.

ಎಲ್ಲಾ ರಸಗೊಬ್ಬರಗಳ ದರಗಳ ಮೇಲೆ ಶೇ 8ರಷ್ಟು ಡೀಲರ್ ಲಾಭಾಂಶ ಇರುವಂತೆ ನೋಡಿಕೊಳ್ಳಬೇಕು. ಗೊಬ್ಬರ ಬೀಜ, ಕೀಟನಾಶಕದ ಗುಣಮಟ್ಟ ನಿಯಮಾನುಸಾರ ಇಲ್ಲದಿದ್ದಾಗ ಉತ್ಪಾದನಾ ಕಂಪನಿಗಳ ಮೇಲೆ ಪ್ರಕರಣ ದಾಖಲಿಸಿ ಮಾರಾಟ ಪ್ರತಿನಿಧಿಗಳನ್ನು ಕೇವಲ ಸಾಕ್ಷಿಯನ್ನಾಗಿ ಪರಿಗಣಿಸಬೇಕು’ ಎಂದು ಒತ್ತಾಯಿಸಿದರು.
ಪ್ರತಿನಿಧಿಗಳ ಮೂಲಕ ಸ್ಥಳೀಯ ಮಾರಾಟ ಅಂಗಡಿ ಕೇಂದ್ರಕ್ಕೆ ಕೃಷಿ ಅಧಿಕಾರಿಗಳು ಭೇಟಿ ನೀಡಿ ತಪಾಸಣೆ ನಡೆಸಿದಾಗ ಮಾಧ್ಯಮಗಳಿಗೆ ‘ದಾಳಿ’ ಎಂಬ ಪದ ಪ್ರಯೋಗ ಬದಲಿಗೆ ಎಪ್.ಐ.ಡಿ ತಪಾಸಣೆ ಎಂದು ಬಳಸಬೇಕು. ರೈತರಿಗೆ ರಸಗೊಬ್ಬರ ಮಾರಾಟ ಮಾಡಬೇಕು ಎಂಬ ಆದೇಶ ಸ್ವಾಗತಿಸುತ್ತೇವೆ. ಆದರೆ, ನೀರಾವರಿ ಮತ್ತು ಒಣ ಬೇಸಾಯಗಾರರ ಬೆಳೆಗೆ ಆಧಾರದ ಮೇಲೆ ಗೊಬ್ಬರ ಸಿಗುವಂತೆ ಸಂಬಂಧಿಸಿದ ಇಲಾಖೆ ವ್ಯವಸ್ಥೆ ಕಲ್ಪಿಸಬೇಕು ಎಂದು ಮನವಿ ಮಾಡಿದರು.








