ಹುಣಸೂರು(ಹಿರೀಕ್ಯಾತನಹಳ್ಳಿ ಸ್ವಾಮಿಗೌಡ): ರಾಜ್ಯದಲ್ಲಿ ರೈತರು ಪ್ರಾಣಕಳೆದುಕೊಳ್ಳುವುದು ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಒಂದಲ್ಲ ಒಂದು ಕಾರಣಕ್ಕೆ ಒಂದಲ್ಲ ಒಂದು ಕಾರಣಕ್ಕೆ ಸಾವನ್ನಪ್ಪುತ್ತಿದ್ದು ಇದೀಗ ತಾಲೂಕಿನ ಹನಗೋಡು ಹೋಬಳಿಯ ವಡ್ಡಂಬಾಳು ಗ್ರಾಮದ ರೈತ ಸಿದ್ದರಾಜು ಬಿನ್ ಕಗ್ಲಿನಾಯಕ ರವರು ಸಾಲ ಬಾಧೆ ಯಿಂದ ಪ್ರಾಣಕಳೆದುಕೊಂಡಿದ್ದಾರೆ.

ಪತ್ನಿ ಹಾಗೂ ಇಬ್ಬರು ಮಕ್ಕಳ ಸಂಸಾರ ನಡೆಸುತ್ತಿದ್ದ ಸಿದ್ದರಾಜುಗೆ ಕೃಷಿಯೇ ಬದುಕಿಗೆ ಮೂಲವಾಗಿತ್ತು. ಆದರೆ ಕೃಷಿ ಅವರ ಕೈಹಿಡಿಯದೆ ಪ್ರಾಣಚೆಲ್ಲುವಂತಾಗಿದೆ. ಇತ್ತೀಚೆಗೆ ವಾಣಿಜ್ಯ ಬೆಳೆಗಳ ಭರಾಟೆಯಲ್ಲಿ ಅವುಗಳ ಮೇಲೆ ಬಂಡವಾಳ ಸುರಿದು ಲಾಭ ತೆಗೆಯುವುದು ಮಾಮೂಲಿಯಾಗಿದೆ, ನಸೀಬು ನೆಟ್ಟಗಿದ್ದು ಉತ್ತಮ ದರ ದೊರೆತರೆ ಹಾಕಿದ ಬಂಡವಾಳದ ಜತೆಗೆ ಲಾಭವೂ ಬರಲಿದೆ. ಆದರೆ ಸ್ವಲ್ಪ ಎಡವಿದರೆ ಲಾಭವಿರಲಿ ಅಸಲು ಬಾರದೆ ಪ್ರಾಣಕಳೆದುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ.
ಮೃತ ಸಿದ್ದರಾಜು ಎಸ್ ಬಿಉಐ ಬ್ಯಾಂಕ್ ಸೇರಿದಂತೆ ಇತರೆ ಕೈ ಸಾಲವಾಗಿ 15 ಲಕ್ಷ ರೂ ಗೂ ಹೆಚ್ಚು ಸಾಲ ಮಾಡಿದ್ದು, ಬೆಳೆದ ತಂಬಾಕು ಬೆಳೆ ಹಾಗೂ ಶುಂಠಿ ಬೆಳೆಗೆ ಸರಿಯಾದ ಬೆಲೆ ಸಿಗದೇ ಸಾಲ ಬಾಧೆಯ ಸುಳಿಗೆ ಸಿಲುಕಿದ್ದು ಸಾಲ ತೀರಿಸಲಾಗದೆ ನೊಂದು ಶುಕ್ರವಾರ ಅವರ ಜಮೀನಿನ ಮರವೊಂದಕ್ಕೆ ನೇಣು ಬಿಗಿದುಕೊಂಡು ಉಸಿರು ಚೆಲ್ಲಿದ್ದಾರೆ.

ವಿಷಯ ತಿಳಿದು ಗ್ರಾಮಕ್ಕೆ ಮಾಜಿ ಶಾಸಕರಾದ ಎಚ್ ಪಿ ಮಂಜುನಾಥ್ ಭೇಟಿ ನೊಂದ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಅಲ್ಲದೆ, ಕುಟುಂಬಕ್ಕೆ ಸರ್ಕಾರದಿಂದ ಸಿಗುವ ಎಲ್ಲಾ ರೀತಿಯ ಪರಿಹಾರವನ್ನು ಕೂಡಲೇ ಮಂಜೂರು ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ದೂರವಾಣಿ ಮೂಲಕ ಉಪವಿಭಾಗಾಧಿಕಾರಿ ಗಳು , ತಹಸಿಲ್ದಾರ್ ಹಾಗೂ ಡಿ ವೈ ಎಸ್ ಪಿ ರವರಿಗೆ ಮನವಿ ಮಾಡಿ ಮೃತರ ಕುಟುಂಬಕ್ಕೆ ವೈಯಕ್ತಿಕವಾಗಿ ಸಹಾಯಹಸ್ತ ನೀಡುವುದಾಗಿ ಭರವಸೆ ನೀಡಿದ್ದಾರೆ.








