‘ಸತ್ಯಹರಿಶ್ಚಂದ್ರ’ ಚಿತ್ರವನ್ನು ನೋಡಿದವರಿಗೆ ಅದರಲ್ಲಿನ “ನನ್ನ ನೀನು… ನಿನ್ನ ನಾನು…..” ಹಾಡಿನಲ್ಲಿ ನೃತ್ಯಗಾರ್ತಿಯಾಗಿದ್ದ ವಾಣಿಶ್ರೀ ಅವರ ನೆನಪು ಬಂದೇ ಬರುತ್ತದೆ.. ದಕ್ಷಿಣ ಭಾರತದ ಸಿನಿರಂಗದಲ್ಲಿ ಸುಮಾರು ಎರಡು ದಶಕಗಳ ಕಾಲ ನಟಿಯಾಗಿ ಮೆರೆದ ನಟಿ ವಾಣಿಶ್ರೀ ಅವರ ಬಗ್ಗೆ ಹಿರಿಯ ಬರಹಗಾರರಾದ ಕುಮಾರಕವಿ ನಟರಾಜ್ ರವರು ಇಲ್ಲಿ ತೆರೆದಿಟ್ಟಿದ್ದಾರೆ.
1964ರಲ್ಲಿ ತೆರೆಕಂಡ ವೀರಸಂಕಲ್ಪ ಕನ್ನಡ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದ ಕೋಲು ಮುಖದ ಕೃಷ್ಣಸುಂದರಿ ವಾಣಿಶ್ರೀ. ಇದಾದ ಮರುವರ್ಷ ಕನ್ನಡ ತೆಲುಗು ತಮಿಳು ಮೂರೂ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾದ ಅದ್ಧೂರಿ ಐತಿಹಾಸಿಕ ‘ಸತ್ಯಹರಿಶ್ಚಂದ್ರ’ ಚಿತ್ರದ “ನನ್ನ ನೀನು… ನಿನ್ನ ನಾನು…..” ಹಾಡಿನ ನೃತ್ಯಗಾರ್ತಿಯಾಗಿ ಪುಟ್ಟಪಾತ್ರ ಮಾಡುವ ಮೂಲಕ ಎಲ್ಲರ ಗಮನ ಸೆಳೆದರು. ಕಾಲಕ್ರಮೇಣ ದಿಗ್ಗಜರ ಶಿಫಾರಸ್ಸಿಲ್ಲದೆ, ಗಾಡ್ ಫಾದರ್ ಇಲ್ಲದೆ ದೈವಲೀಲೆ ಎಂಬಂತೆ ತಮ್ಮ ಪ್ರತಿಭೆಯಿಂದಾಗಿ ಜನಪ್ರಿಯ ನಟಿಯಾದರು.

20 ವರ್ಷ ಪರ್ಯಂತ ದಕ್ಷಿಣ ಭಾರತದ ಬಹು ಬೇಡಿಕೆಯುಳ್ಳ ನಟಿ ಎನಿಸಿದರು. ಸಾವಕಾಶವಾಗಿ ಮತ್ತು ಸಾವಧಾನವಾಗಿ ಒಂದೊಂದೇ ಮೆಟ್ಟಿಲೇರುತ್ತ ಪ್ರತಿಭಾ ಪರ್ವತವೇ ಆದರು. ಅತೀ ತಳಮಟ್ಟದಿಂದ ಅತ್ಯಂತ ಮೇಲ್ಮಟ್ಟ ತಲುಪಿದ ಭಾರತದ ಮೊಟ್ಟಮೊದಲ ನಟಿ ಎನಿಸಿದರು. ತಾವು ನಟಿಸಿದ ವಿವಿಧ ಭಾಷೆಯ ಪ್ರತಿಯೊಂದು ಚಿತ್ರದಲ್ಲೂ ಅಪ್ರತಿಮ ಅಭಿನಯ ನೀಡಿ ಭಾರತೀಯ ಚಿತ್ರರಂಗದ ಉತ್ತುಂಗ ಶಿಖರವೇರಿ ಉತ್ತಮ ಹೀರೋಗಳ ಜತೆ ಬೆಳ್ಳಿಪರದೆ ಹಂಚಿಕೊಂಡರು. ಹಲವಾರು ರಾಜ್ಯ ಪ್ರಶಸ್ತಿ, ಫಿಲಂಫೇರ್ ಪ್ರಶಸ್ತಿ, ರಾಷ್ಟ್ರ ಪ್ರಶಸ್ತಿ ಹಾಗೂ ಅಂತಾರಾಷ್ಟ್ರ ಪ್ರಶಸ್ತಿಗಳನ್ನು ಪಡೆದರು.

ಈ ನಿಟ್ಟಿನಲ್ಲಿ ಒಂದು ಜ್ವಲಂತ ನಿದರ್ಶನ ಹೀಗಿದೆ… ಅದು ಏನೆಂದರೆ? ಶಿವಾಜಿಗಣೇಶನ್ ನಟಿಸಿದ ವಸಂತಮಾಳಿಗೈ ತಮಿಳು ಚಿತ್ರವು ಮೂಲತಃ ಎ.ನಾಗೇಶ್ವರ ರಾವ್ ನಟಿಸಿದ ಪ್ರೇಂನಗರ್ ತೆಲುಗು ಚಿತ್ರದ ರೀಮೇಕ್. ಆದರೆ ಒರಿಜಿನಲ್ಗಿಂತ ರೀಮೇಕ್ ಚಿತ್ರವೇ ಹೆಚ್ಚು ಹಣ ಕೀರ್ತಿ ಪ್ರಶಸ್ತಿ ಗಳಿಸಿದ್ದು ಅದ್ಭುತ ಇತಿಹಾಸ!

ದಕ್ಷಿಣ ಆಫ್ರಿಕಾ ದೇಶದ ಅಂತಾರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ವಿಶೇಷ ಆಹ್ವಾನಿತರಾಗಿ ಮೇರುನಟ ಶಿವಾಜಿಗಣೇಶನ್ ರೊಡನೆ ಪ್ರವಾಸ ಕೈಗೊಂಡು, ಅಲ್ಲಿ ಜರುಗಿದ ಭವ್ಯವಾದ ಕಾರ್ಯಕ್ರಮದಲ್ಲಿ ರೆಡ್ ಕಾರ್ಪೆಟ್ ಮೂಲಕ ಅಲ್ಲಿನ ದಿಗ್ಗಜರಿಂದ ಸ್ವಾಗತ ಪಡೆದರು. ವೈಭವದ ವೇದಿಕೆ ಮೇಲೆ ದಕ್ಷಿಣ ಭಾರತದ ಶ್ರೇಷ್ಠ ನಟಿ ಎಂದು ಪ್ರತಿಷ್ಠಿತ ದಕ್ಷಿಣ ಆಫ್ರಿಕಾದ ವಿದೇಶೀ ಚಲನಚಿತ್ರ ಪ್ರಶಸ್ತಿ ಪಡೆದ ಪ್ರಪ್ರಥಮ ನಟಿ, ಎಂಬ ಗೌರವಕ್ಕೂ ಪಾತ್ರರಾದರು!

ಇದಾದ ಕೆಲವೇ ತಿಂಗಳಲ್ಲಿ ಚಂದನವನದ ದಿಗ್ಗಜ ನಟರಾದ ರಾಜ್ಕುಮಾರ್ ಮತ್ತು ಉದಯ ಕುಮಾರ್ ಒಟ್ಟಿಗೇ ನಟಿಸಿದ ಕಾಸಿದ್ರೆ ಕೈಲಾಸ ಚಿತ್ರದಲ್ಲಿ ಅಮೋಘ ಅಭಿನಯ ನೀಡುವ ಮೂಲಕ ಖ್ಯಾತ ನಟಿಯಾದರು. ಪಂಚಭಾಷಾ ಅಭಿನೇತ್ರಿ ಯಾಗಿ ಅತಿರಥ ಮಹಾರಥ ನಟರೊಡನೆ ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ಕಡಿಮೆ ಅವಧಿಯಲ್ಲಿ ಹೆಚ್ಚಿನ ಕೀರ್ತಿ ಯಶಸ್ಸು ಗಳಿಸಿದರು.
ವಾಣಿಶ್ರೀಗೆ ಸಂದ ಬಿರುದು ಬಹುಮಾನ ಪ್ರಶಸ್ತಿಹೀಗಿವೆ.. 1972 ಶ್ರೇಷ್ಠನಟಿ ರಾಷ್ಟ್ರಪ್ರಶಸ್ತಿ, 1973, 1974, 1975, ಮೂರು ಬಾರಿ ಫಿಲಂಫೇರ್ ಪ್ರಶಸ್ತಿ, 1974 ಆಂಧ್ರಪ್ರದೇಶ ರಾಜ್ಯಪ್ರಶಸ್ತಿ, 1975 ಕರ್ನಾಟಕ ರಾಜ್ಯಪ್ರಶಸ್ತಿ, 1976 ತಮಿಳುನಾಡು ರಾಜ್ಯಪ್ರಶಸ್ತಿ, 2004ರಲ್ಲಿ ಮೀನಾಕುಮಾರಿ ಪ್ರಶಸ್ತಿ, 2005ರಲ್ಲಿ ಮಾಧವಪೆದ್ದಿಪ್ರಭಾವತಿ ಪ್ರಶಸ್ತಿ, 2013ರಲ್ಲಿ ನಂದಿ ಅವಾರ್ಡ್ ಇತ್ಯಾದಿ.

ಇವರು ನಟಿಸಿದ ಕನ್ನಡ ಚಿತ್ರಗಳು… ವೀರಸಂಕಲ್ಪ, ಮುರಿಯದಮನೆ, ಸತ್ಯಹರಿಶ್ಚಂದ್ರ, ಪಾತಾಳಮೋಹಿನಿ, ಮನೆಅಳಿಯ, ಮಿಸ್ಲೀಲಾವತಿ, ಚಂದ್ರಹಾಸ, ಜಾಣರಜಾಣ, ಗಂಡಮನೆ ಮಕ್ಕಳು, ಮಹಾಸತಿ ಅನಸೂಯ, ಕಠಾರಿವೀರ, ಕಾಸಿದ್ರೆ ಕೈಲಾಸ.
ವಾಣಿಶ್ರೀ ಬಿ.ಎಂ.ವೆಂಕಟೇಶ್ ನಟಿಸಿ ರಾಜನ್ ನಾಗೇಂದ್ರ ಸಂಗೀತ ಸಂಯೋಜಿಸಿದ್ದ ಪಾತಾಳಮೋಹಿನಿ ಚಿತ್ರದ “ಹಗಲು… ಇರುಳು….” ಗೀತೆಯು ಕನ್ನಡ ಚಿತ್ರರಂಗದ ಪ್ರಪ್ರಥಮ ದೆವ್ವದಹಾಡು ಎನಿಸಿತಲ್ಲದೆ, “ಚಿಲಿಪಿಲಿಗುಟ್ಟುವ ಹಕ್ಕಿಯ ಕಂಠದಿ….” ಹಾಡು ಇವತ್ತಿಗೂ ಅತ್ಯಂತ ಜನಪ್ರಿಯ ಚಿತ್ರಗೀತೆಗಳ ಸಾಲಿಗೆ ಸೇರಿದೆ. 40 ವರ್ಷಕಾಲ ಕನ್ನಡ ಹಿಂದಿ ತೆಲುಗು ತಮಿಳು ಮಲಯಾಳಂ ಮುಂತಾದ ಬಹುಭಾಷೆಯ 200ಕ್ಕು ಹೆಚ್ಚು ಸಿನಿಮಾಗಳಲ್ಲಿ ನಟಿಸುವ ಮೂಲಕ ಉತ್ತಮ ಸಾಧನೆಗೈದ ಸಾರ್ಥಕ ಕಲಾವಿದರ ಗುಂಪಿಗೆ ಸೇರಿದರು.

ರತ್ನಕುಮಾರಿ ಎಂಬ ಮೂಲ ಹೆಸರುಳ್ಳ ವಾಣಿಶ್ರೀ 3.8.1948ರಂದು ಆಂಧ್ರಪ್ರದೇಶದ ನೆಲ್ಲೂರಿನ ಬಡಕುಟುಂಬದಲ್ಲಿ ಜನಿಸಿದರು. 9ನೇ ತರಗತಿವರೆಗೆ ಮಾತ್ರ ವಿದ್ಯಾಭ್ಯಾಸ ಮಾಡಿದ ಈಕೆ ಕೌಟುಂಬಿಕ ಕಾರಣದಿಂದ ತಾಯಿಯೊಡನೆ ಮದ್ರಾಸಿಗೆ ಬಂದು ನೆಲೆಸಬೇಕಾಯಿತು. ತಮ್ಮ ಬಯಕೆಯಂತೆ ಭರತನಾಟ್ಯ ಮತ್ತು ಸಂಗೀತ ಅಭ್ಯಾಸ ಮಾಡಿದರು. ನಂತರ ತಾವಾಗೆ ಇಷ್ಟಪಟ್ಟು ಅಭಿನಯ ಕಲೆಯ ಬಲೆಯೊಳಗೆ ಬಿದ್ದು ಬಹಳ ವರ್ಷ ಅವಕಾಶ ವಂಚಿತರಾಗಿ ನಿರಾಶೆ ನೋವು ದುಃಖ ಎಲ್ಲವನ್ನು ಅನುಭವಿಸಿದರು.

ಭಾರತೀಯ ಚಿತ್ರರಂಗದಲ್ಲಿ ತಳವೂರಿ ಉಳಿಯಬೇಕಾದರೆ ಪ್ರತಿಭೆಗಿಂತಲೂ ಹೆಚ್ಚಾಗಿ ಶಿಫಾರಸ್ಸು ಅಥವ ಗಾಡ್ಫಾದರ್ ಕೃಪೆ ಇರಲೇಬೇಕೆಂಬ ಕಟುಸತ್ಯ ಅರಿತರು. ಸರಳ ಸಜ್ಜನಿಕೆ ಗುಣವಂತೆ ಎನಿಸಿ ಸರಿಯಾದ ವಯಸ್ಸಲ್ಲಿ ಡಾ.ಕರುಣಾಕರ್ ಜತೆ ವಿವಾಹವಾದ ಇವರಿಗೆ ಅಭಿನಯ, ವೆಂಕಟೇಶ, ಕಾರ್ತಿಕ, ಅನುಪಮ, ಎಂಬುವ ಮಕ್ಕಳಿದ್ದಾರೆ. 1999ರಲ್ಲಿ ಚಿತ್ರರಂಗಕ್ಕೆ ಗುಡ್ಬೈ ಹೇಳಿದ ಇವರು ಸ್ವಯಂ ನಿವೃತ್ತಿ ಆಗಿ, ಪ್ರಸ್ತುತ ಮಕ್ಕಳು ಮೊಮ್ಮಕ್ಕಳ ಜತೆಗೂಡಿ ಚೆನ್ನೈ ನಗರದಲ್ಲಿ ವಾಸವಿದ್ದಾರೆ.

ಕನ್ನಡ ಸಿನಿಮಾ ಸುದ್ದಿ, ಹಿರಿಯ ನಟ, ನಟಿಯರ ಕುರಿತಂತೆ ಹೆಚ್ಚಿನ ಮಾಹಿತಿಗೆ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಓದಿ








