LatestMysore

ದುಶ್ಚಟ, ವಿವೇಚನಾರಹಿತ ಜಾಲತಾಣಗಳ ಬಳಕೆ ಯುವಜನತೆಯ ಹಾದಿ ತಪ್ಪಿಸುತ್ತಿದೆ: ಡಾ.ಪಿ. ಶಿವರಾಜು

ಮೈಸೂರು(ಹೆಚ್.ಪಿ.ನವೀನ್ ಕುಮಾರ್): ದುಶ್ಚಟಗಳು, ವಿವೇಚನಾರಹಿತ ಸಾಮಾಜಿಕ ಜಾಲತಾಣಗಳ ಬಳಕೆ, ಮತ್ತು ಮಾರ್ಗದರ್ಶನದ ಕೊರತೆಯಿಂದಾಗಿ ಯುವಕರು ಹಾದಿ ತಪ್ಪುತ್ತಿರುವುದು ನಿಜಕ್ಕೂ ಕಳವಳಕಾರಿಯಾಗಿದ್ದು, ಇದರಿಂದ ಹೊರತಂದು ಅವರನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸಲು ಸಾಮಾಜಿಕ ಮಟ್ಟದಲ್ಲಿ ಕೆಲವು ಬದಲಾವಣೆಗಳು ಅತ್ಯಗತ್ಯವಾಗಿದೆ ಎಂದು ಹೆಚ್ಚುವರಿ ಪ್ರಾದೇಶಿಕ ಆಯುಕ್ತ ಡಾ.ಪಿ. ಶಿವರಾಜು ಹೇಳಿದರು.

ಜಿಲ್ಲಾ ಮತ್ತು ತಾಲೂಕು ಶರಣ ಸಾಹಿತ್ಯ ಪರಿಷತ್ತು ಮತ್ತು ಬಸವಮಾರ್ಗ ಫೌಂಡೇಶನ್ ವತಿಯಿಂದ ಹೆಬ್ಬಾಳದ ಬಸವಮಾರ್ಗ ಫೌಂಡೇಶನ್ ಆಶ್ರಮ ಶಾಖೆಯಲ್ಲಿ ಶುಕ್ರವಾರ ಸಂಜೆ ‘ ವಚನಗಳಲ್ಲಿ ವ್ಯಸನಮುಕ್ತ ಜೀವನ’ ಕುರಿತು ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಜಗಜ್ಯೋತಿ ಬಸವಣ್ಣ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ . ಮಾತನಾಡಿದರು.

ಯಾವುದು ಸರಿ, ಯಾವುದು ತಪ್ಪು ಎನ್ನುವ ಗ್ರಹಿಕೆಯಲ್ಲಿ ಇಂದಿನ ಯುವ ಪೀಳಿಗೆ ತೋಯ್ದಾಟದಲ್ಲಿ ಇದೆ. ಸಾಮಾಜಿಕ ಜಾಲತಾಣಗಳಲ್ಲಿ ಅನಗತ್ಯ ರೀಲ್ಸ್ ನೋಡುವುದು ಮತ್ತು ಗೇಮಿಂಗ್‌ಗೆ ಅತಿಯಾಗಿ ಸಮಯ ವ್ಯಯಿಸುವುದನ್ನು ನಿಯಂತ್ರಿಸಿ, ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು. ಯೋಗ, ಧ್ಯಾನ ಮತ್ತು ದೈಹಿಕ ವ್ಯಾಯಾಮಗಳನ್ನು ದಿನಚರಿಯಲ್ಲಿ ಅಳವಡಿಸಿಕೊಳ್ಳುವುದರಿಂದ ಏಕಾಗ್ರತೆ ಹೆಚ್ಚುತ್ತದೆ ಮತ್ತು ದುಶ್ಚಟಗಳಿಂದ ದೂರವಿರಬಹುದು ಎಂದು ಅವರು ಸಲಹೆ ನೀಡಿದರು.

ವಚನಗಳಲ್ಲಿ ವ್ಯಸನಮುಕ್ತ ಜೀವನ ವಿಷಯ ಕುರಿತು ಮೈಸೂರಿನ ಕುದೇರು ಮಠದ ಶ್ರೀ ಗುರುಶಾಂತಸ್ವಾಮಿಗಳು ಪ್ರವಚನ ನೀಡಿ, ಹನ್ನೆರಡನೆಯ ಶತಮಾನದ ವಚನ ಸಾಹಿತ್ಯವು ಕೇವಲ ಭಕ್ತಿಯ ಮಾರ್ಗವಲ್ಲ, ಬದಲಿಗೆ ವ್ಯಸನಮುಕ್ತ ಮತ್ತು ಮೌಲ್ಯಾಧಾರಿತ ಜೀವನಕ್ಕೆ ಬುನಾದಿಯಾಗಿದೆ. ಬಸವಣ್ಣ, ಅಲ್ಲಮಪ್ರಭು ಮುಂತಾದ ಶರಣರು ದುರಾಸೆ, ಮಾದಕತೆ ಮತ್ತು ಅನೈತಿಕ ಆಸಕ್ತಿಗಳಿಂದ ದೂರವಿದ್ದು, ಕಾಯಕ ಹಾಗೂ ದಾಸೋಹದ ಮೂಲಕ ಪರಿಶುದ್ಧ ಬದುಕು ನಡೆಸಲು ಕರೆ ನೀಡಿದ್ದಾರೆ ಎಂದರು.

ಬಸವಣ್ಣನವರು ತಮ್ಮ ವಚನಗಳಲ್ಲಿ “ಆಸೆಯಾಮಿಷ ತಾಮಸ ಹಸಿವು ತೃಷೆ ವ್ಯಸನ” ಗಳನ್ನು ತ್ಯಜಿಸಿ, ಇಂದ್ರಿಯಗಳನ್ನು ಹತೋಟಿಯಲ್ಲಿಡುವಂತೆ ಬೋಧಿಸಿದ್ದಾರೆ. ವ್ಯಸನಗಳು ಮನುಷ್ಯನನ್ನು ಭ್ರಮೆಗೆ ಒಳಪಡಿಸುತ್ತವೆ ಎಂದು ಎಚ್ಚರಿಸಿದ್ದಾರೆ. ಯಾವುದೇ ದುಶ್ಚಟಗಳಿಗೆ ಬಲಿಯಾಗದೆ, ಅಂತರಂಗ ಮತ್ತು ಬಹಿರಂಗದಲ್ಲಿ ಶುದ್ಧರಾಗಿರಬೇಕು ಎಂಬುದು ಶರಣರ ಆಶಯವಾಗಿದೆ ಎಂದು ಅವರು ಹಿತವಚನ ನೀಡಿದರು.

ಬಸವ ಬಳಗದ ಅಧ್ಯಕ್ಷರಾದ ಎಂ. ಚಂದ್ರಶೇಖರ್ ಮಾತನಾಡಿ, ವ್ಯಸನಗಳಿಗೆ ಸಮಯ ವ್ಯರ್ಥ ಮಾಡದೆ, ಪ್ರಾಮಾಣಿಕ ದುಡಿಮೆ (ಕಾಯಕ) ಮತ್ತು ಸಮಾಜಮುಖಿ ಸೇವೆ (ದಾಸೋಹ) ಯಲ್ಲಿ ತೊಡಗಿಕೊಳ್ಳುವುದರಿಂದ ವ್ಯಸನಮುಕ್ತ ಮತ್ತು ಸಾರ್ಥಕ ಜೀವನ ಸಾಧ್ಯ. ಅಲ್ಲಮಪ್ರಭುಗಳು ಹೊನ್ನು-ಹೆಣ್ಣು-ಮಣ್ಣಿನ ವ್ಯಾಮೋಹವೇ (ಆಸೆ) ಎಲ್ಲಾ ದುಶ್ಚಟ ಹಾಗೂ ದುಃಖಕ್ಕೆ ಮೂಲ ಕಾರಣ ಎಂದು ವಿವರಿಸಿದ್ದಾರೆ. ಈ ಆಸೆಗಳನ್ನು ಗೆಲ್ಲುವುದೇ ನಿಜವಾದ ಮುಕ್ತಿ ಎಂದು ಅವರು ಸಾರಿದ್ದಾರೆ ಎಂದು ತಿಳಿಸಿದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಹೆಳವರಹುಂಡಿ ಸಿದ್ದಪ್ಪ ಮಾತನಾಡಿ, ವಚನಗಳ ಸರಳ ಬೋಧನೆಯನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಮಾನಸಿಕ ಒತ್ತಡ ಹಾಗೂ ದುಶ್ಚಟಗಳಿಂದ ದೂರವಿರಬಹುದು ಎಂದು ತಿಳಿಸಿದರು.

ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶರಣ ದೇವರಾಜು ಪಿ.ಚಿಕ್ಕಹಳ್ಳಿ ಮಾತನಾಡಿ, ವ್ಯಸನಮುಕ್ತ ಸಮಾಜ ನಿರ್ಮಾಣಕ್ಕಾಗಿ ವಚನಗಳ ಚಿಂತನೆಗಳನ್ನು ಯುವಜನತೆಗೆ ತಲುಪಿಸುವುದು. ನಮ್ಮ ಪರಿಷತ್ತಿನ ಪ್ರಮುಖ ಕಾಯಲವಾಗಿದೆ. ಈ ನಿಟ್ಟಿನಲ್ಲಿ ನಮ್ಮ ಪರಿಷತ್ತು ನಿರಂತರ ಜಾಗೃತಿ ಕಾರ್ಯಕ್ರಮ ಆಯೋಜಿಸುತ್ತ, ಸಮಾಜದಲ್ಲಿ ಶರಣರ ಚಿಂತನೆ ಬಿತ್ತಲಾಗುತ್ತಿದೆ ಎಂದು ತಿಳಿಸಿದರು.

ಬಸವಮಾರ್ಗ ಫೌಂಡೇಶನ್ ಸಂಸ್ಥಾಪಕ ಎಸ್. ಬಸವಣ್ಣ ಮಾತನಾಡಿ, ವಚನ ಸಾಹಿತ್ಯವು ʼಸಮಾನತೆʼ, ʼಶ್ರಮʼ-ʼಕಾಯಕʼ ಮತ್ತು ʼಭಕ್ತಿʼಯ ಮಹತ್ವ, ಪ್ರಾಮಾಣಿಕತೆ ಹಾಗೂ ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸುತ್ತದೆ. ಶರಣರು ಜಾತಿ, ಲಿಂಗ, ಆರ್ಥಿಕ ಸ್ಥಿತಿ ಮುಂತಾದ ಬೇಧಭಾವಗಳನ್ನು ತಿರಸ್ಕರಿಸಿದರು. ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು ಮೊದಲಾದ ಶರಣರು “ಕಾಯಕವೇ ಕೈಲಾಸ”, “ದಾಸೋಹದ ತತ್ತ್ವ”, “ಅನುಭವ ಮಂಟಪ”ದ ಪರಿಕಲ್ಪನೆಯ ಮೂಲಕ ಪ್ರಜಾಪ್ರಭುತ್ವದ ನ್ಯಾಯಯುತ ಸಮಾಜದ ನಿರ್ಮಾಣಕ್ಕೆ  ಶ್ರಮಿಸಿದರು.

ಸುತ್ತೂರು ಶ್ರೀಗಳು ಮತ್ತು ಶ್ರೀ ನಿರ್ಮಾಲನಂದ ನಾಥ ಸ್ವಾಮೀಜಿಗಳ ವ್ಯಸನಮುಕ್ತ ಸಮಾಜದ ಕಾರ್ಯಗಳಿಂದ ನಾನು ಪ್ರಭಾವಿತನಾಗಿ ಬಸವಮಾರ್ಗ ಸಂಸ್ಥೆಯನ್ನು ಸ್ಥಾಪನೆ ಮಾಡಲಾಯಿತು. ನಾನು ಕೂಡ ವ್ಯಸನಮುಕ್ತ ಜೀವನ ನಡೆಸಲು ವಚನಗಳು ದೊಡ್ಡ ಮಟ್ಟದಲ್ಲಿ ಜಾಗೃತಿ ಮೂಡಿಸಿದೆ ಎಂದು ತಿಳಿಸಿದರು

admin
the authoradmin

Leave a Reply

Translate to any language you want