ಮಡಿಕೇರಿ: ಮಹಿಳೆಯೊಬ್ಬಳು ತನ್ನ ಅಪ್ರಾಪ್ತ ಮಗನನ್ನು ಮುಸ್ಲಿಂ ಧರ್ಮಕ್ಕೆ ಮಂತಾಂತರ ಮಾಡಿದ ಆರೋಪ ಕೇಳಿ ಬಂದಿದ್ದು ಈ ಹಿನ್ನಲೆಯಲ್ಲಿ ಮಹಿಳೆ ಸೇರಿದಂತೆ ಮತಾಂತರದಲ್ಲಿ ಭಾಗಿಯಾದ ಮೂವರನ್ನು ಕುಶಾಲನಗರ ಪೊಲೀಸರು ಬಂಧಿಸಿದ್ದಾರೆ.
ಸಜಿತ ಎಂಬಾಕೆಯೇ ಬಂಧಿತ ಮಹಿಳೆ. ಸಜಿತ ಮತ್ತು ರಾಜೀವ್ ದಂಪತಿಗೆ 14 ವರ್ಷದ ಮಗನಿದ್ದಾನೆ. ಈತನನ್ನು ಮುಸ್ಲಿಂ ಧರ್ಮಕ್ಕೆ ತಾಯಿಯೇ ಮತಾಂತರ ಮಾಡಿರುವ ವಿಚಾರ ಬೆಳಕಿಗೆ ಬಂದಿತ್ತು. ಸಜಿತ ತನ್ನ ಪತಿ ರಾಜೀವ್ ಗೆ ಗೊತ್ತಿಲ್ಲದಂತೆ ಮೊಹಮ್ಮದ್ ಸಲೀಂ ಹಾಗೂ ಜಲೀಲ್ ಅವರ ಸಹಕಾರದೊಂದಿಗೆ ಮತಾಂತರ ಮಾಡಿಸಿದ್ದಳು ಎನ್ನಲಾಗಿದೆ.
ಘಟನೆಯಲ್ಲಿ ಆರೋಪಿಯಾಗಿರುವ ಮೊಹಮ್ಮದ್ ಸಲೀಂ ಅವರು ಕಾವೇರಿ ನಿಸರ್ಗಧಾಮ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿ ಅಂಗಡಿ ನಡೆಸುತ್ತಿದ್ದು ಅವರಿಗೆ ಸಜಿತ ಪರಿಚಯವಾಗಿತ್ತು. ಹೀಗಾಗಿ ಆಕೆಯೇ ಮಗನನ್ನು ಬಲವಂತವಾಗಿ ಮತಾಂತರ ಮಾಡಿಸಿದ್ದಳು. ಅಲ್ಲದೆ, ಕೇರಳಕ್ಕೆ ತೆರಳಿದ್ದಳು. ತಾಯಿಯೇ ಮಗನನ್ನು ಮತಾಂತರ ಮಾಡಲು ಸಹಕರಿಸಿರುವ ವಿಚಾರ ಹೊರ ಬಂದ ಹಿನ್ನಲೆಯಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತಲ್ಲದೆ, ಈ ಸಂಬಂಧ ಜೂ.30ರಂದು ಕುಶಾಲನಗರದಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿತ್ತು.
ಇನ್ನು ಸಜಿತ ಮನೆ ಬಿಟ್ಟು ಹೋಗಿದ್ದು ಮತಾಂತರ ವಿಚಾರಕ್ಕೆ ಸಂಬಂಧಿಸಿದಂತೆ ಪತಿ ರಾಜೀವ್ ಕುಶಾಲನಗರ ಟೌನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಠಾಣಾಧಿಕಾರಿ ಪ್ರದೀಪ್ ಕುಮಾರ್ ನೇತೃತ್ವದಲ್ಲಿ ತಂಡ ರಚಿಸಿ ತನಿಖೆ ನಡೆಸಲಾಗಿತ್ತು. ಈ ವೇಳೆ ಮತಾಂತರ ಪ್ರಕರಣದಲ್ಲಿ ಮೊಹಮ್ಮದ್ ಸಲೀಂ ಹಾಗೂ ಜಲೀಲ್ ಭಾಗಿಯಾಗಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿತ್ತು.
ಈ ವೇಳೆ ಸಜಿತ ನಾಪತ್ತೆಯಾಗಿದ್ದಳು ಹೀಗಾಗಿ ಅವಳ ಪತ್ತೆಗೆ ಬಲೆ ಬೀಸಲಾಗಿತ್ತು. ಆಕೆ ಕೇರಳದಲ್ಲಿರುವ ವಿಚಾರ ಬೆಳಕಿಗೆ ಬಂದಿದ್ದರಿಂದ ಅಲ್ಲಿಗೆ ತೆರಳಿದ ಪೊಲೀಸರು ಆಕೆಯನ್ನು ಬಂಧಿಸಿ ಕರೆತಂದು, ನ್ಯಾಯಾಧೀಶರ ಎದುರು ಹಾಜರುಪಡಿಸಿದ ಮೇರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಪ್ರಕರಣದಲ್ಲಿ ಇನ್ನಷ್ಟು ಆರೋಪಿಗಳು ಭಾಗಿಯಾಗಿರುವ ಸಂಶಯವಿದ್ದು ತನಿಖೆ ಮುಂದುವರೆದಿದೆ.
ಈ ಹಿಂದೆ ಆರೋಪಿ ಮೊಹಮ್ಮದ್ ಸಲೀಂ ಅವರು ಕಾವೇರಿ ನಿಸರ್ಗಧಾಮ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿ ಅಂಗಡಿ ನಡೆಸುತ್ತಿದ್ದರು. ಮತಾಂತರ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಜೂ. 14ರಿಂದ ಅಂಗಡಿಯನ್ನು ತೆರವುಗೊಳಿಸಿ ಬಾಡಿಗೆ ಒಪ್ಪಂದ ರದ್ದುಪಡಿಸಿರುದಾಗಿ ಕಟ್ಟಡ ಮಾಲೀಕ ಅಬ್ದುಲ್ ಸಲಾಂ ರಾವುತರ್ ತಿಳಿಸಿದ್ದಾರೆ. ಒಟ್ಟಾರೆ ಮತಾಂತರ ಪ್ರಕರಣ ಕುಶಾಲನಗರದ ಜನರನ್ನು ಬೆಚ್ಚಿ ಬೀಳುವಂತೆ ಮಾಡಿರುವುದಂತು ನಿಜ








