ಕೆ.ಆರ್.ನಗರ(ಜಿಟೆಕ್ ಶಂಕರ್) : ರಾಜ್ಯ ಕಾಂಗ್ರೆಸ್ ಸರ್ಕಾರ ಜನರ ಸಮಸ್ಯೆಗಳಿಗೆ ಸ್ಪಂದಿಸದೆ ತಮ್ಮಗಿಷ್ಟ ಬಂದಂತೆ ವರ್ತಿಸಿ ಕೆಟ್ಟ ರೀತಿಯಲ್ಲಿ ಅಧಿಕಾರ ನಡೆಸುತ್ತಿದೆ ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.
ತಾಲೂಕಿನ ಹೆಬ್ಬಾಳು ಹೋಬಳಿಯ ಮಾರಗೌಡನಹಳ್ಳಿ ಗ್ರಾಮದಲ್ಲಿ ನೂತನವಾಗಿ ಆರಂಭವಾಗಿರುವ ವೀರಭದ್ರೇಶ್ವರ ಪ್ಯೂಯಲ್ಸ್ ಉದ್ಘಾಟಿಸಿ ಮಾತನಾಡಿದ ಅವರು ಸರ್ಕಾರ ಜನರು ಮತ್ತು ರೈತರ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದರು.
ಮತ ಕೊಟ್ಟ ಜನತೆಯ ಬಗ್ಗೆ ಕೊಂಚವೂ ಭಯ ಭಕ್ತಿ ಇಲ್ಲದೆ ಸರ್ವಾಧಿಕಾರಿಯಂತೆ ಆಡಳಿತ ನಡೆಸುತ್ತಿದ್ದು ಅಕಾಲಿಕ ಮಳೆಗೆ ರೈತರು ಬೆಳೆದ ಬಾಳೆ ಮತ್ತು ಮಾವು ಆಳಾದರು ಒಬ್ಬ ಮಂತ್ರಿಯೂ ರೈತರ ಜಮೀನುಗಳಿಗೆ ಭೇಟಿ ನೀಡಿ ಅವರುಗಳ ಕಷ್ಟಗಳಿಗೆ ನೆರವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನಮ್ಮ ಪಕ್ಷ ರೈತರು ಮತ್ತು ನೊಂದವರ ಪರ ನಿಂತು ಹೋರಾಟ ನಡೆಸಿದರು ಯಾವುದೇ ಪ್ರಯೋಜನ ವಾಗುತ್ತಿಲ್ಲ ಎಂದರಲ್ಲದೆ ಈ ರೀತಿಯ ಕೆಟ್ಟ ಸರ್ಕಾರಕ್ಕೆ ಜನತೆ ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದು ಭವಿಷ್ಯ ನುಡಿದರು.

ದೇಶ ಮತ್ತು ವಿಶ್ವ ಅತಿ ವೇಗವಾಗಿ ಬೆಳೆಯುತ್ತಿದ್ದರೂ ರೈತರ ಸಮಸ್ಯೆಗಳು ಮಾತ್ರ ಬೆಟ್ಟದಷ್ಟಿರುವುದು ದುರಂತ ಎಂದ ಹೆಚ್ ಡಿಕೆ ಕೇಂದ್ರದ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಬಡವರ ಮತ್ತು ರೈತರ ಪರವಾಗಿ ನಿಂತಿದೆ ಎಂದು ನುಡಿದರು.
ಮಾಜಿ ಸಚಿವ ಸಾ.ರಾ.ಮಹೇಶ್, ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಮಾಜಿ ಶಾಸಕ ಅಶ್ವಿನ್ ಕುಮಾರ್, ವೀರಭದ್ರೇಶ್ವರ ಪ್ಯೂಯಲ್ಸ್ ಮಾಲೀಕರಾದ ಬಂಡಹಳ್ಳಿಕುಚೇಲ, ನವ ನಗರ ಅರ್ಬನ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್, ಜಿ.ಪಂ.ಮಾಜಿ ಸದಸ್ಯ ಸಿ.ಜೆ.ದ್ವಾರಕೀಶ್, ಚನ್ನಂಗೆರೆ ಗ್ರಾ.ಪಂ.ಮಾಜಿ ಅಧ್ಯಕ್ಷೆ ಸವಿತಾಕುಚೇಲ್, ಜೆಡಿಎಸ್ ವಕ್ತಾರ ಕೆ.ಎಲ್.ರಮೇಶ್, ಮುಖಂಡರಾದ ಹೊಸಹಳ್ಳಿಪುಟ್ಟರಾಜು, ಸಿದ್ದಾಪುರ ತ್ಯಾಗರಾಜು, ಹರದನಹಳ್ಳಿರಮೇಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.








