ಡೈವರ್ಸ್ ಏಕೆ ಆಗುತ್ತಿವೆ..? ಮನೆ ಒಳಗಿನ ಮನಸ್ಸು ಅರ್ಥವಾದರೆ ದೇವರು, ಎಡವಿದರೆ ದೂರ.. ದೂರ…
ಇದು ಸಾಮಾಜಿಕ ಕಳಕಳಿಯ ಲೇಖನಗಳ ಸರಮಾಲೆ-16

ಇವತ್ತು ಡೈವರ್ಸ್ ಪ್ರಕರಣಗಳು ಹೆಚ್ಚುತ್ತಿವೆ… ಬಹಳಷ್ಟು ಸಲ ಗಂಡ-ಹೆಂಡತಿ ದಾಂಪತ್ಯ ಬದುಕಿನಿಂದ ಡೈವರ್ಸ್ ಮೂಲಕ ಬಿಡುಗಡೆಯಾಗಬಹುದು ನೆಮ್ಮದಿಯಾಯಿತು ಎಂದು ನಿಟ್ಟುಸಿರು ಬಿಡಬಹುದು… ಆದರೆ ಎಲ್ಲ ಸಮಸ್ಯೆಗೂ ಡೈವರ್ಸ್ ಪರಿಹಾರನಾ? ನಮ್ಮೊಳಗಿನ ಕೋಪ, ಅಹಂ. ಕಿತ್ತಾಟ, ಹಠ ಹೀಗೆ ಹತ್ತಾರು ನ್ಯೂನತೆಗಳನ್ನು ಸರಿಪಡಿಸಿಕೊಂಡು ಸಂಬಂಧವನ್ನು ಗಟ್ಟಿಮಾಡಿಕೊಳ್ಳಲು ಸಾಧ್ಯ ಇಲ್ಲವೆ? ಮುರಿದ ಮನಸ್ಸುಗಳಿಗೆ ಲೇಖಕ ಕಾಯಪಂಡ ವಿಷ್ಣು ನಾಚಪ್ಪ ಅವರ ಈ ಬರವಣಿಗೆ ಟಾನಿಕ್ ಆಗುತ್ತಾ?
ಮನೆ ಅಂದ್ರೆ ನಾಲ್ಕು ಗೋಡೆ ಅಲ್ಲ. ಆ ಗೋಡೆ ಒಳಗೆ ಇರೋ ಮನಸುಗಳು. ಆ ಮನಸುಗಳು ಹೇಗಿವೆ ಅನ್ನೋದರ ಮೇಲೆನೇ ಮನೆ ನಗುತ್ತಾ ಇರುತ್ತೋ, ಅಳುತ್ತಾ ಇರುತ್ತೋ ಅಂತ ಗೊತ್ತು ಆಗುತ್ತೆ… ಮನೆ ಒಳಗಿನ ಮನಸ್ಸು ಕನ್ನಡಿ ತರ ಇರಬೇಕು. ಎದುರುಗಡೆ ಇರೋ ಮನಸ್ಸಿನ ನೋವು, ಖುಷಿ, ಸುಸ್ತು, ಕನಸು – ಎಲ್ಲವನ್ನೂ ತೋರಿಸಬೇಕು. ಮುಚ್ಚಿಡಬಾರದು. ‘ಇವತ್ತು ಸುಸ್ತಾಗಿದೆ’ ಅಂತ ಹೇಳಲು ಅಳುಕಬಾರದು. ‘ನಿನ್ನ ಮಾತಿಂದ ನನಗೆ ನೋವಾಯಿತು’ ಅಂತ ಹೇಳಲು ಹೆದರಬಾರದು. ಮತ್ತೆ ‘ತಪ್ಪಾಯ್ತು ಕ್ಷಮಿಸು’ ಅಂತ ಕೇಳಲು ಮಾನ ಹೋಗಲ್ಲ.
ಮನೆ ಒಳಗಿನ ಮನಸ್ಸು ಚಾರ್ಜರ್ ತರ ಇರಬೇಕು. ಹೊರಗೆ ದುಡಿದು ಬಂದ ಮನಸ್ಸಿಗೆ, ಶಾಲೆಯಲ್ಲಿ ಬೈಸಿಕೊಂಡು ಬಂದ ಮನಸ್ಸಿಗೆ, ಜೀವನದಲ್ಲಿ ಸೋತು ಬಂದ ಮನಸ್ಸಿಗೆ ಶಕ್ತಿ ತುಂಬಬೇಕು. ‘ನಾನಿದ್ದೇನೆ’ ಅನ್ನೋ ನಾಲ್ಕು ಅಕ್ಷರ ಸಾಕು, ಸಾವಿರ ವೋಲ್ಟ್ ಪವರ್ ಕೊಡುತ್ತೆ.

ಆ ಮನಸುಗಳು ಓದಿಕೊಂಡಾಗ ಏನಾಗುತ್ತವೆ?
ಇಲ್ಲಿ ‘ಓದಿಕೊಳ್ಳೋದು’ ಅಂದ್ರೆ ಪುಸ್ತಕ ಅಲ್ಲ. ಎದುರುಗಡೆ ಇರೋ ಮನಸ್ಸಿನ ಪುಸ್ತಕವನ್ನು ಓದಿಕೊಳ್ಳೋದು. ಮುಖ ನೋಡಿ ‘ಇವತ್ತು ಏನೋ ಸರಿ ಇಲ್ಲ’ ಅಂತ ಗೊತ್ತು ಮಾಡಿಕೊಳ್ಳೋದು. ಮೌನ ನೋಡಿ ‘ಕೆಲಸದಲ್ಲಿ ತೊಂದರೆ ಆಗಿದೆ’ ಅಂತ ಅರ್ಥ ಮಾಡಿಕೊಳ್ಳೋದು. ಮಕ್ಕಳ ಕಣ್ಣು ನೋಡಿ ‘ಶಾಲೆಯಲ್ಲಿ ಜಗಳ ಆಗಿದೆ’ ಅಂತ ತಿಳಿದುಕೊಳ್ಳೋದು.
ಒಮ್ಮೆ ಮನಸುಗಳು ಮನಸುಗಳನ್ನು ಓದಿಕೊಳ್ಳಲು ಶುರು ಮಾಡಿದರೆ, ಮನೆಯಲ್ಲಿ ಜಗಳ ಶಬ್ದ ಕೇಳಲ್ಲ. ಯಾಕೆಂದರೆ ಮಾತು ಬರೋ ಮುಂಚೆನೆ ನೋವು ಗೊತ್ತಾಗಿ ಹೋಗಿರುತ್ತೆ. ‘ತುತ್ತು’ ಕೊಡೋ ಮುಂಚೆ ‘ಹಸಿವು’ ಅರ್ಥ ಆಗಿರುತ್ತೆ. ‘ಮಾತ್ರೆ’ ಕೊಡೋ ಮುಂಚೆ ‘ತಲೆನೋವು’ ಗೊತ್ತಾಗಿ ಹೋಗಿರುತ್ತೆ. ಮನೆ ಆಸ್ಪತ್ರೆ ಆಗಲ್ಲ, ದೇವಸ್ಥಾನ ಆಗುತ್ತೆ. ಯಾಕೆಂದರೆ ಅಲ್ಲಿ ಔಷಧಿ ಇರಲ್ಲ, ಅರ್ಥ ಮಾಡಿಕೊಳ್ಳೋ ಗುಣ ಇರುತ್ತೆ.

ಮನಸ್ಸುಗಳನ್ನು ಮನಸ್ಸು ಅರ್ಥ ಮಾಡಿಕೊಂಡರೆ ಬದುಕು ಹೇಗಿರುತ್ತೆ?
ಅರ್ಥ ಮಾಡಿಕೊಂಡ ಮನಸುಗಳು ಇರೋ ಮನೆಯಲ್ಲಿ ಬೀಗಕ್ಕೆ ಕೆಲಸ ಇರಲ್ಲ. ಯಾಕೆಂದರೆ ಅಲ್ಲಿ ಕದಿಯೋಕೆ ದುಡ್ಡು, ಚಿನ್ನ ಇರಲ್ಲ. ಹಂಚಿಕೊಳ್ಳೋಕೆ ಪ್ರೀತಿ, ನಂಬಿಕೆ ಇರುತ್ತೆ. ಅಲ್ಲಿ ‘ನನ್ನ ಕೆಲಸ, ನಿನ್ನ ಕೆಲಸ’ ಅಂತ ಇರಲ್ಲ. ‘ನಮ್ಮ ಮನೆ, ನಮ್ಮ ಜವಾಬ್ದಾರಿ’ ಅಂತ ಇರುತ್ತೆ. ಒಬ್ಬರಿಗೆ ಜ್ವರ ಬಂದರೆ ಮನೆ ಇಡೀ ಮಲಗುತ್ತೆ. ಒಬ್ಬರು ಗೆದ್ದರೆ ಮನೆ ಇಡೀ ಸಂಭ್ರಮಿಸುತ್ತೆ. ಅಡುಗೆ ಮನೆ ಒಬ್ಬಂಟಿ ಅಡುಗೆ ಮನೆ ಆಗಲ್ಲ, ಮಾತುಕತೆ ಮನೆ ಆಗುತ್ತೆ. ಟಿವಿ ಮುಂದಿನ ಸೋಫಾ ಒಬ್ಬೊಬ್ಬರ ಸೋಫಾ ಆಗಲ್ಲ, ಎಲ್ಲರೂ ಕೂತು ನಗೋ ಜಾಗ ಆಗುತ್ತೆ.
ಅಂತಹ ಮನೆಯಲ್ಲಿ ಬೆಳೆಯೋ ಮಕ್ಕಳಿಗೆ ‘ಆತ್ಮವಿಶ್ವಾಸ’ ಅಂತ ಪಾಠ ಮಾಡಬೇಕಿಲ್ಲ. ಮನೆ ನೋಡಿಯೇ ಕಲಿತುಬಿಡ್ತಾರೆ. ‘ಸೋಲು’ ಅಂದ್ರೆ ಭಯ ಇರಲ್ಲ. ಯಾಕೆಂದರೆ ಬಿದ್ದರೆ ಎತ್ತೋ ಕೈಗಳು ಮನೆಯಲ್ಲೇ ಇವೆ ಅನ್ನೋ ಧೈರ್ಯ ಇರುತ್ತೆ. ಇದೇ ಸ್ವರ್ಗ ಅಂದ್ರೆ.

ಈಗಿನ ಕಾಲದ ‘ಡೈವೋರ್ಸ್’ ಹಿಂದಿನ ಕಣ್ಣೀರು: ಮನಸು ಓದದೇ ಹೋದ ಕಥೆ
ಇವತ್ತು ಪೇಪರ್ ತಿರುವಿದರೆ, ಮೊಬೈಲ್ ಸ್ಕ್ರಾಲ್ ಮಾಡಿದರೆ ಸಾಕು – ‘6 ತಿಂಗಳಿಗೆ ವಿಚ್ಛೇದನ’, ‘ಮದುವೆಯಾಗಿ 1 ವರ್ಷಕ್ಕೆ ದೂರ’ ಅನ್ನೋ ಸುದ್ದಿ. ಹಿಂದೆ ‘ಸಾವಿನ ತನಕ ಜೊತೆ’ ಅನ್ನೋ ಮಾತಿತ್ತು. ಈಗ ‘ಸಹಿಸೋ ತನಕ ಜೊತೆ’ ಆಗಿದೆ. ಯಾಕೆ ಹೀಗೆ? ಹಳೇ ಕಾಲದಲ್ಲಿ ತೊಂದರೆ ಇರಲಿಲ್ಲ ಅಂತಲ್ಲ. ಆದ್ರೆ ಆಗ ‘ಸರಿ ಮಾಡಿಕೊಳ್ಳೋಣ’ ಅನ್ನೋ ಮನಸ್ಸಿತ್ತು. ಈಗ ‘ಸರಿ ಇಲ್ಲ ಅಂದ್ರೆ ಬಿಟ್ಟುಬಿಡೋಣ’ ಅನ್ನೋ ಧಾವಂತ. ಇದಕ್ಕೆ ಕಾರಣ ಮನಸುಗಳು ಮನಸುಗಳನ್ನು ಓದೋದನ್ನೇ ನಿಲ್ಲಿಸಿಬಿಟ್ಟಿವೆ.
ಹಿಂದೆ ರಾತ್ರಿ ಜಗಳ ಆಡಿದ್ರೂ ಬೆಳಿಗ್ಗೆ ಕಾಫಿ ಕಪ್ ಒಟ್ಟಿಗೆ ಹಂಚಿಕೊಳ್ಳುತ್ತಿದ್ದರು. ಮಾತಾಡ್ತಿದ್ರು. ‘ಎಲ್ಲಿ ತಪ್ಪಾಯ್ತು’ ಅಂತ ಹುಡುಕ್ತಿದ್ರು. ಈಗ ಜಗಳ ಆದ ತಕ್ಷಣ ಮೊಬೈಲ್ ಹಿಡಿದು ಬೇರೆ ರೂಮಿಗೆ ಹೋಗುತ್ತಾರೆ. ವಾಟ್ಸಾಪ್ ಸ್ಟೇಟಸ್ನಲ್ಲಿ ಕೋಪ ತೋರಿಸ್ತಾರೆ. ಎದುರುಗಡೆ ಇರೋ ಮನಸ್ಸಿನ ಜೊತೆ ಮಾತಾಡೋ ಬದಲು, ದೂರದಲ್ಲಿ ಇರೋ ಅಪರಿಚಿತರಿಗೆ ಸ್ಟೋರಿ ಹಾಕ್ತಾರೆ. ಮನಸ್ಸಿಗೆ ಆದ ಗಾಯಕ್ಕೆ ಬ್ಯಾಂಡೇಜ್ ಹಾಕೋ ಬದಲು, ಫೋನ್ ಸ್ಕ್ರೀನ್ ನೋಡ್ತಾ ಕೂತಿರ್ತಾರೆ.

ಈಗಿನ ‘ಈಗೋ’ ಮೊಬೈಲ್ ಸಿಗ್ನಲ್ಗಿಂತ ಸ್ಟ್ರಾಂಗ್ ಆಗಿದೆ. ‘ನಾನು ಯಾಕೆ ಮೊದಲು ಮಾತಾಡಲಿ, ‘ನಾನು ಯಾಕೆ ತಗ್ಗಿ ಬಗ್ಗಲಿ’ ಅನ್ನೋ ಎರಡು ಪದಗಳು ಸಾಕು, 20 ವರ್ಷದ ಸಂಬಂಧ ಮುರಿಯೋಕೆ. ‘ಅಡ್ಜಸ್ಟ್ಮೆಂಟ್’ ಅನ್ನೋ ಪದಾನೇ ಕೆಟ್ಟ ಪದ ತರ ಆಗಿದೆ. ಆದ್ರೆ ಮದುವೆ ಅಂದ್ರೇನೇ ಎರಡು ಬೇರೆ ಬೇರೆ ಮನಸ್ಸುಗಳು ಒಟ್ಟಿಗೆ ‘ಅಡ್ಜಸ್ಟ್’ ಆಗಿ, ‘ಅರ್ಥ’ ಮಾಡಿಕೊಂಡು ನಡೆಯೋ ಪಯಣ ಅಲ್ವಾ?
ಇನ್ನೊಂದು ದೊಡ್ಡ ಕಾರಣ – ‘ತುಲನೆ’. ಇನ್ಸ್ಟಾದಲ್ಲಿ ಬೇರೆಯವರ ‘ಹ್ಯಾಪಿ ಕಪಲ್’ ರೀಲ್ಸ್ ನೋಡಿ, ನಮ್ಮ ಸಂಗಾತಿಯನ್ನು ಹೋಲಿಸೋಕೆ ಶುರು ಮಾಡ್ತೀವಿ. ‘ಅವರು ವಿದೇಶ ಟ್ರಿಪ್ ಹೋಗ್ತಾರೆ, ನೀನು ಎಲ್ಲೂ ಕರ್ಕೊಂಡು ಹೋಗಲ್ಲ’ ಅನ್ನೋ ಮಾತು ಶುರುವಾಗುತ್ತೆ. ಆದ್ರೆ ಆ ರೀಲ್ಸ್ ಹಿಂದಿನ ಕಣ್ಣೀರು, ಜಗಳ ನಮಗೆ ಕಾಣಲ್ಲ. ನಮ್ಮ ಕೈಯಲ್ಲಿ ಇರೋ ನಿಜವಾದ ಮನಸ್ಸನ್ನು ಬಿಟ್ಟು, ಪರದೆ ಮೇಲಿನ ಸುಳ್ಳು ನಗುವನ್ನು ನಂಬಿ ಮನೆ ಹಾಳು ಮಾಡಿಕೊಳ್ಳುತ್ತೇವೆ.

ಎಡವಿದಾಗ, ಅರ್ಥ ಮಾಡಿಕೊಳ್ಳದಿದ್ದರೆ ಏನಾಗುತ್ತೆ?
ಮನಸ್ಸು ಮನಸ್ಸನ್ನು ಓದಿಕೊಳ್ಳದೆ ಹೋದರೆ, ಮನೆ ಮನೆ ಆಗಿ ಉಳಿಯಲ್ಲ. ಲಾಡ್ಜ್ ತರ ಆಗುತ್ತೆ. ಎಲ್ಲರೂ ಒಂದೇ ರೂಫ್ ಕೆಳಗೆ ಇರ್ತಾರೆ, ಆದರೆ ಒಬ್ಬರಿಗೊಬ್ಬರು ಅಪರಿಚಿತರು.‘ಸುಸ್ತಾಗಿದೆ’ ಅಂದ್ರೆ ‘ಎಲ್ಲರಿಗೂ ಸುಸ್ತು’ ಅಂತಾರೆ. ‘ಮನಸ್ಸಿಗೆ ಬೇಜಾರಾಗಿದೆ’ ಅಂದ್ರೆ ‘ನಾಟಕ ಮಾಡಬೇಡ’ ಅಂತಾರೆ. ನಿಧಾನಕ್ಕೆ ಮಾತು ಕಡಿಮೆ ಆಗುತ್ತೆ. ಮಾತು ಕಡಿಮೆ ಆದ ಜಾಗದಲ್ಲಿ ಸಂಶಯ ಬೆಳೆಯುತ್ತೆ. ಸಂಶಯ ಬೆಳೆದ ಮನೆಯಲ್ಲಿ ನೆಮ್ಮದಿ ಇರಲ್ಲ.
ಆಗ ಸಣ್ಣ ತಪ್ಪು ಕೂಡ ದೊಡ್ಡ ಜಗಳ ಆಗುತ್ತೆ. ಅಡುಗೆಗೆ ಉಪ್ಪು ಜಾಸ್ತಿ ಆಯ್ತು ಅನ್ನೋ ವಿಷಯ ಕೋರ್ಟ್ ಮೆಟ್ಟಿಲು ಹತ್ತುತ್ತೆ. ಮಗು ಮಾರ್ಕ್ಸ್ ಕಡಿಮೆ ತಗೊಂಡಿದ್ದು ಮನೆ ಬಿಟ್ಟು ಹೋಗೋ ಮಾತು ಬರುತ್ತೆ. ಯಾಕೆ? ತಪ್ಪು ದೊಡ್ಡದಲ್ಲ. ತಪ್ಪಾದಾಗ ‘ಯಾಕಾಯ್ತು, ಏನು ಬೇಕು’ ಅಂತ ಕೇಳೋ ಮನಸ್ಸು ಪಕ್ಕದಲ್ಲಿ ಇರಲ್ಲ. ‘ನಿನ್ನಿಂದಲೇ ಹೀಗಾಯ್ತು’ ಅಂತ ಬೆರಳು ತೋರಿಸೋ ಮನಸ್ಸು ಮಾತ್ರ ಇರುತ್ತೆ.

ಅರ್ಥ ಮಾಡಿಕೊಳ್ಳದ ಮನೆಯಲ್ಲಿ ಗೋಡೆ ಜಾಸ್ತಿ, ಕಿಟಕಿ ಕಡಿಮೆ. ಗಾಳಿ ಆಡಲ್ಲ, ಉಸಿರು ಕಟ್ಟುತ್ತೆ. ಕೊನೆಗೆ ಮನಸುಗಳು ಮನೆಯಿಂದಲೇ ಓಡಿ ಹೋಗುತ್ತವೆ. ದೇಹ ಮಾತ್ರ ಮನೆಯಲ್ಲಿ ಉಳಿಯುತ್ತೆ. ಇದೇ ಡೈವೋರ್ಸ್. ಇದು ಕಾನೂನಿನ ಮುಂದೆ ಸೈನ್ ಮಾಡೋ ಮುಂಚೆಯೇ, ಮನೆ ಒಳಗೆ ಪ್ರತಿದಿನ ಸಾಯುತ್ತಿರುತ್ತೆ.
‘ನಾವು’ ಉಳಿದರೆ ಮನೆ ಉಳಿಯುತ್ತೆ
ಮನೆ ಕಟ್ಟೋಕೆ ಇಟ್ಟಿಗೆ, ಸಿಮೆಂಟ್ ಸಾಕು. ಸಂಸಾರ ಕಟ್ಟೋಕೆ ಮಾತ್ರ ಮನಸ್ಸು ಬೇಕು. ಆ ಮನಸ್ಸಿಗೆ ಕಿವಿ ಕೊಡಬೇಕು. ಹೊರಗಿನ ಜಗತ್ತಿಗೆ ಕಣ್ಣು, ಕಿವಿ, ಬಾಯಿ ಎಲ್ಲ ತೆರೆದು ಇಡ್ತೀವಿ. ಮನೆಯವರ ಮನಸ್ಸಿನ ಮಾತು ಕೇಳೋಕೆ ಮಾತ್ರ ಟೈಮ್ ಇರಲ್ಲ. ಅದನ್ನ ಬದಲಾಯಿಸಿಕೊಳ್ಳೋಣ.

ಡೈವೋರ್ಸ್ಗೆ ಕಾರಣ ವರದಕ್ಷಿಣೆ, ಹೊಡೆದಾಟ ಮಾತ್ರ ಅಲ್ಲ. ‘ನೀನು ನನ್ನನ್ನು ಅರ್ಥ ಮಾಡಿಕೊಳ್ಳಲೇ ಇಲ್ಲ’ ಅನ್ನೋ ಒಂದು ಪುಟ್ಟ ಪಿಸುಮಾತು ಸಾಕು. ಹಾಗಾಗಿ ಜಗಳ ಆದ ತಕ್ಷಣ ‘ಗೆಲ್ಲಬೇಕು’ ಅಂತ ಹೋಗಬೇಡಿ. ‘ಅರ್ಥ ಮಾಡಿಕೊಳ್ಳಬೇಕು’ ಅಂತ ಕೂತುಕೊಳ್ಳಿ. ಮೊಬೈಲ್ ಡೌನ್ ಇಟ್ಟು, ಮುಖ ನೋಡಿ ಮಾತಾಡಿ. ‘ನಿನ್ನ ಕಷ್ಟ ಏನು ಹೇಳು’ ಅಂತ ಒಂದ್ಸಲ ಕೇಳಿ ನೋಡಿ.
ಮನೆ ಒಳಗಿನ ಮನಸ್ಸು ಒಂದಕ್ಕೊಂದು ಔಷಧಿ ಆಗಬೇಕು, ಕಾಯಿಲೆ ಅಲ್ಲ. ದೋಣಿ ಆಗಬೇಕು, ಭಾರ ಅಲ್ಲ. ‘ನಾನು’ ಅನ್ನೋದು ಸತ್ತು ‘ನಾವು’ ಅನ್ನೋದು ಹುಟ್ಟಿದಾಗ, ಮನೆ ಮುಕ್ಕುತ್ತದೆ. ಏಕೆಂದರೆ ಮನಸು ಅರ್ಥ ಆದ ಮೇಲೆ, ಬದುಕು ಭಾರ ಅನಿಸಲ್ಲ. ಬದುಕೇ ಒಂದು ಹಬ್ಬ ಅನಿಸುತ್ತೆ. ಡೈವೋರ್ಸ್ ಫೈಲ್ನಲ್ಲಿ ಸೈನ್ ಮಾಡೋದು ಸುಲಭ. ಆದ್ರೆ ಪ್ರತಿದಿನ ಬೆಳಿಗ್ಗೆ ಎದ್ದು ‘ನಾವು ಸರಿ ಮಾಡಿಕೊಳ್ಳೋಣ’ ಅಂತ ಒಬ್ಬರಿಗೊಬ್ಬರು ಹೇಳಿಕೊಳ್ಳೋದು ನಿಜವಾದ ಜೀವನ. ಆ ಜೀವನವನ್ನು ಆಯ್ಕೆ ಮಾಡಿಕೊಳ್ಳೋಣ. ಮನೆ ಉಳಿಸಿಕೊಳ್ಳೋಣ.

ಹಿಂದೂ ರಾಷ್ಟ್ರ – ಇದು ನಮ್ಮ ಬದುಕಿನ ಹೆಸರು.. ವಿರೋಧ ಯಾಕೆ? ‘ಹಿಂದೂ ರಾಷ್ಟ್ರ’ ಅಂದ್ರೆ ತಪ್ಪೇನಿದೆ?








Great content! Keep up the good work!