Mysore

ಕುಶಾಲನಗರ ಛೇಂಬರ್ ಆಫ್ ಕಾಮರ್ಸ್ ಸ್ಥಾನೀಯ ಸಮಿತಿ ಮಹಾಸಭೆಯಲ್ಲಿ ಟಿ.ಪಿ.ರಮೇಶ್ ಮಾಡಿದ ಒತ್ತಾಯವೇನು?

ಕುಶಾಲನಗರ(ರಘುಹೆಬ್ಬಾಲೆ): ತಾಲ್ಲೂಕಿನ ಹೆಬ್ಬಾಲೆ ಬಳಿ ಸರ್ಕಾರಿ ಜಾಗದಲ್ಲಿ ಅಥವಾ ಖಾಸಗಿ ಜಮೀನು ಖರೀದಿಸಿ ಸುಮಾರು ಐದು ನೂರು ಎಕರೆ ಪ್ರದೇಶದಲ್ಲಿ 2ನೇ ಹಂತದ ನೂತನ ಕೈಗಾರಿಕಾ ಪ್ರದೇಶವನ್ನು ಅಭಿವೃದ್ಧಿ ಪಡಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು  ಕೊಡಗು  ಜಿಲ್ಲಾ ವಾಣಿಜ್ಯೋದ್ಯಮಿಗಳ ಸಂಘದ ಸ್ಥಾಪಕ ಕಾರ್ಯದರ್ಶಿ  ಟಿ.ಪಿ.ರಮೇಶ್ ಒತ್ತಾಯಿಸಿದರು.

ಸ್ಥಳೀಯ ಛೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್  ವತಿಯಿಂದ ಪಾಲ್ಯಂಸ್ ಎಮರಾಲ್ಡ್ ಸಭಾಂಗಣದಲ್ಲಿ  ಹಮ್ಮಿಕೊಂಡಿದ್ದ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿ, ಹಾಲಿ ಇರುವ ಕೂಡ್ಲೂರು ಕೈಗಾರಿಕಾ ಪ್ರದೇಶದಲ್ಲಿ ಕೈಗಾರಿಕೆಗಳನ್ನು ತೆರೆಯಲು ಸ್ಥಳವೇ ಇಲ್ಲದ ಕಾರಣ ಸರ್ಕಾರ  ಹೆಬ್ಬಾಲೆ ಬಳಿ ಕನಿಷ್ಠ 2ನೇ  ಹಂತದ ಕೈಗಾರಿಕಾ ಪ್ರದೇಶವನ್ನು ಅಭಿವೃದ್ಧಿ ಪಡಿಸಿ ಹೆಚ್ಚು ಕೈಗಾರಿಕೆಗಳನ್ನು ಸೆಳೆಯುವ ಕೆಲಸಗಳಾಗಬೇಕು.ಜೊತೆಗೆ ಜಿಲ್ಲೆಯಲ್ಲಿ ನೂತನ ಕೈಗಾರಿಕೆಗಳನ್ನು ಸ್ಥಾಪಿಸಿ ವಿದ್ಯಾವಂತ ಯುವಜನರಿಗೆ ಒದಗಿಸಬೇಕು ಎಂದರು.

ಕೊಡಗು ಜಿಲ್ಲಾ ವಾಣಿಜ್ಯೋದ್ಯಮಿಗಳ ಸಂಘದ ಅಧ್ಯಕ್ಷ ಬಿ.ಆರ್.ನಾಗೇಂದ್ರ ಪ್ರಸಾದ್ ಮಾತನಾಡಿ, ಜಿಲ್ಲಾ ಸಮಿತಿಯಿಂದ ಕೈಗೊಂಡ  ಹಲವು ಕಾರ್ಯಕ್ರಮಗಳ ಬಗ್ಗೆ  ಮಾಹಿತಿ ನೀಡಿದರು. ರಾಜ್ಯ ಸಮಿತಿಯ ಮಹತ್ವಾಕಾಂಕ್ಷೆಯ ಬಿಯಾಂಡ್ ಬೆಂಗಳೂರು ಯೋಜನೆಯಡಿ ಮಾಹಿತಿ ಹಾಗೂ  ತಂತ್ರಜ್ಞಾನ ಕೇಂದ್ರವನ್ನು ಕೊಡಗಿನಲ್ಲಿ ತೆರೆಯಬೇಕು.ಜಿಲ್ಲೆಯಲ್ಲಿ 18 ಸ್ಥಾನೀಯ ಸಮಿತಿಗಳಿದ್ದು, ಈ ಪೈಕಿ 13 ಘಟಕಗಳು ಕ್ರಿಯಾಶೀಲವಾಗಿವೆ. ಉಳಿದ ಘಟಕಗಳು ಸಕ್ರಿಯವಾಗಬೇಕಿದೆ ಎಂದು ಹೇಳಿದರು.

ಕುಶಾಲನಗರ ವರ್ತಕರ ಸಂಘದ ಅಧ್ಯಕ್ಷ ಕೆ.ಎಸ್.ನಾಗೇಶ್ ಮಾತನಾಡಿ, ವರ್ತಕರ ಸಂಘದಿಂದ ದೊಡ್ಡ ಯೋಜನೆಗಳ ಗುರಿ ಇದೆ. ಸದಸ್ಯರ ಸಹಕಾರ ಮುಖ್ಯ. ಹಾಗಾಗಿ ಸಂಘದ  ವ್ಯಾಪ್ತಿಯನ್ನು  ವಿಸ್ತರಿಸುವ  ಮೂಲಕ ಎಲ್ಲರ ವಿಶ್ವಾಸ ಗಳಿಸಬೇಕಿದೆ. ಕೊಡಗಿನ ಪ್ರವೇಶ ದ್ವಾರ ಕುಶಾಲನಗರದಲ್ಲಿ ಸ್ವಾಗತ ಕಮಾನು  ಮತ್ತು ಪ್ರವಾಸಿಗರಿಗೆ ಪ್ರವಾಸಿ ಸ್ಥಳಗಳ ಬಗ್ಗೆ ಮಾಹಿತಿ ನೀಡುವ ಕೇಂದ್ರವನ್ನು ಪ್ರವಾಸೋದ್ಯಮ ಇಲಾಖೆ ವತಿಯಿಂದ ತುರ್ತಾಗಿ ತೆರೆಯಬೇಕು ಎಂದರು.

ಕುಶಾಲನಗರದ ಕಾವೇರಿ ಸೇತುವೆಗೆ ಗುಂಡೂರಾವ್ ಹೆಸರು ನಾಮಕರಣ ಮಾಡಬೇಕು.ಹಾಗೆಯೇ ವರ್ತಕರ ಸಂಘದಿಂದ ಸ್ವಂತ ಭವನ ನಿರ್ಮಾಣ ಮಾಡಲು ಉದ್ದೇಶಿಸಿದ್ದು,ಎಲ್ಲರೂ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಸಂಘದ ಸಂಘಟನಾ ಕಾರ್ಯದರ್ಶಿ ಟಿ.ಆರ್.ಶರವಣಕುಮಾರ್ ಮಾತನಾಡಿ, ಹಿಂದಿನ ಸಾಲಿನಲ್ಲಿ ಸಂಸ್ಥೆಗಾಗಿ ದುಡಿದವರನ್ನು ಗುರುತಿಸಿ, ಈಗಿನ ಪೀಳಿಗೆಗೆ ತಿಳಿಸುವ ಸಂಪ್ರದಾಯವನ್ನು ನಾಗೇಶ್ ಮತ್ತು ಅವರ ತಂಡ ಬಹಳ ಅಚ್ಚುಕಟ್ಟಾಗಿ ಮಾಡಿದೆ ಎಂದು ಪ್ರಶಂಸಿದರು. ಮುಂದಿನ ಮಹಾಸಭೆಗೆ ಎಲ್ಲ ವರ್ತಕರು ಕಡ್ಡಾಯವಾಗಿ ಹಾಜರಾಗಬೇಕು ಎಂದರು.

ಕುಶಾಲನಗರ ವರ್ತಕರ ಸಂಘದ ಸ್ಥಾಪಕ ಅಧ್ಯಕ್ಷ ಪಿ.ಪಿ.ಸತ್ಯನಾರಾಯಣ, ಸ್ಥಾಪಕ ಕಾರ್ಯದರ್ಶಿ ಬಿ.ಜಿ.ಅನಂತಶಯನ, ಮಾಜಿ ಅಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್, ಮಾಜಿ ಕಾರ್ಯದರ್ಶಿ ಕೆ.ಎಸ್.ವೆಂಕಟರಮಣ ರಾವ್, ಕೆ.ಎಸ್.ರಾಜಶೇಖರ್, ಕೆ.ಜೆ.ಸತೀಶ್, ಎಸ್.ಕೆ.ಸತೀಶ್, ಬಿ.ಅಮೃತರಾಜು, ಕೆ.ಆರ್.ರವಿಕುಮಾರ್, ಟಿ.ಆರ್.ಶ್ರವಣಕುಮಾರ, ರವೀಂದ್ರ ರೈ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಸ್ಥಾನೀಯ ಸಮಿತಿ ಕಾರ್ಯದರ್ಶಿ ಚಿತ್ರ ರಮೇಶ್, ಉಪಾಧ್ಯಕ್ಷ ಎಂ.ಡಿ. ರಂಗಸ್ವಾಮಿ, ನಿರ್ದೇಶಕರಾದ ಹೆಚ್.ಎಂ.ಚಂದ್ರು, ಮಹೇಂದ್ರ ಶರ್ಮಾ, ಓಂಪುರಿ, ಕೆ.ಎನ್.ದೇವರಾಜ್ ಮತ್ತಿತರರು ಪಾಲ್ಗೊಂಡಿದ್ದರು.

admin
the authoradmin

ನಿಮ್ಮದೊಂದು ಉತ್ತರ

Translate to any language you want