ಹುಣಸೂರು: ತಾಲ್ಲೂಕಿನ ರತ್ನಪುರಿ ಗ್ರಾಮದಲ್ಲಿ 62 ನೇ ವರ್ಷದ ಶ್ರೀ ಆಂಜನೇಯಸ್ವಾಮಿ ಹಾಗೂ ಜಮಾಲಮ್ಮರವರ ಜಾತ್ರೆ ಅಂಗವಾಗಿ ನಡೆದ ಆಂಜನೇಯಸ್ವಾಮಿಯ ಕೊಂಡೋತ್ಸವ ವಿಜೃಂಭಣೆಯಿಂದ ಜರುಗಿತು.
ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನಡೆದ ಕೊಂಡೋತ್ಸವದಲ್ಲಿ ಧರ್ಮಾಪುರ ಆಂಜನೇಯಸ್ವಾಮಿ ಗುಡ್ಡಪ್ಪ ರುಕ್ಕಾಂಗದ ಕೊಂಡ ಹಾಯ್ದು ಭಕ್ತಿಯನ್ನು ಮೆರೆದರು. ಇದಕ್ಕೂ ಮುನ್ನ ಆಂಜನೇಯಸ್ವಾಮಿಯ ಮೂರ್ತಿಯನ್ನು ಗ್ರಾಮದ ಪಕ್ಕದ ದೇವಿಕೆರೆಯಲ್ಲಿ ಪ್ರತಿಷ್ಠಾಪನೆ ಮಾಡಿ ಆಂಜನೇಯನ ಭವ್ಯ ಮೂರ್ತಿಯನ್ನು ರತ್ನಪುರಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಈ ವೇಳೆ ನೆರೆದಿದ್ದ ಭಕ್ತರು ದೇವರಿಗೆ ಪುಷ್ಪ ಅರ್ಪಿಸಿ ಪೂಜೆ ಮಾಡಿ ಇಷ್ಟಾರ್ಥ ನೆರವೇರುವಂತೆ ಬೇಡಿಕೊಂಡು ಪ್ರಾರ್ಥನೆ ಸಲ್ಲಿಸಿದರು.

ಕಳೆದ ಒಂಬತ್ತು ವರ್ಷದಿಂದ ವಾಡಿಕೆಯಂತೆ ರತ್ನಪುರಿಯ ಪಕ್ಕದ ಗ್ರಾಮವಾದ ಧರ್ಮಾಪುರ ಗ್ರಾಮಸ್ಥರು ಭಕ್ತಿಭಾವದಿಂದ ನಡೆಸಿಕೊಂಡು ಬರುತ್ತಿರುವ ಕೊಂಡೋತ್ಸವವು ದೇವಾಲಯದ ಆವರಣದಲ್ಲಿ ನಡೆಯಿತು. ಸಾವಿರಾರು ಭಕ್ತರ ಸಮ್ಮುಖದಲ್ಲಿ ಧರ್ಮಾಪುರದ ಆಂಜನೇಯಸ್ವಾಮಿ ದೇವಾಲಯದ ಪೂಜಾರಿ ರುಕ್ಕಾಂಗದ ಸಾವಿರಾರು ಭಕ್ತರ ಉದ್ಘೋಷದ ನಡುವೆ ಕೊಂಡ ಹಾಯ್ದರು.

ಗ್ರಾಮದ ಕೃಷ್ಣನಾಯಕರ ಗುಡ್ಡರ ಕುಣಿತದ ತಂಡ ಹಾಗೂ ಧರ್ಮಾಪುರದ ನಾಡ ಯಾಜಮಾನ ರಾಮಚಂದ್ರ ಮಾಜಿ ನಾಡ ಯಾಜಮಾನ ವಿಶ್ವನಾಥ್, ಧರ್ಮಾಪುರ ಗ್ರಾ.ಪಂ.ಅಧ್ಯಕ್ಷ ವಿ.ಮಹದೇವ್, ಮಾಜಿ ಅಧ್ಯಕ್ಷ ಮಲ್ಲೇಶ್, ಸದಸ್ಯರಾದ ಮಹೇಶ್, ಗ್ರಾಮದ ಯಜಮಾನರಾದ ಜವರನಾಯಕ ಕೊಂಡೋತ್ಸವ ಯಶಸ್ವಿಯಾಗಿ ನಡೆಯುವಂತೆ ನೋಡಿಕೊಂಡರು.

ರತ್ನಪುರಿಯ ಶ್ರೀ ಆಂಜನೇಯಸ್ವಾಮಿ ಮುಂಭಾಗ ಭಕ್ತಾಧಿಗಳಿಗೆ ಪ್ರತಿ ವರ್ಷದಂತೆ ರೈಸ್ ಮಿಲ್ ಕರುಣಾ, ಬಾರ್ ಹರೀಶ್, ಉದ್ಯಮಿ ಕೃಷ್ಣ,, ನಾಗೇಂದ್ರ, ಪ್ರಸನ್ನ ಅವರ ತಂಡ ಈ ವರ್ಷವೂ ಕೂಡ ಅನ್ನದಾಸೋಹ ಏರ್ಪಡಿಸಿದ್ದರು. ಇದೇ ವೇಳೆ ಸಾವಿರಾರು ಭಕ್ತರು ಆಂಜನೇಯಸ್ವಾಮಿ ಪ್ರಸಾದ ಸ್ವೀಕರಿಸಿದ್ದರು.








