ಯುಗಾದಿ ಎಂದರೆ ಸಂಭ್ರಮ.. ಸಡಗರ.. ಮರಗಿಡಗಳು ಹೊಸ ಚಿಗುರಿನೊಂದಿಗೆ ಹೂಬಿಟ್ಟು ಸ್ವಾಗತಿಸುವ ಕಾಲ.. ವರುಣ ಕೃಪೆ ತೋರಿ ಸುಡುವ ವಾತಾವರಣವನ್ನು ತಂಪಾಗಿಸುವ ಸಮಯ… ಮನೆಯಲ್ಲಿ ಮಕ್ಕಳಿಗೆ ಹಬ್ಬದ ಹಿಗ್ಗು.. ಹೀಗೆ ಎಲ್ಲವನ್ನೂ ಪದಗಳಲ್ಲಿಯೇ ಜೋಡಿಸಿ ಕವನವಾಗಿಸಿ ನಮ್ಮ ಮುಂದಿಟ್ಟಿದ್ದಾರೆ ಕುಮಾರಕವಿ ನಟರಾಜ್ ಅವರು…
ಹಬ್ಬಹಬ್ಬ, ಯುಗಾದಿಹಬ್ಬ
ಹಟ್ಟಿಗೆ ಬಂತು ಹಳ್ಳಿಗೆ ಬಂತು
ನಾಡಿಗೆ ಬಂತು ದೇಶಕೆ ಬಂತು
ಬಂತೋ ಬಂತು ಎಲ್ರಿಗು ಬಂತು
ಹಬ್ಬಹಬ್ಬ, ಯುಗಾದಿಹಬ್ಬ
ಅವ್ವನು, ಎಣ್ಣೆಸ್ನಾನ ಮಾಡಿಸಿದಳು
ಅಕ್ಕನು, ಹೊಸಾಬಟ್ಟೆ ತೊಡಿಸಿದಳು
ಅಪ್ಪನು, ಮಾವುತೋರಣ ಕಟ್ಟಿದನು
ಅಣ್ಣನು, ಕಾಯಿಬೆಲ್ಲವ ತಂದಿಟ್ಟನು
ಎಲ್ಲಾಸೇರಿ ದೇವರಪೂಜೆ ಮಾಡಿದೆವು
ಬೇವು-ಬೆಲ್ಲ ಒಟ್ಟಿಗೇ ತಿಂದು
ಸಿಹಿ-ಕಹಿ ಜೀವನಕೆ ಸಿದ್ಧರಾದೆವು!
…. …… …….
ತಿಂದೋತಿಂದೆವು ಘಢದ್ದಾಗಿ
ಹುಳಿಯನ್ನ ಹೋಳಿಗೆ, ಕೋಸಂಬ್ರಿ ಶಾವಿಗೆ
ಕುಡಿದೋ ಕುಡಿದೆವು ಸುಸ್ತಾಗಿ
ಕುಡಿಕೆ ಪಾನಕ, ಮಡಕೆ ಮಜ್ಜಿಗೆ
ಕುಣಿದು ಕುಣಿದು ಕುಪ್ಪಳಿಸಿದೆವು
ನಲಿದು ನಲಿದು ನಕ್ಕುನಗಿಸಿದೆವು
…. …… …….
ಕವಡೇಪಗಡೆ ಗಟ್ಟಾಮನೆಯಾಟ
ಹುಣಿಸೇಬೀಜದ ಅಳಿಗುಳಿಮನೆಯಾಟ
ಒಂಟಿಕಾಲಿನ ಕುಂಟಾಬಿಲ್ಲೆಯಾಟ
ಅವಲಕ್ಕಿಪವಲಕ್ಕಿ ಕಣ್ಣಮುಚ್ಚಾಲೆಯಾಟ
ಇವರ್ಬಿಟ್ ಅವರ್ಬಿಟ್ ಇವರ್ಯಾರು?
ಕೋಲಾಟ ಚೆಂಡಾಟ, ಬರಿಆಟವೋಆಟ
ಕೇಕೇಹಾಕುತ ಕುಣಿದೂ ಕುಪ್ಪಳ್ಳಿಸಿದೆವು
ಯುಗಾದಿಹಬ್ಬ ಹೊಸವರ್ಷ ದಿನವಿಡೀ
ಮಜವೋ ಮಜಾದ ಬೊಂಬಾಟ
…. …… …….
ಇಂದಿನ ಯುಗಾದಿ ಹಬ್ಬವು
ಮುಂದಿನ ಯುಗಾದಿ ಹಬ್ಬದವರೆಗು
ತರಲೀ ತರಲಿ ಸಮೃದ್ಧಿ ತರಲಿ
ತರಲೀ ತರಲಿ ಸಂತಸ ತರಲಿ
ತರಲಿ ತರಲಿ ನೆಮ್ಮದಿ ತರಲಿ
ತರಲಿ ತರಲಿ ಆರೋಗ್ಯ ತರಲಿ
ಸ್ನೇಹ ವಿಶ್ವಾಸ ಎಲ್ಲರಲ್ಲು ಇರಲಿ









