ಬೆಂಗಳೂರು: ಡ್ಯಾನ್ಸ್ ಅನ್ನು ಉಸಿರಾಗಿಸಿಕೊಂಡ ಒಬ್ಬ ಹುಡುಗನ ನೈಜ ಕಥೆ ಆಧಾರಿತ ಶ್ರೀಮಂಜುನಾಥ ಫಿಲ್ಮ್ಸ್ ಬೆಂಗಳೂರು ಅವರ “ಜನರಿಂದ ನಾನು ಮೇಲೆ ಬಂದೆ” ಚಲನಚಿತ್ರದ ಪೋಸ್ಟರನ್ನು ಯುಗಾದಿ ಹಬ್ಬದಂದು ಶ್ರೀವಿದ್ಯಾವಾಚಸ್ಪತಿ ಡಾ.ವಿಶ್ವಸಂತೋಷ ಭಾರತಿ ಶ್ರೀಪಾದರು ಅಮೃತ ಹಸ್ತದಿಂದ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

ನವಿಲುಗರಿ ನವೀನ್ ಪಿ ಬಿ ನಿರ್ದೇಶನದ ಈ ಚಿತ್ರ ಡ್ಯಾನ್ಸ್ ಅನ್ನು ಉಸಿರಾಗಿಸಿಕೊಂಡ ಒಬ್ಬ ಹುಡುಗನ ನೈಜ ಕಥೆಯಾಗಿದ್ದು, ಚಿತ್ರದಲ್ಲಿ ಡ್ಯಾನ್ಸ್ ನಿಂದ ಸಾಕಷ್ಟು ಹೆಸರು ಮಾಡಿರುವ ಹೆಸರಾಂತ ಕಲಾವಿದರು ಅಭಿನಯಿಸಿದ್ದಾರೆ. ಡ್ಯಾನ್ಸ್ ಅಂದ್ರೆ ನೆನಪು ಬರುವುದೇ ‘ಡ್ಯಾನ್ಸ್ ರಾಜಾ ಡ್ಯಾನ್ಸ್’ ಖ್ಯಾತಿಯ ವಿನೋದ್ರಾಜ್. ಸುಮಾರು ವರ್ಷಗಳ ಕಾಲ ಚಿತ್ರರಂಗದಿಂದ ದೂರವಿದ್ದ ವಿನೋದ್ರಾಜ್ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು, ವಿಶೇಷ ಪಾತ್ರದಲ್ಲಿ ಬರುವ ಇವರ ಪಾತ್ರ ಸಿನಿಮಾಗೆ ಬಹಳ ಮಹತ್ವ ನೀಡುತ್ತದೆ ಎಂದು ನಿರ್ದೇಶಕ ನವಿಲುಗರಿ ನವೀನ್ ಪಿ ಬಿ. ತಿಳಿಸಿದ್ದಾರೆ.
ಬೆಂಗಳೂರು, ಮೇಲುಕೋಟೆ ಮೊದಲಾದೆಡೆ ಚಿತ್ರೀಕರಣ ನಡೆಸಲಾದ ಈ ಚಿತ್ರದಲ್ಲಿ ಐದು ಹಾಡುಗಳಿವೆ. ನಾಯಕನಾಗಿ ಗಂಧರ್ವರಾಜ್ ಅಭಿನಯಿಸಿದ್ದು , ಜೊತೆಗೆ ಅಭಿಜಿತ್, ಶೈಲಜಾ ದ್ವಾರಕೀಶ್, ಚಾಮರಾಜ ಮಾಸ್ಟರ್, ಶಿವಕುಮಾರ್ ಆರಾಧ್ಯ, ಶ್ಯಾಮಲಮ್ಮ, ಜಯಪ್ರಕಾಶ್ ನಾಗತಿಹಳ್ಳಿ, ಸುನಂದಾ ಕಲಬುರಗಿ, ಪ್ರವೀಣಾ ಕುಲಕರ್ಣಿ, ಸಂದೀಪ್ ಮಲಾನಿ, ಅನಿಲ್ ಕುಮಾರ್ ಬಾಬಿ, ಮಧುಶ್ರೀವಸಂತ, ಶಿವಣ್ಣ, ಆಪ್ತಿ ಪಟವರ್ಧನ್, ಕೃತಿಕಾ ದಿವಾಕರ್, ಶಾಂತಾ ಕುಮಾರಿ, ಕಾಟೇರ ಕೇಶವ, ಅಂಬೇಡ್ಕರ್ ಮಹೇಶ್, ಡಾ ಅಕ್ಷತಾ, ವಿಶಾಲ ಸತೀಶ್, ಲಲಿತ್ ಕೃಷ್ಣ, ಯಶು ರಾಜ್, ಶಶಿರೇಖಾ ಮೊದಲಾದವರಿದ್ದಾರೆ.

ಗೌತಮ್ ಟಿ ಆರ್ ಛಾಯಾಗ್ರಹಣ ಮತ್ತು ಸಂಕಲನ, ಪೃಥ್ವಿರಾಜ್ ಸಂಕಿ, ಭುವನ್ ಹಾಗೂ ನವೀನ್ ಪಿ ಬಿ ಸಾಹಿತ್ಯ, ಪ್ರಣವ್ ಸತೀಶ್ ಸಂಗೀತ, ಷಣ್ಮುಖ ಗೋವಿಂದ ರಾಜು, ರೇವಣ್ಣಸಿದ್ದ ಫುಲಾರಿ, ಎ ಆರ್ ತನ್ವೀರ್, ಯಶಸ್ವಿನಿ ಕಾಪ್ಸೆ ಹಾಡುಗಳನ್ನು ಹಾಡಿದ್ದಾರೆ, ಪತ್ರಿಕಾ ಸಂಪರ್ಕ ಆರ್.ಚಂದ್ರಶೇಖರ, ಡಾ. ಪ್ರಭು ಗಂಜಿಹಾಳ, ಡಾ. ವೀರೇಶ ಹಂಡಿಗಿ ಅವರದಿದೆ. ಶ್ರೀಮತಿ ಹೇಮಾವತಿ ಬಿ ನಿರ್ಮಾಪಕರಾಗಿದ್ದಾರೆ. ಮೇ ತಿಂಗಳಲ್ಲಿ ತೆರೆಗೆ ತರಲು ಚಿತ್ರತಂಡ ತಯಾರಿ ನಡೆಸಿದೆ. ಒಂದೊಳ್ಳೆಯ ಸಿನಿಮಾ ಹೊರ ಬಂದು ಪ್ರೇಕ್ಷಕರು ಮೆಚ್ಚುವಂತಾಗಲಿ ಎನ್ನುವುದೆ ನಮ್ಮ ಆಶಯ…








