ಹೊಸೂರು(ಸಂಘಟನೆ ಮಂಜುನಾಥ್): ಶ್ರೀರಾಮನವಮಿ ಹಬ್ಬದ ಹಿನ್ನೆಲೆ ಇತಿಹಾಸ ಪ್ರಸಿದ್ದ ಧಾರ್ಮಿಕ ಯಾತ್ರಾಸ್ಥಳ ಶ್ರೀ ಕ್ಷೇತ್ರ ಚುಂಚನಕಟ್ಟೆ ಗ್ರಾಮದಲ್ಲಿನ ಶ್ರೀ ರಾಮದೇವಾಲಯದಲ್ಲಿ ಶುಕ್ರವಾರ ವಿಶೇಷ ಪೂಜಾ ಕಾರ್ಯಕ್ರಮಕ್ಕೆ ಭಕ್ತ ಸಾಗರವೇ ಹರಿದು ಬಂದು, ದೇವರ ದರ್ಶನ ಪಡೆದು ಪುನೀತರಾದರು.

ಮುಂಜಾನೆಯಿಂದಲೇ ಅರ್ಚಕ ವೃಂದ ಸುಪ್ರಭಾತ, ಹಾಲು-ಮೊಸರು, ಅರಿಶಿನ-ಕುಂಕುಮ, ಎಳನೀರು, ಪಂಚಾಮೃತಾಭಿಷೇಕ ಸೇರಿದಂತೆ ಪವಿತ್ರ ಕಾವೇರಿ ನೀರಿನಿಂದ ಶ್ರೀರಾಮ, ಲಕ್ಷ್ಮಣ ಹಾಗೂ ಸೀತಮ್ಮನ ಮೂಲ ಮೂರ್ತಿಗಳಿಗೆ ಜಲಾಭಿಷೇಕ ಮಾಡಿದರು. ನಂತರ ಹಲವು ಬಗೆಯ ಪುಷ್ಪಗಳ ತೋ ಮಾಲಾ ಅಲಂಕರಿಸಿ, ವಿವಿಧ ಧಾರ್ಮಿಕ ಕಾರ್ಯಗಳನ್ನು ನಡೆಸಲಾಯಿತು. ದೇವರಿಗೆ ಮಹಾ ಮಂಗಳಾರತಿ ನೆರವೇರಿಸಿದ ಅರ್ಚಕರು. ಬಳಿಕ ಭಕ್ತರಿಗೆ ತೀರ್ಥ ಪ್ರಸಾದ ನೀಡಿದರು.

ಶಾಸಕ ಡಿ.ರವಿಶಂಕರ್ ಹಾಗೂ ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ದೊಡ್ಡಸ್ವಾಮಿಗೌಡ ಪತ್ನಿ ವನಜಾಕ್ಷಿ ಸೇರಿದಂತೆ ಸಾವಿರಾರು ಸಂಖ್ಯೆಯ ಭಕ್ತಸಮೂಹ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಗ್ರಾಮಸ್ಥರು ಸೇರಿದಂತೆ ಜಿಲ್ಲೆ ಹಾಗೂ ರಾಜ್ಯದ ನಾನಾ ಭಾಗಗಳಿಂದ ಮುಂಜಾನೆಯಿಂದಲೇ ಸಾವಿರಾರು ಸಂಖ್ಯೆಯ ಭಕ್ತರು ಸಂಜೆವರೆಗೂ ತಂಡೋಪತಂಡವಾಗಿ ದೇಗುಲಕ್ಕೆ ಆಗಮಿಸಿ ಸುಡುವ ಬಿಸಿಲನ್ನು ಲೆಕ್ಕಿಸಿದೆ ಮಹಿಳೆಯರು, ಮಕ್ಕಳು, ವೃದ್ಧರು ಸರತಿ ಸಾಲಿನಲ್ಲಿ ನಿಂತು ದೇವರಿಗೆ ಹಣ್ಣು, ಕಾಯಿ ನೀಡಿ ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದರು. ದೇಗುಲದ ಆಡಳಿತ ಹಾಗೂ ಭಕ್ತರ ಸಹಯೋಗದಲ್ಲಿ ಬಂದಿದ್ದ ಭಕ್ತರಿಗೆ ಪಾನಕ, ಕೋಸಂಬರಿ, ಅನ್ನದಾಸೋಹ ಪ್ರಸಾದವನ್ನು ನೀಡಿದರು.

ಈ ಸಂದರ್ಭದಲ್ಲಿ ಕೃಷ್ಣರಾಜನಗರ ತಹಸೀಲ್ದಾರ್ ಸುರೇಂದ್ರ ಮೂರ್ತಿ, ಉಪ ತಹಸೀಲ್ದಾರ್ ಮಹೇಶ್, ಆರ್.ಐ ಚಿದಾನಂದ ಬಾಬು, ದೇಗುಲದ ಪಾರುಪತ್ತೆದಾರ ವಿನಯ್, ಮುಖ್ಯಪೇದೆ ದೊರೆಸ್ವಾಮಿ, ಸಿಬ್ಬಂದಿ ಅವಿನಾಶ್, ಗ್ರಾಫೈಟ್ ಕೃಷ್ಣ, ಮೀನು ಕೃಷ್ಣ, ಅರ್ಚಕರಾದ ನಾರಾಯಣ ಅಯ್ಯಂಗಾರ್, ವಾಸುದೇವನ್, ಶೇಷಾದ್ರಿ, ಸಿಬ್ಬಂದಿಗಳಾದ ತಿಮ್ಮಣ್ಣ, ಚಂದ್ರನಾಯಕ, ಅನಂತ್, ಮಣಿ, ಲಿಖಿತ, ಮಂಜುನಾಥ್, ಅಪ್ಪು ಸೇರಿದಂತೆ ಮತ್ತಿತರರು ಇದ್ದರು.








