ಕೆ.ಆರ್.ನಗರ(ಜಿಟೆಕ್ ಶಂಕರ್): ಸಮಾಜದ ಅಭಿವೃದ್ಧಿ ಮತ್ತು ಏಳಿಗೆಯಲ್ಲಿ ಸವಿತಾ ಸಮಾಜದ ಬಾಂಧವರ ಪಾತ್ರ ಅತ್ಯಂತ ಮಹತ್ವದಾಗಿದ್ದು ಅವರನ್ನು ಸರ್ವರೂ ಗೌರವದಿಂದ ಕಾಣಬೇಕು ಎಂದು ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ದೊಡ್ಡಸ್ವಾಮೇಗೌಡ ಹೇಳಿದರು.
ಪಟ್ಟಣದ ಆಂಜನೇಯ ಬಡಾವಣೆಯಲ್ಲಿ ಇಲ್ಲಿನ ಸವಿತಾ ಸಮಾಜದ ವತಿಯಿಂದ ನಡೆದ ಶ್ರೀ ತ್ಯಾಗರಾಜರ ಆರಾಧನೆ ಮತ್ತು ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ತಮ್ಮ ವೃತ್ತಿಯನ್ನು ನಿಷ್ಠೆಯಿಂದ ಮಾಡುವ ಇವರು ಇತರರಿಗೆ ಮಾದರಿ ಎಂದರು.
ಸವಿತಾ ಸಮಾಜದ ಬಂಧುಗಳು ಶುಭಕಾರ್ಯಗಳಿಗೆ ಆಗಮಿಸದಿದ್ದರೆ ಆ ಕಾರ್ಯಗಳು ನಿರ್ವಿಘ್ನವಾಗಿ ಪೂರ್ಣಗೊಳ್ಳುವುದಿಲ್ಲ ಇಂತಹ ಮೇರು ವ್ಯಕ್ತಿತ್ವ ಮತ್ತು ಸ್ಥಾನ ಹೊಂದಿರುವ ಅವರ ಜೀವನ ನಮ್ಮೆಲ್ಲರಿಗೂ ಮಾರ್ಗದರ್ಶಕವಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ನಿರ್ಮಾಣ ಹಂತದಲ್ಲಿರುವ ಆಂಜನೇಯ ಬಡಾವಣೆಯ ಸವಿತಾ ಮಹರ್ಷಿ ಸಮುದಾಯ ಭವನಕ್ಕೆ ಈವರೆಗೆ ನಮ್ಮ ಕಾಂಗ್ರೆಸ್ ಸರ್ಕಾರ 50 ಲಕ್ಷ ಅನುದಾನ ನೀಡಿದ್ದು ಮುಂದಿನ ದಿನಗಳಲ್ಲಿ ಸರ್ಕಾರದ ಅನುದಾನದ ಜತೆಗೆ ವೈಯುಕ್ತಿಕವಾಗಿಯೂ ಅರ್ಥಿಕ ಸಹಾಯ ಮಾಡುವ ಭರವಸೆಯನ್ನು ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರು ನೀಡಿದರು.

ಕೆ.ಆರ್.ನಗರ ಪಟ್ಟಣದ ಜತೆಗೆ ಸಾಲಿಗ್ರಾಮ ತಾಲೂಕು ಕೇಂದ್ರ ಸೇರಿದಂತೆ ಕ್ಷೇತ್ರದಾದ್ಯಂತ ಸವಿತಾ ಸಮಾಜದ ಬಾಂಧವರು ನಿರ್ಮಾಣ ಮಾಡುತ್ತಿರುವ ಮತ್ತು ಮಾಡಲಿರುವ ಸಮುದಾಯ ಭವನ ಹಾಗೂ ದೇವಾಲಯಗಳಿಗೆ ಅಗತ್ಯವಿರುವಷ್ಟು ಅನುದಾನವನ್ನು ಕೊಡಿಸಿ ಕೊಡುವುದಾಗಿ ಅವರು ಭರವಸೆ ಕೊಟ್ಟರು.
ಶಿಕ್ಷಣದಿಂದ ಸರ್ವವನ್ನು ಸಾಧಿಸಲು ಸಾಧ್ಯವಾಗಲಿದ್ದು ಈ ವಿಚಾರವನ್ನ ಅರಿತು ಸವಿತಾ ಸಮಾಜದ ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಉತ್ತಮ ಮತ್ತು ಉನ್ನತ ಶಿಕ್ಷಣ ಕೊಡಿಸುವುದರ ಜತೆಗೆ ಕೀಳರಿಮೆಯಿಲ್ಲದೆ ತಮ್ಮ ವೃತ್ತಿ ಯನ್ನು ಕಾಯಕ ದೃಷ್ಟಿಯಿಂದ ಮಾಡಬೇಕೆಂದು ಕಿವಿ ಮಾತು ಹೇಳಿದರು. ತ್ಯಾಗರಾಜರ ಆರಾಧನೆ ಪ್ರಯುಕ್ತ ಅವರ ಭಾವಚಿತ್ರವನ್ನು ಬೆಳ್ಳಿ ರಥದಲ್ಲಿ ಕುಳ್ಳಿರಿಸಿ ವೈಭವದ ಮೆರವಣಿಗೆ ಮಾಡಿ ಪೂಜಿಸಿ ಗೌರವಿಸಲಾಯಿತ್ತಲ್ಲದೆ ವೇದಿಕೆಯಲ್ಲಿ ಮಂಗಳವಾದ್ಯ ನುಡಿಸಲಾಯಿತು.
ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗದ ಅಧ್ಯಕ್ಷ ನಾಗೇಶ್, ಸವಿತಾ ಸಮಾಜದ ಜಿಲ್ಲಾಧ್ಯಕ್ಷ ನಾಗರಾಜು, ಕರ್ಪೂರಿ ಠಾಕೂರ್ ಮಂಡ್ಯ ಜಿಲ್ಲಾಧ್ಯಕ್ಷ ಲೋಕೇಶ್, ಮೈಸೂರು ಜಿಲ್ಲಾಧ್ಯಕ್ಷ ಭಾಸ್ಕರ್, ಕೆ.ಆರ್.ನಗರ ಟೌನ್ ಸವಿತಾ ಸಮಾಜದ ಅಧ್ಯಕ್ಷ ಟಿ.ರಾಜೀವ್, ಪದಾಧಿಕಾರಿಗಳಾದ ಸತೀಶ್, ಮಹದೇವ, ಪ್ರಶಾಂತ್, ಸಂಪತ್, ಶ್ರೀನಿವಾಸ್, ಕೇಶಲಂಕಾರಿಗಳ ಸಂಘದ ಅಧ್ಯಕ್ಷ ಎಂ.ಎಸ್. ರಾಜೇಶ್, ಮುಖಂಡರಾದ ವ್ಯಾನ್ ಸುರೇಶ್, ಮಂಜುನಾಥ್, ಕೆ.ವಿನಯ್, ಕುಮಾರ್, ನಾರಾಯಣ, ಪಿ.ಕುಮಾರ್, ಯೋಗೀಶ್, ಅಭಿಷೇಕ್ ಸೇರಿದಂತೆ ಇನ್ನಿತರರು ಹಾಜರಿದ್ದರು.








