ದಶಕಗಳ ಕಾಲ ಮದ್ಯದ ವ್ಯಸನಿಯಾಗಿದ್ದ ವೇಣು ಅದರಿಂದ ಹೊರಬಂದಿದ್ದು ಹೇಗೆ ಗೊತ್ತಾ?
ಇದು ಮದ್ಯ ವ್ಯಸನದಿಂದ ಮುಕ್ತಗೊಂಡವರ ಕಥೆ!

ಕುಡಿತ ಸರ್ಕಾರ ಸೇರಿದಂತೆ ಅದನ್ನು ಮಾರಾಟ ಮಾಡಿ ಬದುಕುವವರಿಗೆ ಲಾಭ ತಂದುಕೊಟ್ಟು ಅವರ ಬದುಕನ್ನು ಹಸನು ಮಾಡಬಹುದು.. ಆದರೆ ಕುಡಿತದ ವ್ಯಸನಿಗಳು ಮತ್ತು ಅವರ ಮನೆಯವರು ಅನುಭವಿಸುವ ನರಕಯಾತನೆಗಳು ಅವರಿಗಷ್ಟೇ ಗೊತ್ತು… ಕುಡಿತದಿಂದಾಗಿ ಬಹುತೇಕರ ಮನೆ ದೀಪ ಆರಿವೆ… ಬದುಕು ಬೀದಿಗೆ ಬಿದ್ದಿದೆ… ಇಂತಹವರ ನಡುವೆ ಕೆಲವರು ಕುಡಿತ ಬಿಟ್ಟು ಹೊಸ ಬದುಕನ್ನು ಕಟ್ಟಿಕೊಂಡಿದ್ದಾರೆ.. ಅಂಥವರನ್ನು ಪರಿಚಯಿಸುವ ಅಂಕಣ ಇದಾಗಿದೆ… ಓದಿ ಅಭಿಪ್ರಾಯ ತಿಳಿಸಿ….
ಇದನ್ನೂ ಓದಿ: ಕುಡಿತದ ಚಟಕ್ಕೆ ಬಿದ್ದವನಿಗೆ ತಪ್ಪು ಅರಿವಾಗುವ ವೇಳೆಗೆ ಕಾಲಮಿಂಚಿತ್ತು..
ಕುಡಿತ ಬಿಟ್ಟ ಮೇಲೆ ವೇಣು ಇಂದು ಎಲ್ಲರಂತೆ ಉತ್ತಮ ಜೀವನ ಮಾಡುತ್ತಿದ್ದಾನೆ. ಒಳ್ಳೆಯ ಮನುಷ್ಯನಾಗಿ ಬದಲಾಗಿದ್ದಾನೆ. ಈಗ ತನ್ನದೆ ಸ್ವಂತ ಬಿಸಿನೆಸ್ ಪ್ರಾರಂಭ ಮಾಡಿ ನಾಲ್ಕಾರು ಕಾಸು ಸಂಪಾದನೆ ಮಾಡಿದ್ದಾನೆ. ಒಂದು ಕಾಲದಲ್ಲಿ ಯಾರು ಕುಡಿಸುತ್ತಾರೋ ಅವರ ಹಿಂದೆ ಓಡಿ ಹೋಗುತ್ತಿದ್ದ ವೇಣು ಇಂದು ಹತ್ತಾರು ಜನರಿಗೆ ಸಂಬಳ ಕೊಟ್ಟು ಕೆಲಸಕ್ಕೆ ಇಟ್ಟುಕೊಂಡಿದ್ದಾನೆ. ಈ ಬದಲಾವಣೆಗೆ ಬಸವಮಾರ್ಗ ವ್ಯಸನಮುಕ್ತ ಮತ್ತು ಪುನರ್ವಸತಿ ಕೇಂದ್ರ ಕಾರಣ ಎಂದು ವೇಣು ಅಭಿಮಾನದಿಂದ ಹೇಳುತ್ತಾನೆ. ಒಂದೊಂದು ಸಲ ವೇಣುವನ್ನು ನೋಡಿದರೆ ನನಗೆ ಗೊತ್ತಿಲ್ಲದ ರೀತಿಯಲ್ಲಿ ಖುಷಿ, ಹೆಮ್ಮೆಯಾಗುತ್ತದೆ ಎಂದು ಹೇಳುತ್ತಾರೆ ಬಸವಮಾರ್ಗ ವ್ಯಸನ ಮುಕ್ತ ಮತ್ತು ಪುನರ್ವಸತಿ ಕೇಂದ್ರದ ಎಸ್.ಬಸವರಾಜುರವರು…

ಬಾಲ್ಯದಿಂದಲೂ ವೇಣು ತುಂಬಾ ಒಳ್ಳೆಯ ಹುಡುಗ. ಆದರೆ ವ್ಯಸನ ಆತನನ್ನು ಹಾದಿ ತಪ್ಪಿಸಿತ್ತು. ಸರಿಯಾದ ವಯಸ್ಸಿನಲ್ಲಿ ಸರಿಯಾದ ಮಾರ್ಗದರ್ಶನ ಸಿಕ್ಕಿದ್ದರೆ ವೇಣು ಕುಡಿತದ ಹಾದಿ ಹಿಡಿಯುತ್ತಿರಲಿಲ್ಲ. ಸತತ 10 ವರ್ಷಗಳ ಕಾಲ ವ್ಯಸನಕ್ಕೆ ದಾಸನಾಗಿದ್ದ ವೇಣು ಆ ಸಮಯದಲ್ಲಿ ಹೇಳತೀರದಂತಹ ಸಮಸ್ಯೆ, ಅವಮಾನಗಳನ್ನು ಅನುಭವಿಸಿದ್ದಾನೆ. ಸೋಲುಗಳನ್ನು ಕಂಡಿದ್ದಾನೆ. ಆದರೆ ಈಗ ಅದಕ್ಕೆ ಅಪವಾದ ಎನ್ನುವಂತೆ ಬದುಕುತ್ತಿದ್ದಾನೆ. ಕೊನೆಗೂ ಮನಃಪರಿವರ್ತನೆಗೊಂಡು ನೆಮ್ಮದಿಯಾಗಿ ಜೀವನ ಕಟ್ಟಿಕೊಂಡಿದ್ದಾನೆ ವೇಣು.
ಮುಗ್ಧ ಹುಡಗ ವೇಣು….
ವೇಣು ತಂದೆ-ತಾಯಿ ಒಂದು ರೀತಿಯಲ್ಲಿ ಮುಗ್ಧ ಜೀವಿಗಳು. ವೇಣು ಗಂಡು ಮಗ ಅಂಥ ಒಂದು ತುತ್ತು ಸದಾ ಮುಂದೆಯೇ ಇರುತ್ತಿತ್ತು. ಅಷ್ಟೂ ಚೆನ್ನಾಗಿ ಬೆಳೆಸಿದ್ದರು ಮಗನನ್ನು. ಮಗ ಎಂದರೆ ತಂದೆ-ತಾಯಿಗೆ ಎಲ್ಲಿಲ್ಲದ ಪ್ರೀತಿ. ಶಾಲೆ ದಿನಗಳಲ್ಲಿ ವೇಣು ಇನೊಸೆಂಟ್ ಹುಡುಗ. ಗುರು, ಹಿರಿಯರನ್ನು ಕಂಡರೆ ಭಯ-ಭಕ್ತಿ ಕೊಂಚ ಹೆಚ್ಚಾಗಿಯೇ ಇತ್ತು. ಮಿತ ಭಾಷಿ, ಸಂಕೋಚ ಸ್ವಭಾವದ ಈ ಹುಡುಗ ಒಂದು ರೀತಿಯಲ್ಲಿ ಎಲ್ಲರಿಗೂ ಅಚ್ಚು-ಮೆಚ್ಚು. ಮನೆಯಲ್ಲೂ ಅಷ್ಟೆ ತಂದೆ, ತಾಯಿಯ ಕಷ್ಟಗಳನ್ನು ಅರ್ಥಮಾಡಿಕೊಂಡು ತನ್ನ ಇತಿ-ಮಿತಿಯಲ್ಲಿದ್ದ. ಗೆಳೆಯರ ಸಂಘದಲ್ಲೂ ಅಷ್ಟೆ ವೇಣು ಎಲ್ಲರಿಗೂ ಪ್ರೀತಿ ಪಾತ್ರನಾದ ವ್ಯಕ್ತಿ. ತಾರತಮ್ಯ ವಿಲ್ಲದ, ಕಲ್ಮಶವಿಲ್ಲದ ಸ್ನೇಹ ವೇಣುನದು. ಆ ಕಾರಣದಿಂದಲೇ ವೇಣು ಎಲ್ಲರಿಗೂ ಪ್ರಿಯ.

ಗೆಳೆಯರ ಸಂಘ ವ್ಯಸನಕ್ಕೆ ದೂಡಿತು..
ಆದರೆ ವಯಸ್ಸಿಗೆ ಬರುವ ವೇಳೆಗೆ ಆ ಗೆಳೆಯರ ಬಳಗವೆ ಅವನನ್ನು ವ್ಯಸನಕ್ಕೆ ದಾಸನಾಗುವಂತೆ ಮಾಡಿಬಿಟ್ಟಿತು. ಪ್ರಾರಂಭದಲ್ಲಿ ರುಚಿ ನೋಡಲೆಂದು ಸ್ನೇಹಿತರೆಲ್ಲರು ಶುರುಮಾಡಿದ ಕುಡಿತ, ಹಂತ, ಹಂತವಾಗಿ ಅವರನ್ನು ವ್ಯಸನಿಗಳನ್ನಾಗಿ ಮಾಡಿಬಿಟ್ಟಿತು. ಅದರಲ್ಲೂ ವೇಣು ನಾನಾ ಸಮಸ್ಯೆಗಳನ್ನು ಎದುರಿಸಬೇಕಾಗಿ ಬಂತು. ವಿಷಯ ತಿಳಿದ ತಂದೆ-ತಾಯಿಗೆ ಇದು ಬರಸಿಡಿಲಿನಂತೆ ಎರಗಿದಂತಾಯಿತು. ಒಳ್ಳೆಯ ಹುಡುಗ, ಪ್ರೀತಿಯಿಂದ ಸಾಕಿದ್ದ ಕೂಸು ಕುಡಿತ ದಾಸ್ಯಕ್ಕೆ ಬಲಿಯಾಗಿದ್ದಾನಲ್ಲ ಎಂದು ತಂದೆ-ತಾಯಿ ಎದೆ ಬಡಿದುಕೊಂಡರು.
ಇದನ್ನೂ ಓದಿ: ಕುಡಿತಕ್ಕೆ ದಾಸನಾದವನು ಹೆತ್ತವರ ಮಾತು ಕೇಳಲಿಲ್ಲ… ಆಮೇಲೆ ಏನಾಯಿತು?
ವ್ಯಸನಕ್ಕೆ ದಾಸನಾಗಿದ್ದರೂ ವೇಣು ಗುಣವನ್ನು ಮೆಚ್ಚಲೇಬೇಕು. ವೇಣು ಎಷ್ಟೇ ಕುಡಿದರೂ ಆತನ ನಯ, ವಿನಯದಲ್ಲಿ ಎಂದೂ ಬದಲಾವಣೆ ಆಗುತ್ತಿರಲಿಲ್ಲ. ತಂದೆ-ತಾಯಂದಿರ ಬಗ್ಗೆ ಕಾಳಜಿ ವಹಿಸುತ್ತಿದ್ದ. ಜನರಿಗೆ ಮರ್ಯಾದೆ ಕೊಡುತ್ತಿದ್ದ, ಹಿರಿಯರ ಬಗ್ಗೆಯೂ ಅಷ್ಟೆ ಗೌರವ ಆದರಗಳನ್ನು ಹೊಂದಿದ್ದ. ಆ ಕಾರಣದಿಂದಲೇ ವೇಣು ವ್ಯಸನಿಯಾದರೂ ಎಲ್ಲರಿಂದಲೂ ಪ್ರೀತಿಗೆ ಪಾತ್ರನಾಗುತ್ತಿದ್ದ. ಆತ ಎಷ್ಟೇ ಮದ್ಯಪಾನ ಮಾಡಿದರೂ ಎಲ್ಲರೂ ಹೇಳುತ್ತಿದ್ದದ್ದು ಒಂದೇ ಮಾತು ಈತ ಎಷ್ಟು ಒಳ್ಳೆಯ ಹುಡುಗ… ಕುಡಿತಕ್ಕೆ ದಾಸನಾಗಿಬಿಟ್ಟನಲ್ಲ.. ಛೇ.. ಅದೊಂದು ಇಲ್ಲದಿದ್ದರೆ ಈತನ ಬಾಳು ಎಷ್ಟು ಚೆನ್ನಾಗಿ ಇರುತ್ತಿತ್ತು. ದೇವರು ಈತನಿಗೆ ಕುಡಿತ ಬಿಡುವ ಬುದ್ದಿಯನ್ನು ಆದಷ್ಟು ಬೇಗ ನೀಡಲಿ ಎಂದು ಪ್ರಾರ್ಥಿಸುತ್ತಿದ್ದರು. ಅಷ್ಟೇ ಅಲ್ಲದೆ ವೇಣುವಿನ ಸ್ಥಿತಿಯನ್ನು ಕಂಡು ಮರುಗುತ್ತಿದ್ದರು.

10 ವರ್ಷ ದಾಸ್ಯದ ಜೀವನ..
ಸತತ 10 ವರ್ಷಗಳ ಕಾಲ ಕಡಿತದ ದಾಸ್ಯಕ್ಕೆ ಬಲಿಯಾಗಿದ್ದ ವೇಣು. ಬೆಳಗ್ಗೆಯಿಂದ ಸಂಜೆಯ ವರೆಗೂ ನಶೆಯಲ್ಲೇ ತೇಲುತ್ತಿದ್ದ. ಸಣ್ಣ, ಪುಟ್ಟ ಮರದ ಕೆಲಸ ಮಾಡಿಕೊಂಡಿದ್ದ ವೇಣುವನ್ನು ಕಿಟಕಿ, ಬಾಗಿಲು, ಡೋರ್ ಮಾಡಲು ಹೆಲ್ಪರ್ ಆಗಿ ಕರೆದುಕೊಂಡು ಹೋಗುತ್ತಿದ್ದರು ಕೆಲಸಗಾರರು. ಅವತ್ತಿನ ಕೆಲಸ ಪ್ರಾರಂಭವಾಗುವ ಮುಂಚೆ ಯಾರು ಕುಡಿಸುತ್ತಾರೆ ಅವರ ಜೊತೆಗೆ ಹೆಲ್ಪರ್ ಆಗಿ ಹೋಗಿ ಬಿಡುತ್ತಿದ್ದ ವೇಣು. ವೇಣು ಕೆಲಸ ಮಾಡಬೇಕು ಎಂದರೆ ಒಂದು ನೈಂಟಿಯನ್ನಾದರೂ ಕುಡಿದಿರಬೇಕು. ಆಗಿದ್ದರಷ್ಟೆ ಅವನ ಕೈ, ತಲೆ ಎರಡು ಓಡುತ್ತಿತ್ತು. ಇಲ್ಲದಿದ್ದರೆ ಏನೂ ಇಲ್ಲ. ಸಂಜೆ ಕೆಲಸ ಮುಗಿಯುವುದನ್ನೆ ಕಾಯುತ್ತಿದ್ದ ವೇಣು ದಿನದ ತನ್ನ ಕೂಲಿಯನ್ನು ಪಡೆದು ಸೀದಾ ಬಾರ್ ಕಡೆಗೆ ನಯವಾಗಿಯೇ ನಡೆದುಬಿಡುತ್ತಿದ್ದ. ಕೈಯಲ್ಲಿ ಕಾಸು ಇರುವ ತನಕ ಕುಡಿದು ಕೊನೆಗೆ ಮನೆ ದಾರಿ ಹಿಡಿಯುತ್ತಿದ್ದ. ಈ ದಾಸ್ಯದ ಜೀವನ ಅವನನ್ನು ಹಿಂಡಿ ಹಿಪ್ಪೆ ಮಾಡಿತ್ತು.
ಇದನ್ನೂ ಓದಿ: ಮಗನ ಕುಡಿತದ ಚಟ ಬಾರ್ ಓನರ್ ತಂದೆಯ ಪ್ರಾಣ ತೆಗೀತು.. ಬಸವಮಾರ್ಗದ ಬೆಳಕು
ಆರೋಗ್ಯದಲ್ಲಿ ಏರು-ಪೇರಾಯಿತು..
ಕೊನೆಗೆ ಒಂದು ದಿನ ಸತತ 10 ವರ್ಷಗಳ ದಾಸ್ಯದ ಕೂಪಕ್ಕೆ ಬಿದ್ದಿದ ವೇಣುವಿನ ಆರೋಗ್ಯದಲ್ಲಿ ಏರುಪೇರಾಗಲು ಪ್ರಾರಂಭವಾಯಿತು. ಕುಡಿಯದಿದ್ದರೆ ಕೈಗಳು ನಡುಕ ಶುರುವಾಗುವುದು, ರಕ್ತ ವಾಂತಿ ಮಾಡುವುದು.. ಹೀಗೆ ಒಂದೊಂದೇ ಸಮಸ್ಯೆಗಳು ಆತನನ್ನು ಕಾಡಲು ಶುರು ಮಾಡಿಬಿಟ್ಟಿತು. ಕೂಡಲೇ ವೇಣುವನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಿ ಒಂದಷ್ಟು ದಿನ ಚಿಕಿತ್ಸೆ ಕೊಡಿಸಿದರು ತಂದೆ, ತಾಯಿ. ವೈದ್ಯರು ಕುಡಿಯದಂತೆ ಎಚ್ಚರಿಕೆ ನೀಡಿ ಒಂದಷ್ಟು ಮಾತ್ರೆ ಬರೆದು ಮನೆಗೆ ಕಳುಹಿಸಿದರು. ಮನೆಗೆ ಬಂದ ಒಂದೆರಡು ದಿನ ಕುಡಿತದಿಂದ ದೂರ ಇದ್ದ ವೇಣು, ಆರೋಗ್ಯ ಸರಿಯಾದ ಕೂಡಲೇ ಮದ್ಯದಂಗಡಿ ಕಡೆ ಮುಖ ಮಾಡಿದ್ದ. ಇರುವವನು ಒಬ್ಬನೇ ಮಗ, ಎಲ್ಲಿ ಏನಾದರೂ ಆಗಿಬಿಡುತ್ತದೆಯೋ ಎಂದು ಕಂಡ, ಕಂಡ ದೇವರನ್ನು ಬೇಡುತ್ತ ಆತಂಕದಲ್ಲೆ ಕಾಲ ದೂಡುತ್ತಿದ್ದರು ಹೆತ್ತವರು..

ದೇವರ ಮೊರೆ ಹೋದ ಹೆತ್ತವರು..
ಹೀಗೆ ಆಸ್ಪತ್ರೆಯಲ್ಲೂ ವಾಸಿಯಾಗದ ವೇಣುವಿನ ಕುಡಿತದ ಕಾಯಿಲೆಗೆ ದೇವರ ಮೊರೆ ಹೋದರು ತಂದೆ-ತಾಯಿ. ನಾಲ್ಕಾರು ಕ್ಷೇತ್ರಗಳನ್ನು ಸುತ್ತಾಡಿದರು. ಹತ್ತಾರು ದೇವರನ್ನು ಬೇಡಿದರು. ಹರಕೆಗಳನ್ನು ಕಟ್ಟಿಕೊಂಡರು. ಆದರೂ ವೇಣು ಕುಡಿತದ ವ್ಯಸನವನ್ನು ಬಿಡಲಿಲ್ಲ. ಕೊನೆಗೆ ಸಂಬಂಧಿಕರೊಬ್ಬರ ಸಲಹೆ ಮೇರೆಗೆ ವೇಣುವನ್ನು ವ್ಯಸನಮುಕ್ತ ಮತ್ತು ಪುನರ್ವಸತಿ ಕೇಂದ್ರಕ್ಕೆ ಸೇರಿಸಿ ಚಿಕಿತ್ಸೆ ಕೊಡಿಸಿದರು. ಆದರೂ ಅಲ್ಲಿ ಫಲ ಕೊಡಲಿಲ್ಲ. ಅಲ್ಲಿಂದ ಬಂದ ಕೆಲವೆ ದಿನಗಳಲ್ಲಿ ಮತ್ತೆ ಕುಡಿತದ ದಾಸ್ಯಕ್ಕೆ ಬಲಿಯಾಗಿಬಿಟ್ಟ ವೇಣು. ವೇಣುವಿನ ಈ ವರ್ತನೆಯಿಂದ ಬೇಸತ್ತಿದ್ದ ತಂದೆ-ತಾಯಿ ಕೊನೆಯ ನಿರ್ಧಾರಕ್ಕೆ ಬಂದು ಬಿಟ್ಟರು.. ಕುಡಿತ ಬಿಟ್ಟರೆ ಬಿಡಲಿ ! ಇಲ್ಲ ಎಂದರೆ ಇಲ್ಲ. ಅವನ ಹಣೆ ಬರಹದಲ್ಲಿ ಇರುವ ರೀತಿಯಲ್ಲಿ ಆಗಲಿ ಎಂದು ತಟಸ್ಥವಾದರು.
ಇದನ್ನೂ ಓದಿ: ಮದ್ಯ ವ್ಯಸನಿಯಾಗಿ ಸಂತಸ ಕಳೆದುಕೊಂಡ ಸಂತೋಷನ ಬದುಕು ಬದಲಾಗಿದ್ದು ಹೇಗೆ?

ಬಸವಮಾರ್ಗಕ್ಕೆ ಬಂದ ವೇಣು..
ಬಸವಮಾರ್ಗ ವ್ಯಸನ ಮುಕ್ತ ಮತ್ತು ಪುನರ್ವಸತಿ ಕೇಂದ್ರ ಉಚಿತ ಕುಡಿತ ಬಿಡಿಸುವ ಶಿಬಿರ ಆಯೋಜಿಸಿದ್ದ ಸಮಯ. ರಾಜ್ಯದ ನಾನಾ ಭಾಗಗಳಿಂದ ನೂರಾರು ಜನರು ಈ ಶಿಬಿರಕ್ಕೆ ಬಂದಿದ್ದರು. ಅದರಲ್ಲಿ ವೇಣು ಕೂಡ ಒಬ್ಬ ಶಿಬಿರಾರ್ಥಿ. ಇಲ್ಲಿ 10 ದಿನಗಳ ಕಾಲ ನಡೆದ ಶಿಬಿರದಲ್ಲಿ ಪ್ರತಿ ವಿಭಾಗದಲ್ಲೂ ಯಶಸ್ವಿಯಾಗಿ ಭಾಗವಹಿಸಿದ ವೇಣು. ಆಗಲೇ ಆತನಿಗೆ ತಿಳಿದಿದ್ದು, ಕುಡಿತ ಕೇವಲ ದೈಹಿಕ ಕಾಯಿಲೆಯಲ್ಲ. ಇದು ದೈಹಿಕ, ಮಾನಸಿಕ ಮತ್ತು ಆತ್ಮಿಕ ಕಾಯಿಲೆ ಎಂದು. ಕುಡಿತ ಬಿಡಲು ಕೇವಲ ಮಾತ್ರೆಗಳನ್ನು ತೆಗೆದುಕೊಂಡರೆ ಸಾಲದು, ಕುಡಿತದಿಂದ ದೂರ ಇರಲು ಅದರದ್ದೆ ಆದ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಎಂದು. ಶಿಬಿರದಲ್ಲಿ ಸಿಕ್ಕ ಅಷ್ಟೂ ಲಾಭವನ್ನು ಪಡೆದ ವೇಣು ಬದಲಾವಣೆ ಕಡೆಗೆ ಮುಖ ಮಾಡಿದ.
ಬದುಕು ಬದಲಿಸಿದ ಬಸವಮಾರ್ಗ

ಬಸವಮಾರ್ಗದಲ್ಲಿ ನಡೆದ 10 ದಿನಗಳ ಉಚಿತ ಕುಡಿತ ಶಿಬಿರವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡ ವೇಣುವಿನ ನಿಜವಾದ ಬದುಕು ಇಲ್ಲಿಂದ ಪ್ರಾರಂಭವಾಯಿತು. ವೇಣು ಕಳೆದ 4 ವರ್ಷಗಳಿಂದ ಕುಡಿತದಿಂದ ದೂರ ಉಳಿದಿದ್ದಾನೆ. ಹಂತ, ಹಂತವಾಗಿ ಆರೋಗ್ಯದಲ್ಲಿ ಬದಲಾವಣೆ ತಂದುಕೊಂಡಿದ್ದಾನೆ. ಈಗ ತಾನೇ ಸ್ವಂತ ವ್ಯವಹಾರವನ್ನು ಪ್ರಾರಂಭ ಮಾಡಿದ್ದಾನೆ. ತಾನು ಕಲಿತಿದ್ದ ಮರದ ಕೆಲವನ್ನೇ ಶ್ರದ್ಧೆ, ಭಕ್ತಿ, ಪ್ರೀತಿಯಿಂದ ಮಾಡುತ್ತಿದ್ದಾನೆ. ಜೊತೆಗೆ ಹತ್ತಾರು ಜನರನ್ನು ಕೆಲಸಕ್ಕೆ ಇರಿಸಿಕೊಂಡು ಆತನೆ ಅವರಿಗೆ ಸಂಬಳವನ್ನು ನೀಡುತ್ತಾನೆ. ಬಸವಮಾರ್ಗ ಕೇಂದ್ರದಲ್ಲಿ ಚಿಕಿತ್ಸೆ ಪಡೆದ ಒಬ್ಬ ಯುವಕ ಇಂದು ಕುಡಿತದಿಂದ ದೂರ ಉಳಿದು ಜೀವನದಲ್ಲಿ ಬದಲಾವಣೆಯಾಗಿದ್ದಾನೆ. ಮನಃಪರಿವರ್ತನೆ ಮಾಡಿಕೊಂಡು ತಂದೆ, ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೆ. ವೇಣುವಿನ ಈ ಬದಲಾವಣೆ ನಿಜಕ್ಕೂ ನನಗೆ ಹೆಮ್ಮೆ ತರಿಸಿದೆ.
ಕೊನೆಮಾತು: ವೇಣು ನಿನ್ನ ಪ್ರಗತಿ ಮತ್ತಷ್ಟು ವಿಸ್ತರಿಸಲಿ.. ವಿಶ್ ಯೂ ಗುಡ್ ಲಕ್….








