ಕೇರಳ: ವಯನಾಡ್ ಬಳಿಯಲ್ಲಿ ಸಂಭವಿಸಿದ ಭೂಕುಸಿತದ ಭಯದಿಂದ ಸ್ಥಳೀಯರು ಇನ್ನು ಹೊರಬಂದಂತೆ ಕಾಣುತ್ತಿಲ್ಲ ಗುಡ್ಡ ಜರಿದು ಕೆಸರಿನಿಂದ ಆವರಿಸಿದ ಪ್ರದೇಶವನ್ನು ನೋಡುತ್ತಿರುವ ಜನರ ಕಣ್ಣುಗಳಲ್ಲಿ ಆತಂಕ ಕಂಡು ಬರುತ್ತಿದೆ. ಇದರಾಚೆಗೆ ಸುರಿಯುವ ಮಳೆಯಲ್ಲಿ ನಾಪತ್ತೆಯಾದವರ ಹುಡುಕಾಟ ಮುಂದುವರೆದಿದೆ.
ಭೂಕುಸಿತ ಪೀಡಿತ ಪ್ರದೇಶದ ಬಳಿಯಲ್ಲಿ ಮಣ್ಣಿನಡಿಯಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ಅಗ್ನಿಶಾಮಕ ದಳ ಹಾಗೂ ಎನ್ ಡಿಆರ್ ಎಫ್ ತಂಡಗಳು ಕಾರ್ಯ ನಿರ್ವಹಿಸುತ್ತಿವೆ. ಆದರೆ ಈ ಕಾರ್ಯಾಚರಣೆ ಸುಸೂತ್ರವಾಗಿ ನಡೆಯಲು ಸುರಿಯುವ ಮಳೆ ಅಡ್ಡಿಪಡಿಸುತ್ತಿದೆ. ಒಂದೆಡೆ ಮಳೆ ಮತ್ತೊಂದೆಡೆ ಉಕ್ಕಿ ನೀರು ಹರಿಯುವ ನೀರಿನ ಮಧ್ಯೆ ಹುಡುಕಾಟ ನಡೆಯುತ್ತಿದೆ.

ಈಗಾಗಲೇ ಗಾಯಗೊಂಡವರ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದ್ದರೆ ಇನ್ನು ಕೆಲವು ಚಿಕಿತ್ಸೆ ಪಡೆದು ಮನೆಗೆ ಹಿಂತಿರುಗಿದ್ದಾರೆ. ಇದೆಲ್ಲದರ ನಡುವೆ ಘಟನೆ ನಡೆದ ಮಂಗಳವಾರದಿಂದ ಕಾರ್ಯಾಚರಣೆ ನಡೆಸಿ ಮಣ್ಣಿನಡಿಯಲ್ಲಿ ಸಿಲಕಿ ಮೃತಪಟ್ಟ ಮೂವರ ಕಾರ್ಮಿಕರ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ಬಳಿಕ ವಾರಸುದಾರರಿಗೆ ನೀಡಲಾಗುತ್ತಿದೆ. ಇನ್ನುಳಿದವರ ಶವಕ್ಕಾಗಿ ಶೋಧನಾ ಕಾರ್ಯ ನಡೆಯುತ್ತಿದೆ. ಮೃತರ ಕುಟುಂಬಗಳಿಗೆ ಕೇರಳ ಸರ್ಕಾರ 5ಲಕ್ಷ ರೂಪಾಯಿಗಳ ಪರಿಹಾರವನ್ನು ಘೋಷಿಸಿದೆ.
ಈ ವ್ಯಾಪ್ತಿಯ ಸುಮಾರು 140 ಜನರನ್ನು ಮೇಪ್ಪಾಡಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸ್ಥಾಪಿಸಲಾಗಿರುವ ಗಂಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ.








