ಆಶಾ ಭೋಸ್ಲೆ ಅವರು ಇನ್ನಿಲ್ಲ ಎಂಬ ಸುದ್ದಿ ಹೊರ ಬಂದ ಕ್ಷಣವೇ ಸಂಗೀತ ಪ್ರೇಮಿಗಳು ಒಂದು ಕ್ಷಣ ಸ್ತಬ್ದರಾಗಿದ್ದಂತು ನಿಜ… ಅವರ ಹಾಡುಗಳನ್ನು ಕೇಳುತ್ತಾ ಗುನುಗುತ್ತಾ ಬೆಳೆದವರಿಗೆ ಏನೋ ಕಳೆದುಕೊಂಡ ಅನುಭವವಾಗುವುದು ಸಹಜ… ಹಾಡು ಅದರಾಚೆಗಿನ ಅವರ ಬದುಕಿನ ಬಗ್ಗೆ ಒಂದಷ್ಟು ಮಾಹಿತಿಗಳನ್ನು ಕಲೆ ಹಾಕಿ ಓದುಗರಿಗೆ ತಲುಪಿಸುವ ಕೆಲಸವನ್ನು ಜರೂರಾಗಿ ಹಿರಿಯ ಬರಹಗಾರರಾದ ಕುಮಾರಕವಿ ನಟರಾಜ್ ಅವರು ಮಾಡಿದ್ದಾರೆ. ಅವರಿಗೊಂದು ಮನತುಂಬಿದ ಧನ್ಯವಾದಗಳು…
ಸಪ್ತಸ್ವರ ಸಾಮ್ರಾಜ್ಞಿ ಆಶಾಭೋಸ್ಲೆ ಅವರು 8.9.1933ರಲ್ಲಿ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಜನಿಸಿದರು. ಇವರ ಪೋಷಕರಾದ ಶ್ರೀಮತಿ ಸೇವಂತಿ ಮತ್ತು ಖ್ಯಾತ ವಾದ್ಯಸಂಗೀತ ವಿದ್ವಾನ್ ಪಂಡಿತ್ ದೀನನಾಥ್ ಮಂಗೇಶ್ಕರ್ ರವರ ಮೂರನೇ ಪುತ್ರಿ.

ಇವರ ಇಬ್ಬರು ಸೋದರಿಯರು ಲತಾಮಂಗೇಶ್ಕರ್ ಮತ್ತು ಉಷಾಮಂಗೇಶ್ಕರ್. 16ನೇ ವಯಸ್ಸಿನಲ್ಲಿದ್ದಾಗ ಮನೆಯವರೆಲ್ಲರ ವಿರೋಧದ ನಡುವೆಯೂ ಲವ್ ಮಾಡಿ ಮದುವೆಯಾದ ಧೀರಯುವತಿ. ಅಡುಗೆಯಲ್ಲಿ ನಿಷ್ಣಾತರಾಗಿದ್ದ ಈ ಮರಾಠಿ ಮೊಗ್ಗು ತನ್ನದೇ ವಿಶಿಷ್ಟ ವಿಶೇಷ ಅಭಿರುಚಿಯ ರುಚಿರುಚಿ ಖಾದ್ಯಗಳನ್ನು ಉಣಬಡಿಸುವ ಹೋಟೆಲ್/ ಕ್ಯುಸಿನ್ ಗಳನ್ನು ಪ್ರಪಂಚದಾದ್ಯಂತ ಸ್ಥಾಪಿಸಿ ಎಲ್ಲ ಬಗೆಯ ಜನರ ಎಲ್ಲರ ನಾಲಿಗೆಯ ಅಚ್ಚುಮೆಚ್ಚಿನ ಔತಣದ ಅಮ್ಮ ಎನಿಸಿಕೊಂಡರು. ಬಹುಮುಖ ಪ್ರತಿಭೆಯ ಆಶಾಭೋಸ್ಲೆ ಹೀರೋಯಿನ್ಸ್ ಮೆಲೋಡಿ ಹಾಡಿಗೂ ಜೈ ಹೆಲೆನ್ ರಂಥ ಐಟಂ ಡ್ಯಾನ್ಸ್ ಸಾಂಗ್ಗೂ ಸೈ ಮಾತ್ರವಲ್ಲ ಉತ್ತಮ ನೃತ್ಯಗಾರ್ತಿಯೂ ಹೌದು.

ಕಳೆದ 80ವರ್ಷ ಕಾಲ ಕನ್ನಡ ಭಾಷೆ ಸೇರಿದಂತೆ ಪ್ರಪಂಚದ 22 ಭಾಷೆಗಳಲ್ಲಿ 12000ಕ್ಕೂ ಹೆಚ್ಚಿನ ಗೀತೆ-ಚಿತ್ರಗೀತೆ ಹಾಡುವ ಮೂಲಕ ಗಿನ್ನಿಸ್ ಪುಸ್ತಕದ ದಾಖಲೆಯ ಪುಟ ಸೇರಿದ ವೀರವನಿತೆ. 500ಕ್ಕೂ ಹೆಚ್ಚಿನ ಹಾಡುಗಳು ಹೆಲೆನ್ ರವರ ಡ್ಯಾನ್ಸ್ ಗೆ ಹಾಡಿದ್ದಲ್ಲದೇ ಹೆಲೆನ್ ನಟಿಸಿದ ಸಿನಿಮಾಗಳ ಪಾತ್ರಗಳಿಗೆ ಆಕೆಗೆ ಕಂಠದಾನವನ್ನೂ ಮಾಡಿದ್ದಾರೆ.
ಭಾರತ ಸರ್ಕಾರದ ಪದ್ಮವಿಭೂಷಣ ಪುರಸ್ಕಾರ, ಪ್ರತಿಷ್ಠಿತ ದಾದಾಸಾಹೇಬಫಾಲ್ಕೆ ಪ್ರಶಸ್ತಿ ಒಳಗೊಂಡಂತೆ ಹಲವಾರು ರಾಜ್ಯ ಪ್ರಶಸ್ತಿ ರಾಷ್ಟ್ರ ಪ್ರಶಸ್ತಿ ಫಿಲಂಫೇರ್ ಪ್ರಶಸ್ತಿ ಪಡೆದರು. ಡಾ.ರಾಜಕುಮಾರ್ ನಟಿಸಿದ ದೂರದಬೆಟ್ಟ ಚಿತ್ರದಲ್ಲಿ ಈ ಸ್ವರ ಸರಸ್ವತಿ ಹಾಡಿದ ಕನ್ನಡ ಚಿತ್ರಗೀತೆ: “ಸವಾಲು ಹಾಕಿ ಸೋಲಿಸೊ ಎಲ್ಲರ….” ಪಿ.ಬಿ.ಶ್ರೀನಿವಾಸ್ ಜತೆ ಹಾಡಿದ ಈ ಗೀತೆಗೆ ಸಂಗೀತ ಸಾರ್ವಭೌಮ ಜಿ.ಕೆ.ವೆಂಕಟೇಶ್ ಸಂಗೀತ ನೀಡಿದ್ದರು.

ಮಹಾನ್ ಗಾಯನಕಿಶೋರಿ ನಳಪಾಕ ಆಹಾರಿ ನಗುಮೊಗದ ನಾರಿ ನೃತ್ಯಕಿಶೋರಿ ಇತ್ಯಾದಿ ಪ್ರತಿಭೆಗಳ ಪರ್ವತವೇ ಆಗಿದ್ದ ಅಶಾಭೋಸ್ಲೇ 93 ವಸಂತ ಋತುಗಳನ್ನು ಕಂಡುಂಡರು. ಕಡೆಗೂ ಇವರ ತವರುಮನೆಯ ಮಂಗೇಶಿದೇವರ ಆಣತಿಯಂತೆ ಈದಿನ 12ನೇ ಏಪ್ರಿಲ್ 2026ರಂದು ಭಾನುವಾರ ಅಂಗಾಂಗ ವೈಫಲ್ಯದ ಕಾರಣ ಮುಂಬೈ ಆಸ್ಪತ್ರೇಲಿ ತಮ್ಮ ಕೊನೆ ಉಸಿರೆಳೆದರು.

ತನ್ನದೇ ಸುಮಧುರ ಕಂಠದಿಂದ ಹಾಡಿ ಕುಣಿಸುವಂತೆ, ತಲೆದೂಗುವಂತೆ ಮಾಡುತ್ತಿದ್ದ ಆಶಾ ಭೋಸ್ಲೆ ತಮ್ಮ ವೈಯಕ್ತಿಕ ಬದುಕಿನಲ್ಲಿ ಸುಖಕ್ಕಿಂತ ದುಃಖವನ್ನುಂಡಿದ್ದೇ ಜಾಸ್ತಿ ಎಂದರೆ ತಪ್ಪಾಗಲಾರದು. ಏಕೆಂದರೆ ಮೊದಲ ವಿವಾಹದ ಸಂಬಂಧ ಮುರಿದು ಬಿದ್ದ ನಂತರ ಎರಡನೇ ಮದುವೆಯಾದರೂ ಸಹ ನೆಮ್ಮದಿಯ ಜೀವನ ಸಿಗಲೇಇಲ್ಲ. ಕಾಲಕ್ರಮೇಣ ಹೆತ್ತ ಮಗಳು ಆತ್ಮಹತ್ಯೆಗೆ ಶರಣಾದಳು, ಓರ್ವ ಮಗನು ಕ್ಯಾನ್ಸರ್ ನಂಥ ಭಯಂಕರ ಖಾಯಿಲೆಗೆ ತುತ್ತಾದನು. ಇಷ್ಟೆಲ್ಲ ನೋವಿನ ದುರಂತ ಜೀವನದ ನಡುವೆಯೂ ಸದಾ ನಗುನಗುತ್ತ ಎಲ್ಲರನ್ನು ನಗಿಸುತ್ತಿದ್ದ ದುರಂತಮಯ ಜೀವನದ ಜೀವ ಅವರಾಗಿದ್ದರು. ಆದರೆ ನಟಸಾರ್ವಭೌಮ ಡಾ.ರಾಜ್ಕುಮಾರ್ ನಿಧನರಾದ ದಿನಾಂಕದಂದೇ ಅವರು ನಿಧನರಾದುದು ಎಂಥ ಅದ್ಭುತ ಆಶ್ಚರ್ಯ?!

ತುಂಬಿದ ಕುಟುಂಬದಲ್ಲಿ ಹುಟ್ಟಿಬೆಳೆದ ಆಶಾಭೋಸ್ಲೆ ತಮ್ಮದೇ ಆದ ತುಂಬು ಜೀವನ ನಡೆಸುತ್ತಾ ಇಳಿ ವಯಸ್ಸಿನಲ್ಲಿ ಮಕ್ಕಳು ಮೊಮ್ಮಕ್ಕಳು ಬಂಧು ಬಳಗದ ಜೊತೆಯಲ್ಲಿ ಖುಷಿಖುಷಿಯಲ್ಲಿ ಬದುಕು ಸಾಗಿಸುವಾಗಲೆ ಆಕಾಶವಾಣಿಯು: “ಇಹಲೋಕದಲ್ಲಿ ಹಾಡಿ ಕುಣಿದುದು ಸಾಕು, ಸ್ವರ್ಗಲೋಕದಲ್ಲೂ ಹಾಡಿ ಕುಣಿದು ಎಲ್ಲರನ್ನು ಮನರಂಜಿಸಲು ಬನ್ನಿರಿ” ಎಂದು ವಿಧಿಯು ನೀಡಿದ ಆಹ್ವಾನದ ಮೇರೆಗೆ ಈ ಲೋಕದ ಸಂಬಂಧ ಮುಗಿಸಿ ಪರಲೋಕ ಸೇರಿದರೂ, ಇಡೀವಿಶ್ವದ ಸ್ವರಸಾಮ್ರಾಜ್ಞಿಯು ಆಚಂದ್ರಾರ್ಕ ಅಜರಾಮರ.
ಗಾನಕೋಗಿಲೆಯೆ ನಿಮಗಿದೋ ಕುಮಾರಕವಿಯ ಮನಃಪೂರ್ವಕ ಶ್ರದ್ಧಾಂಜಲಿ, ಹೃದಯಪೂರ್ವಕ ಭಾಷ್ಪಾಂಜಲಿ…









