ವಿಜಯಕುಮಾರಿ, ವಿಜಯಲಕ್ಷ್ಮಿ, ವಂದನಾ ಹೀಗೆ ಹಲವು ಹೆಸರುಗಳಿಂದ ಕರೆಯಿಸಿಕೊಂಡು ಅವತ್ತಿನ ಕಾಲದಲ್ಲಿ ಸ್ಯಾಂಡಲ್ ವುಡ್ ನಲ್ಲಿ ಸುಮಾರು ಇಪ್ಪತ್ತೈದಕ್ಕು ಹೆಚ್ಚು ಸಿನಿಮಾಗಳಲ್ಲಿ ಮಿಂಚಿದ್ದ ಈ ಹಿರಿಯ ನಟಿಯ ಬಗ್ಗೆ ಹೆಚ್ಚಿನವರಿಗೆ ಗೊತ್ತೇ ಇಲ್ಲ ಎನ್ನಬೇಕು.. ಆದರೂ ಇವರ ಅಭಿನಯ ಮತ್ತು ಚಿತ್ರರಂಗಕ್ಕೆ ನೀಡಿದ ಕೊಡುಗೆಗಳನ್ನು ಮರೆಯುವಂತಿಲ್ಲ. ಇವರ ಬಗ್ಗೆ ಇರುವ ಮಾಹಿತಿಯನ್ನು ಕಲೆ ಹಾಕಿ ನಮ್ಮ ಮುಂದಿಡುವಲ್ಲಿ ಹಿರಿಯಬರಹಗಾರರಾದ ಕುಮಾರಕವಿ ನಟರಾಜ್ ಅವರು ಶ್ರಮವಹಿಸಿರುವುದು ಶ್ಲಾಘನೀಯ…
ಮೂಲತಃ ಬಳ್ಳಾರಿಯವರಾದ ಬಿ.ವಿಜಯಕುಮಾರಿ 1943ನೇ ಇಸವಿ ಆಸುಪಾಸಿನ ಕಾಲದಲ್ಲಿ ರೆಡ್ಡಿ ಸಮುದಾಯದ ಒಂದು ಮಧ್ಯಮ ವರ್ಗದ ಕುಟುಂಬದಲ್ಲಿ ಜೇಷ್ಠ ಪುತ್ರಿಯಾಗಿ ಜನಿಸಿದರು. ಲೋಯರ್ ಸೆಕಂಡರಿ ವಿದ್ಯಾರ್ಥಿನಿಯಾಗಿದ್ದಾಗ ಆಕಸ್ಮಿಕವಾಗಿ ನಾಟಕವೊಂದರಲ್ಲಿ ಪುಟ್ಟಪಾತ್ರ ಮಾಡುವ ಅವಕಾಶ ಸಿಕ್ಕಿತು. ವಿದ್ಯಾಭ್ಯಾಸದ ಕಡೆಗೆ ಆಸಕ್ತಿ ತೋರದೇ ಅಭಿನಯದ ಕಡೆಗೇ ಹೆಚ್ಚು ಗಮನ ಶ್ರದ್ಧೆ ನೀಡುತ್ತಿದ್ದ ಪರಿಣಾಮ ಬಹುಬೇಗ ರಂಗಭೂಮಿಯ ಖ್ಯಾತ ಕಲಾವಿದೆಯಾಗಿ ಹೊರಹೊಮ್ಮಿದರು.

ಕಂಪನಿ ನಾಟಕಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸುವಾಗ ಆಗಿನ ಕಾಲದ ಖ್ಯಾತ ನಿರ್ಮಾಪಕ, ನಿರ್ದೇಶಕ ಜಿ.ವಿ.ಅಯ್ಯರ್ ಅವರ ಕಣ್ಣಿಗೆ ಬಿದ್ದರೂ ಅದೃಷ್ಟದ ಬಾಗಿಲು ತೆರೆಯಲಿಲ್ಲ. ಆದರೆ 1961ನೇ ಇಸವಿಯಲ್ಲಿ ಟಿ.ವಿ.ಸಿಂಗ್ ಠಾಕೂರ್ ನಿರ್ದೇಶನದಲ್ಲಿ ಎ.ಕೆ.ವೇಲನ್ ನಿರ್ಮಿಸಿದ ‘ಕಣ್ತೆರೆದುನೋಡು’ ಚಿತ್ರದ ಮೂಲಕ ಎಂಟ್ರಿ ಸಿಕ್ಕಿತು. ಅಂದಿನಿಂದ ಅದೃಷ್ಟ ಖುಲಾಯಿಸಿ ಮತ್ತೆಂದು ಹಿಂದಿರುಗಿ ನೋಡದಂತೆ ಮುಂದೆ ಸಾಗಿತ್ತು ಇವರ ಸಿನಿ ಪಯಣ.
ಕಾಲಕ್ರಮೇಣ ವಿಜಯಲಕ್ಷ್ಮಿ ಎಂಬ ಹೆಸರಿಂದ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಈ ಹೆಸರನ್ನೂ ಬದಲಾವಣೆ ಮಾಡಿದ ನಿರ್ಮಾಪಕಿ, ನಿರ್ದೇಶಕಿ ರೇವತಿ ಕಲ್ಯಾಣಕುಮಾರ್ ಇವರಿಗೆ ವಂದನಾ ಎಂದು ಪುನರ್ ನಾಮಕರಣ ಮಾಡಿದ್ದು ಇತಿಹಾಸ. ಮಿನುಗುತಾರೆ ಕಲ್ಪನ ಮತ್ತು ಅಭಿನಯ ಶಾರದೆ ಜಯಂತಿ ಇವರಿಬ್ಬರಿಗೂ ಮುಂಚೆಯೇ ಸಿನಿಮಾರಂಗ ಪ್ರವೇಶಿಸಿದ್ದ ಈ ಸೀನಿಯರ್ ನಟಿ ತೆಲುಗು ಮತ್ತು ತಮಿಳು ಚಿತ್ರರಂಗದಲ್ಲೂ ಹೆಸರುವಾಸಿ ಆದರು.

ಕನ್ನಡ ಚಿತ್ರರಂಗದ ಪ್ರಪ್ರಥಮ ಸೂಪರ್ ಸ್ಟಾರ್ ಕಲ್ಯಾಣ್ಕುಮಾರ್ ನಟಿಸಿದ ‘ತಾಯಿಕರುಳು’ ಫಿಲಂ ಮೂಲಕ ಹೀರೋಯಿನ್ಆಗಿ ಮಿಂಚಿದರು! ಕ್ರಮೇಣ ಕೇವಲ 9 ವರ್ಷದಷ್ಟು ಕಡಿಮೆ ಅವಧಿಯಲ್ಲಿ ಖ್ಯಾತ ಹೀರೋಗಳ ಜತೆ ಅಭಿನಯಿಸಿದ ಬ್ಲಾಕ್ ಬಸ್ಟರ್ ಸಿನಿಮಾಗಳು ಯಾವುದು ಎಂದರೆ ಲಾಯರಮಗಳು, ಪೋಸ್ಟ್ ಮಾಸ್ಟರ್, ದೇವಮಾನವ, ಮಮತೆ, ಕಲ್ಲುಸಕ್ಕರೆ, ಮಿಸ್ ಬೆಂಗಳೂರ್, ಧನಪಿಶಾಚಿ, ಮೈಸೂರುಟಾಂಗ, ಮಂಕುದಿಣ್ಣೆ, ಚಿನ್ನಾರಿಪುಟ್ಟಣ್ಣ, ಬಂಗಾರಿ, ನಿರಪರಾಧಿ, ಪ್ರವಾಸಿಮಂದಿರ, ಕಣ್ಣಮುಚ್ಚಾಲೆ, ಬೋರೇಗೌಡ ಬೆಂಗಳೂರಿಗೆ ಬಂದ, ರಾಜಶೇಖರ, ಬೀದಿಬಸವಣ್ಣ, ಬ್ಲಾಕ್ ಮಾರ್ಕೆಟ್, ಮುಕುಂದ ಚಂದ್ರ ಮುಂತಾದ 25ಕ್ಕೂ ಹೆಚ್ಚು ಚಿತ್ರಗಳಲ್ಲಿ ಬಿಡುವಿಲ್ಲದಂತೆ ದುಡಿದು ಹಣ-ಕೀರ್ತಿ ಸಂಪಾದಿಸಿದರು.

1968ರಲ್ಲಿ ರಾಜ್ಕುಮಾರ್ ರವರ 100ನೇ ಫಿಲಂ “ಭಾಗ್ಯದಬಾಗಿಲು” ಚಿತ್ರದ ನಾಯಕಿ ನಟಿಯಾಗಿ ಇನ್ನೂ ಹೆಚ್ಚಿನ ಫೇಮಸ್ ಆದರು. ಹೀಗೇ ಸಿನಿ ಪಯಣ ಓವರ್ ಸ್ಪೀಡಾಗಿ ಹೋಗುವಾಗ ವಿಧಿಲೀಲೆ ಎಂಬಂತೆ 1971ರಲ್ಲಿ ದಿಢೀರೆಂದು ಬ್ರೇಕ್ ಹಾಕಲ್ಪಟ್ಟು ಸಿನಿಮಾ ಹಾದಿಯಲ್ಲಿ ಫುಲ್ ಸ್ಟಾಪ್ ಕಂಡರು! ಇದಕ್ಕೆಲ್ಲ ಕಾರಣ ಏನೆಂದು ಚಿತ್ರರಂಗದ ಪ್ರತಿಯೊಬ್ಬರು ಹುಡುಕಲಾರಂಭಿಸಿದರು. ಇದ್ದಕ್ಕಿದ್ದಂತೆ 1972ರ ಒಂದು ದಿನ ವಂದನ ಚಿತ್ರರಂಗದಿಂದ ವಾಲಂಟರಿ ರಿಟೈರ್ಮೆಂಟ್ ತೆಗೆದುಕೊಂಡರು ಎಂಬ (ಗಾಳಿ)ಸುದ್ದಿಯು ಕೆಲವು ಪತ್ರಿಕೆಗಳಲ್ಲಿ ಪ್ರಕಟವಾಯಿತು. ಈ ಅನಿರೀಕ್ಷಿತ ಬ್ರೇಕಿಂಗ್ ನ್ಯೂಸ್ ಮಿಂಚಿನಂತೆ ಎಲ್ಲೆಡೆ ಹರಡಿ ಎಲ್ಲರಿಗೂ ಆಶ್ಚರ್ಯ ತಂದಿತ್ತು. ಸ್ಯಾಂಡಲ್ ವುಡ್ನ ಇತಿಹಾಸದಲ್ಲಿ ಸ್ವಯಂ ನಿವೃತ್ತಿ ಪಡೆದ ಪ್ರಪ್ರಥಮ ನಟಿ ಎನಿಸಿದರು!

ಅಂದಿನಿಂದ ಇಂದಿನವರೆಗೂ ಇವರ ಬಗ್ಗೆ ಯಾವುದೇ ನಿಖರ ಮಾಹಿತಿಯಾಗಲಿ ವಿವರವಾಗಲೀ ಲಭ್ಯವಿಲ್ಲ. ಇಂತಹ ಓರ್ವ ಜನಪ್ರಿಯ ನಟಿ ಅಚ್ಚ ಕನ್ನಡತಿ ವಂದನಾರವರ ವರ್ತಮಾನದ ಪರಿಸ್ಥಿತಿ! ಅಸ್ತಿತ್ವ!? ಎಲ್ಲಿದ್ದಾರೆ! ಹೇಗಿದ್ದಾರೆ! ಕಣ್ಮರೆ ಆದರೋ! ಎನ್ನುವ ಬಗ್ಗೆ ಎಲ್ಲವೂ ಒಂದು ನಿಗೂಢ ಪ್ರಶ್ನೆಯಾಗೇ ಉಳಿದು ಬಿಟ್ಟಿದೆ? ಬಹುಶಃ ಎಲ್ಲರಂತೆ ಇವರೂ ಸಹ ಮುಂದುವರೆದು ಸಾಗಿದ್ದಿದ್ದರೆ ಕನಿಷ್ಠ 100 ಸಿನಿಮಾಗಳ ಯಶಸ್ವಿ ನಟಿ ಆಗುತ್ತಿದ್ದರೇನೊ ಬಲ್ಲವರಾರು?! ಹಲವು ಚಿತ್ರಗಳಲ್ಲಿ ಇವರು ಅಮೋಘವಾಗಿ ಅಭಿನಯಿಸಿದ್ದಕ್ಕೆ ಕೆಲವು ಪ್ರತಿಷ್ಠಿತ ಬಹುಮಾನ ಸೇರಿದಂತೆ ರಾಜ್ಯಪ್ರಶಸ್ತಿಯನ್ನೂ ಗಳಿಸಿದ್ದರು.

ವಂದನಾ ನಟಿಸಿದ ಸಿನಿಮಾಗಳ ಬಗ್ಗೆ ನೋಡುವುದಾದರೆ ಕಣ್ತೆರೆದುನೋಡು, ತಾಯಿಕರುಳು, ಬಂಗಾರಿ, ಲಾಯರಮಗಳು, ದೇವಮಾನವ, ಪೋಸ್ಟ್ ಮಾಸ್ಟರ್, ಬ್ಲಾಕ್ಮಾರ್ಕೆಟ್, ಕಲ್ಲುಸಕ್ಕರೆ, ರಾಜಶೇಖರ, ಮುಕುಂದಚಂದ್ರ, ಮಿಸ್ಬೆಂಗಳೂರ್, ಬೀದಿಬಸವಣ್ಣ, ಧನಪಿಶಾಚಿ, ಭಾಗ್ಯದಬಾಗಿಲು, ಮಮತೆ, ಮೈಸೂರುಟಾಂಗ, ಮಂಕುದಿಣ್ಣೆ, ಚಿನ್ನಾರಿಪುಟ್ಟಣ್ಣ, ನಿರಪರಾಧಿ, ಪ್ರವಾಸಿಮಂದಿರ, ಕಣ್ಣುಮುಚ್ಚಾಲೆ, ಬೋರೇಗೌಡಬೆಂಗಳೂರಿಗೆಬಂದ, ನಿರಪರಾಧಿ, ವಿಜಯ್ವಿಕ್ರಮ್ ಮುಂತಾದವುಗಳಾಗಿವೆ. ಇಷ್ಟು ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆದರೂ ಇದ್ದಕ್ಕಿಂತೆಯೇ ಬಣ್ಣದ ಬದುಕಿನಿಂದ ದೂರವಾಗಿ ಎಲೆಮರೆಯ ಕಾಯಿಯಂತೆ ಉಳಿದು ಹೋಗಿದ್ದು ನಿಜಕ್ಕೂ ಅಚ್ಚರಿಯ ಸಂಗತಿಯೇ…









