ಮೈಸೂರು(ಹೆಚ್.ಪಿ.ನವೀನ್ ಕುಮಾರ್) : ಗುರು ಪೂರ್ಣಿಮೆ ಹಿನ್ನೆಲೆಯಲ್ಲಿ ನಗರದ ಹೆಬ್ಬಾಳದಲ್ಲಿ ಇರುವ ಬಸವಮಾರ್ಗ ವ್ಯಸನಮುಕ್ತ ಮತ್ತು ಪುನರ್ವಸತಿ ಕೇಂದ್ರದ ವತಿಯಿಂದ ಬುಧವಾರ ವಿವಿಧ ಧಾರ್ಮಿಕ ಕಾರ್ಯ ನೆರವೇರಿಸಿ ನೂರಾರು ಜನರಿಗೆ ಅನ್ನದಾನ ಮಾಡಲಾಯಿತು.

ಸಂಸ್ಥೆಯ ಮುಂಭಾಗ ಪ್ರತಿಷ್ಠಾಪಿಸಲಾಗಿದ್ದ ಶಿವ, ನಂದಿ ಹಾಗೂ ಗಣಪತಿ ವಿಗ್ರಹಗಳಿಗೆ ಲೋಕ ಕಲ್ಯಾಣಾರ್ಥ ವಿಶೇಷ ಪೂಜೆ ಸಲ್ಲಿಸಲಾಯಿತು. ಪುರೋಹಿತರಾದ ಸಾಗರ್, ಪವನ್ ಅವರು ಶಿವ ಅಷ್ಠೋತ್ತರ ಜಪಿಸಿ ಪೂಜೆ ಮಾಡಿದರು. ಬಳಿಕ ಸಾರ್ವಜನಿಕರಿಗೆ ಅನ್ನದಾನ ಮಾಡಲಾಯಿತು.

ಈ ವೇಳೆ ಮಾತನಾಡಿದ ಸಂಸ್ಥೆಯ ಸಂಸ್ಥಾಪಕ ಎಸ್.ಬಸವರಾಜು, ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ಮತ್ತು ಆತ್ಮತೃಪ್ತಿ ಲಭಿಸುತ್ತದೆ. ಶುದ್ಧ ಮನಸ್ಸಿನಿಂದ ಮಾಡುವ ಪೂಜೆ, ಪ್ರಾರ್ಥನೆ ಹಾಗೂ ಸೇವಾ ಮನೋಭಾವದ ಕೆಲಸಗಳು ವ್ಯಕ್ತಿಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದರು.

ಭಕ್ತಿಯು ಎಲ್ಲರನ್ನೂ ಒಗ್ಗೂಡಿಸಿ, ಪರಸ್ಪರ ಪ್ರೀತಿ ಹಾಗೂ ಸಹಾನುಭೂತಿಯನ್ನು ಬೆಳೆಸುತ್ತದೆ. ಸಮಾಜದಲ್ಲಿ ಮೇಲು, ಕೀಳು ಎನ್ನುವ ಭಾವನೆ ತೊರೆದು ಸರ್ವ ಸಮನ್ವಮಯದ ಮನೋಭಾವನೆಯಿಂದ ಆಚರಿಸುವ ಧಾರ್ಮಿಕ ಕಾರ್ಯಗಳಲ್ಲಿ ಮನಸ್ಸು ಶುದ್ಧೀಕರಿಸುವ ಅಗಾಧ ಶಕ್ತಿ ಅಡಗಿದೆ. ಧಾರ್ಮಿಕ ಕಾರ್ಯಗಳಿಗೆ ಹೆಚ್ಚಿನ ಒತ್ತು ನೀಡಿದಾಗ ಸೌಹಾರ್ದಯುತ ಜೀವನ ನಡೆಸಲು ಸಹಕಾರಿಯಾಗುತ್ತದೆ ಎಂದರು.

ಈ ವೇಳೆ ಉದ್ಯಮಿ ಹೇಮಂತ್, ಬಸವಮಾರ್ಗ ಸಂಸ್ಥೆಯ ವ್ಯವಸ್ಥಾಪಕ ಮಹೇಶ್, ಮಂಜುನಾಥ್, ಬಸವರಾಜು, ಲಕ್ಷ್ಮಣ್ ಆನಂದ್, ಮೋಹನ್, ರಾಘವೇಂದ್ರ, ಅಭಿಶೇಕ್, ಶ್ರೀಧರ್, ನಿಶ್ಚಿತಾ, ನೇತ್ರಾವತಿ, ಅಭಿ, ಗೌತಮ್, ಹೇಮಂತ್, ಪ್ರಜ್ವಲ್, ರಾಜು ಇತರರು ಇದ್ದರು.








