ಮೈಸೂರು(ಹೆಚ್.ಪಿ.ನವೀನ್ ಕುಮಾರ್): ಬಸವಮಾರ್ಗ ಫೌಂಡೇಶನ್ ವತಿಯಿಂದ ಆಯೋಜಿಸಿರುವ ಉಚಿತ ವಸತಿ ಸಹಿತ ಬೇಸಿಗೆ ಶಿಬಿರದ ಹಿನ್ನೆಲೆಯಲ್ಲಿ ಮಂಗಳವಾರ ಶಿಬಿರದ ಮಕ್ಕಳಿಗೆ ಉಚಿತವಾಗಿ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು. ಹೆಬ್ಬಾಳಿನಲ್ಲಿರುವ ಫೌಂಡೇಶನ್ ನಲ್ಲಿ ಆಯೋಜಿಸಿದ್ದ ಶಿಬಿರದಲ್ಲಿ ವಿಜಯನಗರದಲ್ಲಿರುವ ಕಾಂಗರೂ ಕೇರ್ ಆಸ್ಪತ್ರೆ ವೈದ್ಯಕೀಯ ಸಿಬ್ಬಂದಿ ಮಕ್ಕಳ ಆರೋಗ್ಯ ತಪಾಸಣೆ ಮಾಡಿದರು.

ವೈದ್ಯರಾದ ಡಾ.ನೀತು ಪ್ರಿಯಾ, ಡಾ.ಹರ್ಷಿತಾ, ವೈದ್ಯಕೀಯ ಸಿಬ್ಬಂದಿಗಳಾದ ಸವಿತಾ, ಗಣೇಶ್ ರಾವ್, ರಚನಾ, ಪೂಜಾ ಅವರು ಮಕ್ಕಳಿಗೆ ಆರೋಗ್ಯ ತಪಾಸಣೆ ಮಾಡಿದರು.

ಇದಕ್ಕೂ ಮೊದಲು ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಡಾ. ನೀತು ಪ್ರಿಯಾ ಅವರು ಮಕ್ಕಳಿಗೆ ಕಿವಿ, ಮೂಗು ಮತ್ತು ಗಂಟಲು ಆರೋಗ್ಯ ಕುರಿತು ಮಕ್ಕಳಲ್ಲಿ ಜಾಗೃತಿ ಮೂಡಿಸಿದರು. ಕಿವಿ, ಮೂಗು, ಗಂಟಲು ಭಾಗಗಳಲ್ಲಿ ಸೋಂಕುಗಳು ಕಾಣಿಸಿಕೊಂಡರೆ ತೆಗೆದುಕೊಳ್ಳಬೇಕಾಗದ ಮುಂಜಾಗ್ರತಾ ಕ್ರಮಗಳ ಕುರಿತು ಮಕ್ಕಳಿಗೆ ಅರಿವು ಮೂಡಿಸಿದರು.

ಶ್ರೂಷಕರಾದ ಸವಿತಾ, ಕೈಗಳ ಸ್ವಚ್ಛತೆ ಕುರಿತು ಅರಿವು ಮೂಡಿಸಿದರು. ಕೈಗಳನ್ನು ಹೇಗೆ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು, ಎಷ್ಟು ಬಗೆಯಾಗಿ ಕೈ ಮತ್ತು ಬೆರಳುಗಳನ್ನು ಸ್ವಚ್ಛಮಾಡಿಕೊಳ್ಳಬೇಕು ಎಂದು ಮಕ್ಕಳಿಗೆ ಜಾಗೃತಿ ಮೂಡಿಸಿದರು.

ಬಸವಮಾರ್ಗ ಫೌಂಡೇಶನ್ ನ ಸಂಸ್ಥಾಪಕ ಅಧ್ಯಕ್ಷರಾದ ಎಸ್.ಬಸವಣ್ಣ ಅವರು ಮಾತನಾಡಿ, ನಮ್ಮ ಸಂಸ್ಥೆಯಿಂದ ಉಚಿತವಾಗಿ ವಸತಿ ಸಹಿತ ಬೇಸಿಗೆ ಶಿಬಿರವನ್ನು ಆಯೋಜಿಸಲಾಗಿತ್ತು.

ಈ ಶಿಬಿರದಲ್ಲಿ ಮಕ್ಕಳಿಗೆ ಆರೋಗ್ಯ ಕುರಿತು ಅರಿವು ಮೂಡಿಸುವ ಸಲುವಾಗಿ ಉಚಿತ ಆರೋಗ್ಯ ಶಿಬಿರವನ್ನು ಕಾಂಗರೂ ಕೇರ್ ಆಸ್ಪತ್ರೆ ಸಹಯೋಗದೊಂದಿಗೆ ಆಯೋಜನೆ ಮಾಡಲಾಗಿತ್ತು.

ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿಗಳು ಮಕ್ಕಳನ್ನು ತಪಾಸಣೆ ಮಾಡಿ, ಚಿಕಿತ್ಸೆ ಜತೆಗೆ, ಸಲಹೆ ಸೂಚನೆಗಳನ್ನು ನೀಡಿದ್ದಾರೆ ಎಂದರು.








