ಕುಮಾರಕವಿ ಬಿ.ಎನ್. ನಟರಾಜರವರು ರಚಿಸಿದ “ಚಂದನವನ ಚರಿತ್ರೆ” ಕೃತಿಯ 5 ಸಂಪುಟಗಳು ಬಿಡುಗಡೆ
ಕೆನರಾಬ್ಯಾಂಕ್ ಉದ್ಯಾನವನ ಚಪ್ಪಾಳೆ ಗುಂಪಿನ ಗೆಳೆಯರ ಬಳಗದಿಂದ ಪುಸ್ತಕ ಲೋಕಾರ್ಪಣೆ

ಬೆಂಗಳೂರು: ಚಂದನವನದ ನಟ, ನಟಿಯರು ಕಲಾವಿದರು ಸೇರಿದಂತೆ ಸಮಗ್ರ ವಿಚಾರಗಳನ್ನು ಅರಿತಿರುವ ಹಿರಿಯ ಬರಹಗಾರರಾದ ಕುಮಾರಕವಿ ನಟರಾಜ್ ಅವರು ಈಗಾಗಲೇ ಚಂದನವನಕ್ಕೆ ಸಂಬಂಧಿಸಿದಂತೆ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಲೇಖನಗಳನ್ನು ಬರೆದಿದ್ದಾರೆ. ಅವು ಪತ್ರಿಕೆ ಸೇರಿದಂತೆ ಡಿಜಿಟಲ್ ಮಾಧ್ಯಮಗಳಲ್ಲಿ ಪ್ರಕಟವಾಗಿವೆ. ಆದರೆ ಇದೀಗ ಎಲ್ಲವನ್ನು ಒಂದುಗೂಡಿಸಿ ಕೊಡುವ ಪ್ರಯತ್ನ ಮಾಡಿದ್ದು ಅದರ ಪ್ರತಿಫಲವೇ ಇವತ್ತಿನ “ಚಂದನವನ ಚರಿತ್ರೆ” ಕೃತಿಯ 5 ಸಂಪುಟಗಳಾಗಿವೆ. ಓದುಗರು ಕೊಂಡು ಓದಬಹುದಾಗಿದೆ..

ಈ ಸಂಬಂಧ ಚಂದನವನ ಚರಿತ್ರೆ” ಕೃತಿಯ 5 ಸಂಪುಟಗಳ ಲೋಕಾರ್ಪಣೆಯಾಗಿದೆ. ಮಾ.13ರ ಶುಕ್ರವಾರ ಬೆಳಗ್ಗೆ ನಗರದ ಪ್ರತಿಷ್ಠಿತ ಕೆನರಾಬ್ಯಾಂಕ್ ಉದ್ಯಾನವನ ಚಪ್ಪಾಳೆ ಗುಂಪಿನ ಗೆಳೆಯರ ಬಳಗದ ವತಿಯಿಂದ ಪುಸ್ತಕ ಬಿಡುಗಡೆ ಕಾರ್ಯಕ್ರಮ ವಿಜೃಂಭಣೆಯಿಂದ ನಡೆದಿದೆ.

ಕರ್ನಾಟಕ ರಾಜ್ಯದ ಹಿರಿಯ ಬರಹಗಾರರಾದ ಮೈಸೂರು ಮೂಲದ ಕುಮಾರಕವಿ ಬಿ.ಎನ್. ನಟರಾಜರವರು ರಚಿಸಿದ “ಚಂದನವನ ಚರಿತ್ರೆ” ಎಂಬ ಕೃತಿಯ 5 ಸಂಪುಟಗಳು ಏಕ ಕಾಲಕ್ಕೆ ಲೋಕಾರ್ಪಣೆಗೊಂಡಿರುವುದು ಖುಷಿ ತಂದಿದೆ. ಈ ಕಾರ್ಯಕ್ರಮಕ್ಕೆ ನೂರಾರು ಗಣ್ಯರು ಮಹಿಳೆಯರು ಮಕ್ಕಳು ಸಾಕ್ಷಿಯಾದರು.

ಮೊದಲಿಗೆ ಉಮಾಪತಿ ಅವರಿಂದ ಪ್ರಾರ್ಥನೆಯ ನಂತರ ಗಂಗಾಧರ್ ರವರು ಸ್ವಾಗತ ಕೋರಿದರು. ನಿವೃತ್ತ ಐ.ಪಿ.ಎಸ್. ಅಧಿಕಾರಿಯೂ ಚಪ್ಪಾಳೆಗುಂಪಿನ ಗುರೂಜಿಯೂ ಆದ ಸನ್ಮಾನ್ಯ ಸಿದ್ದಲಿಂಗಯ್ಯ ನವರು ಚಂದನವನ ಚರಿತ್ರೆಯ ಐದು ಸಂಪುಟಗಳನ್ನು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಗುರೂಜಿ ಜತೆಗೂಡಿದ ಶ್ರೀಮತಿ ಪ್ರಭಾವತಿ, ಶ್ರೀಮತಿ ಗಾಯತ್ರಿ ಹಾಗೂ ಶ್ರೀ ಗಂಗಾಧರ್ ಅವರುಗಳೂ ಸಕ್ರಿಯವಾಗಿ ಭಾಗವಹಿಸಿ ಸಂಪೂರ್ಣ ಸಹಕಾರ ನೀಡುವ ಮೂಲಕ ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮವು ಅತ್ಯಂತ ವರ್ಣರಂಜಿತವಾಗಿ ನೆರವೇರಲು ಅನುವು ಮಾಡಿಕೊಟ್ಟರು.

ಕೃತಿಗಳನ್ನು ಕುರಿತು ಸಿದ್ಧಲಿಂಗಯ್ಯನವರು ಅಮೋಘವಾಗಿ ಮಾತನಾಡುತ್ತಾ, ಬಿ.ಎನ್. ನಟರಾಜರವರು ಬರೆದಿರುವ ಚಂದನವನ ಚರಿತ್ರೆಯ 5 ಸಂಪುಟಗಳಲ್ಲಿ: 1930 ರಿಂದ 2025 ವರೆಗಿನ ಇಡೀ ಕನ್ನಡ ಚಿತ್ರರಂಗದ ಇತಿಹಾಸ, 5000ಕ್ಕು ಹೆಚ್ಚು ಸಿನಿಮಗಳ ಬಗ್ಗೆ, 2000ಕ್ಕೂ ಹೆಚ್ಚಿನ ನಟ,ನಟಿ,ತಾಂತ್ರಿಕವರ್ಗ, ಮುಂತಾದವರ ಬಗ್ಗೆ, ರೀಮೇಕ್, ಡಬ್ಬಿಂಗ್, ರಾಜ್ಯ,ರಾಷ್ಟ್ರ,ಸೈಮ,ಫಿಲಂಫೇರ್, ಫಾಲ್ಕೆ, ಆಸ್ಕರ್, ಇತ್ಯಾದಿ ಪ್ರಶಸ್ತಿ, ಸನ್ಮಾನದ ಬಗ್ಗೆ ಮಾತ್ರವಲ್ಲದೇ ಇನ್ನು ಅನೇಕ ಅದ್ಬುತ ಆಶ್ಚರ್ಯ ಮಾಹಿತಿಗಳಿಂದ ತುಂಬಿತುಳುಕುತ್ತಿದೆ.

ಹೇಳುತ್ತ ಹೋದರೆ ದಿನವೇ ಸಾಲದು. ಈ ಅಪರೂಪದ ಅಪೂರ್ವದ ಉಪಯುಕ್ತ ರಚನೆಗೆ ಕಾರಣ ಕರ್ತರಾದ ರಾಜ್ಯದ ಹಿರಿಯಕವಿ ನಟರಾಜರ 55 ವರ್ಷ ಧೀರ್ಘಕಾಲದ ಪರಿಶ್ರಮಕ್ಕೆ ಇಂದು ಪ್ರತಿಫಲ ದೊರಕಿದೆ ಎಂದು ಶ್ಲಾಘನೀಯ ನುಡಿಯಾಡಿದರು

ಇಂತಹ ಸಂಗ್ರಹಯೋಗ್ಯ ಪುಸ್ತಕಗಳನ್ನು ಕನ್ನಡಿಗರೆಲ್ಲರೂ, ವಿಶೇಷವಾಗಿ ಕನ್ನಡ ಚಿತ್ರರಂಗದ ಪ್ರತಿಯೊಬ್ಬರೂ ಕೊಂಡು ಓದುವ ಮೂಲಕ ಸಿನಿಜ್ಞಾನ ಪಡೆವುದರ ಜತೆಗೆ ಲೇಖಕರನ್ನು ಪ್ರೋತ್ಸಾಹಿಸಿದಂತಾಗುವುದು ಎಂದು ಸಿದ್ಧಲಿಂಗಯ್ಯ ಸಲಹೆ ಮಾರ್ಗದರ್ಶನ ನೀಡಿದರು. ನಾಡಿನ ಸತ್ಸಂಪ್ರದಾಯದಂತೆ ಎಲ್ಲರ ಸಮ್ಮುಖದಲ್ಲಿ ಕುಮಾರಕವಿ ನಟರಾಜರಿಗೆ ಗೌರವ ಪೂರ್ವಕವಾಗಿ ಶಾಲು ಹೊದಿಸಿ ಮೈಸೂರು ಪೇಟ ತೊಡಿಸಿ ಅದ್ಧೂರಿಯಾಗಿ ಸನ್ಮಾನಿಸಲಾಯಿತು.

ಕೊನೆಯಲ್ಲಿ ಲೇಖಕರ ಕೃತಜ್ಞತಾಪೂರ್ಣ, ಭಾವಪೂರ್ಣ ಮಾತುಗಳಾಡಿದ ನಂತರ ಶ್ರೀಮತಿ ಪ್ರಭಾವತಿಯವರ ವಂದನಾರ್ಪಣೆ ಯೊಡನೆ ಕಾರ್ಯಕ್ರಮ ಮುಗಿಯಿತು. ಇನ್ನು ಈ ಕೃತಿಗಳಿಗೆ “ಮುನ್ನುಡಿ” ಎಸ್.ವಿ.ರಾಜೇಂದ್ರಸಿಂಗ್ ಬಾಬು ಬರೆದಿದ್ದರೆ, “ಬೆನ್ನುಡಿ” ಎಸ್.ಕೆ.ಭಗವಾನ್ (ಖ್ಯಾತ ದೊರೆ-ಭಗವಾನ್ ಜೋಡಿಯಲ್ಲೊಬ್ಬರು) ಅವರು ಬರೆದುಕೊಟ್ಟಿರುವುದು ವಿಶೇಷವಾಗಿದೆ. ಓದುಗರು ಕೃತಿಗಳಿಗಾಗಿ – ಕುಮಾರಕವಿ ಬಿ.ಎನ್.ನಟರಾಜ್ 9036976471 ಅವರನ್ನು ಸಂಪರ್ಕಿಸಿ ಪಡೆಯಬಹುದಾಗಿದೆ.







