LatestMysore

ಹುಣಸೂರಲ್ಲಿ ವಿಶ್ವಕರ್ಮ ಜಯಂತೋತ್ಸವ… ಸಮಾಜದವರು ಸಂಘಟಿತರಾಗಲು ಎಚ್.ಪಿ.ಮಂಜುನಾಥ್ ಕರೆ

ಹುಣಸೂರು(ಹಿರೀಕ್ಯಾತನಹಳ್ಳಿ ಸ್ವಾಮಿಗೌಡ):  ವಿಶ್ವಕರ್ಮ ಸಮಾಜದ ಯುವಕರು ಸಂಘಟಿತರಾಗಿ ಸಮಾಜದ ಎಲ್ಲರನ್ನು ಒಗ್ಗೂಡಿಸುವ ಮೂಲಕ ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಮಾಜಿ ಶಾಸಕ ಎಚ್.ಪಿ. ಮಂಜುನಾಥ್ ಕರೆ ನೀಡಿದರು.

ಹನಗೋಡು ಹೋಬಳಿಯ ಹುಣಸೇಗಾಲದಲ್ಲಿ ವಿಶ್ವಕರ್ಮ ಸೇವಾ ಸಮಿತಿ ವತಿಯಿಂದ ಆಯೋಜಿಸಿದ್ದ 11ನೇ ವರ್ಷದ ವಿಶ್ವಕರ್ಮ ಜಯಂತೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ವಿಶ್ವಕರ್ಮ ಜಯಂತಿಯು ಕೇವಲ ಆಚರಣೆಗೆ ಸೀಮಿತವಾಗದೆ, ಸಮಾಜದ ಸಂಘಟನೆ, ಪ್ರತಿಭೆಗಳ ಗುರುತಿಸುವಿಕೆ ಹಾಗೂ ಯುವಜನರ ಪ್ರಗತಿಗೆ ವೇದಿಕೆಯಾಗಬೇಕು. ಸಮಾಜದ ಹಿರಿಯರ ಮಾರ್ಗದರ್ಶನದಲ್ಲಿ ಯುವಕರು ಮುನ್ನಡೆದು ಸಂಘಟನೆಯನ್ನು ಮತ್ತಷ್ಟು ಬಲಪಡಿಸಬೇಕು ಎಂದು ತಿಳಿಸಿದರು.

ವಿಶ್ವಕರ್ಮ ಸಮುದಾಯವು ತನ್ನದೇ ಆದ ಕಲೆ, ಕೌಶಲ್ಯ ಹಾಗೂ ವೃತ್ತಿಪರ ಪರಂಪರೆಯನ್ನು ಹೊಂದಿದ್ದು, ಸಮಾಜದ ಯುವಕರು ಆಧುನಿಕ ಶಿಕ್ಷಣ ಮತ್ತು ತಂತ್ರಜ್ಞಾನವನ್ನು ಅಳವಡಿಸಿಕೊಂಡು ಹೊಸ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಸಂಘಟನೆಯ ಮೂಲಕ ಸಮಾಜದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡು, ಮುಂದಿನ ಪೀಳಿಗೆಗೆ ಉತ್ತಮ ಭವಿಷ್ಯ ಕಲ್ಪಿಸಲು ಎಲ್ಲರೂ ಒಟ್ಟಾಗಿ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.

ತಾಲೂಕಿನಲ್ಲಿ ವಿಶ್ವಕರ್ಮ ಸಮುದಾಯ ಭವನಗಳ ನಿರ್ಮಾಣಕ್ಕೆ ಸರ್ಕಾರದ ಅನುದಾನದ ಜೊತೆಗೆ ತಾವು ವೈಯಕ್ತಿಕವಾಗಿ ಸಹಾಯಹಸ್ತ ನೀಡಿರುವುದಾಗಿ ತಿಳಿಸಿದ ಅವರು, ಹುಣಸೇಗಾಲದಲ್ಲಿ ನಿರ್ಮಾಣವಾಗಲಿರುವ ವಿಶ್ವಕರ್ಮ ಸಮುದಾಯ ಭವನಕ್ಕೂ ಅಗತ್ಯ ಸಹಾಯ ನೀಡುವುದಾಗಿ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಗ್ರಾ.ಪಂ. ಮಾಜಿ ಅಧ್ಯಕ್ಷ ತಮ್ಮೇಗೌಡ, ಕಾವೇರಿ ಆಸ್ಪತ್ರೆ ನಿರ್ದೇಶಕ ಡಾ. ಲೋಹಿತ್, ವಿಶ್ವಕರ್ಮ ಸಮಾಜದ ತಾಲೂಕು ಅಧ್ಯಕ್ಷ ಕೆ.ಎನ್. ಕುಮಾರ್, ಕಾರ್ಯದರ್ಶಿ ಸುರೇಶ್, ಮಹಿಳಾ ಘಟಕದ ಕಾರ್ಯಾಧ್ಯಕ್ಷೆ ಜಯಲಕ್ಷ್ಮಿಮಹದೇವಚಾರ್, ಉದ್ಯಮಿ ಚಂದ್ರಶೇಖರ್, ಕಾಯಕ ಸಮಾಜದ ತಾ ಅಧ್ಯಕ್ಷ ಹೊನ್ನಪ್ಪ, ಮುಖಂಡರಾದ ಗೋವಿಂದಚಾರ್,   ನಾರಾಯಣ್, ಮಹದೇವ್, ವೀರಭದ್ರಚಾರ್, ರಾಘು, ಕುಮಾರ್, ಪ್ರಕಾಶ್ ಬೋಗಚಾರ್, ರವಿ ಸೇರಿದಂತೆ ಸಮಾಜದ ಮುಖಂಡರು, ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

admin
the authoradmin

Leave a Reply