ಕೆ.ಆರ್.ನಗರ(ಜಿಟೆಕ್ ಶಂಕರ್): ಈ ಹಿಂದೆ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯನವರು ಶಾಸಕರ ವಿವೇಚನಾ ಕೋಟಾದಡಿ ನಿಗಧಿ ಪಡಿಸಿದ್ದ 50 ಕೋಟಿ ಅನುದಾನದಲ್ಲಿ ಪಟ್ಟಣದ ಸಮಗ್ರ ಅಭಿವೃದ್ಧಿಗೆ 7.50 ಕೋಟಿ ಹಣ ನೀಡಲಾಗಿದೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಪಟ್ಟಣದ 6 ನೇ ವಾರ್ಡಿನ ಕಂಠೇನಹಳ್ಳಿ ಬಡಾವಣೆಯಲ್ಲಿ ಕೆ.ಆರ್.ನಗರ ಪಟ್ಟಣದಿಂದ ಮೂಡಲಕೊಪ್ಪಲು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಲು ನಾನು ಕಂಕಣ ಬದ್ದನಾಗಿ ಕೆಲಸ ಮಾಡುತ್ತಿದ್ದೇನೆ ಎಂದರು.
ಶಾಸಕರ ನಿಗಧಿತ ಅನುದಾನದಲ್ಲಿ ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಸೇರಿದ ರಸ್ತೆಗೆ 3.5 ಕೋಟಿ ಮತ್ತು ಮೂಡಲಕೊಪ್ಪಲು ಗ್ರಾಮಪರಿಮಿತಿ ರಸ್ತೆಯ ಇಕ್ಕೆಲಗಳ ಚರಂಡಿ ಕಾಮಗಾರಿಗೆ 40 ಲಕ್ಷ ನೀಡಲಾಗಿದ್ದು ಈ ಕಾಮಗಾರಿಗಳನ್ನು ನಿಗಧಿತ ಅವಧಿಯಲ್ಲಿ ಪೂರ್ಣಗೊಳಿಸಲಾಗುತ್ತದೆ ಎಂದು ತಿಳಿಸಿದರು.
ಜನರ ತೆರಿಗೆಯ ಹಣದಿಂದ ಸಾರ್ವಜನಿಕ ಕಾಮಗಾರಿಗಳು ನಡೆಯುವಾಗ ಗ್ರಾಮಸ್ಥರು ಜವಬ್ದಾರಿ ವಹಿಸಿ ಗುಣಮಟ್ಟದ ಕೆಲಸ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದ ಶಾಸಕರು ಕಳಪೆ ಕಾಮಗಾರಿ ನಡೆಯುವುದು ಕಂಡು ಬಂದರೆ ನನಗೆ ದೂರಬೇಕೆಂದರು.

ಈ ಸಂದರ್ಭದಲ್ಲಿ ಗ್ರಾಮಸ್ಥರ ಮನವಿಯನ್ನು ಆಲಿಸಿದ ಶಾಸಕರು ಪರಿಹಾರಕ್ಕೆ ಸಲಹೆ ನೀಡಿದರಲ್ಲದೆ ಮೂಡಲಕೊಪ್ಪಲು ಗ್ರಾಮದಿಂದ ರೈತರ ಜಮೀನಿಗೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಗೆ ಅನುದಾನ ನೀಡಿ ತ್ವರಿತವಾಗಿ ಕೆಲಸ ಆರಂಭಿಸುವುದಾಗಿ ಪ್ರಕಟಿಸಿದರು.
ಗ್ರಾಮದ ಪರಿಶಿಷ್ಟ ಜಾತಿಯ ಬಡಾವಣೆಯಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಶ್ರೀರಾಮ ಮಂದಿರದ ಜೀಣೋದ್ದಾರಕ್ಕೆ 10 ಲಕ್ಷ ನೀಡುವುದಾಗಿ ಶಾಸಕರು ಭರವಸೆ ನೀಡಿದರು. ಇದಕ್ಕು ಮೊದಲು ಡಿ.ರವಿಶಂಕರ್ ಅವರು ಪಟ್ಟಣದ ಕಂಠೇನಹಳ್ಳಿ ಬಡಾವಣೆಯ ರಸ್ತೆ ಮತ್ತು ಚರಂಡಿ ಹಾಗೂ ಸ್ಮಶಾನ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.
ಪುರಸಭೆ ಮಾಜಿ ಅಧ್ಯಕ್ಷರಾದ ಶಿವುನಾಯಕ್, ಕೋಳಿಪ್ರಕಾಶ್, ಮಾಜಿ ಸದಸ್ಯರಾದ ಕೆ.ವಿನಯ್, ನಟರಾಜು, ಸೈಯದ್ ಸಿದ್ದಿಕ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಮಹದೇವ್, ನಗರಾಧ್ಯಕ್ಷ ಎಂ.ಜೆ.ರಮೇಶ್, ವಕ್ತಾರ ಸೈಯದ್ ಜಾಬೀರ್, ಎಸ್.ಟಿ.ಘಟಕದ ತಾಲೂಕು ಅಧ್ಯಕ್ಷ ಮಹದೇವನಾಯಕ್, ತಾಲೂಕು ಕುರುಬರ ಸಂಘದ ಅಧ್ಯಕ್ಷ ಜೆ.ಶಿವಣ್ಣ, ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ತಿಮ್ಮಶೆಟ್ಟಿ, ಮುಖಂಡರಾದ ಕಲ್ಲಹಳ್ಳಿಶ್ರೀನಿವಾಸ್, ತಮ್ಮೇಗೌಡ, ಶಿವಣ್ಣ, ಕೃಷ್ಣೇಗೌಡ, ಅನಂತ್, ಡಿ.ಜೆ.ಬಸವರಾಜು, ಸುಧಾಕರ್, ಗಿರೀಶ್, ಜಯಕುಮಾರ್, ಮಾದೇಶ್, ವ್ಯಾನ್ ಸುರೇಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.








