ಕುಶಾಲನಗರ (ಆರ್ ಹೆಚ್): ರಾಜ್ಯದ ಪ್ರತಿಷ್ಠಿತ ಜಿಲ್ಲೆಗಳಲ್ಲಿ ಒಂದಾದ ಬಳ್ಳಾರಿ ಜಿಲ್ಲಾಧಿಕಾರಿಯಾಗಿ ಒಂದು ವರ್ಷ ವನ್ನು ಯಶಸ್ವಿಯಾಗಿ ಪೂರೈಸಿ ಅನೇಕ ಜ್ವಲಂತ ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸಿ ಜನಪ್ರಿಯ ಜಿಲ್ಲಾಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಮೂಲತಃ ಹೆಬ್ಬಾಲೆ ಗ್ರಾಮದವರಾದ ಕುಶಾಲನಗರದ ಕುವೆಂಪು ಬಡಾವಣೆ ನಿವಾಸಿ ಕೆ.ನಾಗೇಂದ್ರ ಪ್ರಸಾದ್ ಅವರಿಗೆ ಹೆಬ್ಬಾಲೆ ಗ್ರಾಮಸ್ಥರಿಂದ ಸನ್ಮಾನಿಸಿ ಗೌರವಿಸಲಾಯಿತು.

ಹೆಬ್ಬಾಲೆ ಗ್ರಾಮದ ಕನಕಬ್ಲಾಕ್ ನಿವಾಸಿ ಜಿಲ್ಲಾ ಪಂಚಾಯತಿ ನಿವೃತ್ತ ಉಪ ಕಾರ್ಯದರ್ಶಿ ದಿವಂಗತ ಹೆಚ್.ಡಿ.ಕಾಳಯ್ಯ ಹಾಗೂ ನಿಂಗಜಮ್ಮ ಅವರ ಪುತ್ರರಾಗಿರುವ ಇವರು ತೋಟಗಾರಿಕೆ ಇಲಾಖೆ ಹಾಗೂ ನೀರು ಸರಬರಾಜು ಮತ್ತು ಒಳಚರಂಡಿ ಇಲಾಖೆಯ ರಾಜ್ಯ ನಿರ್ದೇಶಕಯಾಗಿ ಸೇವೆ ಸಲ್ಲಿಸಿ ಇದೀಗ ಬಳ್ಳಾರಿಯ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಬಳ್ಳಾರಿ ಜಿಲ್ಲಾಡಳಿತ ಭವನದಲ್ಲಿ ಭೇಟಿ ಮಾಡಿದ ಹೆಬ್ಬಾಲೆ ಗ್ರಾಮಸ್ಥರು ಡಿಸಿ ಕೆ.ನಾಗೇಂದ್ರ ಪ್ರಸಾದ್ ಅವರಿಗೆ ಕೊಡಗಿನ ಸಂಪ್ರಾಯಿಕ ಪೇಟ ತೊಡಿಸಿ ಶಾಲು ಹೊದಿಸಿ,ನೆನಪಿನ ಕಾಣಿಕೆ ನೀಡಿ ಆತ್ಮೀಯವಾಗಿ ಸನ್ಮಾನಿಸಿದರು.

ಈ ಸಂದರ್ಭ ನಿವೃತ್ತ ಪೊಲೀಸ್ ಅಧಿಕಾರಿ ಹೆಚ್.ಕೆ.ರವೀಂದ್ರನಾಥ್, ಕೆಪಿಟಿಸಿಎಲ್ ಕಾರ್ಯಪಾಲಕ ಎಂಜಿನಿಯರ್ ಹೆಚ್.ಆರ್.ಮುರಳಿ, ಸಹಾಯಕ ಎಂಜಿನಿಯರ್ ಕೆ.ವಿನೋದ್, ವಕೀಲ ಹೆಚ್.ಎಂ.ರವೀಂದ್ರ, ಎಪಿಎಂಸಿ ಮಾಜಿ ಉಪಾಧ್ಯಕ್ಷ ರಘುಹೆಬ್ಬಾಲೆ, ಜಿಲ್ಲಾ ಪಂಚಾಯಿತಿ ನಿವೃತ್ತ ಲೆಕ್ಕಪರಿಶೋಧಕ ಹೆಚ್.ಸಿ.ಲೋಕೇಶ್, ನಿವೃತ್ತ ಸೈನಿಕ ರಾಜು ಮುಖಂಡರಾದ ಕೆ.ಸೂರಜ್, ಎಚ್.ಎಂ.ವಿಶ್ವನಾಥ್ ಮತ್ತಿತರರು ಪಾಲ್ಗೊಂಡಿದ್ದರು.








