ಅವಾಚ್ಯ ಶಬ್ದ ಬಳಸಿ ನಿಂದಿಸುವ ನೀಚ ಬುದ್ಧಿಗೆ ನೀವು ಕಡಿವಾಣ ಹಾಕದಿದ್ದರೆ ನಾವು ಹಾಕ್ತೀವಿ!
ಸಚಿವ ವೆಂಕಟೇಶ್ ಗೆ ಮಾಜಿ ಶಾಸಕ ಕೆ ಮಹದೇವ್ ಎಚ್ಚರಿಕೆ

ಪಿರಿಯಾಪಟ್ಟಣ(ರವಿಚಂದ್ರಬೂದಿತಿಟ್ಟು): ನನ್ನನ್ನ ಗುರಿಯಾಗಿಸಿಕೊಂಡು ಸಚಿವ ಕೆ ವೆಂಕಟೇಶ್ ರವರು ಹಲವು ವೇದಿಕೆಗಳಲ್ಲಿ ಅವಾಚ್ಯ ಶಬ್ದಗಳನ್ನು ಬಳಸಿ ನಿಂದಿಸಿದರೆ, ನಾನು ಅವರರಿಗೆ ಮನವಿ ಮಾಡಿಕೊಳ್ಳುವುದು ಏನೆಂದರೆ ಯಾವುದೇ ಒಂದು ರಾಜಕೀಯ ವ್ಯಕ್ತಿಯನ್ನು ಒಂದು ವೇದಿಕೆ ಮೇಲೆ ನಿಂತು ಅವಾಚ್ಯ ಶಬ್ದಗಳನ್ನು ಬಳಸಿ ನಿಂದಿಸುವ ನೀಚ ಬುದ್ಧಿಗೆ ನೀವು ಕಡಿವಾಣ ಹಾಕಬೇಕು.. ನೀವು ಕಡಿವಾಣ ಹಾಕದಿದ್ದರೆ ನಾವು ಹಾಕಬೇಕಾಗುತ್ತದೆ ಎಂದು ಮಾಜಿ ಶಾಸಕ ಕೆ ಮಹದೇವ್ ಎಚ್ಚರಿಕೆ ನೀಡಿದರು.
ಪಿರಿಯಾಪಟ್ಟಣದ ಮಂಜುನಾಥ ಸಮುದಾಯ ಭವನದಲ್ಲಿ ಜೆಡಿಎಸ್ ಪಕ್ಷದ ತಾಲ್ಲೂಕು ಘಟಕದ ಪದಾಧಿಕಾರಿಗಳ ನೇಮಕಾತಿ ಪತ್ರವನ್ನು ವಿತರಿಸಿ ಮಾತನಾಡಿದ ಅವರು ಇತ್ತೀಚೆಗೆ ನಡೆದ ಕಾರ್ಯಕ್ರಮಗಳಲ್ಲಿ ಸಚಿವ ಕೆ.ವೆಂಕಟೇಶ್ ನನ್ನ ಬಗ್ಗೆ ಹಗುರವಾಗಿ ಮತ್ತು ನಿರಾಧಾರ ಆರೋಪ ಮಾಡಿದ್ದಾರೆ. ತಾಲ್ಲೂಕಿನಲ್ಲಿ ಎಚ್.ಎಂ.ಚನ್ನಬಸಪ್ಪ ಕೆ.ಎಸ್.ಕಾಳಮರೀಗೌಡ, ಎಚ್.ಸಿ. ಬಸವರಾಜು ಮತ್ತು ನಾನು ಸೇರಿದಂತೆ ನಮ್ಮ ಶಾಸಕತ್ವದ ಅವಧಿಯಲ್ಲಿ ನಮ್ಮದೇ ಆದ ಕೊಡುಗೆ ನೀಡಿದ್ದೇವೆ ಆದರೆ ಈ ಕ್ಷೇತ್ರದಲ್ಲಿ ಬೇರೆಯವರ ಕೊಡುಗೆ ಏನು ಇಲ್ಲ ತಾಲೂಕಿನಲ್ಲಿರುವ ಎಲ್ಲಾ ಕಲ್ಲುಗಳು ನನ್ನ ಹೆಸರನ್ನೇ ಹೇಳುತ್ತಿದೆ ಇಂದು ದುರಂಹಕಾರದಿಂದ ಮಾತನಾಡುತ್ತಿದ್ದಾರೆ.

ಹಾಗಾದರೆ ತಾಲೂಕಿನಲ್ಲಿ ಬೇರೆ ಯಾವ ಶಾಸಕರ ಹೆಸರಿನಲ್ಲಿ ಉದ್ಘಾಟನೆಗಳು ನಡೆದೇ ಇಲ್ಲವೇ , ಎಲ್ಲವನ್ನು ನಾನೇ ಮಾಡಿದ್ದೇನೆ ಎಂದು ಹೇಳಿಕೊಳ್ಳುವುದು ಸಚಿವ ಕೆ. ವೆಂಕಟೇಶ್ ಅವರಿಗೆ ಗೌರವ ತರುವುದಿಲ್ಲ. ಅವರು ತಮ್ಮ ಮಗನನ್ನು ರಾಜಕೀಯದಲ್ಲಿ ಪ್ರತಿಷ್ಠಾಪಿಸಲು ಮನಸ್ಸಿಗೆ ಬಂದಂತೆ ಹೇಳಿಕೆ ನೀಡುತ್ತಿರುವುದನ್ನು ನೋಡಿಕೊಂಡು ಸುಮ್ಮನಿರಲು ಸಾಧ್ಯವಿಲ್ಲ ಇನ್ನು ಮುಂದೆ ತೀಕ್ಷ್ಣವಾಗಿ ಪ್ರತಿಕ್ರಿಯಿಸ ಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಅವರು ಉತ್ತಮ ರಾಜಕಾರಣಿಯಾಗಿದ್ದರೆ ನಮ್ಮನ್ನು ಧೈರ್ಯವಾಗಿ ಎದುರಿಸಲಿ ಅದನ್ನು ಬಿಟ್ಟು ಕೆಟ್ಟ ಪದಗಳನ್ನು ಬಳಕೆ ಮಾಡಿ ಬಯ್ಯುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ನಮ್ಮ ಪರವಾಗಿ ಮತ್ತು ಪಕ್ಷದ ಪರವಾಗಿ ಕೆಲಸ ಮಾಡುತ್ತಿರುವವರ ವಿರುದ್ಧ ಸುಳ್ಳು ಕೇಸು ಹಾಕಿಸಲಾಗುತ್ತಿದೆ ಇದನ್ನು ನೋಡಿಕೊಂಡು ಸುಮ್ಮನಿರುವುದಿಲ್ಲ. ನಾನು ಶಾಸಕನಾಗಿದ್ದ ಅವಧಿಯಲ್ಲಿ ಮಾಡಿಸಿದ 4600 ಕ್ಕೂ ಹೆಚ್ಚು ವಿವಿಧ ಮಾಶಾಸನಗಳನ್ನು ರದ್ದುಪಡಿಸಲಾಗಿದೆ, ಸಾಗುವಳಿ ಚೀಟಿಗಳನ್ನು ರದ್ದು ಪಡಿಸುವಂತೆ ಎಸಿಗೆ ಶಿಫಾರಸು ಮಾಡಿದ್ದಾರೆ ಇದು ದ್ವೇಷದ ರಾಜಕಾರಣದ ಪರಮಾವಧಿಯಾಗಿದ್ದು, ಇದಕ್ಕೆ ಕ್ಷೇತ್ರದ ಜನತೆ ತಕ್ಕ ಉತ್ತರ ನೀಡಲಿದ್ದಾರೆ ಎಂದರು.
ತಾಲ್ಲೂಕಿನವರಾಗಿ ಕೇಂದ್ರಗಳಲ್ಲಿ ಕ್ವಿಂಟಾಲ್ ಗೆ ತಲಾ ನಾಲ್ಕು ಕೆಜಿ ಕಡಿಮೆ ಮಾಡಲಾಗುತ್ತಿದೆ ಇದು ಭ್ರಷ್ಟಾಚಾರದ ಉತ್ತಮ ಉದಾಹರಣೆಯಾಗಿದ್ದು, ಈ ವಿಷಯ ಇನ್ನೂ ಜೀವಂತವಾಗಿರುವ ಮುಖ್ಯಮಂತ್ರಿಗಳಿಗೆ ತಿಳಿದಿಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಂದಿನ ಎಲ್ಲಾ ಚುನಾವಣೆಗಳಿಗೂ ಪಕ್ಷ ಸಂಘಟನೆ ಮಾಡಲು ಪದಾಧಿಕಾರಿಗಳನ್ನು ನೇಮಕ ಮಾಡುತ್ತಿದ್ದು, ಪ್ರತಿಯೊಬ್ಬರು ಅವರವರ ಜವಾಬ್ದಾರಿಯನ್ನು ಅರಿತು 2028 ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸಿ ಕುಮಾರಣ್ಣನವರ ಕೈ ಬಲಪಡಿಸಬೇಕಾಗಿದ್ದು, ಪ್ರತಿಯೊಬ್ಬರು ಇಂದಿನಿಂದಲೇ ಪಕ್ಷ ಸಂಘಟನೆ ಮಾಡುವಲ್ಲಿ ತೊಡಗಿಸಿಕೊಳ್ಳಬೇಕು, ಸಂಘಟನೆಗೆ ಮಾಡಲು ನಿರ್ಲಕ್ಷ ಮಾಡುವವರನ್ನು ನಿರ್ಧಾಕ್ಷಿಣ್ಯವಾಗಿ ಕಿತ್ತು ಹಾಕಲಾಗುವುದು ಎಚ್ಚರಿಸಿದರು.
ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಅಣ್ಣಯ್ಯ ಶೆಟ್ಟಿ ಅವರನ್ನು ಮುಂದುವರಿಸಲಾಯಿತು, ಪ್ರಧಾನ ಕಾರ್ಯದರ್ಶಿಯಾಗಿ ಎಂ.ಜೆ.ಸ್ವಾಮಿ, ಮಹಿಳಾ ಘಟಕದ ಅಧ್ಯಕ್ಷರಾಗಿ ಸುನೀತಾ ಮಂಜುನಾಥ್ ಉಪಾಧ್ಯಕ್ಷರಾಗಿ ಆಶಾ, ಕಾನೂನು ಘಟಕದ ಅಧ್ಯಕ್ಷರಾಗಿ ಜೆ.ಎಸ್.ನಾಗರಾಜ್, ಎಸ್ ಟಿ ಘಟಕದ ಅಧ್ಯಕ್ಷರಾಗಿ ತಿಮ್ಮನಾಯಕ, ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾಗಿ ರವಿ, ಕೋರ್ ಕಮಿಟಿ ಅಧ್ಯಕ್ಷರಾಗಿ ಎಚ್.ಡಿ. ರಾಜೇಂದ್ರ, ಓಬಿಸಿ ಘಟಕದ ಅಧ್ಯಕ್ಷರಾಗಿ ಡಿ.ಎ. ನಾಗೇಂದ್ರ ಸೇರಿದಂತೆ ವಿವಿಧ ಘಟಕಗಳ ಪದಾಧಿಕಾರಿಗಳಾಗಿ ಪಿ. ಸಿ. ಕೃಷ್ಣ, ಸುನಿಲ್, ಮಂಜುನಾಥ್ ಸಿಂಗ್, ಜವರಪ್ಪ, ಮಂಜುನಾಥ್, ಮುತ್ತುರಾಜ್ ಸೇರಿದಂತೆ ಹಲವರನ್ನು ನೇಮಕ ಮಾಡಿ ನೇಮಕಾತಿ ಪತ್ರ ವಿತರಿಸಲಾಯಿತು.
ಕೆ.ರಮೇಶ್, ಗೋವಿಂದೇಗೌಡ, ರಾಜೇಗೌಡ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.







