
ಮೈಸೂರು(ಹೆಚ್.ಪಿ.ನವೀನ್ ಕುಮಾರ್): ವಿಶ್ವ ಧೂಮಪಾನ ರಹಿತ ದಿನದ ಅಂಗವಾಗಿ 92.7 ಬಿಗ್ ಎಫ್ ಎಂ, ಅಪೋಲೊ ಆಸ್ಪತ್ರೆ ಇಂಡಿಯನ್ ಟಿವಿ ಮತ್ತು ಆಂದೋಲನ ಪತ್ರಿಕೆ ವತಿಯಿಂದ ನಗರದ ಹೆಬ್ಬಾಳ ದಲ್ಲಿ ಇರುವ ಬಸವಮಾರ್ಗ ವ್ಯಸನಮುಕ್ತ ಮತ್ತು ಪುನರ್ವಸತಿ ಕೇಂದ್ರದಲ್ಲಿ ಜಾಗೃತಿ ಕಾರ್ಯಕ್ರಮ ನಡೆಯಿತು.
ಅಪೋಲೊ ಆಸ್ಪತ್ರೆಯ ಶ್ವಾಶಕೋಶ ತಜ್ಞ ಡಾ.ಮಧು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತಂಬಾಕು ಸೇವನೆಯು ಕನಿಷ್ಠ 15 ರೀತಿಯ ಕ್ಯಾನ್ಸರ್, ಹೃದ್ರೋಗ ಮತ್ತು ವಿವಿಧ ಶ್ವಾಸಕೋಶದ ಕಾಯಿಲೆಗಳಿಗೆ ಗುರಿಯಾಗಿಸಬಹುದು. ತಂಬಾಕನ್ನು ಹಲವಾರು ವಿಧಗಳಲ್ಲಿ ಸೇವಿಸಬಹುದು. ಸಿಗರೇಟ್ ಸೇದುವುದು, ತಂಬಾಕನ್ನು ಅಗಿಯುವುದು. ಹುಕ್ಕಾ ಮತ್ತು ಸಿಗಾರ್ಗಳು ತಂಬಾಕು ಸೇವನೆಯ ಸಾಮಾನ್ಯ ರೂಪವಾಗಿದೆ.

ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಭಾರತವು ವಿಶ್ವದ ಶೇ.12 ಧೂಮಪಾನಿಗಳಿಗೆ ನೆಲೆಯಾಗಿದೆ. ತಂಬಾಕು ಸಂಬಂಧಿತ ಕಾಯಿಲೆಗಳಿಂದಾಗಿ ಭಾರತದಲ್ಲಿ ಪ್ರತಿ ವರ್ಷ 1 ಮಿಲಿಯನ್ಗಿಂತಲೂ ಹೆಚ್ಚು ಜನರು ಸಾಯುತ್ತಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಸಿಗರೇಟ್ ಸೇದುವುದು ಶ್ವಾಸಕೋಶದ ಕ್ಯಾನ್ಸರ್ಗೆ ಸಾಮಾನ್ಯ ಕಾರಣವಾಗಿದೆ. ಪ್ರಪಂಚದಲ್ಲಿ ಶ್ವಾಸಕೋಶದ ಕ್ಯಾನ್ಸರ್ ಸಂಬಂಧಿತ ಸಾವುಗಳಲ್ಲಿ ಶೇ.87 ತಂಬಾಕು ಧೂಮಪಾನದಿಂದ ಉಂಟಾಗುತ್ತವೆ. ಈ ಮಾರಕ ಕಾಯಿಲೆಗೆ ತಂಬಾಕು ಸೇದುವುದು ಅತ್ಯಂತ ಪ್ರಮುಖ ಅಪಾಯಕಾರಿ ಅಂಶವಾಗಿದೆ.

ನೀವು ಈ ಅಭ್ಯಾಸದಲ್ಲಿದ್ದರೆ, ಐದು ವರ್ಷಗಳ ನಂತರ ನಿಮ್ಮ ಬದುಕುಳಿಯುವ ಸಾಧ್ಯತೆಗಳು ಐದರಲ್ಲಿ ಒಂದಕ್ಕಿಂತ ಕಡಿಮೆ. ಶ್ವಾಸಕೋಶದ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುವ ಅತ್ಯುತ್ತಮ ಮಾರ್ಗವೆಂದರೆ ತಂಬಾಕು ತ್ಯಜಿಸುವುದೇ ಆಗಿದೆ ಎಂದು ತಿಳಿಸಿದರು.
ಬಾಯಿ ಕ್ಯಾನ್ಸರ್ ರೋಗಿಗಳಲ್ಲಿ ಶೇ.90 ರಷ್ಟು ಜನರು ತಂಬಾಕು ಸೇವಿಸುತ್ತಾರೆ. ಹೆಚ್ಚಿನ ಸಂಖ್ಯೆಯ ತಂಬಾಕು ಬಳಕೆದಾರರು ಇದನ್ನು ಹೊಗೆಯಿಲ್ಲದೆ ಸೇವಿಸುತ್ತಾರೆ. ಈ ಜನರು ತಂಬಾಕನ್ನು ಜಗಿಯುವುದನ್ನು ಅಭ್ಯಾಸ ಮಾಡುತ್ತಾರೆ. ಅಂದರೆ ಹಲ್ಲುಗಳ ಮೇಲೆ ತಂಬಾಕನ್ನು ಹಚ್ಚಿಕೊಂಡು ಅಗಿಯುವುದು. ಇದು ಬಾಯಿ ಕ್ಯಾನ್ಸರ್ಗೆ ಕಾರಣವಾಗುವ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. ಇದು ಗಂಟಲು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ ಎಂದರು.

ಧೂಮಪಾನ ಮಾಡುವವರಿಗೆ ಧೂಮಪಾನ ಮಾಡದ ಜನರಿಗೆ ಹೋಲಿಸಿದರೆ ಹೃದಯಾಘಾತವಾಗುವ ಸಾಧ್ಯತೆ ಎರಡು ಪಟ್ಟು ಹೆಚ್ಚು ಇರುತ್ತದೆ. ಧೂಮಪಾನವು ಹೃದಯ ಸಂಬಂಧಿ ಕಾಯಿಲೆಗಳನ್ನು ಬೆಳೆಸುವ ಅಪಾಯವನ್ನು ಹೆಚ್ಚಿಸುತ್ತದೆ, ಇದರಲ್ಲಿ ಪರಿಧಮನಿಯ ಹೃದಯ ಕಾಯಿಲೆ ಮತ್ತು ಪಾರ್ಶ್ವವಾಯು ಸೇರಿವೆ. ಸಿಗರೇಟುಗಳು ನಿಕೋಟಿನ್ ಎಂಬ ವಸ್ತುವನ್ನು ಹೊಂದಿರುತ್ತವೆ.
ಇದು ನಿಮ್ಮ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ ಮತ್ತು ಹೃದಯ ಬಡಿತವನ್ನು ವೇಗಗೊಳಿಸುತ್ತದೆ. ಐದು ಹೃದಯ ಕಾಯಿಲೆ ಸಂಬಂಧಿತ ಸಾವುಗಳಲ್ಲಿ ಒಂದು ತಂಬಾಕು ಸೇವನೆಯಿಂದ ಸಂಭವಿಸುತ್ತದೆ ಎಂದು ಮಾಹಿತಿ ನೀಡಿದರು. ಇದೇ ವೇಳೆ ಪ್ರತಿಜ್ಞಾವಿಧೆ ಬೋಧಿಸಲಾಯಿತು.

ಬಸವಮಾರ್ಗ ಫೌಂಡೇಶನ್ ಸಂಸ್ಥಾಪಕ ಎಸ್.ಬಸವರಾಜು ಮಾತನಾಡಿ, ತಂಬಾಕು ಸೇವನೆಯು ಹೃದಯದ ಅಪಧಮನಿಗಳನ್ನು ಕಿರಿದಾಗಿಸುತ್ತದೆ. ರಕ್ತದ ಹರಿವು ಮತ್ತು ಮೆದುಳಿಗೆ ಆಮ್ಲಜನಕದ ಪೂರೈಕೆಯನ್ನು ತಡೆಯುತ್ತದೆ. ಇದು ಪಾರ್ಶ್ವವಾಯುವಿಗೆ ಕಾರಣವಾಗಬಹುದು. ಮೆದುಳಿಗೆ ರಕ್ತ ಪೂರೈಕೆ ತಾತ್ಕಾಲಿಕವಾಗಿ ನಿಂತಾಗ ಪಾರ್ಶ್ವವಾಯು ಸಂಭವಿಸುತ್ತದೆ. ಇದರಿಂದಾಗಿ, ಮೆದುಳಿನ ಕೋಶಗಳು ಆಮ್ಲಜನಕದ ಕೊರತೆಯನ್ನು ಅನುಭವಿಸುತ್ತವೆ ಮತ್ತು ಅವು ಸಾಯಲು ಪ್ರಾರಂಭಿಸುತ್ತವೆ ಈ ನಿಟ್ಟಿನಲ್ಲಿ ಧೂಮಪಾನವನ್ನು ತ್ಯಜಿಸಿ ಉತ್ತಮ ಬದುಕು ನಡೆಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ 92.7 ಬಿಗ್ ಎಫ್ ಎಂ ನ ಆರ್ ಜೆ ಆ್ಯಂಟೋ ಕ್ರಸ್ಟನ್, ನಿಖಿತಾಶ್, ಇತರರು ಇದ್ದರು.








