ಹುಣಸೂರು(ಹಿರೀಕ್ಯಾತನಹಳ್ಳಿ ಸ್ವಾಮಿಗೌಡ): ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿಯಾಗಿ ಹಿಂಬದಿ ಸವಾರ ಹೋಂಗಾರ್ಡ್ ಸ್ಥಳದಲ್ಲಿಯೇ ಸಾವನ್ನಪ್ಪಿ, ಸವಾರ ಗಾಯಗೊಂಡಿರುವ ಘಟನೆ ತಾಲೂಕಿನ ವಡೇರಹೊಸಹಳ್ಳಿಯಲ್ಲಿ ಗುರುವಾರ (ಜೂ.18) ಬೆಳಿಗ್ಗೆ ನಡೆದಿದೆ.
ಹುಣಸೂರು ತಾಲೂಕಿನ ವಡೇರಹೊಸಹಳ್ಳಿಯ ದಾಸೇಗೌಡರ ಪುತ್ರ, ಹುಣಸೂರು ಘಟಕದ ಹೋಂಗಾರ್ಡ್ ವಿ.ಡಿ. ಹರೀಶ (33) ಸಾವನ್ನಪ್ಪಿದ ದುರ್ದೈವಿ. ಬೈಕ್ ಸವಾರ ಪ್ರಕಾಶ್ ಗಾಯಗೊಂಡಿದ್ದು ಅವರನ್ನು ಬಿಳಿಕೆರೆಯ ಸೂರ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತ ಹರೀಶ ಹುಣಸೂರು ನಗರ ಠಾಣೆಯಲ್ಲಿ ರಾತ್ರಿ ಕರ್ತವ್ಯ ಮುಗಿಸಿ ಗುರುವಾರ ಮುಂಜಾನೆ 5.10ರ ವೇಳೆಯಲ್ಲಿ ಮನೆಗೆ ತೆರಳುವ ವೇಳೆ ಬೈಕ್ ಕೆಟ್ಟಿದ್ದರಿಂದ ಮನೆಗೆ ಪೋನ್ ಮಾಡಿ ಮಾವನನ್ನು ಬರಲು ಹೇಳಿದ್ದಾರೆ. ಅದರಂತೆ ಮಾವ ಪ್ರಕಾಶ್ ಆಗಮಿಸಿ ಬೈಕಿನಲ್ಲಿ ಸ್ವಗ್ರಾಮಕಕ್ಕೆ ಕರೆದುಕೊಂಡು ಹೋಗುತ್ತಿದ್ದ ವೇಳೆ ವಡೇರ ಹೊಸಹಳ್ಳಿ ಸಮೀಪ ರಸ್ತೆಬದಿಯಲ್ಲಿ ಇತ್ತೀಚೆಗೆ ಅಳವಡಿಸಿದ್ದ ವಿದ್ಯುತ್ ಕಂಬ ಕುಸಿದು ರಸ್ತೆ ಕಡೆಗೆ ಬಾಗಿತ್ತು. ಇದನ್ನು ಗಮನಿಸದ ಬೈಕ್ ಸವಾರ ಕಂಬಕ್ಕೆ ಡಿಕ್ಕಿ ಹೊಡೆದ ರಭಸಕ್ಕೆ ಪ್ರಕಾಶ್ ಬೈಕ್ ನಿಂದ ಹಾರಿ ಬಿದ್ದು ಸಣ್ಣಪುಟ್ಟಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇನ್ನು ಹಿಂಬದಿ ಕುಳಿತಿದ್ದ ಹರೀಶ್ ಎದೆಗೆ ಕಂಬ ಬಡಿದು ನೆಲಕ್ಕುರುಳಿ ಬಿದ್ದ ಪರಿಣಾಮ ಗಂಭೀರ ಗಾಯಗೊಂಡು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಮೃತ ಹರೀಶ್ ಗೆ ತಂದೆ-ತಾಯಿ. ಪತ್ನಿ. ಒಬ್ಬ ಮಗ ಇದ್ದಾರೆ. ಈ ಸಂಬಂಧ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಥಳಕ್ಕೆ ಇನ್ಸ್ ಪೆಕ್ಟರ್ ಪುನಿತ್ ಭೇಟಿ ನೀಡಿ ಪರಿಶೀಲಿಸಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ. ಹೋಂಗಾರ್ಡ್ ಜಿಲ್ಲಾ ಡೆಪ್ಯುಟಿ ಕಮಾಂಡೆಂಟ್ ಸುದರ್ಶ ನ್ ರಾವ್ ಗಾಯಕ್ ವಾಡ್, ಘಟಕಾಧಿಕಾರಿ ಸಂಪತ್ ಕುಮಾರ್, ಸಹಾಯಕ ಬೋಧಕರಾದ ಮಂಜುನಾಥ್ ಹಾಗೂ ಸಹೊದ್ಯೋಗಿಗಳು ಭೇಟಿ ನೀಡಿ ಅಂತಿಮ ದರ್ಶನ ಪಡೆದು ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.








