CinemaLatest

ಹಾಡುನಿಲ್ಲಿಸಿದ ಗಾನಕೋಗಿಲೆ ಡಾ.ಎಸ್.ಜಾನಕಿ…  ಮೈಸೂರಿನಲ್ಲಿ ಬದುಕಿಗೆ ಅಂತಿಮ ವಿದಾಯ..

ಎಸ್ ಜಾನಕಿ ನಮ್ಮಿಂದ ದೂರವಾಗಿದ್ದಾರೆ ಎಂದರೆ ಒಪ್ಪಿಕೊಳ್ಳಲು ಸಾಧ್ಯವಾಗುವುದಿಲ್ಲ. ಆದರೀಗ ಹಾಡು ನಿಲ್ಲಿಸಿ ಚಿರನಿದ್ರೆಗೆ ಜಾರಿದ್ದಾರೆ. ಆದರೆ ಅವರ ಹಾಡುಗಳು ಸದಾ ನಮ್ಮೊಂದಿಗಿದ್ದು ನಮ್ಮನ್ನು ಗುನುಗುವಂತೆ ಮಾಡುತ್ತಿವೆ.. ಅವರ ಬದುಕು ಮತ್ತು ಗಾಯನದ ಬಗ್ಗೆ ಹಿರಿಯ ಬರಹಗಾರರಾದ ಕುಮಾರಕವಿ ನಟರಾಜ್ ಇಲ್ಲಿ ಬರೆದಿದ್ದಾರೆ… ಒಮ್ಮೆ ಓದಿ ಅಭಿಪ್ರಾಯ ತಿಳಿಸಿ

ಆಂಧ್ರಪ್ರದೇಶದ ಗುಂಟೂರುಜಿಲ್ಲೆ ಸಿರಿಸಿಲ್ಲಪಟ್ಟಣ(ಈಗಿನ ತೆಲಂಗಾಣ)ಮೂಲದ ತೆಲುಗು ಮಾತೃಭಾಷೆಯ ಶ್ರೀರಾಮಮೂರ್ತಿ ಜಾನಕಿ 23ನೇ ಏಪ್ರಿಲ್ 1938ರಂದು ಮಧ್ಯಮ ವರ್ಗದ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ತಂದೆ ಆಯುರ್ವೇದ ವೈದ್ಯರು, ತಾಯಿ ಶಾಲಾ ಶಿಕ್ಷಕಿ. ಇವರ ಪ್ರೌಢಶಾಲೆ ವಿದ್ಯಾಭ್ಯಾಸದ ನಂತರ ಸಂಗೀತ ಸರಸ್ವತಿಯು ಕೈಬೀಸಿ ಕರೆದಾಗ ನಾದಸ್ವರ ವಿದ್ಯಾನ್ ಪೈದಿಸ್ವಾಮಿ ಎಂಬ ಗುರುಗಳಿಂದ ಸಂಗೀತ ಅಭ್ಯಾಸ ಕಲಿತರು. ಕೇವಲ 9ನೇ ವಯಸ್ಸಿಗೆ ವೇದಿಕೆಮೇಲೆ ಹಾಡಿದ ಬಾಲಕಿ ಮುಂದೊಂದಿನ ಗಾನಕೋಗಿಲೆಯಾಗಿ ಮೆರೆವರೆಂದು ಯಾರೂ ಊಹಿಸಿರಲಿಲ್ಲ.

ಸಂಗೀತವನ್ನೆ ಪಂಚಪ್ರಾಣವನ್ನಾಗಿ ಆರಾಧಿಸುತ್ತಿರುವಾಗ ಅದೃಷ್ಟವಶಾತ್ ಚಿತ್ರ ನಿರ್ಮಾಪಕರ ಕೃಪೆಯಿಂದ ಮದ್ರಾಸಿಗೆ ಬರಬೇಕಾಯಿತು. ಖ್ಯಾತ ಚಿತ್ರೋದ್ಯಮಿ ಮೇಯಪ್ಪನ್ರ ಎ.ವಿ.ಎಂ. ಸ್ಟುಡಿಯೋದಲ್ಲಿ ಸಂಗೀತ ನಿರ್ದೇಶಕ ಆರ್.ಸುದರ್ಶನಂ ಸಂಗೀತ ಸಂಯೋಜನೆಯಲ್ಲಿ 1957ರಲ್ಲಿ ತೆರೆಕಂಡ “ವಿಧಿಯಿನ್ ವಿಳೆಯಾಟ್ಟು” ತಮಿಳು ಸಿನಿಮಾ ಮೂಲಕ ಮೊಟ್ಟಮೊದಲ ಬಾರಿ ಹಿನ್ನೆಲೆ ಗಾಯಕಿಯಾಗಿ ವೃತ್ತಿ ಪ್ರಾರಂಭಿಸಿದರು. ಇದೇ ವರ್ಷ ತೆಲುಗಿನ ಎಮ್.ಎಲ್.ಎ. ಚಿತ್ರವೂ ಸೇರಿದಂತೆ ದ.ಭಾರತದ 6 ಭಾಷೆಗಳ ಸಿನಿಮಾಗಳಲ್ಲಿ ಹಿನ್ನೆಲೆಗಾಯಕಿ ಆಗಿ ಸೈ ಎನಿಸಿಕೊಂಡು ಭಾರತೀಯ ಚಿತ್ರರಂಗದ ಶ್ರೇಷ್ಠ ಹಿನ್ನೆಲೆಗಾಯಕರಲ್ಲಿ ಅಗ್ರಸ್ಥಾನ ಪಡೆದರು.

ಕಾಲಕ್ರಮೇಣ, ಚಿತ್ರಗೀತೆ ಭಕ್ತಿಗೀತೆ ಭಾವಗೀತೆ ಜಾನಪದಗೀತೆ ಇತ್ಯಾದಿಗಳನ್ನು ಸುಶ್ರಾವ್ಯವಾಗಿ ಹಾಡಿ ಕೇಳುಗರು ತಲೆದೂಗಿ ಮೈಮರೆವಂತೆ ಮಾಡಿದರು. ವಿದೇಶೀ ಭಾಷೆಗಳಲ್ಲೂ ಸರಾಗವಾಗಿ ಸ್ಪಷ್ಟವಾಗಿ ಹಾಡುವ ಮೂಲಕ ಪ್ರಪಂಚದಾದ್ಯಂತ ಪ್ರತಿಯೊಬ್ಬರ ತನುಮನ ಗೆದ್ದರು.

1957ರಲ್ಲಿ ತೆರೆಕಂಡ ಪಂಢರೀಬಾಯಿ ನಟಿಸಿದ “ರಾಯರಸೊಸೆ” ಕನ್ನಡ ಚಿತ್ರದ ಮೂಲಕ ಚಂದನವನಕ್ಕೆ ಪಾದಾರ್ಪಣೆ. ಎಲ್ಲ ಭಾಷೆಗಿಂತ ಕನ್ನಡ ಭಾಷೆಯಲ್ಲಿ ಅತಿಹೆಚ್ಚು ಹಾಡಿದ್ದು ಕೂಡ ನೂತನ ದಾಖಲೆ. ಸಾಮಾನ್ಯವಾಗಿ ಲೀಲಾವತಿ, ಪಂಡರೀಬಾಯಿ, ಭಾರತಿ, ಆರತಿಗೆ ಹೆಚ್ಚಾಗಿ, ಜಯಂತಿ, ಕಲ್ಪನ, ಬಿ.ಸರೋಜಾದೇವಿಗೆ ಅಪರೂಪಕ್ಕೆ ಹಾಡುತ್ತಿದ್ದರು. 25 ವರ್ಷಕಾಲ ಬಾಲನಟನಟಿಯರಿಗೆ ಹಾಡುತ್ತಿದ್ದ ಏಕೈಕ ಮಕ್ಕಳಗಾಯಕಿಯ ಸುಮಧುರ ಗೀತೆಗಳ ಉದಾ.:- ದೇವರಮಕ್ಕಳು ಚಿತ್ರದ “ಓಅಯ್ಯಅಮ್ಮಯ್ಯ…ಧರ್ಮಾರೆ ತಾಯಿತಂದೆ..”; ಚಕ್ರವ್ಯೂಹ ಚಿತ್ರದ “ನಿಜಹೇಳುವೆನು ಅಮ್ಮನಿನ್ನಕಂಡರೆಪ್ರೀತಿ”.  ಇದಲ್ಲದೇ ಇವತ್ತಿಗು ಎವರ್ಗ್ರೀನ್ ಮೆಲೊಡಿಯಸ್ ಹಾಡುಗಳು

ಗಜಮುಖನೆ ಗಣಪತಿಯೆ [ಭಕ್ತಿಗೀತೆ], ಶಿವಶಿವ ಎನ್ನದ ನಾಲಿಗೆಏಕೆ [ಹೇಮಾವತಿ], ಪೂಜಿಸಲೆಂದೇ [ಎರಡು ಕನಸು], ಒಮ್ಮೆನಿನ್ನನ್ನು [ಗಾಳಿಮಾತು], ಗಗನವುಎಲ್ಲೋ+ ಹೆಜ್ಜೆಹೆಜ್ಜೆಗೂ… [ಗೆಜ್ಜೆಪೂಜೆ], ನಂಬಿದೆನಿನ್ನ.. [ಸಂಧ್ಯಾರಾಗ], ಗಾಳಿಗೋಪುರ… [ನಂದಾದೀಪ], ಯುಗ ಯುಗಾದಿ ಕಳೆದರು+ ತಾಯೆಬಾರ ಮೊಗವ ತೋರ [ಕುಲವಧು], ನಾಮೆಚ್ಚಿದ ಹುಡುಗನಿಗೆ [ನಾಮೆಚ್ಚಿದ ಹುಡುಗ], ಬರೆದೆನೀನು [ಸೀತಾ], ಬಾನಲ್ಲು ನೀನೇ [ಬಯಲುದಾರಿ], ಕರೆದರೂ ಕೇಳದೆ [ಸನಾದಿ ಅಪ್ಪಣ್ಣ], ದೀಪವು ನಿನ್ನದೆ [ಮೈಸೂರು ಮಲ್ಲಿಗೆ],

ಭಾರತಭೂಶಿರ [ಉಪಾಸನೆ], ಸುಖದಾಸ್ವಪ್ನಗಾನ [ಮರೆಯದಹಾಡು], ತಂಗಾಳಿಯಲ್ಲಿ [ಜನ್ಮಜನ್ಮದ ಅನುಬಂಧ] ಚಿಲಿಪಿಲಿಗುಟ್ಟುವ+ ಹಗಲುಇರುಳು [ಪಾತಾಳ ಮೋಹಿನಿ], ಆಕಾಶದೀಪವು+ ಹೂವೊಂದು ಬೇಕು [ಪಾವನಗಂಗಾ], ಆಸೆಯಭಾವ.. [ಮಾಂಗಲ್ಯ ಭಾಗ್ಯ], ಮಹಾಲಕ್ಷ್ಮಿಮನೆಗೆ [ಲಕ್ಷ್ಮೀಕಟಾಕ್ಷ], ಬಿಡೆನು ನಿನ್ನಪಾದ [ನಾನಿನ್ನ ಬಿಡಲಾರೆ], ಕಂಗಳು ತುಂಬಿರಲು [ಚಂದನದ ಗೊಂಬೆ], ಒಲವಿನ ಗೆಳೆಯನೆ [ನಾನಿರುವುದೆ ನಿನಗಾಗಿ],

ನಗಿಸಲುನೀನು [ಗಾಳಿಮಾತು], ಮನಸೇನಗಲೇಕೆ [ನಮ್ಮಮಕ್ಕಳು], ನೀತಂದಕಾಣಿಕೆ+ ಏನೋ ಕುರುಡು ಭಾವನೆ [ಹೃದಯಸಂಗಮ], ಬೆಳದಿಂಗಳಾಗಿ ಬಂದೆ [ಗಂಡೊಂದು ಹೆಣ್ಣಾರು], ಈಮೌನವ ತಾಳೆನು [ಮಯೂರ], ಕಾಪಾಡು ಶ್ರೀಸತ್ಯನಾರಾಯಣ [ದಾರಿತಪ್ಪಿದಮಗ] ಇತ್ಯಾದಿ ನಿತ್ಯನೂತನ ಸತ್ಯಸಂವೇದನ ಹಾಡುಗಳು ಅಮೋಘ ಅನನ್ಯ ಅಪ್ರತಿಮ ಅಸಾಮಾನ್ಯ ಅಪರೂಪ ಅಪೂರ್ವ ಅಚ್ಚರಿ ಆಪ್ಯಾಯಮಾನ ಆಚಂದ್ರಾರ್ಕ ಅಜರಾಮರ.

ಕನ್ನಡ ಕೊಂಕಣಿ ಕೊಡವ ತುಳು ತೆಲುಗು ತಮಿಳು ಮಲಯಾಳಂ ಹಿಂದಿ ಮರಾಠಿ ಪಂಜಾಬಿ ಬಂಗಾಳಿ ಒರಿಯ ಇಂಗ್ಲಿಶ್ ಜರ್ಮನಿ ಜಪಾನಿ ಮುಂತಾದ ದೇಶವಿದೇಶದ 21 ಭಾಷೆಗಳಲ್ಲಿ 50 ಸಾವಿರಕ್ಕು ಹೆಚ್ಚು ಗೀತೆಗಳ ಗಾನಸುಧೆ ಹರಿಸುವ ಮೂಲಕ 60 ವರ್ಷಕಾಲ ವಿಖ್ಯಾತರಾದರು.

ತಮ್ಮ ಜೀವಿತಾವಧಿಯಲ್ಲಿ ಅತಿರಥ ಮಹಾರಥರಾದ ಜಿ.ಕೆ. ವೆಂಕಟೇಶ್, ರಾಜನ್ನಾಗೇಂದ್ರ, ವಿಜಯಭಾಸ್ಕರ್, ಎಂ.ಎಸ್.ವಿಶ್ವನಾಥನ್, ಇಳೆಯರಾಜ, ಎ.ಆರ್.ರೆಹಮಾನ್, ಘಂಟಸಾಲ, ಶಂಕರ್ಜೈಕಿಶನ್, ಲಕ್ಷ್ಮಿಕಾಂತ್ಪ್ಯಾರೆಲಾಲ್, ಆರ್.ಡಿ.ಬರ್ಮನ್ ಮುಂತಾದವರ ಸಂಗೀತ ನಿರ್ದೇಶನ ದಲ್ಲಿ ದಿಗ್ಗಜ ಗಾಯಕರಾದ ಘಂಟಸಾಲ, ಪಿ.ಬಿ.ಶ್ರೀನಿವಾಸ್, ಎಸ್.ಪಿ. ಬಾಲಸುಬ್ರಮಣ್ಯಂ, ಟಿ.ಎಂ.ಸೌಂದರರಾಜನ್, ಶಿರ್ಕಾಳಿ ಗೋವಿಂದರಾಜನ್, ಯೇಸುದಾಸ್, ಡಾ.ರಾಜ್ ಕುಮಾರ್, ಕಿಶೋರ್ ಕುಮಾರ್, ಮಹ್ಮದ್ರಫಿ, ಮುಂತಾದವರೊಡನೆ ನೂರಾರು ಯುಗಳಗೀತೆ ಹಾಡಿ ಗಿನ್ನಿಸ್ ದಾಖಲೆ ಮಾಡಿದರು. ಸಹಸ್ರಾರು ಸಂಗೀತ ಸಂಜೆ ಕಾರ್ಯಕ್ರಮ ನೀಡಿದ್ದ ಜಾನಕಮ್ಮ, 2016ರಲ್ಲಿ ಅವರಿಷ್ಟದಂತೆಯೇ ಕಟ್ಟಕಡೆಯ ಮ್ಯೂಸಿಕಲ್ನೈಟ್ ಕಾರ್ಯಕ್ರಮ ನೀಡಿದ್ದು ಅರಮನೆಗಳ ನಗರ ಮೈಸೂರಿನಲ್ಲಿ!

8 ಭಾಷೆ ಕಲಿತು ತಮ್ಮ ಸಿರಿಕಂಠದ ಮುಖೇನ ಗಾನಕೋಗಿಲೆ ಎನಿಸಿದ್ದ ಇವರಿಗೆ ಸಂದ ಗೌರವಗಳು.. ಪದ್ಮಭೂಷಣ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ತಮಿಳುನಾಡು ಕಲೈಮಾಮಣಿ ಪ್ರಶಸ್ತಿ, ಮೈಸೂರು ವಿ.ವಿ. ಗೌರವಡಾಕ್ಟರೇಟ್, ಸೇರಿದಂತೆ ಅನೇಕ ಅಂತಾರಾಷ್ಟ್ರೀಯ, ರಾಷ್ಟ್ರೀಯ, ವಿವಿಧರಾಜ್ಯಗಳ ಪ್ರಶಸ್ತಿ ಬಹುಮಾನ ಗಾನಕೋಗಿಲೆ ಬಿರುದು ಸನ್ಮಾನಗಳು ಜಾನಕಮ್ಮನವರನ್ನು ಹುಡುಕಿಬಂದವು.

ಕಳೆದ 6ದಶಕಗಳಿಂದ ಆಬಾಲವೃದ್ಧರಾಧಿಯಾಗಿ ಪ್ರತಿಯೊಬ್ಬರ ಬಾಯಲ್ಲು ಒಂದಿಲ್ಲೊಂದು ಕಾರ್ಯಕ್ರಮ, ಮದುವೆಮುಂಜಿ, ಪೂಜೆಪುನಸ್ಕಾರ, ಮುಂತಾದ ಸ್ಥಳಗಳಲ್ಲಿ ಹಾಗೂ ಖುಶಿಯಾದಾಗ ದು:ಖವಾದಾಗ ಎಲ್ಲೆಂದರಲ್ಲಿ ಯಾವಾಗಬೇಕಾದರೂ ಯಾರುಬೇಕಾದರೂ ಗುನುಗುನಿಸುವ ಗೀತೆಳನ್ನು ಹಾಡಿದ ಮಹಾತಾಯಿ ಇನ್ನಿಲ್ಲವಾದರು ಎಂದಾಗ ದೇಶದಾದ್ಯಂತ ಕೋಟ್ಯಾಂತರ ಅಭಿಮಾನಿಗಳಿಗೆ ಭರಿಸಲಾರದ ದು:ಖ ತಂದಿದೆ.

1959ರಲ್ಲಿ ವಿ.ರಾಮಪ್ರಸಾದ್ರೊಡನೆ ಮದುವೆಯಾಗಿ ಒಂದು ಮಗುವಿನ ತಾಯಿಯಾದರು. ಸುಖಸಂಸಾರ ಅನುಭವಿಸುತ್ತಿದ್ದ ಇವರಿಗೆ ಸರ್ವರೀತಿಯಲ್ಲು ಪ್ರೋತ್ಸಾಹ ನೀಡುತ್ತಿದ್ದ ಪತಿಯು 1997ರಲ್ಲಿ ವಿಧಿವಶರಾದರು. ಕಾಲಕ್ರಮೇಣ ದೈವಸಂಕಲ್ಪದಂತೆ ಆಧ್ಯಾತ್ಮಿಕದೆಡೆಗೆ ಒಲವು ತೋರಿಸುತ್ತ ಗಾಯನವನ್ನೆ ಉಸಿರಾಗಿಸಿಕೊಂಡು ಬದುಕು ಸಾಗಿಸುತ್ತ ಕನ್ನಡ ಭಾಷೆ ಮತ್ತು ಮೈಸೂರು ನಗರವನ್ನು ಬಹಳ ಇಷ್ಟಪಡುತ್ತಿದ್ದರು. ಒಮ್ಮೆ ಬಂಧು ಬಳಗದವರಿಗೆ ಸೂಚನೆ ನೀಡಿದ್ದರು.

ತಮ್ಮ ಬದುಕಿನ ಅಂತಿಮ ದಿನಗಳನ್ನು ಮೈಸೂರಿನಲ್ಲೆ ಕಳೆಯಬೇಕು, ನಿಧನದ ನಂತರ ಮೈಸೂರಲ್ಲೆ ಅಂತಿಮ ಸಂಸ್ಕಾರ ನಡೆಸಬೇಕೆಂದು ಕೋರಿದ್ದರು. ಕಡೆಗೂ ಅವರಿಚ್ಚೆಯಂತೆ ಮೈಸೂರಿನಲ್ಲಿ ವಾಸವಿದ್ದಾಗಲೇ 11.7.2026 ರಂದು ತಮ್ಮ ಕೊನೆಯುಸಿರೆಳೆದು, ಅಂತಿಮ ಆಸೆಯಂತೆ ಮೈಸೂರಿನಲ್ಲೆ ಅಂತ್ಯಸಂಸ್ಕಾರ ನೆರವೇರಿದ್ದು ದೇವರುಕೊಟ್ಟವರ ಇರಬಹುದು?!

admin
the authoradmin

1 Comment

Leave a Reply