ಹುಣಸೂರು(ಹಿರಿಕ್ಯಾತನಹಳ್ಳಿ ಸ್ವಾಮಿಗೌಡ): ರಸ್ತೆ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಭಾರತ ಸೇನೆಯ ಅಗ್ನಿಪಥ್ ಯೋಜನೆಯಲ್ಲಿ ಅಗ್ನಿವೀರ್ ಸೈನಿಕ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಹುಣಸೂರು ತಾಲ್ಲೂಕಿನ ಹಿರೀಕ್ಯಾತನಹಳ್ಳಿ ಗ್ರಾಮದ ನಿವಾಸಿ ನಂದನ್ (24) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಅಗ್ನಿಪಥ್ ಯೋಜನೆಯಲ್ಲಿ ಸೇನೆಗೆ ಅಗ್ನಿವೀರ್ ಹುದ್ದೆಯಲ್ಲಿ ಕಳೆದ 3 ವರ್ಷದಿಂದ ಸೇನೆಯ ಲಡಾಕ್, ಜಮ್ಮು ಕಾಶ್ಮೀರ್ ನಲ್ಲಿ ಸೇವೆ ಸಲ್ಲಿಸುತ್ತಿದ್ದ ನಂಜೇಗೌಡ, ಲೇ .ರೂಪ ದಂಪತಿ ಪುತ್ರ ನಂದನ್, ಇತ್ತೀಚೆಗೆ 15 ದಿನದ ರಜೆ ಮೇಲೆ ಗ್ರಾಮಕ್ಕೆ ಭೇಟಿ ನೀಡಿದ್ದರು. ಆಷಾಡ ಮಾಸದಲ್ಲಿ ಚಾಮುಂಡೇಶ್ವರಿ ದರ್ಶನ ಪಡೆಯಲು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ದ್ವಿಚಕ್ರ ವಾಹನದಲ್ಲಿ ತೆರಳುವಾಗಿ ಹತೋಟಿ ತಪ್ಪಿ ಅಪಘಾತಕ್ಕೆ ಒಳಗಾಗಿ ಗಾಯಗೊಂಡಿದ್ದರು ಅವರನ್ನು ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.

ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ನಿಧನರಾದರು. ಯೋಧನ ಅಂತ್ಯ ಸಂಸ್ಕಾರ ಸೋಮವಾರ ಸ್ವಗ್ರಾಮ ಹಿರೀಕ್ಯಾತನಹಳ್ಳಿಯಲ್ಲಿ ನೆರವೇರಲಿದೆ. ಮೃತ ನಂದನ್ ಗೆ ತಂದೆ ನಂಜೇಗೌಡ ಮತ್ತು ಕಿರಿಯ ಸಹೋದರ ಇದ್ದಾರೆ.








