LatestMysore

ಬೃಹತ್ ಎಲ್ ಪಿ ಜಿ ಸಂಗ್ರಹಾರ ಬಗ್ಗೆ ಭಾರತ ಯೋಚಿಸಬೇಕು: ಭಾಮಿ ವಿ ಶೆಣೈ ಅಭಿಪ್ರಾಯ

ಮೈಸೂರು: ಕಚ್ಚಾ ತೈಲದ ಬದಲಿಗೆ ಬೃಹತ್  ಎಲ್ ಪಿ ಜಿ ಸಂಗ್ರಹಾರ ಬಗ್ಗೆ ಭಾರತ ಯೋಚಿಸಬೇಕು. ಕಚ್ಚಾ ತೈಲದ ಸಂಗ್ರಹಾರ ಮುಂದಿನ ದಿನಗಳಲ್ಲಿ ಅಗತ್ಯವಿಲ್ಲ ಎಂದು ಖ್ಯಾತ ಇಂಧನ ತಜ್ಞ ಭಾಮಿ ವಿ ಶಣೈ   ಅಭಿಪ್ರಾಯ ಪಟ್ಟಿದ್ದಾರೆ

ನಗರದ ಮೈಸೂರು ಗ್ರಾಹಕರ ಪರಿಷತ್ ನಲ್ಲಿ ಭಾನುವಾರ ಸಮಾನ ಮನಸ್ಕರು ಆಯೋಜಿಸಿದ್ದ ಪಶ್ಚಿಮ ಏಷ್ಯಾ ಬಿಕ್ಕಟ್ಟಿನಿಂದ ನಾವು ಕಲಿತ ಪಾಠ ಎನ್ನುವ  ಕುರಿತ ಮಾತುಕತೆಯಲ್ಲಿ ಅವರು ಮಾತನಾಡಿದರು.

ತೈಲ ಯುಗ ಅಂತ್ಯ ಆರಂಭವಾಗಿದೆ. ಇದರ ಜೊತೆಗೆ ಕಚ್ಚಾತೈಲದ ಲಭ್ಯತೆ ಇಂದು ಅಗಾಧವಾಗಿ  ಬೆಳೆದಿದೆ. ಆದರೆ ಎಲ್ ಪಿ ಜಿ ಹಾಗಲ್ಲ. ಅದರ ಬಳಕೆ ಏರುತ್ತಿದೆ. ಇರಾನ್- ಅಮೇರಿಕ ಯುದ್ಧದ ಸಂದರ್ಭದಲ್ಲಿ ಭಾರತಕ್ಕೆ ದೊಡ್ಡ ಸವಾಲು ಎದುರಾದದ್ದು ಕಚ್ಚಾ ತೈಲ ಪೂರೈಕೆಯಲ್ಲ; ಬದಲಿಗೆ ಎಲ್ ಪಿ ಜಿಯದ್ದು, ಮುಂದಿನ ದಿನಗಳಲ್ಲಿ ಭಾರತ ತೈಲ ಪೂರೈಕೆ ಬಗ್ಗೆ ಖಚಿತ  ದತ್ತಾಂಶವನ್ನು ಹೊಂದುವ ಅಗತ್ಯ ಇದೆ. ಇದು ಪೂರೈಕೆ ಹಾಗು ಬೆಲೆ ಸ್ಥಿರತೆಗೆ ಅತ್ಯಗತ್ಯ,” ಎಂದು ಅವರು ಅಭಿಪ್ರಾಯಪಟ್ಟರು.

ಇರಾನ್-ಇಸ್ರೇಲ್-ಅಮೇರಿಕ ಯುದ್ಧ ಆರಂಭವಾಗುವ ಸಂದರ್ಭದಲ್ಲಿ ಕಚ್ಚಾ ತೈಲ ಬೆಲೆ 200 ಡಾಲರ್ ಗೆ ಏರಬಹುದು ಅನ್ನುವ ಭೀತಿ ಇತ್ತು. ಆದರೆ ಹಾರ್ಮುಜ್ ಜಲಸಂಧಿಗೆ ಪರ್ಯಾಯವಾಗಿ ಬಳಸಲಾದ ಪೈಪ್ ಲೈನ್ ಗಳು ಹಾಗು ಚೀನಾ  ಸೇರಿದಂತೆ ಇತರ ದೇಶಗಳು ತಮ್ಮ  ಕಚ್ಚಾ ತೈಲ ಸಂಗ್ರಹಾರದಿಂದ ತೈಲವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಬೆಲೆ ಏರಿಕೆಯನ್ನು ತಡೆಗಟ್ಟಿದವು ಎಂದು ಹೇಳಿದರಲ್ಲದೆ, ಅಮೇರಿಕಾದ ಅಸ್ಥಿರ ನಡವಳಿಕೆ, ವಿಶ್ವದ ಪ್ರತಿ ರಾಷ್ಟ್ರವನ್ನು ಕಾಡಲಿದೆ ಎಂದು ಅವರು ಎಚ್ಚರಿಸಿದರು.

ಪೂರ್ಣ ಚೇತನ ಶಾಲೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ ದರ್ಶನ್ ರಾಜ್ ಮಾತನಾಡಿ ಜಾಗತಿಕ ಅಸ್ಥಿರತೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಎಲ್ಲಾ ದೇಶಗಳು ಒಮ್ಮತದಿಂದ ಪ್ರಯತ್ನಿಸಬೇಕು ಎಂದರು.

ಲೇಖಕ-ಪತ್ರಕರ್ತ ಶಿವೇಂದ್ರ ಅರಸ್ ಮಾತನಾಡಿ, ಪಶ್ಚಿಮ ಏಷ್ಯಾ ಬಿಕ್ಕಟ್ಟು ನಡುವೆ ನಾಯಕರ ಹೇಳಿಕೆಗಳು ಅಂತಾರಾಷ್ಟ್ರೀಯ ಕಾನೂನಿಗೆ ವಿರುದ್ಧವಾಗಿದೆ. “ಪ್ರತಿ ದೇಶಗಳು ಆಕ್ರಮಣಕಾರಿಯಾಗುವ ಬದಲಿಗೆ ತಮ್ಮ ತಮ್ಮ ದೇಶಗಳ ಸಾರ್ವಭೌಮತೆ ರಕ್ಷಿಸಲು ಗಮನ ನೀಡಬೇಕು,” ಎಂದರು.

ವೈದ್ಯ ಡಾ. ಶ್ರೀರಾಮ್ ಮಾತನಾಡಿ, ಯುದ್ಧಗಳು  ನಮ್ಮ ತಲೆಮಾರು ಮಾತ್ರವಲ್ಲದೆ ಮುಂದಿನ ತಲೆಮಾರುಗಳ ಮೇಲೂ ದುಷ್ಪರಿಣಾಮ ಬೀರಲಿವೆ. “ಮನುಕುಲದ ಅಂತ್ಯಕ್ಕೆ ಯುದ್ಧಗಳು ಕಾರಣವಾದರೆ ಆಶ್ಚರ್ಯವಿಲ್ಲ ಎಂದು ಹೇಳಿದರು.

ಪತ್ರಕರ್ತ ಶ್ರೀನಿವಾಸ ಎಂ, ಟೆಕ್ನಾಕ್ರೇಟ್  ಧೀರಜ್ ಎಂ  ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

admin
the authoradmin

Leave a Reply