ಮೈಸೂರಿನ ಸಂಕನಹಳ್ಳಿಯಲ್ಲಿ ಮದ್ಯವೂ ಇಲ್ಲ… ಮಾಂಸವೂ ಇಲ್ಲ… ಇಲ್ಲಿನ ವಿಶೇಷತೆ ಕುತೂಹಲ ಮೂಡಿಸುತ್ತದೆ..!

ಇವತ್ತಿಗೂ ಆ ಊರಿನಲ್ಲಿ ಮಾಂಸಹಾರ ಸೇವನೆಗೆ ಅವಕಾಶವಿಲ್ಲ. ಬಹುತೇಕ ಸಸ್ಯಾಹಾರಿಗಳೇ ನೆಲೆಸಿರುವ ಹಳ್ಳಿಯಾಗಿರುವ ಕಾರಣ ಇಲ್ಲಿ ಕೋಳಿ ಸಾಕಣೆಯೂ ಇಲ್ಲ ಹೀಗಾಗಿ ಕೋಳಿ ಕೂಗುವ ಸದ್ದು ಕೇಳಿಸುವುದಿಲ್ಲ. ಮಾಂಸ, ಮದ್ಯ ಸೇವನೆಗೂ ಇಲ್ಲಿ ಅವಕಾಶವಿಲ್ಲ. ಇದ್ಯಾವ ಊರು? ಏನಿದರ ವಿಶೇಷ? ಎಂಬಿತ್ಯಾದಿ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ…
ಸಂಕನಹಳ್ಳಿ ಎಂದ ತಕ್ಷಣ ಬಹಳಷ್ಟು ಜನಕ್ಕೆ ಒಂದಷ್ಟು ಕುತೂಹಲ ಮೂಡುವುದು ಸಹಜ.. ತಲೆಮಾರುಗಳಿಂದ ಬಂದಿರುವ ಸಂಪ್ರದಾಯವನ್ನು ಇವತ್ತಿಗೂ ಜನ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಕೆಲವು ಸಂಪ್ರದಾಯವನ್ನು ಮೀರಿದವರಿಗೆ ತೊಂದರೆಯಾಗಿದೆ. ಹೀಗಾಗಿಯೇ ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ಇಂದಿಗೂ ಜನ ಸಾಗುತ್ತಿದ್ದಾರೆ. ಇಷ್ಟಕ್ಕೂ ಸಂಕನಹಳ್ಳಿಯಲ್ಲಿ ಅಂತಹ ಆಚರಣೆ ಯಾವುದು? ಎಂಬ ಕುತೂಹಲ ಹುಟ್ಟಿಕೊಳ್ಳದೆ ಇರುವುದಿಲ್ಲ.
ಸಂಕನಹಳ್ಳಿಯು ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಭೇರ್ಯ-ಸಾಲಿಗ್ರಾಮ ಮುಖ್ಯ ರಸ್ತೆಯ ಬಾಚಹಳ್ಳಿ ಗ್ರಾಮದಿಂದ 2ಕಿಮೀ ದೂರದಲ್ಲಿದೆ. ಇಲ್ಲಿಗೆ ತೆರಳಿದರೆ ಈ ಗ್ರಾಮದಲ್ಲಿ ಜನ ಮಾಂಸಹಾರಕ್ಕಾಗಿ ಪ್ರಾಣಿಗಳನ್ನಾಗಲೀ, ಕೋಳಿಗಳನ್ನಾಗಲೀ ಸಾಕುವುದಿಲ್ಲ. ಬಹುಮುಖ್ಯವಾಗಿ ಇಲ್ಲಿನವರು ಸಸ್ಯಹಾರಿಗಳಾಗಿರುವುದರಿಂದ ಅವುಗಳನ್ನು ಸಾಕುವ ಗೋಜಿಗೆ ಹೋಗಿಲ್ಲ ಎಂದರೆ ತಪ್ಪಾಗಲಾರದು. ಕೋಳಿಗಳೇ ಇಲ್ಲದೆ ಮೇಲೆ ಕೋಳಿ ಕೂಗುವ ಸದ್ದು ತಾನೆ ಎಲ್ಲಂದ ಬರಬೇಕು?
ಸಾಮಾನ್ಯವಾಗಿ ಹಳ್ಳಿಗಳಲ್ಲಿ ಹುಂಜ ಕೋಳಿಗಳೇ ಬೆಳಗ್ಗಿನ ಅಲರಾಂ ಎಂದರೆ ತಪ್ಪಾಗಲಾರದು. ಆದರೆ ಇಲ್ಲಿ ಅದಕ್ಕೆ ಜಾಗವಿಲ್ಲ. ಸಂಕನಹಳ್ಳಿ ಬಗ್ಗೆ ಹೇಳಬೇಕೆಂದರೆ, ಗ್ರಾಮದ ಜನರ ಕಸುಬು ವ್ಯವಸಾಯವಾಗಿದ್ದು, ವಾಸಿಸುವ ಜನರೆಲ್ಲರೂ ಸಸ್ಯಹಾರಿಯಾಗಿರುವುದರಿಂದ ಮಾಂಸಹಾರ ಸೇವನೆ ನಿಷಿದ್ಧವಾಗಿದೆ ಹಿಂದಿನ ಕಾಲದಿಂದಲೂ ಗ್ರಾಮಕ್ಕೆ ಮಾಂಸದ ಪ್ರವೇಶವಿಲ್ಲ. ಒಂದು ವೇಳೆ ಇದನ್ನು ಧಿಕ್ಕರಿಸಿ ಗ್ರಾಮದಲ್ಲಿ ಮಾಂಸದ ಅಡುಗೆ ಮಾಡಿ ಸೇವಿಸಿದರೆ ಅದರಿಂದ ಕೆಡುಕಾಗುತ್ತದೆ ಎಂಬ ನಂಬಿಕೆ ಜನರದ್ದಾಗಿದೆ.
ಬಹಳಷ್ಟು ವರ್ಷಗಳ ಹಿಂದೆ ಗೊಂಬೆ ನಾಟಕ ಆಡಿಸಲು ಬಂದಂತಹ ಕಲಾವಿದರು ಮಾಂಸ ಹಾರಿಗಳಾಗಿದ್ದು, ಊರಿನಿಂದ ಹೊರಗೆ ಅಡುಗೆ ಮಾಡಿಕೊಂಡು ಊಟ ಮಾಡಿ ನಂತರ ಗ್ರಾಮಕ್ಕೆ ಪ್ರವೇಶ ಮಾಡಿ ಗೊಂಬೆ ಆಡಿಸುತ್ತಿದ್ದರಂತೆ. ಒಮ್ಮೆ ಗ್ರಾಮದ ಜನಕ್ಕೆ ತಿಳಿಯದ ರೀತಿಯಲ್ಲಿ ಅವರು ಕದ್ದುಮುಚ್ಚಿ ಗ್ರಾಮದೊಳಗೆ ಮಾಂಸದ ಅಡುಗೆ ಮಾಡಿ ಊಟ ಮಾಡಿದ್ದರಂತೆ. ಆದರೆ ಆ ರಾತ್ರಿ ಕಳೆದು ಬೆಳಗಿನ ಹೊತ್ತಿಗೆ ಗೊಂಬೆ ಆಟ ಆಡಿಸುವವರ ಬಳಿಯಿದ್ದ ಮೂರು ಕುದುರೆಗಳು ಸಾವನ್ನಪ್ಪಿದ್ದವಂತೆ.
ಇದೊಂದು ಕಥೆಯು ಗ್ರಾಮದಲ್ಲಿ ಪ್ರಚಲಿತದಲ್ಲಿರುವುದರಿಂದ ಗ್ರಾಮದ ಒಳಿತಿಗಾಗಿ ಜನ ಹಿಂದಿನ ಸಂಪ್ರದಾಯವನ್ನೇ ಮುಂದುವರೆಸುತ್ತಿದ್ದಾರೆ. ಇನ್ನು ಸಂಕನಹಳ್ಳಿಯಲ್ಲಿ ಮದ್ಯಕ್ಕೂ ಬಹಿಷ್ಕಾರ ಹಾಕಿದ್ದಾರೆ. ಹಿಂದಿನ ಕಾಲದಲ್ಲಿ ಗ್ರಾಮಕ್ಕೆ ಒಂದೋ ಎರಡೋ ಸಾರಾಯಿ ಅಂಗಡಿಗಳು ಇರುತ್ತಿದ್ದವು. ಆದರೆ ಅವತ್ತಿನ ಕಾಲದಿಂದಲೇ ತಮ್ಮ ಊರಿಗೆ ಸಾರಾಯಿ ಅಂಗಡಿಬೇಡವೆಂದು ಪ್ರತಿಪಾದಿಸುತ್ತಾ ಬಂದವರು ಇಲ್ಲಿನವರು. ಹೀಗಾಗಿ ಇಲ್ಲಿ ಮದ್ಯಪಾನಕ್ಕೂ ಅವಕಾಶ ಮಾಡಿಕೊಡಲಾಗಿಲ್ಲ.
ಗ್ರಾಮದ ಜನ ವ್ಯವಸಾಯ ಮಾಡುತ್ತಿದ್ದು, ತರಕಾರಿ, ಭತ್ತ, ರಾಗಿ, ಹೊಗೆಸೊಪ್ಪು ಬೆಳೆಯುತ್ತಾರೆ. ಜತೆಗೆ ಹಸು, ಎಮ್ಮೆ, ಕುರಿ, ಮೇಕೆಗಳ ಸಾಕಣೆ ಮಾಡುತ್ತಾರೆ. ಗ್ರಾಮದ ಬಸವೇಶ್ವರ ದೇಗುಲದಲ್ಲಿರುವ ನಂದಿಯು ಪರಶಿವನಿಂದ ಅನುಗ್ರಹ ಪಡೆದು ನೆಲೆಸಿದೆ ಎಂಬ ನಂಬಿಕೆ ಗ್ರಾಮಸ್ಥರದ್ದಾಗಿದೆ. ಈ ದೇಗುಲದಲ್ಲಿರುವ ಬಸವೇಶ್ವರನಿಗೆ ಪ್ರತಿದಿನವೂ ತಪ್ಪದೆ ಪೂಜೆ ನಡೆಯುತ್ತಿದೆಯಲ್ಲದೆ, ಗ್ರಾಮದ ಜನರಿಗೆ ಬಸವೇಶ್ವರ ಆರಾಧ್ಯ ದೈವನಾಗಿದ್ದಾನೆ.
ಗ್ರಾಮದಲ್ಲಿ ನೀರು ಬಳಕೆದಾರರ ಸಹಕಾರ ಸಂಘ ಹಾಗೂ ಮಹಿಳಾ ಸ್ವ-ಸಹಾಯ ಸಂಘಗಳು ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಗ್ರಾಮದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಮದ್ಯಪಾನವು ಗ್ರಾಮದಲ್ಲಿ ಸಂಪೂರ್ಣವಾಗಿ ನಿಷೇಧವಾಗಿದೆ. ಇಷ್ಟೇ ಅಲ್ಲದೆ, ಗ್ರಾಮದ ಒಳಿತಿಗಾಗಿ ಗ್ರಾಮಸ್ಥರು ಒಟ್ಟಾಗಿ ಸೇರಿ ಪ್ರತಿ ವರ್ಷವೂ ಬಂಡಿ ಹಬ್ಬವನ್ನು ಆಚರಿಸುತ್ತಾ ಬರಲಾಗುತ್ತಿದೆ.
ಈ ವೇಳೆ ಪಕ್ಕದ ಗ್ರಾಮವಾದ ಮೇಲೂರಿನಿಂದ ಶ್ರೀಶಂಭುಲಿಂಗೇಶ್ವರ ದೇವರನ್ನು ತಂದು ತಮ್ಮ ಊರಿನ ಮಧ್ಯಭಾಗದಲ್ಲಿರುವ ಕುರ್ಜಿನಲ್ಲಿ ಪ್ರತಿಷ್ಠಾಪಿಸಿ ಭಕ್ತಿಭಾವಗಳಿಂದ ಪೂಜಿಸುವುದು ಇಲ್ಲಿನ ಸಂಪ್ರದಾಯವಾಗಿದೆ. ಸದ್ಯ ಸಂಕನಹಳ್ಳಿಯ ಅಭಿವೃದ್ಧಿಗೆ ಏನೆಲ್ಲ ಬೇಕೋ ಅದೆಲ್ಲವನ್ನು ಮಾಡುತ್ತಿರುವ ಜನ ಮದ್ಯ ಮಾಂಸದಿಂದ ದೂರವಿದ್ದಾರೆ ಹೀಗಾಗಿಯೇ ಈ ಊರು ಇತರೆ ಊರುಗಳಿಗಿಂತ ವಿಶೇಷವಾಗಿ ಕಾಣಿಸುತ್ತಿದೆ.
B.M.Lavakumar