ಕ್ರಾಂತಿಯೋಗಿ ಬಸವಾ ಮಹಾನುಭಾವ
ಅರಿವಿನಾ ಬೇರು ಗುರುವಿನಾ ಗುರು
ಅನುಪಮ ಅನುರೂಪ ಕೀರ್ತಿಸೂರು
ಜಾತ್ಯಾತೀತ ಮರದ ಮಹಾಬೇರು
ಅಪ್ರತಿಮ ಜನ್ಮದ ಆಧ್ಯಾತ್ಮತೇರು
ಅಂತರಂಗ ಬಹಿರಂಗ ಶುದ್ಧಿಯುಳ್ಳ
ನಿಜಗುಣ ಶಿವಯೋಗಿ ಲಿಂಗವಂತರುಳ್ಳ
ನಡೆನುಡಿ ಪ್ರವಚನ ಉದ್ದುದ್ದ ಭಾಷಣವುಳ್ಳ
ಬದುಕು ಬಾಳು ಎಲ್ಲರಿಗು ಬೇಕಾಗಿಲ್ಲ
ಈ ಒಂದೇಒಂದು ವಚನ ಸಾಕುಬೇಕಲ್ಲ
“ಕಳಬೇಡ, ಕೊಲಬೇಡ, ಹುಸಿಯನುಡಿಯಬೇಡ,
ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ,
ತನ್ನಬಣ್ಣಿಸಬೇಡ, ಇದಿರ ಅಳಿಯಲುಬೇಡ,
ಇದೇಅಂತರಂಗಶುದ್ಧಿ, ಇದೇಬಹಿರಂಗಶುದ್ಧಿ
ಇದೇ ನಮ್ಮಕೂಡಲಸಂಗಮನೊಲಿಸುವ ಪರಿ”
ಗುರು-ಲಿಂಗ-ಜಂಗಮ ಮಹತ್ವ ತ್ರಿಜನ್ಮಸತ್ಯ
ಅಪ್ರತಿಮ ತ್ರಿವಿಕ್ರಮ ತ್ರಿಕೋನ ತ್ರಿಗುಣನಿತ್ಯ
ಆತ್ಮ-ಪರಮಾತ್ಮ ನಡುವಣ ಸರಳಾಚಾರದ ಸತ್ವ
ಅವತಾರ ತೋರದೆ ಬೆಳಕು ತೋರಿದ ವಿಚಾರ ತತ್ವ
ಅಂಗೈಲಿ ಪಂಚಾಕ್ಷರ ಪವಡಿಸಿದ ಸುಪುತ್ರ
ತ್ರಿವಿಧಕಟಿಬದ್ಧ ತ್ರಿಕರಣಶುದ್ಧ ಪರಮಪವಿತ್ರ
ಅಳಿಸಲು ಚತುರ್ವರ್ಣ ತಾರತಮ್ಯತೆ
ತೊಲಗಿಸಲು ಸಾಮಾಜಿಕ ಅಸ್ಪೃಶ್ಯತೆ
ತರಲು ಸ್ತ್ರೀ-ಪುರುಷ ಸರಿಸಮಾನತೆ
ವೈದಿಕವೇದಿಕೆಯ ಟೀಕೆ-ಟಿಪ್ಪಣಿ ಕಂತೆ
ಧರ್ಮಾಧರ್ಮದ ಕರಾಳತೆಯ ಸಂತೆ
ಮೌಢ್ಯದ ವಿರುದ್ಧ ರೂವಾರಿಯ ಚಿಂತೆ
ನಿತ್ಯಶೋಷಣೆಯ ಒಣವೇದಾಂತ ವಿರುಧ್ಧ
ಸತ್ಯಪೋಷಣೆಯ ರಣಸಿದ್ಧಾಂತ ಯುದ್ಧ
ನುಡಿದಂತೆಯೇ ನಡೆದು ನಡೆದಂತೇ ನುಡಿದ
ಯುಕ್ತಯೋಗಿ ಮುಕ್ತಧರ್ಮದ ತತ್ವಸಾರಿದ
ನೀನೋರ್ವ ವಿಶ್ವಗುರು ನೀನೇ ವಿಶ್ವಮಾನವ
ನಿನಗೆ ನೀನೇ ಸಾಟಿ ಚೆನ್ನಕೀರುತಿ ವಚನ ಸಂಹಿತೆ
ಚಿನ್ನದ ಮೂರುತಿ ರನ್ನದ ಆರತಿ ನಿನ್ನಯ ಚರಿತೆ
ನಮೋ ನಮಃ ಜಗಜ್ಯೋತಿ ಬಸವೇಶ್ವರ
ಅನನ್ಯ ಅಲ್ಲಮ ಆಚಂದ್ರಾರ್ಕ ಅಜರಾಮರ!

(1987ರ “ಬಸವ ಜಯಂತಿ”ಯಂದು ಮೈಸೂರಿನ ಕರ್ನಾಟಕ ಕಲಾಮಂದಿರ ಕಾರ್ಯಕ್ರಮದಲ್ಲಿ ಪ್ರಸ್ತುತ ಪಡಿಸಿದ ಭಕ್ತಿಭಾವ)









ಅನಂತಾನಂತ ಧನ್ಯವಾದ ಲವಕುಮಾರ್ ಸರ್.
ಕುಮಾರಕವಿ ಬೋ.ನಾ.ನಟರಾಜ
ಅನಂತಾನಂತ ಧನ್ಯವಾದ ಲವಕುಮಾರ್ ಸರ್.
ಕುಮಾರಕವಿ ಬೋ.ನಾ.ನಟರಾಜ, ಬೆಂಗಳೂರು