ಕೆ.ಆರ್.ನಗರ(ಸಂಘಟನೆ ಮಂಜುನಾಥ್): 12ನೇ ಶತಮಾನದಲ್ಲೆ ಅಸಮಾನತೆಯ ಕತ್ತಲನ್ನು ಹೋಗಲಾಡಿಸಿ ಸಮಾನತೆಯ ಬೆಳಕನ್ನು ಹರಡಿದ ಮಹಾನ್ ಚಿಂತಕರಾಗಿದ್ದ ಬಸವಣ್ಣನವರ ಆದರ್ಶಗಳು ಎಲ್ಲಾ ಕಾಲಕ್ಕೂ ಸಲ್ಲುವಂತಹದ್ದಾಗಿದೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಪಟ್ಟಣದ ಬಸವೇಶ್ವರ ಬಡಾವಣೆಯ ಶ್ರೀಬಸವೇಶ್ವರ ದೇವಾಲಯದ ಆವರಣದಲ್ಲಿ ತಾಲೂಕು ಆಡಳಿತದ ವತಿಯಿಂದ ಏರ್ಪಡಿಸಲಾಗಿದ್ದ ಬಸವಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಮಹಾನ್ ಮಾನವತಾವಾದಿ, ಜಗಜ್ಯೋತಿ, ವಿಶ್ವಗುರು, ರಾಜ್ಯದ ಸಾಂಸ್ಕೃತಿಕ ನಾಯಕ ಸಮಾನತೆಯ ಹರಿಕಾರ ಎನಿಸಿದ ಬಸವಣ್ಣನವರು ಸಮಾಜದಲ್ಲಿ ಬೇರೂರಿದ್ದ ಲಿಂಗತಾರತಮ್ಯ, ಜಾತೀಯತೆ, ಮೇಲು- ಕೀಳುಬಾವನೆಗಳನ್ನು ತೊಡೆದು ಹಾಕಲು ಮಾನವೀಯತೆಯ ಮೌಲ್ಯಗಳನ್ನು ನೆಲೆಗೊಳಿಸಲು ಬಸವಣ್ಣನವರು ಹೋರಾಟದೊಂದಿಗೆ ಇಟ್ಟ ದಿಟ್ಟಹೆಜ್ಜೆಯೊಂದಿಗೆ ಮನಸ್ಸು ಸ್ವಚ್ಚವಾಗಿದ್ದಾಗಲೆ ಸಮಾಜ ಸ್ವಚ್ಚವಾಗಿರುತ್ತದೆ ಎಂಬುದನ್ನು ನಮಗೆ ಅಂದಿನ ದಿನಗಳಲ್ಲೆ ಹೇಳಿದ್ದರು ಎಂದರು.

ಅಂತಹ ಮಹಾನ್ ಚೇತನ ಹಾಕಿಕೊಟ್ಟ ಮಾರ್ಗದಲ್ಲಿ ಪ್ರತಿಯೊಬ್ಬರೂ ನಡೆದಲ್ಲಿ ಶಾಂತಿ ನೆಮ್ಮದಿಯೊಂದಿಗೆ ಸಮಾಜದಲ್ಲಿ ಸಮಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದರಲ್ಲದೆ, ಪಟ್ಟಣದಲ್ಲಿ ನಿರ್ಮಾಣ ಹಂತದಲ್ಲಿರುವ ಬಸವ ಭವನ ಉದ್ಘಾಟನೆಗೆ ಎಲ್ಲ ಕ್ರಮ ಕೈಗೊಳ್ಳುವುದಾಗಿ ಹೇಳಿದ ಶಾಸಕರು ಅದಕ್ಕೆ ಬೇಕಾದ ನಿವೇಶನವನ್ನು ಟ್ರಸ್ಟ್ಗೆ ಕೊಡಿಸಿ ಅಗತ್ಯ ಅನುದಾನದೊಂದಿಗೆ ಶೀಘ್ರ ಬಸವಭವನ ಉದ್ಘಾಟನೆಗೆ ಕ್ರಮಕೈಗೊಳ್ಳುವುದಾಗಿ ಹೇಳಿದರು.

ಜಿ.ಪಂ.ಮಾಜಿ ಸದಸ್ಯ ಎ.ಎಸ್.ಚನ್ನಬಸಪ್ಪ, ಕೆಪಿಸಿಸಿ ಸದಸ್ಯ ಸಿ.ಪಿ.ರಮೇಶ್ಕುಮಾರ್, ತಹಸೀಲ್ದಾರ್ ಜಿ.ಸುರೇಂದ್ರಮೂರ್ತಿ ಬಸವಣ್ಣನವರ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ವೀರಶೈವ ಮುಖಂಡ ಮೆಡಿಕಲ್ರವಿಕುಮಾರ್, ತಾಲೂಕು ಜಾನಪದಸಾಹಿತ್ಯ ಪರಿಷತ್ ಅಧ್ಯಕ್ಷ ತಿಮ್ಮಶೆಟ್ಟಿ, ಪುರಸಭೆ ಮಾಜಿಸದಸ್ಯ ಕೋಳಿಪ್ರಕಾಶ್, ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಗಡ್ಡಮಹೇಶ್, ಪಶುವೈದ್ಯಾಧಿಕಾರಿ ಡಾ.ಹರೀಶ್, ಸಿಡಿಪಿಒ ಸಿ.ಎಂ.ಅಣ್ಣಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಕೃಷ್ಣಪ್ಪ, ಪುನೀತ್, ಗಂಗಾಧರ್, ಸದಾಶಿವಮೂರ್ತಿ ಮತ್ತಿತರರು ಹಾಜರಿದ್ದರು.








