ಕೆ.ಆರ್.ನಗರ(ಸಂಘಟನೆ ಮಂಜುನಾಥ್) : ಕಾವೇರಿ ನದಿಯಲ್ಲಿ ಈಜಲು ಹೋದ 6 ಮಂದಿ ನೀರಿನಲ್ಲಿ ಮುಳುಗಿ ಮೃತ ಪಟ್ಟಿರುವ ದುರ್ಘಟನೆ ಪಟ್ಟಣ ಸಮೀಪದ ಹಳೇ ಎಡತೊರೆ ಪಂಪ್ ಹೌಸ್ ಬಳಿ ಭಾನುವಾರ ಮಧ್ಯಾಹ್ನ ನಡೆದಿದೆ.
ಊಟಿಯ ಸೈಯ್ಯದ್ಇಸ್ಮಾಯಿಲ್ ಎಂಬುವರ ಪತ್ನಿ ಸೈಯ್ಯದ್ಫಾತೀಮ(35), ಬೆಂಗಳೂರಿನ ಬಾಬು ಎಂಬುವರ ಮಗ ಯಾಸೀನ್(23), ಯಾಸೀನ್ ಪತ್ನಿ ನೇಹಾ(20), ಆರೀಫ್ ಎಂಬುವರ ಮಗ ಅಯಮಾನ್(13), ಮೈಸೂರಿನ ಉದಯಗಿರಿಯ ಸಾದಿಕ್ ಎಂಬುವರ ಮಗ ಉಮೇರ್(7), ಪಟ್ಟಣದ ಮುಸ್ಲಿಂ ಬ್ಲಾಕ್ನ ರಿಯಾಜ್ಪಾಷ ಎಂಬುವರ ಮಗ ಆಫಿಪಾ(20) ಎಂಬುವರು ಘಟನೆಯಲ್ಲಿ ಮೃತಪಟ್ಟ ದುರ್ದೈವಿಗಳು.

ಇನ್ನು ನೀರಿನಲ್ಲಿ ಮುಳುಗುತ್ತಿದ್ದ ಬನ್ನೂರಿನ ಜುಬೇದಾ(40), ಬೆಂಗಳೂರಿನ ಸಲ್ಮಾ(45) ಪ್ರಾಣಾಪಾಯದಿಂದ ಪಾರಾಗಿದ್ದು ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಎಲ್ಲರೂ ಈಜಲು ನದಿಗೆ ಇಳಿಯುವ ಜಾಗದಲ್ಲಿ ಇಳಿದಿದ್ದರೆ ಯಾವುದೇ ಸಾವು ನೋವು ಸಂಭವಿಸುತ್ತಿರಲಿಲ್ಲ, ಆದರೆ ಇವರು ರೈಲ್ವೆಸೇತುವೆಯ ಕೆಳಗೆ ಹೆಚ್ಚು ಆಳವಿರುವ ಜಾಗದಲ್ಲಿ ಈಜಲು ಹೋದಾಗ ಈಜು ಬಾರದ ಇವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಘಟನೆ ಸಂದರ್ಭ ಮುಳುಗುತ್ತಿರುವುದನ್ನು ನೋಡಿ ಎಲ್ಲರೂ ಕೂಗಿಕೊಂಡಾಗ ಕೂಡಲೇ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ಮುಳುಗುತ್ತಿದ್ದ ಇಬ್ಬರನ್ನು ಕೂಡಲೆ ರಕ್ಷಿಸಿದ್ದಾರೆ ನಂತರ ಮುಳುಗುತ್ತಿದ್ದವರನ್ನು ಮೇಲೆತ್ತಿ ಕೂಡಲೆ ಐವರನ್ನು ಪಟ್ಟಣದ ಸಮೃದ್ದಿ ಆಸ್ಪತ್ರೆಗೆ ಮಗುವನ್ನು ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ರವಾನಿಸಿದ್ಧಾರೆ ಆದರೆ ಆಸ್ಪತ್ರೆಗೆ ತರುವಷ್ಟರಲ್ಲಾಗಲೇ ಎಲ್ಲರೂ ಮೃತಪಟ್ಟಿರುವುದನ್ನು ವೈದ್ಯರು ಖಚಿತಪಡಿಸಿದ ಕಾರಣ ಮೃತದೇಹಗಳನ್ನು ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಿ ಮರಣೋತ್ತರ ಪರೀಕ್ಷೆಯ ನಂತರ ಮೃತದೇಹಗಳನ್ನು ವಾರಸುದಾರರಿಗೆ ಒಪ್ಪಿಸಲಾಯಿತು.

ಆನಂತರ ಮೃತ ದೇಹಗಳ ಶವ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಲಾಯಿತು. ಈ ಸಂಬಂಧ ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇನ್ನು ಕೆ.ಆರ್.ನಗರ ಪಟ್ಟಣದ ಸಾರ್ವಜನಿಕ ಶವಗಾರದ ಬಳಿ ಮೃತ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತಲ್ಲದೆ ಸಮೃದ್ದಿ ಆಸ್ಪತ್ರೆ ಮತ್ತು ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ ಸಾವಿರಾರು ಮಂದಿ ನದಿಯಲ್ಲಿ ಮುಳುಗಿ ಮೃತ ಪಟ್ಟವರಿಗೆ ಮರುಕ ವ್ಯಕ್ತಪಡಿಸಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಶವಗಾರಕ್ಕೆ ಶಾಸಕ ಡಿ.ರವಿಶಂಕರ್, ಮಾಜಿ ಸಚಿವ ಸಾ.ರಾ.ಮಹೇಶ್, ತಹಶೀಲ್ದಾರ್ .ಸುರೇಂದ್ರಮೂರ್ತಿ, ಜಿಲ್ಲಾ ಪೊಲೀಸ್ ಅಧೀಕ್ಷ ಮಲ್ಲಿಕಾರ್ಜುನ ಬಾಲದಂಡಿ, ಡಿವೈಎಸ್ ಪಿ ರಾಜಣ್ಣ, ಪೊಲೀಸ್ ಇನ್ಸ್ ಪೆಕ್ಟರ್ ಎಸ್.ಶಿವಪ್ರಕಾಶ್, ಮತ್ತಿತರು ಭೇಟಿ ನೀಡಿದರು.

ಮೃತ ಪಟ್ಟವರ ಕುಟುಂಬದವರಿಗೆ ಸಾಂತ್ವಾನ ಹೇಳಿದ ಶಾಸಕ ಡಿ.ರವಿಶಂಕರ್ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಘಟನೆಯ ವಿಚಾರವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದ ನಂತರ ವಿಷಾದ ವ್ಯಕ್ತಪಡಿಸಿರುವ ಅವರು ಪರಿಹಾರವನ್ನು ಘೋಷಿಸಿದ್ದಾರೆ ಎಂದರು.

ಸರ್ಕಾರದ ಪರಿಹಾರದೊಂದಿಗೆ ನಾನು ಕೂಡ ವೈಯಕ್ತಿಕವಾಗಿ ಮೃತ ಪಟ್ಟ ಕುಟುಂಬಸ್ಥರಿಗೆ 50 ಸಾವಿರ ನೀಡುವುದಾಗಿ ಪ್ರಕಟಿಸಿದರು. ನಮ್ಮ ಕ್ಷೇತ್ರದ ವ್ಯಾಪ್ತಿಯ ಕಾವೇರಿ ನದಿಯಲ್ಲಿ ಮುಳುಗಿ 6 ಮಂದಿ ಮೃತ ಪಟ್ಟಿರುವುದು ಅತ್ಯಂತ ನೋವಿನ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದ ಅವರು ಮೃತರ ಆತ್ಮಕ್ಕೆ ಶಾಂತಿ ಕೋರುವುದರ ಜತೆಗೆ ಅವರ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು.
ಇದರ ಜತೆಗೆ ಮೃತರ ಶವಗಳನ್ನು ಅವರ ಹುಟ್ಟೂರಿಗೆ ಸಾಗಿಸಲು ಸಂಪೂರ್ಣ ಸಹಕಾರ ನೀಡುವುದಾಗಿ ಘೋಷಿಸಿದ ಶಾಸಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಸರ್ಕಾರದಿಂದ ವೆಚ್ಚ ಭರಿಸುವುದಾಗಿ ತಿಳಿಸಿದರು.

ಮಾಜಿ ಶಾಸಕ ಸಾ.ರಾ.ಮಹೇಶ್ ಭೇಟಿ ನೀಡಿ ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ. ಘಟನೆ ವಿಚಾರ ತಿಳಿಯುತ್ತಿದ್ದಂತೆ ಸಂಬಂಧಿಕರು ಹಾಗೂ ಸಾರ್ವಜನಿಕರು ಸಾಗರೋಪಾದಿಯಲ್ಲಿ ಹರಿದುಬಂದ ಕಾರಣ ಕೂಡಲೆ ಎಚ್ಚೆತ್ತ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿ ಮರಣೋತ್ತರ ಪರೀಕ್ಷೆ ನಡೆಸಿದರು. ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನಬಾಲದಂಡಿ, ಡಿವೈಎಸ್ಪಿ ರಾಜಣ್ಣ, ಸರ್ಕಲ್ಇನ್ಸ್ಪೆಕ್ಟರ್ ಶಿವಪ್ರಕಾಶ್ ಸ್ಥಳದಲ್ಲಿದ್ದರು. ಕುಟುಂಬದವರು ನೀಡಿದ ದೂರಿನಮೇರೆಗೆ ದೂರು ದಾಖಲಿಸಿಕೊಂಡಿರುವ ಪಟ್ಟಣ ಪೋಲೀಸರು ಮುಂದಿನಕ್ರಮ ಕೈಗೊಂಡಿದ್ಧಾರೆ.

ಮೃತ ಪಟ್ಟ 6 ಮಂದಿಯ ಕುಟುಂಬಸ್ಥರಿಗೆ ಮಾಜಿ ಸಚಿವ ಸಾ.ರಾ.ಮಹೇಶ್ ತಲಾ 50 ಸಾವಿರ ರೂ ವೈಯಕ್ತಿಕ ಪರಿಹಾರ ನೀಡಿದರು. ಆಸ್ಪತ್ರೆಯ ಶವಗಾರಕ್ಕೆ ಭೇಟಿ ನೀಡಿ ಮೃತರ ಕುಟುಂಬಸ್ಥರಿಗೆ ಸಾಂತ್ವಾನ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮತ್ತಿಬ್ಬರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದರಲ್ಲದೆ, ವೈಯಕ್ತಿಕ ಪರಿಹಾರದ ಜತೆಗೆ ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಮಾತನಾಡಿ ಕೇಂದ್ರದಿಂದಲೂ ಪರಿಹಾರ ಕೊಡಿಸುವ ಭರವಸೆಯನ್ನು ಸಾ.ರಾ.ಮಹೇಶ್ ನೀಡಿದ್ದಾರೆ.








