CinemaLatest

ಶರತ್ ಲತಾ ಚಂದನವನದ ಕಲ್ಪನಾಳಾಗಿ ಮಿನುಗಿದ್ದು ಹೇಗೆ? ಹುಟ್ಟು-ಬದುಕು-ಸಾವು ಎಲ್ಲವೂ ದುರಂತಮಯ!

ಕನ್ನಡ ಚಲನಚಿತ್ರ ರಂಗ ಎಂದೂ ಕಾಣದ ಧ್ರುವತಾರೆ ಕಲ್ಪನಾ ಅಚ್ಚಳಿಯದ ಅಪ್ರತಿಮ ಕಲಾವಿದೆ. ಚಂದನವನದ ಅಭಿಮಾನಿಗಳು ನೀಡಿದ ‘ಮಿನುಗುತಾರೆ’ ಬಿರುದು ಇವರಿಗೆ ಅನ್ವರ್ಥ. ಶೇಕಡ ನೂರರಷ್ಟು ಪ್ರತಿಭಾವಂತೆ ಮಿನುಗು ತಾರೆಯಾಗಿ ಮಿಂಚಿ ಮಾಯವಾದ ನುರಿತ ನಟಿ! ಇವರ ನಟನಾ ಬದುಕು ಹೇಗಿತ್ತು? ಎಂಬುದರ ಕುರಿತಂತೆ ಹಿರಿಯ ಬರಹಗಾರರಾದ ಕುಮಾರಕವಿ ನಟರಾಜ್ ಅವರು ಇಲ್ಲಿ ತೆರೆದಿಟ್ಟಿದ್ದಾರೆ.

ಕಲ್ಪನಾ… 18ವರ್ಷ ಪರ್ಯಂತ ಚಂದನವನದ ಸಾಮ್ರಾಜ್ಞಿಯಾಗಿ ಮೆರೆದ ಓರ್ವ ಮಹಾನ್ ಕಲಾವಿದೆ. ಇಂಥ ಸರ್ವಮಂಗಳೆಯು ತಮ್ಮ ಕಡೆಗಾಲದಲ್ಲಿ ನಾಟಕರಂಗದ ಕಲಾಸೇವಕಿಯಾಗಿ ಕಾಯಕ ಸಲ್ಲಿಸುವಾಗಲೇ ಒಂದು ದುರ್ದಿನ ಕ್ರೂರ ವಿಧಿಯ ವಕ್ರದೃಷ್ಟಿಗೆ ಸಿಲುಕಿ ನಲುಗಿ ನರಳಿ ಅಕಾಲ ಮೃತ್ಯುವಿನ ಬಲಿಪಶುವಾಗಿ ಅಂತ್ಯ ಕಂಡದ್ದು ಕನ್ನಡ ಚಿತ್ರರಂಗ ಇತಿಹಾಸದ ಅತ್ಯಂತ ದುರಂತ ಅಧ್ಯಾಯ?!

18ನೆ ಜುಲೈ1943ರಂದು ಅಂದಿನ ಮೈಸೂರು ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದಲ್ಲಿ ಶ್ರೀ ಕೃಷ್ಣಮೂರ್ತಿ ಮತ್ತು ಶ್ರೀಮತಿ ಜಾನಕಮ್ಮ ದಂಪತಿಯ ಮಗಳಾಗಿ ಜನಿಸಿದ ಈಕೆಯ ಮೂಲಹೆಸರು ಶರತ್ ಲತಾ ಉರುಫ್ ಶರತ್ ಕುಮಾರಿ. ಇವಳ ಸಹೋದರ ದಿವಾಕರ ಓದಿನಲ್ಲಿ ಬಹಳ ಜಾಣ. ಆದರೆ ಈಕೆ ಮಾತ್ರ ಫ್ಯಾಷನ್ ಪ್ರಿಯೆ ಥಳಕು ಬಳುಕಿನ ಚೂಟಿ ಹುಡ್ಗಿ. ಬಾಲ್ಯದಲ್ಲಿ ಯಕ್ಷಗಾನ ಬಯಲಾಟ ಸಿನಿಮಾ ನಾಟಕ ಎಂದರೆ ಬಲುಹುಚ್ಚು. ಆಗತಾನೇ ಕಾಲೇಜಿನ ಮೆಟ್ಟಿಲು ಹತ್ತಿದ್ದ ಈಕೆ ತಾನೊಬ್ಬ ಜನಪ್ರಿಯ ನಟಿ ಆಗಬೇಕೆಂದು ಮನದಲ್ಲೇ ಮಂಡಿಗೆ ತಿನ್ನುತ್ತಿದ್ದ ಕನಸುಗಾರ್ತಿ.

ಇದನ್ನೂ ಓದಿ: ಕನ್ನಡ ಚಿತ್ರರಂಗದಲ್ಲಿ ನೆನಪಾಗಿ ಉಳಿದ ಹಿರಿಯ ನಟಿ ಲಕ್ಷ್ಮೀಬಾಯಿ… ಇವರ ಸಿನಿ ಬದುಕು ಹೇಗಿತ್ತು?
ಕೃಷ್ಣವರ್ಣದ ಉದ್ದಕೊರಳಿನ ಇಂತಹ ಯುವತಿಗೆ ಆಕಸ್ಮಿಕವಾಗಿ ಒಮ್ಮೆ ದಾವಣಗೆರೆಯಲ್ಲಿ ಈಕೆಯ ಸಂಬಂಧಿ ಶಿವಕುಮಾರ್ ಎಂಬುವರಿಂದ ಹಾಸ್ಯನಟ ನರಸಿಂಹರಾಜು ಪರಿಚಯವಾಯ್ತು. ಇವರೊಡನೆ ತನ್ನ ಮನದಾಳದ ಅಭಿಲಾಷೆ ಹೇಳಿಕೊಂಡಾಗ ಅನಿರೀಕ್ಷಿತವಾದರೂ ನಿಶ್ಚಯವಾಗಿ ನರಸಿಂಹರಾಜು ತಮ್ಮೊಡನೆ ಶರತ್ ಲತಾಳನ್ನ ಮದ್ರಾಸಿಗೆ ಕರೆದೊಯ್ದರು. ಆಗಿನ ಕಾಲದ ದಿಗ್ಗಜ ಚಿತ್ರೋದ್ಯಮಿ ಬಿ.ಆರ್.ಪಂತುಲುರವರ ಸುಪರ್ಧಿಗೆ ಒಪ್ಪಿಸಿದರು. ದ.ಭಾರತದ ಖ್ಯಾತ ನಟ ನಿರ್ಮಾಪಕ ನಿರ್ದೇಶಕ ಪಂತುಲು ಮತ್ತು ಎಂ.ವಿ.ರಾಜಮ್ಮ ಪ್ರತಿಷ್ಠಿತ ಸಿನಿಮ ನಿರ್ಮಾಣ ಸಂಸ್ಥೆಯ ಮಾಲೀಕರು.

ಇದನ್ನೂ ಓದಿ: ಚಂದನವನದಲ್ಲಿ ಮಿಂಚಿ ಮರೆಯಾದ ಹಿರಿಯ ನಟಿ ಕಮಲಾಬಾಯಿರವರ ಬಗ್ಗೆ ನಿಮಗೆಷ್ಟು ಗೊತ್ತು?
ತಮ್ಮದೇ ಪದ್ಮಿನಿ ಪಿಕ್ಚರ್ಸ್ ಬ್ಯಾನರಡಿ ನಿರ್ಮಾಣಗೊಂಡ ರಾಜ್‌ಕುಮಾರ್ ನಟಿಸಿದ “ಸಾಕುಮಗಳು” ಚಿತ್ರದ ಮೂಲಕ ಶರತ್ ಲತಾಳನ್ನು ಕಲ್ಪನ ಎಂಬ ಹೆಸರಿಂದ 1963ರಲ್ಲಿ ಚಂದನವನಕ್ಕೆ ಪರಿಚಯಿಸಿದರು. ಸಾಕುಮಗಳು ಫಿಲಂ ಮೂಲಕ ಪಾದಾರ್ಪಣೆ ಮಾಡಿದ ಕಲ್ಪನಾಗೆ ಪಂತುಲು ಗಾಡ್ ಫಾದರ್ ಎನಿಸಿದರು. ಆದರೆ ತನ್ನ ಚೊಚ್ಚಲ ಚಿತ್ರದಲ್ಲೆ ಈಕೆಗೆ ಆಘಾತ ಕಾದಿತ್ತು. ಇಡೀ ಸಿನಿಮಾ ಶೂಟಿಂಗ್ ಮುಗಿದಮೇಲೆ ರೀ-ರೆಕಾರ್ಡಿಂಗ್ ಮಾಡುವ ಸಮಯದಲ್ಲಿ ನಡೆದ ಒಂದು ವಿಚಿತ್ರ ಆದರೂ ಸತ್ಯ ಘಟನೆ…

ಕಲ್ಪನಾರವರ ಡೈಲಾಗ್ ಡೆಲಿವರಿ ಕೆಟ್ಟದಾಗಿದೆ, ಈಕೆಯ ರಫ್ ವಾಯ್ಸ್ ನಿಂದಾಗಿ ಎಲ್ಲವೂ ಅಸ್ಪಷ್ಟ ಮತ್ತು ಕರ್ಕಶವಾಗಿದೆ ಆದ್ದರಿಂದ ಸರಿಯಾಗಿ ರೀ- ರೆಕಾರ್ಡಿಂಗ್ ಮಾಡಲಾಗುತ್ತಿಲ್ಲ ಎಂದು ತಂತ್ರಜ್ಞರು ಗಂಭೀರ ಆರೋಪ ಮಾಡಿದಾಗ ಪಂತುಲುರವರು ವಿಧಿಯಿಲ್ಲದೇ ಇವರ ಸಂಭಾಷಣೆ ಇದ್ದ ಇಡೀ ಚಿತ್ರದ “ಡೈಲಾಗ್ ನ ಸೌಂಡ್ ಟ್ರ್ಯಾಕನ್ನೇ” ಬದಲಾಯಿಸಿ ರೆಕಾರ್ಡಿಂಗ್ ಪೂರ್ಣಗೊಳಿಸಿದರು. ಆ ನಂತರ ಪಂತುಲು-ರಾಜಮ್ಮನವರಿಗೂ, ಇಡೀ ಚಂದನವನಕ್ಕೂ ಅದೊಂದು ಷಡ್ಯಂತ್ರ ಆಗಿತ್ತೆಂಬ ಸತ್ಯವು ತಿಳಿಯಿತು. ಕಾಲಕಳೆದಂತೆ ಕಲ್ಪನಾ ಧ್ವನಿಯು ಒಂದು ವಿಶೇಷ ವಿಶಿಷ್ಟದ ಸ್ಥಾನಮಾನ ಪಡೆದು ಜಗತ್ಪ್ರಸಿದ್ದವಾಯಿತು, ಎಂಬುದು ಇತಿಹಾಸ.

ಇದನ್ನೂ ಓದಿ:ಚಂದನವನದಲ್ಲಿ ನೆನಪಾಗಿ ಉಳಿದ ಹಿರಿಯ ನಟಿ ಎಂ.ವಿ.ರಾಜಮ್ಮ… ಇವರು ದೇಶದ ಮೊಟ್ಟ ಮೊದಲ ನಿರ್ಮಾಪಕಿ!
ಕಾಲಕ್ರಮೇಣ ಕಲ್ಪನಾ ಅತ್ಯಂತ ಪ್ರತಿಭಾವಂತ ಯಶಸ್ವೀ ನಟಿಯಾಗಿ ಬೆಳೆದರು. ಇವರ ಕಂಠವು ತುಂಬ ಆಪ್ಯಾಯಮಾನ ಎಂದು ಹೊಗಳುತ್ತ ಇವರ ಡೈಲಾಗ್ ಡೆಲಿವರಿ ಶೈಲಿ ಮತ್ತು ಧ್ವನಿಯನ್ನು ಅಪರ್ಣಾ, ಆರತಿ, ಲಕ್ಷ್ಮಿ ಮುಂತಾದ ನಟಿಯರು ಮೆಚ್ಚಿಕೊಂಡರು. ಕೆಲವರು ಅನುಕರಿಸಲು ಪ್ರಾರಂಭಿಸಿದಾಗ, ಮಾಧ್ಯಮಗಳಲ್ಲು ಮೆಚ್ಚುಗೆ ಪ್ರಕಟವಾದಾಗ ಈ ಮೊದಲು ಇವರ ಧ್ವನಿಯನ್ನು ಹೀಯಾಳಿಸಿದ್ದ ತಂತ್ರಜ್ಞರೇ ಹಾಡಿ ಹೊಗಳಲು ಪ್ರಾರಂಭಿಸಿದರು. ಅಂದಿನಿಂದ ಮತ್ತೆಂದೂ ಹಿಂದಿರುಗಿ ನೋಡದ ಕಲ್ಪನಾ ಮಿನುಗುತಾರೆ ಎನಿಸಿದರು.

ಪ್ರತಿಯೊಂದು ಸಿನಿಮದಲ್ಲೂ ಹೊಚ್ಚಹೊಸತನ ನೀಡುವ ಮೂಲಕ ಅದ್ಭುತ ಕಲಾವಿದೆ ಎನಿಸಿ ಕೊಂಡರು. 15 ವರ್ಷ ಬಿಡುವಿಲ್ಲದೆ 50ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಪ್ರತಿಭೆಯನ್ನ ತೋರಿಸುವ ಮೂಲಕ ದೇಶದಲ್ಲೇ ಅಚ್ಚರಿ ಮೂಡಿಸಿದರು. ಅಭಿಮಾನಿಗಳಿಂದ ಕನ್ನಡದ ಮೀನಾಕುಮಾರಿ ಎಂಬ ಬಿರುದು ಸಂಪಾದಿಸಿದರು. ಹಣ ಕೀರ್ತಿ ಯಶಸ್ಸು ಹೆಚ್ಚಾದಂತೆ ಮಿತ್ರ (ಹಿತ)ಶತ್ರುಗಳ ಸಂಖ್ಯೆಯೂ ಹೆಚ್ಚಿತು. ದಕ್ಷಿಣ ಭಾರತದ ಕನ್ನಡ ತಮಿಳು ತೆಲುಗು ಮಲಯಾಳಂ ಕೊಂಕಣಿ, ಕೊಡವ ತುಳು ಚಿತ್ರರಂಗದ ಅತಿರಥ ಮಹಾರಥ ಹೀರೋಗಳ ಜತೆ ನಟಿಸಿ ಪ್ರತಿಯೊಬ್ಬರಿಂದಲೂ ಬೆಸ್ಟ್ ಹೀರೋಯಿನ್ ಎನಿಸಿ ಕೊಂಡರು.

ಇದನ್ನೂ ಓದಿ: ಇದು ಮೈಸೂರಿನ ನಟಿಯಾಗಿದ್ದ ಎಂ. ಜಯಶ್ರೀರವರ ಬಣ್ಣದ ಬದುಕಿನಾಚೆಗಿನ ಕಥೆ…
ಕನ್ನಡ ಚಿತ್ರರಂಗ ದಿಗ್ಗಜರಾದ ರಾಜ್, ಕಲ್ಯಾಣ್, ಉದಯ್ ಕುಮಾರತ್ರಯರು ಮೊದಲ್ಗೊಂಡು ರಾಜೇಶ್ ಗಂಗಾಧರ್ ವಿಷ್ಣುವರ್ಧನ್ ಅಂಬರೀಷ್ ಶ್ರೀನಾಥ್ ರಮೇಶ್ ಅನಂತನಾಗ್, ಶಂಕರನಾಗ್ ಮುಂತಾದ ಬಹುತೇಕ ಎಲ್ಲ ನಾಯಕನಟರ ಜತೆ ಅಭಿನಯಿಸಿ ದಾಖಲೆಗಳ ಮಹಾರಾಣಿ ಆದರು. ಮಹಿಳಾ ಪ್ರಧಾನ ಮತ್ತು ಕಾದಂಬರಿಆಧಾರಿತ ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸುವ ಮೂಲಕ ಸಮಾಜಕ್ಕೆ ಸ್ತ್ರೀಕುಲಕ್ಕೆ ತಮ್ಮದೇ ವಿಶಿಷ್ಟ ಕಾಣಿಕೆ ಕೊಟ್ಟರು. ನಿರ್ದೇಶಕನಿಗೂ ಸಹ ಮೌಲ್ಯ-ಗೌರವ ಹೆಚ್ಚುವಂತೆ ನಿಗಾವಹಿಸುವ ಭಾಷಣ ಮಾಡುತ್ತಿದ್ದರು, ಪತ್ರಿಕಾಸಂದರ್ಶನ ನೀಡುತ್ತಿದ್ದರು.

 

ಅಂತಾರಾಷ್ಟ್ರೀಯ, ರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಕನ್ನಡ ಸಿನಿಮಾ ಮತ್ತು ಕಲಾವಿದರ ಬಗ್ಗೆ ಹೊಗಳಿ ವಿವರಿಸಿ ಮನವರಿಕೆ ಮಾಡಿ ಚಂದನವನದ ಕೀರ್ತಿ ಪತಾಕೆ ಹಾರಿಸಿದರು. ಜೀವಿಸಿದ್ದ ಅಲ್ಪಾಯುಷ್ಯದಲ್ಲಿ ದೊರೆತ ಅತ್ಯಲ್ಪಕಾಲದ ಬಣ್ಣದ ಲೋಕದಲ್ಲಿ ಅವಿಸ್ಮರಣೀಯ ನಿತ್ಯನೂತನ ದಾಖಲೆಗಳನ್ನು ಸೃಷ್ಟಿಸಿದ ಏಕೈಕ ಧ್ರುವತಾರೆ. ಯಾವುದಕ್ಕೂ ಯಾವಾಗಲೂ ಯಾರೊಡನೆಯೂ ರಾಜಿಯಾಗದ ಅತ್ಯಂತ ಸ್ವಾಭಿಮಾನಿ, ವಿಶೇಷ ಕನ್ನಡಾಭಿಮಾನಿ ಈ ಮಿನುಗುತಾರೆ.

ಇದನ್ನೂ ಓದಿ: ಕನ್ನಡದ ಪ್ರಪ್ರಥಮ ವಾಕ್ ಚಿತ್ರದ ಹೀರೋಯಿನ್ ತ್ರಿಪುರಾಂಭ… ಇವರ ಸಿನಿಮಾದಾಚೆಗಿನ ಬದುಕು ಹೇಗಿತ್ತು?
ಕಲ್ಪನಾ, ಅತಿಕಡಿಮೆ ಅವಧಿಯಲ್ಲಿ ಅತಿಹೆಚ್ಚು ಸಿನಿಮಾಗಳಲ್ಲಿ ಅತಿಹೆಚ್ಚು ಸಾಧನೆ ಮಾಡಿದವರಲ್ಲಿ ಅಗ್ರಗಣ್ಯ. 4 ರಾಷ್ಟ್ರಪ್ರಶಸ್ತಿ 9 ರಾಜ್ಯಪ್ರಶಸ್ತಿ ಗಳಿಸುವ ಮೂಲಕ ಅತಿಹೆಚ್ಚು ಅತ್ಯುತ್ತಮ ನಟಿ ಪ್ರಶಸ್ತಿ ಪಡೆದ ಪ್ರಪ್ರಥಮ ಕನ್ನಡದನಟಿ ಎನಿಸಿದರು. ಇಷ್ಟಾದರೂ ಅದೇಕೋ ಏನೋ ಇದನ್ನೆಲ್ಲ ಸಹಿಸದ ಕ್ರೂರ ವಿಧಿ ಅಟ್ಟಹಾಸದಿಂದ ಇದ್ದಕ್ಕಿದ್ದಂತೆ ದುರ್ದೆಸೆ ವಕ್ಕರಿಸಿ ಓರ್ವ ಮಹಾನ್ ತಾರೆಯನ್ನು ಅನ್ಯಾಯವಾಗಿ ಬಲಿಪಶು ಮಾಡಿತು? ಕಾಲಾಯ ತಸ್ಮೈನಮಃ! ಅನಿರೀಕ್ಷಿತ ಆಶ್ಚರ್ಯದ ಆಧುನಿಕ ಬೆಳವಣಿಗೆಯಿಂದ ಯಾವುದೇ ನಿರ್ಮಾಪಕ ನಿರ್ದೇಶಕ ನಟ ಈಕೆಗೆ ಕಾಲ್ ಶೀಟ್ ನೀಡಲಿಲ್ಲ.

ಇದನ್ನೂ ಓದಿ: ಚಂದನವನದಿಂದ ಮರೆಯಾದ ಅಭಿನಯ ಸರಸ್ವತಿ ಡಾ.ಬಿ.ಸರೋಜಾದೇವಿ…
ಹೀರೋಯಿನ್ ಬೇಡ, ಕನಿಷ್ಠ ಪೋಷಕ ಪಾತ್ರವನ್ನೂ ದೊರಕಿಸಿ ಕೊಡದಿದ್ದಾಗ ಅನ್ಯ ಮಾರ್ಗವಿಲ್ಲದೆ ಉದರನಿಮಿತ್ತಂ ಕಾರಣದಿಂದ ಹಾಗೂ ಅರ್ಧಕ್ಕೆ ನಿಂತುಹೋಗಿದ್ದ ಸ್ವಂತ ಮನೆಯ ನಿರ್ಮಾಣ ಮುಗಿಸಲು ಬೇಕಾದ ಖರ್ಚುವೆಚ್ಚ ಸರಿದೂಗಿಸಲು ಈಕೆಗೆ ಹಣದ ಅವಶ್ಯಕತೆ ಇತ್ತು. ಆದ್ದರಿಂದ ಹಠ ಸ್ವಾಭಿಮಾನ ಎಲ್ಲವನ್ನು ತೊರೆದು ಪುನಃ ರಂಗಭೂಮಿಗೇ ಹಿಂದಿರುಗಿದರು. ಕೊಟ್ಟಷ್ಟು ಹಣ ಸ್ವೀಕರಿಸಿ, ಕೊಟ್ಟ ಪಾತ್ರವನ್ನು ಮನಃಪೂರ್ವಕವಾಗಿ ನಿರ್ವಹಿಸಿದರು.

ತಾನು ಇಷ್ಟಪಟ್ಟ ಪ್ರೇಮಿಯು ಮೋಸವಂಚನೆ ಮಾಡಿದ ಕಾರಣ ಜಿಗುಪ್ಸೆಯಿಂದ ಮನ ನೊಂದು ಮನಸ್ಸಿಗೆ ತೆಗೆದುಕೊಂಡರು. ತಮ್ಮ ವಜ್ರದ ಉಂಗುರ ಪುಡಿ ಸೇವಿಸುವ ಮೂಲಕ ಕೇವಲ 36ನೇ ವಯಸ್ಸಲ್ಲಿ 12.5.1979ರಂದು ಮಧ್ಯರಾತ್ರಿ ವಸತಿಗೃಹದಲ್ಲಿ ಆತ್ಮಹತ್ಯೆಗೆ ಶರಣಾದರು? ಈ ರೀತಿ ಮೇರುನಟಿ ಕಲ್ಪನ ಹೃದಯ ವಿದ್ರಾವಕವಾಗಿ ಸಾವನ್ನಪ್ಪಿ ಕನ್ನಡ ಕುಲಕೋಟಿಗೆ ಬಿಗ್ ಶಾಕ್ ನೀಡಿದರು! ಮಿನುಗುತಾರೆಯ ಹುಟ್ಟು-ಬದುಕು-ಸಾವು ಎಲ್ಲವೂ ಅಪ್ರತಿಮ ನಿಗೂಢ ದುರಂತಮಯ. ಆದರೂ ಇವರ ಚರಿತ್ರೆಯು ಆಚಂದ್ರಾರ್ಕ ಅಜರಾಮರ.

ಇದನ್ನೂ ಓದಿ: ವರ್ಷ ಕಳೆದರೂ ಜನಮನದಲ್ಲಿ ಮಾಸದ ನಗುಮುಖದ “ಅಪರ್ಣ”.. ಚಿರವಾಗಿರಲಿದೆ ನೆನಪು…
ಶ್ರೇಷ್ಠ ಕಲಾವಿದೆಯೊಬ್ಬಳು ತನ್ನ ನಿಜಜೀವನ ಮತ್ತು ವೃತ್ತಿಜೀವನ ಎರಡರಲ್ಲು ಕಿಂಚಿತ್ತೂ ಸುಖ ಸಂತಸ ಸಂತೃಪ್ತಿ ನೆಮ್ಮದಿ ಪಡೆಯಲೇ ಇಲ್ಲ. ಇಂತಹ ಓರ್ವ ಅಪ್ರತಿಮ ನಟಿಯ ಅಮರ ಜೀವನ ಚರಿತ್ರೆಯನ್ನು ಆಧರಿಸಿದ, ಪೂಜಾಗಾಂಧಿ ನಟಿಸಿದ, “ಅಭಿನೇತ್ರಿ” ಎಂಬ ಕನ್ನಡಚಿತ್ರ 2015ರಲ್ಲಿ ತೆರೆಕಂಡು ನೂತನ ದಾಖಲೆ ಬರೆಯಿತು. ಮೇರುನಟಿ ಕಲ್ಪನಾ ಜೊತೆಗೆ ಒಡನಾಟ ಇದ್ದಂಥ ನರಸಿಂಹರಾಜು, ಪಂತುಲು, ಪುಟ್ಟಣ್ಣಕಣಗಾಲ್, ಗುಡಿಗೇರಿ ಬಸವರಾಜ್, ಬಳ್ಳಾರಿಗಂಗರಾಜ್, ಇವರೆಲ್ಲರ ಸುತ್ತ ಕಲ್ಪನ ಜೀವನದ ಬಗ್ಗೆ ಹೆಣೆದ (ಚಿತ್ರ)ಕತೆ ಅಂತೆಕಂತೆ ಗಾಳಿಮಾತು ಊಹಾಪೋಹ ಇತ್ಯಾದಿಗಳ ಜೇಡರಬಲೆಯಲ್ಲಿ ಸಿಲುಕಿ ನಲುಗಿದ ಮಿನುಗುತಾರೆಯ ಬದುಕು ಇಡೀ ಚಂದನವನ ಚರಿತ್ರೆಯಲ್ಲೇ ಅತ್ಯಂತ ದುರಂತ ಅಧ್ಯಾಯ?!

ಇದನ್ನೂ ಓದಿ: ಸಿನಿಮಾರಂಗದಲ್ಲಿ ವೇದವಲ್ಲಿ ನಟಿ ಎನ್.ಆರ್.ಸಂಧ್ಯಾ ಆಗಿ ಮಿಂಚಿದ್ದು ಹೇಗೆ?
ಮಿನುಗುತಾರೆ ನಟಿಸಿದ ಸಿನಿಮಾಗಳ ಪೈಕಿ ಕೆಲವು ಹೀಗಿವೆ.. ಸಾಕುಮಗಳು, ನಾಂದಿ, ಉಯ್ಯಾಲೆ, ಬಂಗಾರದಹೂವು, ಪತಿಯೆದೈವ, ಶ್ರೀಕನ್ಯಕಾಪರಮೇಶ್ವರಿಕಥೆ, ಸರ್ವಮಂಗಳ, ಬಾಲನಾಗಮ್ಮ, ಇಮ್ಮಡಿಪುಲಿಕೇಶಿ, ಕರುಳಿನಕರೆ, ಹಣ್ಣೆಲೆಚಿಗುರಿದಾಗ, ಗಾಂಧಿನಗರ, ಮಂತ್ರಾಲಯಮಹಾತ್ಮೆ, ಎರಡುಕನಸು, ದಾರಿತಪ್ಪಿದಮಗ, ಗಂಧದಗುಡಿ, ಬಿಡುಗಡೆ, ಚಿನ್ನದಗೊಂಬೆ, ಬೆಳ್ಳಿಮೋಡ, ಪ್ರೇಮಕ್ಕೂ ಪರ್ಮಿಟ್ಟೇ, ಕವಲೆರಡು ಕುಲವೊಂದು, ನಮ್ಮಮಕ್ಕಳು, ಕಪ್ಪುಬಿಳುಪು, ತ್ರಿವೇಣಿ, ಗೆಜ್ಜೆಪೂಜೆ, ಶರಪಂಜರ, ಅಣ್ಣತಮ್ಮ,

ಬೃಂದಾವನ, ಅರಿಶಿನಕುಂಕುಮ, ನಾಮೆಚ್ಚಿದ ಹುಡುಗ, ಕಾಣಿಕೆ, ಯಾವ ಜನ್ಮದ ಮೈತ್ರಿ, ಧನಪಿಶಾಚಿ, ಮಾತೃಭೂಮಿ, ಹೂವುಮುಳ್ಳು, ನಾರಿಮುನಿದರೆಮಾರಿ, ಸೀತಾ, ಕೆಸರಿನಕಮಲ, ವಂಶಜ್ಯೋತಿ, ವಿಜಯವಾಣಿ, ಬಯಲುದಾರಿ, ಅನುರಾಗಬಂಧನ/1978 ಅಂತಿಮಚಿತ್ರ, ಕೋಟಿಚೆನ್ನಯ್ಯ/ತುಳು, ಸ್ಕೂಲ್ ಮಾಸ್ಟರ್ [ಮಲಯಾಳಂ], ಮದ್ರಾಸ್-ಟು-ಪಾಂಡಿಚೇರಿ [ತಮಿಳು] (ಹಿಂದಿ: ಬಾಂಬೆ-ಟು-ಗೋವ) ಎಲ್ಲವೂ ಅಮೋಘ ಯಶಸ್ವೀ ಕಂಡ ಜುಬ್ಲಿ ಸಿನಿಮಾಗಳು ಎಂಬುದನ್ನು ಎಂದೂ ಮರೆಯುವಂತಿಲ್ಲ.

ಇದನ್ನೂ ಓದಿ: ಕನ್ನಡ ಸಿನಿಮಾಗಳಲ್ಲಿ ನಟಿಸಿ ಗಮನಸೆಳೆದ ತೆಲುಗಿನ ಹಿರಿಯ ನಟಿ ರಾಜಶ್ರೀ…
ಅಸಾಧಾರಣ ಕಲಾವಿದೆ ಕಲ್ಪನ ನಟಿಸಿದ ಸಿನಿಮಾದ ಕೆಲವು ಚಿತ್ರಗೀತೆಗಳು.. ನಾನುಅಂಧಳಾದೆ, ಜೀವನರಾಗ ಈ ಅನುರಾಗ, ಸೇವಂತಿಗೆ ಚೆಂಡಿನಂಥ, ನೀನಡೆವ ಹಾದಿಯಲ್ಲಿ, ನಿಂತಲ್ಲಿ ಅವಳು, ಓಡುವನದಿ, ನನ್ನವಳು ಹೊನ್ನಾಡ, ಕನ್ನಡದ ಕುಲತಿಲಕ, ಬೆಳ್ಳಿಮೋಡದ, ಇದೇ ನನ್ನ ಉತ್ತರ, ನಾಮೆಚ್ಚಿದ ಹುಡುಗನಿಗೇ, ಉಸಿರೇ…ಒಡಲ, ಇದೇನ ಸಭ್ಯತೆ, ಅಮ್ಮ ನಿನ್ನ ತೋಳಿನಲ್ಲಿ, ಹೆಜ್ಜೆಹೆಜ್ಜೆಗೂ, ಪಂಚಮವೇದ, ಬಿಳಿಗಿರಿ…ರಂಗಯ್ಯ, 14ವರ್ಷ ವನವಾಸದಿಂದ, ಇಂದು ಎನಗೆ ಗೋವಿಂದ, ಪೂಜಿಸಲೆಂದೇ, ತಂನಂ ತಂನಂ, ನನ್ನ ಪುಟ್ಟ ಸಂಸಾರ ಲೋಕದಿಂದ ಬಹುದೂರ, ಮುಂತಾದ ನೂರಾರು ಚಿತ್ರಗೀತೆಗಳು ಮರೆಯಲಾರದ ಮೈಲಿಗಲ್ಲುಗಳು.. ಅಲ್ಪ ಸಮಯದಲ್ಲಿ ತನ್ನದೇ ಅಭಿನಯದ ಮೂಲಕ ಮಿಂಚಿದ ನಟಿಯ ಜೀವನ ಹೀಗೂ ಆಯಿತಾ? ಎಂಬ  ಪ್ರಶ್ನೆ ಪ್ರತಿಯೊಬ್ಬರನ್ನೂ ಕಾಡುತ್ತಲೇ ಇರುತ್ತದೆ..

admin
the authoradmin

Leave a Reply

Translate to any language you want