LatestNews

ಜಾನಪದ ರಂಗಭೂಮಿ ಮಾನವ ಬದುಕಿನ ಬಹು ಆಯಾಮಗಳನ್ನು ತೆರೆದಿಡುತ್ತಿವೆ: ಡಾ.ಕೆ.ರಾಮಕೃಷ್ಣ

‘ಬುಡಬೆಳ್ಳಿ-ನಡುಪಚ್ಚೆ-ಗೊನೆಮುತ್ತು’ ನಾಟಕ ಪ್ರದರ್ಶನ

ರಾಮನಗರ: ಜಾನಪದ ರಂಗಭೂಮಿಯು ಮಾನವ ಬದುಕಿನ ಬಹು ಆಯಾಮಗಳನ್ನು ತೆರೆದು ತೋರಿಸುವ ನೆಲೆಯಲ್ಲಿ ಬೆಳೆದು ಬಂದಿದೆ. ಅದರ ಟಿಸಲುಗಳು ಜೀವನ ಮೌಲ್ಯಗಳನ್ನು ಬಿಂಬಿಸುತ್ತವೆ ಎಂದು ಮೈಸೂರಿನ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ರಾಮಕೃಷ್ಣ ನುಡಿದರು.

ಕೃಷ್ಣಾಪುರದೊಡ್ಡಿಯ ಕೆ.ಎಸ್.ಮುದ್ದಪ್ಪ ಸ್ಮಾರಕ ಟ್ರಸ್ಟ್ನ ಇಫ್ರೋ ಜಾನಪದ ಮಹಾವಿದ್ಯಾಲಯದ ಸರ್ಟಿಫಿಕೇಟ್ ಕೋರ್ಸ್ ವಿದ್ಯಾರ್ಥಿನಿಯರು ಬೆಂಗಳೂರಿನ ಕಲಾಗ್ರಾಮದಲ್ಲಿ ಅಭಿನಯಿಸಿದ ನಾಟಕ ‘ಬುಡಬೆಳ್ಳಿ-ನಡುಪಚ್ಚೆ-ಗೊನೆಮುತ್ತು’ ಪ್ರದರ್ಶನದ ವೇಳೆ ಗೌರವ ಸ್ವೀಕರಿಸಿ ಅವರು ಮಾತನಾಡಿದರು.

ಜಗತ್ತಿನ ಇತಿಹಾಸದಲ್ಲಿ ಪ್ರಾಚೀನ ಎನಿಸಬಹುದಾದ ಮೌಖಿಕ ಪರಂಪರೆಯ ಜನಪದ ಕತೆಗಳು ಸದಾ ಚಲನಶೀಲವಾಗಿರುತ್ತವೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ಜಾನಪದ ಕ್ಷೆತ್ರಕಾರ್ಯಕರ್ತರು, ಸಂಶೋಧಕರು, ಸಾಹಿತಿಗಳು, ಜಾನಪದ ಕಥಾವಸ್ತುಗಳನ್ನು ಇಟ್ಟುಕೊಂಡು ನಾಟಕಗಳನ್ನು ರಚಿಸುತ್ತಿರುವುದು ಮತ್ತು ಅವುಗಳ ಪ್ರದರ್ಶನಗೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಶ್ಲಾಘಿಸಿದರು.

ನಾಟಕಕಾರ ಡಾ.ಎಂ.ಬೈರೇಗೌಡ ಮಾತನಾಡಿ, ಇರುಳಿಗರು ಜಾನಪದ ಅಧ್ಯಯನದ ಸಂದರ್ಭದಲ್ಲಿ ಕನಕಪುರ ತಾಲ್ಲೂಕಿನ ಅಣಕಡಬೂರು ಗುಡ್ಡಯ್ಯ ಹೇಳಿದ ಕಥೆಯನ್ನು ನಾಟಕವಾಗಿ ರೂಪಾಂತರಿಸಿ ಸರ್ಟಿಫಿಕೇಟ್ ಕೋರ್ಸ್ನ 14 ಜನ ಕಿಶೋರಿಯರಿಗೆ ಕಲಿಸಿ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಈ ಮೂಲಕ ಗ್ರಾಮೀಣ ಮಕ್ಕಳಲ್ಲಿ ಆತ್ಮಸ್ಥೆöÊರ್ಯ ತುಂಬುವ ಕೆಲಸವಾಗಿದೆ ಎಂದು ಹೇಳಿದರು.

ಕಥಾಸಾರ: ಸಣ್ಣೂರು ಪಟ್ಟಣದ ಮಣ್ಣಯ್ಯ ದೊರೆಗೆ ಮಕ್ಕಳಿಲ್ಲದ ಕಾರಣ ಮಡದಿ ರಾಮವ್ವ ಮತ್ತೆ ಸ್ವತಃ ನಿಂತು ಮೂರು ಮದುವೆ ಮಾಡಿಸುತ್ತಾಳೆ. ಅವರಿಗೂ ಮಕ್ಕಳಾಗದಿದ್ದಾಗ ಮಣ್ಣಯ್ಯ ದೊರೆ ದೇಶಾಂತರ ಹೋಗಿ ಬರುವಷ್ಟರಲ್ಲಿ ಮೊದಲ ಮಡದಿ ರಾಮವ್ವ ಬಸುರಿಯಾಗಿರುತ್ತಾಳೆ. ಸಾದ್ವಿ ರಾಮವ್ವನ ಮೇಲೆ ಉಳಿದ ಮೂರು ಮಂದಿ ಸವತಿಯರು ಅಪವಾದ ಹೊರಿಸಿ ಅವಳನ್ನು ಕಾಡಿಗಟ್ಟುವಂತೆ ಮಾಡುತ್ತಾರೆ. ನಂತರ ಅವಳಿಗೆ ವೀರು ಎಂಬ ಮಗ ಹುಟ್ಟುತ್ತಾನೆ. ಪಟ್ಟಣದಲ್ಲಿದ್ದ ಕಿರಿಯ ಹೆಂಡತಿಯರಿಗೆ ಸಿದ್ದ-ಬಿದ್ದ-ಗೊದ್ದರೆಂಬ ಮೂರು ಮಕ್ಕಳುಗಳಾಗಿ, ದಡ್ಡತನ ಮೆರೆಯುತ್ತಾರೆ.

ತಂದೆಯ ಕೋಪಕ್ಕೆ ಗುರಿಯಾದ ಇವರು ‘ಬುಡಬೆಳ್ಳಿ-ನಡುಪಚ್ಚೆ-ಗೊನೆಮುತ್ತು’ ಎಂಬ ಪದಾರ್ಥಗಳನ್ನು ತರುತ್ತೇವೆಂದು ಹೊರಟು ಕಾಡಿನಲ್ಲಿ ಸಿಕ್ಕ ವೀರುವಿನ ಸಹಾಯದಿಂದ ತಂದ ಮೂರು ಮಂದಿ ಹೆಣ್ಣು ಮಕ್ಕಳನ್ನು ಕರೆದುಕೊಂಡು ಊರಿಗೆ ಬರುತ್ತಾರೆ. ಸಹಾಯ ಮಾಡಿದ ವೀರುವನ್ನು ಬಾವಿಗೆ ತಳ್ಳಿ ಬಂದಿರುತ್ತಾರೆ. ಹಲವು ಪ್ರಾಣಿಗಳ ಸಹಾಯ ಪಡೆದು ವೀರು ಮರಳಿ ಊರಿಗೆ ಬಂದು ಸತ್ಯ ತಿಳಿಸುತ್ತಾನೆ ಎಂಬಲ್ಲಿಗೆ ಕಥೆ ಮುಗಿಯುತ್ತದೆ. ಆದರೆ ಹಾಗೆ ಬಂದ ಹೆಣ್ಣು ಮಕ್ಕಳು ನಮ್ಮನ್ನ ಮರ ಮಾಡುವಂತೆ ವೀರುವನ್ನು ಕೋರುತ್ತಾರೆ. ಈ ಮೂಲಕ ನಾಟಕ ಪರಿಸರ ಪ್ರಜ್ಞೆಯನ್ನು ಮೆರೆಯುತ್ತದೆ.

ನಾಟಕ ನಿರ್ದೇಶಿಸಿದ ಎಂ.ಸಿ. ನಾಗರಾಜು ಮಾತನಾಡಿ, ಇದು ಮಹಿಳಾ ಸಬಲೀಕರಣ ಮಹಿಳೆಯರ ಮೇಲಿನ ಅಪವಾದಗಳನ್ನು ನಿರ್ನಾಮ ಮಾಡುವ ಹಿನ್ನೆಲೆಯಲ್ಲಿ ರಚಿತವಾಗಿದೆ. ಈ ಪ್ರದರ್ಶನದ ಮೂಲಕ ಗ್ರಾಮೀಣ ಮಕ್ಕಳಲ್ಲಿ ತಮ್ಮ ಬಗ್ಗೆ ತಮ್ಮಲ್ಲಿ ವಿಶ್ವಾಸ ಮೂಡುವ ಕೆಲಸವಾಗಿದೆ. ಓದಿನ ಜೊತೆ ಜೊತೆಗೆ ಇಂಥ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಲು ಪೋಷಕರು ಮುಂದಾಗಬೇಕು. ರಂಗಭೂಮಿ ಯಾವತ್ತೂ ನಟರಲ್ಲಿ ಧೈರ್ಯ ತುಂಬುವ ಕೆಲಸ ಮಾಡುತ್ತದೆ ಎಂದರು.

ಪ್ರಸ್ತುತ ಬುಡಬೆಳ್ಳಿ ನಡುಪಚ್ಚೆ ಗೊನೆಮುತ್ತು ನಾಟಕಕ್ಕೆ ಗಜಾನನ ಟಿ.ನಾಯ್ಕ ಸಂಗೀತ ಸಂಯೋಜನೆ ಮಾಡಿದ್ದಾರೆ. ಹಿನ್ನೆಲೆ ಗಾಯಕರಾಗಿ ವಿದುಷಿ ವಿನುತಾ ಬೂದಿಹಾಲ್, ಶಶಿಕಲಾ ಸುಶ್ರಾವ್ಯವಾಗಿ ಹಾಡುವ ಮೂಲಕ ಪ್ರದರ್ಶನದ ಮೆರುಗು ಹೆಚ್ಚಿಸಿದ್ದಾರೆ. ಹರಿಪ್ರಸಾದ್ ಹಲವು ವಾದ್ಯಗಳ ಸಹಕಾರ ನೀಡಿದ್ದಾರೆ. ಪ್ರಸಾದನ ಎಂ.ಸಿ.ನಾಗರಾಜು ಅವರದು. ಬೆಳಕಿನ ವಿನ್ಯಾಸ ಪುನೀತ್ ಕರ್ತ ನೋಡಿಕೊಂಡರು.

ರಾಮನಗರ, ಕನಕಪುರ, ಮಳವಳ್ಳಿ, ಮದ್ದೂರು ಮತ್ತು ರಾಮನಗರ ತಾಲ್ಲೂಕಿನ ವಿದ್ಯಾರ್ಥಿಗಳಾದ ವಿದ್ಯಾ ಬಿ., ನವ್ಯಶ್ರೀ, ಭವ್ಯ, ನಿಸರ್ಗ, ಬಿಂದು, ಸಿಂಚನ, ವೈಷ್ಣವಿ, ಪುಣ್ಯಶ್ರೀ, ಗಾನವಿ, ಸ್ಪೂರ್ತಿ, ಸುಪ್ರಿಯಾ, ಸಂಜನಾ, ತನಿಷ್ಕ, ರಂಜಿನಿ ಅಭಿನಯಿಸಿದರು.

admin
the authoradmin

Leave a Reply

Translate to any language you want