ಕುಶಾಲನಗರ (ಆರ್ ಹೆಚ್): ಕೊಡಗು ಜಿಲ್ಲೆಯ ಪ್ರಮುಖ ಪ್ರವಾಸಿ ಕೇಂದ್ರಗಳಾದ ಹಾರಂಗಿ ಹಾಗೂ ಚಿಕ್ಲಿಹೊಳೆ ಜಲಾಶಯದ ಆವರಣಕ್ಕೆ ಕಾಡಾನೆಗಳು ದಾಳಿ ಮಾಡಿ ಹಾನಿಯುಂಟು ಮಾಡಿದ ಘಟನೆ ನಡೆದಿದ್ದು ಸಾರ್ವಜನಿಕರಲ್ಲಿ ಆತಂಕ ಶುರುವಾಗಿದೆ.

ಹಾರಂಗಿ ಅಣೆಕಟ್ಟೆಯ ಉತ್ತರ ದ್ವಾರದ ಗೇಟ್ ನ್ನು ಕಾಡಾನೆ ತುಳಿದು ಹಾನಿ ಮಾಡಿದೆ. ಅಣೆಕಟ್ಟೆಯ ಮೇಲ್ಬಾಗದ ಉತ್ತರ ಭಾಗ ಇಡಿಸಿಎಲ್ ವಿದ್ಯುತ್ ಉತ್ಪಾದನಾ ಘಟಕದ ಹಿಂಭಾಗ ಮೀಸಲು ಅರಣ್ಯ ಪ್ರದೇಶದಿಂದ ಆವೃತ್ತಗೊಂಡಿದ್ದು,ಈ ಭಾಗದಿಂದ ಬಂದ ಕಾಡಾನೆಯು ರಸ್ತೆಗೆ ಅಡ್ಡಲಾಗಿ ನಿರ್ಮಿಸಿದ್ದ ಗೇಟ್ ಅನ್ನು ತುಳಿದು ಮುರಿದು ಹಾಕಿ ಹಾನಿ ಪಡಿಸಿದೆ.

ಆ ನಂತರ ಅಣೆಕಟ್ಟೆಯ ಭಾಗಕ್ಕೆ ಪ್ರವೇಶಿಸಿ ರಸ್ತೆಯಲ್ಲಿ ಸಂಚಾರ ಮಾಡಿದೆ. ಬಳಿಕ ಅಣೆಕಟ್ಟೆಯ ಕೈಗಾರಿಕಾ ಭದ್ರತಾ ಪಡೆ ಪೊಲೀಸರು ಕಾಡಾನೆಯನ್ನು ಅರಣ್ಯ ಪ್ರದೇಶಕ್ಕೆ ಓಡಿಸಿದ್ದಾರೆ.

ಇನ್ನು ಆನೆಕಾಡು ಮೀಸಲು ಅರಣ್ಯ ಪ್ರದೇಶದಿಂದ ಚಿಕ್ಲಿಹೊಳೆ ಜಲಾಶಯದ ಆವರಣಕ್ಕೆ ನುಗ್ಗಿ ದಾಳಿ ಮಾಡಿದೆ. ಕುಶಾಲನಗರ ರೋಟರಿ ಸಂಸ್ಥೆ ವತಿಯಿಂದ ಸುವರ್ಣ ಮಹೋತ್ಸವ ಅಂಗವಾಗಿ ಅಳವಡಿಸಿದ್ದ ಕಸ ಸಂಗ್ರಹ ತೊಟ್ಟಿಯನ್ನು ಹಾನಿ ಪಡಿಸಿದೆ. ಜೊತೆಗೆ ತಂತಿ ಬೇಲಿಯನ್ನು ತುಳಿದು ನಾಶ ಪಡಿಸಿದೆ ಎಂದು ಚಿಕ್ಲಿಹೊಳೆ ನೀರಾವರಿ ವಿಭಾಗದ ಸಹಾಯಕ ಎಂಜಿನಿಯರ್ ಕಿರಣ್ ತಿಳಿಸಿದ್ದಾರೆ.








