ಹುಣಸೂರು(ಮನುಕುಮಾರ್): ಜಿಲ್ಲಾದ್ಯಂತ ಮಳೆ ಕೊರತೆಯಿಂದ ಬೆಳೆ ಹಾನಿಯಾದ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದು, ಬೆಳೆ ಹಾನಿ ಕುರಿತು ಅಧಿಕಾರಿಗಳು ನಿಖರ ಸಮೀಕ್ಷೆ ನಡೆಸಿ ಎಂದು ನಗರಾಭಿವೃದ್ಧಿ ಸಚಿವ ಡಾ ಯತೀಂದ್ರ ಸಿದ್ದರಾಮಯ್ಯ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು.
ಹುಣಸೂರು ತಾಲ್ಲೂಕಿನ ಬಿಳಿಕೆರೆ ಹೋಬಳಿಯ ಚೋಳೆನಹಳ್ಳಿಯ ರೈತ ಜವರೇಗೌಡರವರ ಜಮೀನಿನಲ್ಲಿ ಬೆಳೆದಿದ್ದ ಅಲಸಂದೆ ಬೆಳೆ ವೀಕ್ಷಿಸಿ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಹುಣಸೂರು ತಾಲೂಕಿನಲ್ಲಿ ಶೇ. 55 ರಷ್ಟು ಮಳೆಯ ಕೊರತೆಯಿಂದಾಗಿ ವಿವಿಧ ಭಾಗಗಳಲ್ಲಿ ಬೇರೆ ಬೇರೆ ಬೆಳೆಗಳ ಇಳುವರಿಯಲ್ಲಿ ಗಣನೀಯ ಪ್ರಮಾಣದ ಕುಸಿತ ಕಂಡುಬಂದಿದೆ. ಹೊಗೆಸೊಪ್ಪು ಬೆಳೆಯ ಗುಣಮಟ್ಟ ಹಾಗೂ ಇಳುವರಿ ಕಡಿಮೆಯಾಗಿ ಕೃಷಿ ಮಾಡಲಾಗಿರುವ ಪೈಕಿ ಸುಮಾರು 2,000 ಹೆಕ್ಟೇರ್ ಪ್ರದೇಶದಲ್ಲಿ ಹೊಗೆಸೊಪ್ಪು ನಿರೀಕ್ಷಿತ ಪ್ರಮಾಣದಲ್ಲಿ ಬೆಳವಣಿಗೆಯಾಗಿಲ್ಲ ಎಂದು ಶಾಸಕ ಜಿ.ಡಿ.ಹರೀಶ್ ಗೌಡ ಗಮನಕ್ಕೆ ತಂದಿದ್ದಾರೆ ಈ ವರದಿಯನ್ನು ಸರ್ಕಾರಕ್ಕೆ ತಲುಪಿಸಲಾಗುವುದು ಎಂದರು.
ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ಮೆಕ್ಕೆ ಜೋಳದ ಬೆಳೆಗೆ ಬಿಳುಸುಳಿ ರೋಗ ತೀವ್ರವಾಗಿ ಬಾಧಿಸುತ್ತಿದೆ. ಒಂದೇ ಭೂಮಿಯಲ್ಲಿ ನಿರಂತರವಾಗಿ ಒಂದೇ ರೀತಿಯ ಬೆಳೆ ಬೆಳೆಯುತ್ತಿರುವುದರಿಂದ ಮಣ್ಣಿನ ಫಲವತ್ತತೆ ಕುಗ್ಗಿ ಈ ರೋಗ ಕಾಣಿಸಿಕೊಳ್ಳುತ್ತಿದೆ. ರೋಗವು ತಡೆಯಲು ಕಷ್ಟಸಾಧ್ಯವಾಗಿದ್ದು, ಒಮ್ಮೆ ಬಂದರೆ ರೋಗ ಹೋಗಲಾಡಿಸಿ ಇಳುವರಿ ಹೆಚ್ಚಿಸುವುದು ಕಷ್ಟ. ಮೆಕ್ಕೆ ಜೋಳ ಇತರ ರೋಗಬಿದ್ದರೆ ಸರ್ಕಾರದಿಂದ ಯಾವುದೇ ಪರಿಹಾರವಿಲ್ಲ
6 ತಿಂಗಳಾದರು ರಾಗಿ ಹಣ ಬಂದಿಲ್ಲ…. ಸರ್ಕಾರಕ್ಕೆ ರಾಗಿ ಬಿಟ್ಟು 6 ತಿಂಗಳಾದರೂ ರೈತರಿಗೆ 50 ಪರ್ಸೆಂಟ್ ಹಣ ಬಂದಿಲ್ಲ ಎಂದು ತಿಳಿಸಿದ ಮೇಲೆ ಇದಕ್ಕೆ ಉತ್ತರಿಸಿದ ನಗರಾಭಿವೃದ್ಧಿ ಸಚಿವ ಈಗ ತಾನೇ ಸಂಪುಟ ರಚನೆಯಾಗಿದ್ದು ಎನ್.ಡಿ.ಆರ್.ಎಫ್ ನಿಯಮಗಳ ಅಡಿಯಲ್ಲಿ ಬೆಳೆ ರೋಗಗಳಿಗೆ ನೇರವಾಗಿ ಪರಿಹಾರ ನೀಡುವ ಯಾವುದೇ ನಿರ್ದಿಷ್ಟ ಅವಕಾಶ ಇಲ್ಲ. ಮಳೆಯಾಶ್ರಿತ ಬೆಳೆ ನಷ್ಟಗಳಿಗೆ ಮಾತ್ರ ನಿಯಮಗಳು ಅನ್ವಯಿಸುತ್ತವೆ.

ಅಧಿಕಾರಿಗಳು ತ್ವರಿತವಾಗಿ ಸಮೀಕ್ಷೆ ಪೂರ್ಣಗೊಳಿಸಿ ವಾಸ್ತವ ವರದಿ ಸಲ್ಲಿಸಬೇಕು. ರೈತರಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಹಾಗೂ ಬೆಂಬಲ ಬೆಲೆ ಅಥವಾ ಪರಿಹಾರ ಒದಗಿಸುವ ಕುರಿತು ಸರ್ಕಾರದ ಹಂತದಲ್ಲಿ ಹಾಗೂ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕ ಜಿ.ಡಿ.ಹರೀಶ್ ಗೌಡ, ಮಾಜಿ ಶಾಸಕ ಹೆಚ್.ಪಿ.ಮಂಜುನಾಥ್, ಯೋಜನಾ ಪ್ರಾಧಿಕಾರದ ಅದ್ಯಕ್ಷ ಹೆಚ್.ಪಿ.ಅಮರ್ ನಾಥ್, ಜಿಲ್ಲಾಧಿಕಾರಿಗಳಾದ ಜಿ. ಲಕ್ಷಿಕಾಂತ್ ರೆಡ್ಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ಎಸ್ ಯುಕೇಶ್ ಕುಮಾರ್, ತಹಸಿಲ್ದಾರ್ ಮಂಜುನಾಥ್, ಇಓ ಹೊಂಗಯ್ಯ, ಸೇರಿದಂತೆ ಕೃಷಿ ಇಲಾಖೆ, ಕಂದಾಯ ಇಲಾಖೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಇನ್ನು ಇದೇ ಮೊದಲ ಬಾರಿಗೆ ನಗರಭಿವೃದ್ಧಿ ಸಚಿವರಾಗಿ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಹುಣಸೂರಿಗೆ ಆಗಮಿಸಿದ ಡಾ. ಯತೀಂದ್ರ ಸಿದ್ದ ರಾಮಯ್ಯ ರವರಗೆ ಮೈಸೂರು ಹುಣಸೂರು ಮುಖ್ಯ ರಸ್ತೆಯಲ್ಲಿರುವ ಮನುಗನಹಳ್ಳಿ ಗ್ರಾಮದ ಬಳಿ ಮಾಜಿ ಶಾಸಕ ಎಚ್ ಪಿ ಮಂಜುನಾಥ್, ತಾಲೂಕು ಹುಡಾ ಅಧ್ಯಕ್ಷ ಹೆಚ್.ಪಿ.ಅಮರ್ ನಾಥ್ ನೇತೃತ್ವದಲ್ಲಿ ಹುಣಸೂರು ನಗರ ಹಾಗೂ ಬಿಳಿಕೆರೆ ಬ್ಲಾಕ್ ಕಾಂಗ್ರೆಸ್ ನ ಅಧ್ಯಕ್ಷರು ಹಾಗೂ ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತಿಸುವ ಮೂಲಕ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಹುಡಾ ಅಧ್ಯಕ್ಷ ಹೆಚ್.ಪಿ.ಅಮರ್ ನಾಥ್ ರವರು ಸಚಿವರಿಗೆ ಭಗವತ್ ಗೀತಾ ಪುಸ್ತಕವನ್ನು ನೀಡಿ ಗೌರವಿಸಿದರು.








