ಹೊಸೂರು(ಸಂಘಟನೆ ಮಂಜುನಾಥ್): ಗೃಹಿಣಿಯೊಬ್ಬಳು ತನ್ನ ಎರಡು ಮಕ್ಕಳನ್ನು ನೇಣಿಗೆ ಹಾಕಿ ಕೊಲೆ ಮಾಡಿ ತಾನು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಸಾಲಿಗ್ರಾಮ ತಾಲೂಕಿನ ಜವರೇಗೌಡನ ಕೊಪ್ಪಲಿನಲ್ಲಿ ಶುಕ್ರವಾರ ನಡೆದಿದೆ.
ಜವರೇಗೌಡನ ಕೊಪ್ಪಲು ಗ್ರಾಮದ ಅನಿಲ್ ಕುಮಾರ್ ಎಂಬುವರ ಪತ್ನಿ ಪ್ರಿಯಾಂಕಾ(26) ಎಂಬಾಕೆಯೇ ಧುತಿ(3) ಮತ್ತು ದಿಶಾ( ಒಂದುವರೆ ವರ್ಷ) ಎಂಬಿಬ್ಬರು ಹೆಣ್ಣು ಮಕ್ಕಳನ್ನು ಹತ್ಯೆಗೈದು ತಾನು ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ.

ಶುಕ್ರವಾರ ಪ್ರಿಯಾಂಕಾ ತನ್ನ ಮಕ್ಕಳಾದ ಧುತಿ, ದಿಶಾ ಎಂಬಿಬ್ಬರು ಮಕ್ಕಳ ಕತ್ತನ್ನು ಸುತ್ತಲಿ ದಾರದಿಂದ ಬಿಗಿದು ಸಾಯಿಸಿ ನಂತರ ತಾನು ಆತ್ಮಹತ್ಯೆಗೆ ಯತ್ನಿಸಿದ್ದು, ಸದ್ಯ ಗಂಭೀರ ಸ್ಥಿತಿಯಲ್ಲಿರುವ ಆಕೆಗೆ ಕೆ.ಆರ್.ನಗರ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಕ್ಕಳಿಬ್ಬರ ಮೃತದೇಗಳನ್ನು ಕೃಷ್ಣರಾಜನಗರ ಸಾರ್ವಜನಿಕ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಅನಿಲ್ ಕುಮಾರ್ ಮತ್ತು ಪ್ರಿಯಾಂಕ ಮದುವೆಯಾಗಿ ಆರು ವರ್ಷಗಳಾಗಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸಾಲಿಗ್ರಾಮ ಮತ್ತು ಕೆ ಆರ್ ನಗರ ಪೊಲೀಸ್ ಠಾಣೆಗಳಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಇನ್ನು ದೂರು ದಾಖಲಾಗಿಲ್ಲದ ಕಾರಣ ನಮಗೆ ಹೆಚ್ಚಿನ ಮಾಹಿತಿ ಬಂದಿಲ್ಲ ಎಂದು ಸಾಲಿಗ್ರಾಮ ಇನ್ಸ್ ಪೆಕ್ಟರ್ ಶಶಿಕುಮಾರ್ ತಿಳಿಸಿದ್ದಾರೆ.
ಒಟ್ಟಾರೆ ಪ್ರಕರಣ ಅನುಮಾನಕ್ಕೆ ಕಾರಣವಾಗಿದ್ದು, ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಬಳಿಕವಷ್ಟೇ ಗೊತ್ತಾಗಬೇಕಿದೆ.








