ಹೊಸೂರು(ಸಂಘಟನ ಮಂಜುನಾಥ್) : ಮುಖ್ಯಮಂತ್ರಿಗಳ ವಿಶೇಷ ಅನುದಾನ ಯೋಜನೆಯಡಿ ಸಾಲಿಗ್ರಾಮ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಸಮಗ್ರ ಅಭಿವೃದ್ಧಿಗೆ ಕ್ರಮವಹಿಸುವುದಾಗಿ ಶಾಸಕ ಡಿ.ರವಿಶಂಕರ್ ಭರವಸೆ ನೀಡಿದರು.
ಸಾಲಿಗ್ರಾಮ ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ 2025-26ನೇ ಸಾಲಿನ “ಕಾಲೇಜು ವಾರ್ಷಿಕೋತ್ಸವ’ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಕಾಲೇಜಿಗೆ ಅತ್ಯಗತ್ಯವಾಗಿ ಆಗಬೇಕಿರುವ ಮೂಲ ಸೌಕರ್ಯಗಳನ್ನು ಒದಗಿಸಿಕೊಡುವುದಾಗಿ ತಿಳಿಸಿದರು.
ಈಗಾಗಲೇ ಸಿಡಿಸಿ ಸಭೆಯಲ್ಲಿ ಚರ್ಚಿಸಿ ಸಲ್ಲಿಸಲಾದ ಮನವಿಯಂತೆ, ಭದ್ರತೆಗಾಗಿ ಕಾಲೇಜಿನ ಕಾಂಪೌಂಡ್ ದುರಸ್ತಿ, ಕ್ರೀಡಾ ಚಟುವಟಿಕೆಗಳಿಗಾಗಿ ಆಟದ ಮೈದಾನ, ವಾಹನಗಳ ಪಾರ್ಕಿಂಗ್ ವ್ಯವಸ್ಥೆ, ಮುಖ್ಯದ್ವಾರದಿಂದ ಕಾಲೇಜು ಕಟ್ಟಡದವರೆಗೆ ಸಿಮೆಂಟ್ ರಸ್ತೆ, ಆಡಿಟೋರಿಯಂನಲ್ಲಿ ಧ್ವನಿ ನಿಯಂತ್ರಿತ ವ್ಯವಸ್ಥೆ ಹಾಗೂ ಆಸನಗಳ ಅಳವಡಿಕೆ, ಶೌಚಾಲಯ ನಿರ್ಮಾಣ ಮುಂತಾದ ಕೆಲಸಗಳನ್ನು ಮಾಡಿಕೊಡಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಶೀಘ್ರದಲ್ಲಿಯೇ ಇಂಜಿನಿಯರ್ ಒಬ್ಬರನ್ನು ಕಾಲೇಜಿಗೆ ಕಳಿಸಿ ಈ ಎಲ್ಲ ಕೆಲಸಗಳಿಗೆ ಸೂಕ್ತ ನೀಲನಕ್ಷೆ ಹಾಗೂ ಅಂದಾಜು ಪಟ್ಟಿ ತಯಾರಿಸುವಂತೆ ಸೂಚಿಸಲಾಗುವುದು. ಬಳಿಕ ಕಾಲೇಜು ಶಿಕ್ಷಣ ಇಲಾಖೆ ಅಥವಾ ಮುಖ್ಯಮಂತ್ರಿಗಳ ವಿಶೇಷ ಅನುದಾನ ಯೋಜನೆಯಡಿ ಹಣ ತಂದು ಕಾಮಗಾರಿ ಕೈಗೊಳ್ಳಲಾಗುವುದು ಎಂದರು.

ಪ್ರತಿಯೊಬ್ಬರಿಗೂ ವಿದ್ಯಾರ್ಥಿ ಜೀವನ ಅತ್ಯಮೂಲ್ಯ. ಸುಲಭವಾಗಿ ದಕ್ಕಿದ ಯಶಸ್ಸು ಶಾಶ್ವತವಾಗಿ ಉಳಿಯಲ್ಲ. ನಿರಂತರ ಶ್ರಮದಿಂದ ಸಂಪಾದಿಸಿದ ಹೆಸರು, ಕೀರ್ತಿ ಶಾಶ್ವತವಾಗಿ ಉಳಿಯಲಿದೆ. ಆದ್ದರಿಂದ ವಿದ್ಯಾರ್ಥಿಗಳು ಜೀವನದಲ್ಲಿ ಉತ್ತಮವಾದುದನ್ನೇ ಆಯ್ಕೆ ಮಾಡಿಕೊಳ್ಳಬೇಕು. ಕಠಿಣ ಪರಿಶ್ರಮ ಮತ್ತು ಶಿಸ್ತಿನಿಂದ ಜೀವನದ ಗುರಿಮುಟ್ಟಬೇಕು ಎಂದು ಕಿವಿಮಾತು ಹೇಳಿದರು.
ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕಿ ಡಾ.ಡಿ.ಎಸ್.ಪ್ರತಿಮಾ ಅವರು `ಶಾಲಿವನ’ ವಾರ್ಷಿಕ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿ, ವಿದ್ಯಾರ್ಥಿಗಳಿಗೆ ತಾಳ್ಮೆ ಬಹಳ ಮುಖ್ಯ. ಯುವಶಕ್ತಿಗೆ ಪ್ರೇರಣೆಯಾದ ಸ್ವಾಮಿವಿವೇಕಾನಂದರ ಆದರ್ಶಗಳನ್ನು ಮೈಗೂಡಿಸಿಕೊಂಡು ಗುರಿ ಸಾಧನೆಗೆ ಒತ್ತು ನೀಡಬೇಕು ಎಂದರು.
ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಎಸ್.ಪಿ.ಶ್ರೀನಿವಾಸಗೌಡ ಅವರು “ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಮತ್ತು ಅಧ್ಯಯನ ಕೇಂದ್ರ’ ವನ್ನು ಉದ್ಘಾಟಿಸಿದರು. ಜನಪದ ವಿದ್ವಾಂಸ ಪ್ರೊ.ಮೈಸೂರು ಕೃಷ್ಣಮೂರ್ತಿ ಮುಖ್ಯ ಭಾಷಣ ಮಾಡಿದರು. ಕಾಲೇಜಿನ ಪ್ರಾಂಶುಪಾಲ ಡಾ.ಕಂಚಿನಕೆರೆ ಗೋವಿಂದೇಗೌಡ ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಕಾಲೇಜಿನಲ್ಲಿ ಆಯೋಜಿಸಿದ್ದ ವಿವಿಧ ಸಾಂಸ್ಕೃತಿಕ, ಕ್ರೀಡಾ ಹಾಗೂ ಎನ್ಎಸ್ಎಸ್ ಚಟುವಟಿಕೆಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಜೊತೆಗೆ, ಮೈಸೂರು ವಿವಿ ದತ್ತಿನಿಧಿ ಬಹುಮಾನ ಪಡೆದ ವಿದ್ಯಾರ್ಥಿನಿ ಎಸ್.ವಿ.ಮಾನಸ ಅವರನ್ನು ಅಭಿನಂದಿಸಲಾಯಿತು.
ಜಾನಪದ ಕಲಾವಿದ ಮೈಸೂರು ಮಹಾಲಿಂಗು, ತಾ.ಪಂ.ಮಾಜಿ ಅಧ್ಯಕ್ಷ ಎಸ್.ಡಿ.ಚಂದ್ರಶೇಖರ, ಸಿಡಿಸಿ ಸದಸ್ಯರಾದ ಶಂಕರೇಗೌಡ, ಹೆಚ್.ಟಿ.ಮಂಜುನಾಥ್, ತೇಜೋಮೂರ್ತಿ, ಚಿಕ್ಕೇಗೌಡ, ತಂದ್ರೆ ಧರ್ಮ, ಮಹದೇವ್, ನವೀನ್, ಯಲ್ಲಪ್ಪ ಜೋಗಿ, ವೆಂಕಟರಾಮು, ಗೌತಮ್, ಪ್ರಸನ್ನ, ಕಾಂಗ್ರೆಸ್ ನಗರಾಧ್ಯಕ್ಷ ಪ್ರಭಾಕರ್, ಅಧ್ಯಾಪಕರಾದ ಎಂ.ಎA.ರಾಜಶೇಖರ್, ಮಂಜುನಾಥ್, ಶ್ರೀನಿವಾಸ್, ಸುರೇಶ್ ಛಲವಾದಿ, ಎಚ್.ಎಸ್.ಮಧು, ಜಿ.ಪಿ.ಗಾಯತ್ರಮ್ಮ, ಡಾ.ಎ.ಎಸ್.ರಾಜೇಶ್, ಸತ್ಯನಾರಾಯಣ, ಕುಮಾರ್, ಡಾ.ಪ್ರತಿಮಾ, ಡಾ.ಸುವರ್ಣ, ಡಾ.ಮಹೇಶ್, ಡಾ.ತಾಸೀನ್, ಅಧೀಕ್ಷಕ ಬ್ರಿಜೇಶ್ ಹಾಜರಿದ್ದರು.








