ಗಾಯಕನಾಗಿ ವಿಶ್ವದಾಖಲೆ ನಿರ್ಮಿಸಿದ ಎಸ್.ಪಿ.ಬಾಲಸುಬ್ರಮಣ್ಯಂ ನೆನಪು ಸದಾ ಹಸಿರು..
ಜೂನ್4 ರಂದು ಎಸ್.ಪಿ.ಬಿ. ಜನ್ಮದಿನ ಪ್ರಯುಕ್ತ ಸ್ಮರಣೀಯ ಲೇಖನ

ಪ್ರಖ್ಯಾತ ಹಿನ್ನೆಲೆ ಗಾಯಕನಾಗಿ ವಿಶ್ವದಾಖಲೆ ನಿರ್ಮಿಸಿ ಭಾರತೀಯ ಚಿತ್ರರಂಗದ ಸುವರ್ಣ ಪುಟಗಳ ಇತಿಹಾಸ ಪುಸ್ತಕ ಸೇರಿದ ಗಾನಸುರಭಿ ಎಸ್.ಪಿ. ಬಾಲಸುಬ್ರಮಣ್ಯಂ ಅವರನ್ನು ನಾವು ಸದಾ ನೆನಪಿಸಿಕೊಳ್ಳುತ್ತೇವೆ.. ಅವರ ಹಾಡುಗಳನ್ನು ಗುನುಗುತ್ತಾ ನಿತ್ಯದ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತೇವೆ.. ಹಿರಿಯ ಬರಹಗಾರರಾದ ಕುಮಾರಕವಿ ನಟರಾಜ್ ಅವರು ಅಕ್ಷರಗಳ ಮೂಲಕ ಅವರ ನೆನಪುಗಳನ್ನು ಕಟ್ಟಿಕೊಟ್ಟಿದ್ದಾರೆ..
ಭಾರತ ದೇಶದ ಸಿನಿಮಾ ರಂಗದಲ್ಲಿ ಹತ್ತಾರು ಭಾಷೆಗಳಲ್ಲಿ ನೂರಾರು ಹಿನ್ನೆಲೆಗಾಯಕರು ಸಾವಿರಾರು ಚಿತ್ರಗೀತೆ ಹಾಡುವ ಮೂಲಕ ಲಕ್ಷಾಂತರ ಜನರ ತನುಮನ ಗೆದ್ದು ಅತ್ಯಂತ ಜನಪ್ರಿಯ ಗಾಯಕರೆನಿಸಿದ್ದಾರೆ. ಇವರ ಪೈಕಿ ದಕ್ಷಿಣ ಭಾರತದ ಹಿನ್ನೆಲೆ ಗಾಯಕರಾದ ಸಿ.ಎಸ್.ಜಯರಾಮನ್, ಘಂಟಸಾಲ, ಶಿರ್ಗಾಳಿ ಗೋವಿಂದರಾಜ್, ಪಿ.ಬಿ.ಶ್ರೀನಿವಾಸ್, ಟಿ.ಎಂ.ಸೌಂದರರಾಜನ್, ಕೆ.ಜೆ.ಯೇಸುದಾಸ್, ಪಿ.ಕಾಳಿಂಗರಾವ್, ಎಂ.ಬಾಲಮುರಳಿಕೃಷ್ಣ, ಪಂಡಿತ್ ಭೀಮಸೇನಜೋಷಿ ಮುಂತಾದ ವಿಖ್ಯಾತ ಗಾಯಕರು ಅಗ್ರಪಂಕ್ತಿಯಲ್ಲಿ ಇದ್ದು ಗಾಯನ ಲೋಕದ ಮೈಲಿಗಲ್ಲಾದರು.

ಈ ಗುಂಪಿನಲ್ಲಿ ತುಸು ವಿಶೇಷ ಎನಿಸುವಂಥ ಒಬ್ಬರು ಮಾತ್ರ ಸಂಗೀತವನ್ನು ಶಾಸ್ತ್ರೀಯದ ಕ್ರಮಬದ್ಧವಾಗಿ ಅಭ್ಯಾಸ ಮಾಡದೆಲೆ ಕೇವಲ ಬಾತ್ರೂಂ ಸಿಂಗರ್ ಆಗಿದ್ದುಕೊಂಡು ಕ್ರಮೇಣ ಪ್ರಖ್ಯಾತ ಹಿನ್ನೆಲೆ ಗಾಯಕನಾಗಿ ವಿಶ್ವದಾಖಲೆ ನಿರ್ಮಿಸಿ ಭಾರತೀಯ ಚಿತ್ರರಂಗದ ಸುವರ್ಣ ಪುಟಗಳ ಇತಿಹಾಸ ಪುಸ್ತಕ ಸೇರಿದ ಇವರೇ ಗಾನಸುರಭಿ ಎಸ್.ಪಿ. ಬಾಲಸುಬ್ರಮಣ್ಯಂ!

4ನೇ ಜೂನ್ 1946ರಂದು ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ಜನಿಸಿದ ಇವರ ಮೂಲ ಹೆಸರು ಶ್ರೀಪತಿ ಪಂಡಿತಾರಾಧ್ಯುಲ (ಎಸ್.ಪಿ.) ಬಾಲಸುಬ್ರಮಣ್ಯಂ! ಈತ ಕನ್ನಡಕ್ಕೂ ಕಂಠ ನೀಡುವ ಮೂಲಕ ತಮ್ಮ ಜೀವನವನ್ನು ಗಾನಕಲ್ಪವೃಕ್ಷ ಮಾಡಿಕೊಂಡರು. ತೆಲುಗು ಮೂಲದ ಎಸ್.ಪಿ.ಬಿ. ತಮ್ಮ ಮಾತೃಭಾಷೆಯ ನಂತರ ಅತಿಹೆಚ್ಚು ಇಷ್ಟಪಟ್ಟ ಭಾಷೆ ಕನ್ನಡ ಆಗಿತ್ತು! ಹಿಂದಿ ಮರಾಠಿ ತೆಲುಗು ತಮಿಳು ಮಲಯಾಳಂ ತುಳು ಕೊಂಕಣಿ ಕೊಡವ ಗುಜರಾತಿ ಬಂಗಾಳಿ ಇಂಗ್ಲಿಷ್ ಮುಂತಾದ ಹದಿನಾರು ಭಾಷೆಗಳ 50 ಸಾವಿರಕ್ಕೂ ಹೆಚ್ಚು ಚಿತ್ರಗೀತೆ ಭಕ್ತಿಗೀತೆ ಭಾವಗೀತೆ ಜಾನಪದಗೀತೆ ಮುಂತಾದ ಪ್ರಾಕಾರಗಳಲ್ಲಿ ಹಾಡುವಮೂಲಕ ‘ಗಿನ್ನಿಸ್’ದಾಖಲೆ ಸೃಷ್ಟಿಸಿದರು.

ಎಸ್.ಪಿ.ಬಾಲು ತಮ್ಮ 21ನೇ ವಯಸ್ಸಲ್ಲಿ ಅವರ ಸಂಬಂಧಿಕರಾದ ಸಂಗೀತ ನಿರ್ದೇಶಕ ಎಂ.ರಂಗರಾವ್ ಶಿಫಾರಸ್ಸಿಂದ “ನಕ್ಕರೆ ಅದೇ ಸ್ವರ್ಗ” ಕನ್ನಡ ಚಿತ್ರದ ಮೂಲಕ ಚಂದನವನ ಚಿತ್ರರಂಗಕ್ಕೆ ಹಿನ್ನೆಲೆಗಾಯಕರಾಗಿ 1967ರಲ್ಲಿ ಎಂಟ್ರಿ ಕೊಟ್ಟರು. ನಂತರ ರಾಜ್ಕುಮಾರ್ ಅಭಿನಯದ ಗಾಂಧಿನಗರ 1968, ಚೂರಿಚಿಕ್ಕಣ್ಣ 1969 ಫಿಲಂಸ್ ಮೂಲಕ ಹಿನ್ನೆಲೆ ಗಾಯಕನಾಗಿ ಕನ್ನಡ ಯಾತ್ರೆ ಪ್ರಾರಂಭಿಸಿದರು. 1970ರಲ್ಲಿ ಸಿ.ಐ.ಡಿ.ರಾಜಣ್ಣ ಚಿತ್ರದ “ಇಲ್ಲಿ ಆಡುವ ಮಾತು ಕನ್ನಡ….” ಮತ್ತು ಪಿ.ಬಿ.ಶ್ರೀನಿವಾಸ್ ಎಸ್.ಜಾನಕಿ ಜತೆಗೆ ಹಾಡಿದ “ನನ್ನಲ್ಲೇನೋ ಹೊಸಭಾವನೆ” ಎಂಬ 2 ಚಿತ್ರಗೀತೆಗಳನ್ನು ಅದ್ಭುತವಾಗಿ ಹಾಡುವ ಮುಖೇನ ಜನಪ್ರಿಯ ಹಿನ್ನೆಲೆಗಾಯಕರ ಸಾಲಿಗೆ ಸೇರಿ ಕೋಟ್ಯಾಂತರ ಕನ್ನಡಿಗರ ತನುಮನ ಗೆದ್ದು ರಾರಾಜಿಸಿದರು!

ಅಂದಿನಿಂದ 40 ವರ್ಷ ಪರ್ಯಂತ ಮತ್ತೆಂದು ಹಿಂದಿರುಗಿ ನೋಡದಂತೆ ಸಂಗೀತದ ಪರ್ವತವಾಗಿ ಬೆಳೆದರು. “ಎದೆತುಂಬಿ ಹಾಡುವೆನು” ರಿಯಾಲಿಟಿ ಶೋ ಕನ್ನಡ ಕಿರುತೆರೆ ಇತಿಹಾಸದಲ್ಲೆ ಅತ್ಯಂತ ಜನಪ್ರಿಯ ಕಾರ್ಯಕ್ರಮ ಎನಿಸಿ ದೇಶದಲ್ಲಿ ನೂತನ ದಾಖಲೆ ನಿರ್ಮಿಸಿತು. ಈ ಮೂಲಕ ಇವರು ಕನ್ನಡ ನಾಡು ನುಡಿ ಸಂಸ್ಕೃತಿ ಸಂಗೀತ ಚಲನಚಿತ್ರದ ಬಗ್ಗೆ ಮಾತ್ರವಲ್ಲದೆ ಮಾನವೀಯ ಮೌಲ್ಯ ಬಂಧು ಬಳಗ ಮಮತೆ ವಾತ್ಸಲ್ಯ ಸಾಮಾಜಿಕ ಕಾಳಜಿ ಮುಂತಾದ ಉಪಯುಕ್ತ ಮಾಹಿತಿ ಬಗ್ಗೆ ಮಾರ್ಗದರ್ಶನ ನೀಡಿದ ಮಹಾಮಾನವ. ಹಿಂದಿನ ಮತ್ತು ಇಂದಿನ ಕಾಲದ ಇಂಡಿಯನ್ ಲೈಫ್ ಸ್ಟೈಲ್ ಮತ್ತು ಸೋಶಿಯಲ್ ಐಡಿಯಾಲಜಿ ಬಗ್ಗೆ ತಮ್ಮ ಅಂತರಾಳದ ಇಂಗಿತ ವ್ಯಕ್ತಪಡಿಸಿ ಕನ್ನಡ ಕುಲಕೋಟಿಯ ಹೃದಯ-ಮನಸ್ಸು ಗೆದ್ದ ಘನತೆಯ ವ್ಯಕ್ತಿಶಕ್ತಿ.

ಇಂತಹ ಮಹಾನುಭಾವರ ಏಕಮಾತ್ರ ಪುತ್ರ ಎಸ್.ಪಿ.ಚರಣ್ ಕೂಡ ಓರ್ವ ಗಾಯಕ, ನಟ, ನಿರ್ಮಾಪಕ ನಿರ್ದೇಶಕನಾಗಿ ಗುರ್ತಿಸಿ ಕೊಂಡರೂ ಒಂದು ನಿರ್ದಿಷ್ಟ ಕ್ಷೇತ್ರದಲ್ಲಿ (ಪ್ರ)ಸಿದ್ಧಿಯಾಗಲೀ ಅಭಿವೃದ್ಧಿಯಾಗಲೀ ಪಡೆಯಲಿಲ್ಲ?! ಈ ಕೊರಗು ತಂದೆಯಾದ ಇವರಿಗೆ ಅನವರತ ಕಾಡುತ್ತಿತ್ತು. “ಹಣೆಬರಹಕ್ಕೆ ಹೊಣೆಯಾರು?” “ನಾ ಮಾಡಿದ ಕರ್ಮ ಬಲವಂತವಾದೊಡೆ ಯಾರೇನ ಮಾಡುವರೋ ರಂಗ?” ಎಂಬ ನಾಣ್ಣುಡಿ ನೆನಪಿಸಿಕೊಂಡು ಎಸ್.ಪಿ.ಬಿ. ಹಲವು ಸಲ ತಮ್ಮ ಆಪ್ತರ ಜತೆ ಅಲವತ್ತು ಕೊಂಡಿದ್ದರು?! ಮಗನು ಮಾಡಿದ್ದ ಋಣದ ಭಾರವನ್ನು ತಂದೆಯು ತೀರಿಸುವಂಥ ದುರಂತ ಘಟಿಸಿದ್ದು ವಿಧಿವಿಲಾಸ?!

ಹಲವಾರು ನೂತನ ವಿಶ್ವದಾಖಲೆ ಮಾಡಿದ್ದ ಡಾ.ಎಸ್.ಪಿ.ಬಿ. ಮತ್ತೊಂದು ದಾಖಲೆ ಮಾಡಲೆಂದು ಜವರಾಯನ ಆಣತಿ/ಆಸೆ ಅಥವ ಅಪೇಕ್ಷೆ ಇತ್ತೇನೋ ಯಾರುಬಲ್ಲರು? ಕೊರೊನ ಮಹಾಮಾರಿಯ ವಿರುದ್ಧ ಧೀರ್ಘಕಾಲ ಫೈಟ್ ಕೊಟ್ಟರೂ ಸಹ ಕಡೆಗೆ ಸೋತು ಶರಣಾದರು. ತಮ್ಮ75ನೇ ವಯಸ್ಸಲ್ಲಿ 25.9.2020ರಂದು ಚೆನ್ನೈನ ಆಸ್ಪತ್ರೆಯಲ್ಲಿ ಉಸಿರು ಚೆಲ್ಲಿದರು. ಕೋವಿಡ್-19ಗೆ ಬಲಿಯಾದ ದೇಶದ ಪ್ರಪ್ರಥಮ ಪ್ಲೇಬ್ಯಾಕ್ ಸಿಂಗರ್ ಎನಿಸಿ ತಮ್ಮ ಜೀವಿತದ ಕಡೇ ಘಳಿಗೆಯಲ್ಲು ಅಸಾಮಾನ್ಯ ದಾಖಲೆ ಮಾಡಿ ಹೋದರು!

ಎಸ್.ಪಿ.ಬಿ. ಅಂತರ್ರಾಷ್ಟ್ರ ಮತ್ತು ರಾಷ್ಟ್ರದ ವಿವಿಧ ಆರು ವಿಶ್ವವಿದ್ಯಾನಿಲಯಗಳಿಂದ ಗೌರವ ಡಾಕ್ಟರೇಟ್ ಪಡೆದ ಮೊಟ್ಟಮೊದಲ ಹಿನ್ನೆಲೆಗಾಯಕ. ತಮ್ಮ ಜೀವಿತಾವಧಿ ಪೂರ್ತಿ ಸರಳಸಜ್ಜನಿಕೆ ಅಜಾತಶತ್ರು ಸಹನಾಮೂರ್ತಿ ಎನಿಸಿಕೊಂಡರು. ಇವರ ಸೋದರಿ ಎಸ್.ಪಿ. ಶೈಲಜಾ ಕೂಡ ಜನಪ್ರಿಯ ಹಿನ್ನೆಲೆಗಾಯಕಿ ಎಂಬುದು ಬಹುಶಃ ಎಲ್ಲರಿಗು ತಿಳಿ(ಯ)ದ ಆಶ್ಚರ್ಯದ ಸಂಗತಿ. ಇವರ ನಿಧನದಿಂದ ವಿ(ಶ್ವ)ಗಾನ ಲೋಕಕ್ಕೆ ತುಂಬಲಾರದ ನಷ್ಟ ಉಂಟಾದರೆ, ಕೋಟಿಕೋಟಿ ಅಭಿಮಾನಿಗಳಿಗೆ ಭರಿಸಲಾರದ ಕಷ್ಟ ಒದಗಿತು! ಮೇರುನಟ, ಗಾಯಕ, ನಿರ್ಮಾಪಕ, ಸಂಗೀತನಿರ್ದೇಶಕ, ಕಂಠದಾನಕಲಾವಿದ, ಸಮಾಜಹಿತಚಿಂತಕ ಬಾಲು ಸರ್ ನಮ್ಮೊಡನೆ ದೈಹಿಕವಾಗಿ ಇಲ್ಲವಾದರೂ ಮಾನಸಿಕವಾಗಿ ಸದಾ ಇರ್ತಾರೆ ಇವರ ಅಸ್ತಿತ್ವ ಆಚಂದ್ರಾರ್ಕ ಅಜರಾಮರ..!

ಎಸ್.ಪಿ.ಬಿ.ಗೆ ಲಭಿಸಿದ ಪ್ರಶಸ್ತಿಗಳು ಹೀಗಿವೆ…
*ಕರ್ನಾಟಕ ರಾಜ್ಯ ಸರ್ಕಾರದ ಶ್ರೇಷ್ಠ ಹಿನ್ನೆಲೆಗಾಯಕ ಪ್ರಶಸ್ತಿ,
*ತಮಿಳುನಾಡು ಸರ್ಕಾರದ ಶ್ರೇಷ್ಠ ಹಿನ್ನೆಲೆಗಾಯಕ ಪ್ರಶಸ್ತಿ,
*ಆಂಧ್ರಪ್ರದೇಶದ ಶ್ರೇಷ್ಠ ಹಿನ್ನೆಲೆಗಾಯಕ, ನಂದಿ ಅವಾರ್ಡ್,
*ಅತ್ಯುತ್ತಮ ಹಿನ್ನೆಲೆಗಾಯಕ ಫಿಲಂಫೇರ್ ಪ್ರಶಸ್ತಿ- 5ಬಾರಿ,
*ಶ್ರೇಷ್ಠ ಹಿನ್ನೆಲೆಗಾಯಕ ರಾಷ್ಟ್ರ ಪ್ರಶಸ್ತಿ,
*ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ [ಮರಣೋತ್ತರ] ಪ್ರಶಸ್ತಿ.
ಹಿರಿಯಬರಹಗಾರರಾದ ಕುಮಾರಕವಿ ನಟರಾಜ್ ಅವರ ಇನ್ನಷ್ಟು ಲೇಖನಗಳನ್ನು ಓದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ….








